ಯಕ್ಷಗುರು ಮೋಹನ ಬೈಪಾಡಿತ್ತಾಯ ಕಡಬ ಇವರಿಗೆ ಪುತ್ತೂರು ಗೋಪಣ್ಣ ನೆನಪಿನ ಗೌರವ: ನಾಳೆ ಬಪ್ಪಳಿಗೆಯ ಅಗ್ರಹಾರ ಗೃಹದಲ್ಲಿ

Upayuktha
0

ಪುತ್ತೂರು: ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ- ಅಭಿಮಾನಿಗಳ ಪಾಲಿನ 'ಗೋಪಣ್ಣ' ಇವರ ಸಂಸ್ಮರಣೆ ಕಾರ್ಯಕ್ರಮವು 2021 ಜುಲೈ 7, ಬುಧವಾರದಂದು ಅಪರಾಹ್ನ ಗಂಟೆ 2ಕ್ಕೆ ಜರುಗಲಿದೆ. ಪುತ್ತೂರಿನ ಬಪ್ಪಳಿಗೆ 'ಅಗ್ರಹಾರ' ಗೃಹದಲ್ಲಿ ಸಂಪನ್ನವಾಗುವ ಈ ಕಾರ್ಯಕ್ರಮದಲ್ಲಿ ಯಕ್ಷಗುರು ಮೋಹನ ಬೈಪಾಡಿತ್ತಾಯ ಕಡಬ ಇವರಿಗೆ 'ಗೋಪಣ್ಣ ನೆನಪಿನ ಗೌರವ' ಪ್ರಧಾನ ಮಾಡಲಾಗುವುದು. ಕೋವಿಡ್ ಮಾರ್ಗಸೂಚಿ ನಿಯಮಗಳಿಗನುಸಾರವಾಗಿ ನಡೆಯುವ ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ. ಮೋಹನ ಬೈಪಾಡಿತ್ತಾಯರು ಯಕ್ಷಗುರು. ನೂರಾರು ಅಲ್ಲ, ಸಾವಿರಾರು ಶಿಷ್ಯರನ್ನು ರೂಪುಗೊಳಿಸಿದ ಶಿಲ್ಪಿ. ತನ್ನ ಸೋದರ ಹರಿನಾರಾಯಣ ಬೈಪಾಡಿತ್ತಾಯರು ಮೋಹನರಿಗೆ ಗುರು. ಅತ್ತಿಗೆ ಲೀಲಾವತಿ ಬೈಪಾಡಿತ್ತಾಯರ ಮಾರ್ಗದರ್ಶನ. ಕಲಿಕಾ ನಂತರ ಹತ್ತು ವರುಷ ಹವ್ಯಾಸಿಯಾಗಿ ಸಂಚಾರ. ಬಳಿಕ ಆದಿಸುಬ್ರಹ್ಮಣ್ಯ, ನಂದಾವರ, ಕಾಂತಾವರ, ಕರ್ನಾಟಕ, ಬೆಳ್ಮಣ್ಣು ಮೇಳಗಳಲ್ಲಿ ಎರಡು ದಶಕಗಳ ತಿರುಗಾಟ. ಬೆಳ್ಮಣ್ಣು ಮೇಳದ ವಾಹನ ಅಪಘಾತವು ಮೋಹನರ ಮೇಳ ಜೀವನಕ್ಕೆ ಕೊನೆಬಿಂದು. ಮೂರು ವರುಷ ಓಡಾಡದ ಸ್ಥಿತಿ. ಜತೆಗೆ ಆರ್ಥಿಕ ಸಂಕಟಗಳ ಮಾಲೆ. ಆರೋಗ್ಯ ಸುಧಾರಣೆ. 1995ರಿಂದ ಯಕ್ಷಗಾನ ಗುರುವಾಗಿ ಬದುಕಿಗೆ ದಾರಿ ಮಾಡಿಕೊಂಡರು. “ಬಹುಶಃ ನಾನು ಮೇಳದ ತಿರುಗಾಟದಲ್ಲಿರುತ್ತಿದ್ದರೆ ಎಂದೋ ಕಳೆದುಹೋಗುತ್ತಿದ್ದೆ. ಈಗ ನನಗೆ ನೂರಾರು ಶಿಷ್ಯರಿದ್ದಾರೆ. ಇದು ನನ್ನ ದೊಡ್ಡ ಆಸ್ತಿ,” ಎನ್ನುತ್ತಾರೆ. ಮಡದಿ ಲಲಿತಾ. ರಾಮಕೃಷ್ಣ, ನವೀನ ಮಗಂದಿರು. ಮಗಳು ಮಮತಾ. ಉಜಿರೆ ಸನಿಹ ಮಗನ ಮನೆಯಲ್ಲಿ ವಾಸ್ತವ್ಯ. 2021 ಜುಲೈ 7ರಂದು (ನಾಳೆ) ಮೊಹನ ಬೈಪಾಡಿತ್ತಾಯರಿಗೆ ಪುತ್ತೂರು ಬಪ್ಪಳಿಗೆ ಸನಿಹದ 'ಅಗ್ರಹಾರ'ದಲ್ಲಿ ಗೌರವ ಪ್ರದಾನ. ಕಳೆದ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್, ಪಾವಲಕೋಡಿ ಗಣಪತಿ ಭಟ್ಟರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಚಿರಂಜೀವಿ ಭಾ.ಜ.ಪ. ನಗರ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. -ನಾ. ಕಾರಂತ ಪೆರಾಜೆ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top