ಮಂಗಳೂರು: ಕವಿ ಸಿದ್ಧಲಿಂಗಯ್ಯನವರಷ್ಟು ಸಮಾಜವನ್ನು ಪ್ರಭಾವಿಸಿದ ಕವಿಯನ್ನು ಹುಡುಕುವುದು ಕಷ್ಟ. ಇಡೀ ಕನ್ನಡನಾಡನ್ನು ಹೊಸಬಗೆಯಲ್ಲಿ ಯೋಚಿಸುವಂತೆ ಮಾಡಿದ ಶಕ್ತಿ ಸಿದ್ಧಲಿಂಗಯ್ಯ ಅವರಲ್ಲಿ ಇತ್ತು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಎ ವಿವೇಕ ರೈ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಇತ್ತೀಚೆಗೆ ಏರ್ಪಡಿಸಿದ ಡಾ.ಸಿದ್ಧಲಿಂಗಯ್ಯ ಅವರ ಬದುಕು ಬರಹದ ಕುರಿತ ವಿಚಾರಸಂಕಿರಣದಲ್ಲಿ ಆಶಯ ಭಾಷಣ ಮಾಡಿದ ಅವರು, ಸದಾ ಬಡವರ, ದೀನದಲಿತರ ಪರವಾಗಿ ಬರವಣಿಗೆ, ಹೋರಾಟದಲ್ಲಿ ತೊಡಗಿಕೊಂಡಿದ್ದ ಸಿದ್ಧಲಿಂಗಯ್ಯನವರಿಗೆ ನಾಸ್ತಿಕತೆ-ಆಸ್ತಿಕತೆಗಿಂತ ಮಾನವೀಯತೆಯೇ ಮುಖ್ಯವಾಗಿತ್ತು, ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ, ಸಿದ್ಧಲಿಂಗಯ್ಯನವರು ಮಹಾನ್ ಮಾನವತಾವಾದಿ. ಹಾಸ್ಯಪ್ರಜ್ಞೆ ಹೊಂದಿದ್ದ, ಆದರೆ ಅನ್ಯಾಯವನ್ನು ನಿಷ್ಠುರವಾಗಿ ಎದುರಿಸಿದ ವ್ಯಕ್ತಿ ಅವರು. ತಮ್ಮ ಕವಿತೆಗಳ ಮೂಲಕವೇ ಕನ್ನಡ ನಾಡು ಆತ್ಮಾವಲೋಕನ ಮಾಡುವಂತೆ ಮಾಡಿದರು, ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ, ದಲಿತರ ಸಮಸ್ಯೆಗಳಿಗೆ ಸ್ಪಂದಿಸಿದ ಸಿದ್ಧಲಿಂಗಯ್ಯನವರ ʼಊರುಕೇರಿʼ ಆತ್ಮಕಥನ ಭಾರತೀಯ ಸಾಹಿತ್ಯದಲ್ಲೇ ಅಪೂರ್ವ ಕೃತಿ ಎಂದರು. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ, ಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳ ವಿಶಿಷ್ಟ ಕಾವ್ಯಪ್ರಕಾರವನ್ನು ಕೊಡುಗೆಯಾಗಿ ನೀಡಿವೆ, ಎಂದರು. ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಅಭಯ ಕುಮಾರ್, ಪ್ರೊ. ಸಬಿಹಾ ಭಾಗವಹಿಸಿದ್ದರು.
ಎಸ್.ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ಡಾ. ಧನಂಜಯ ಕುಂಬ್ಳೆ ನಿರೂಪಿಸಿದರು. ಡಾ. ನಾಗಪ್ಪ ಗೌಡ ವಂದಿಸಿದರು. ಡಾ. ಯಶುಕುಮಾರ್ ಮತ್ತು ವಿದ್ಯಾರ್ಥಿ ರಾಮಾಂಜಿ ಸಿದ್ಧಲಿಂಗಯ್ಯನವರ ಕವಿತೆಗಳನ್ನು ವಾಚಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ