ಆಗಿನ್ನೂ ನಾನು ಇಪ್ಪತ್ತರ ತರುಣ. ಕೃಷಿ, ಗೋಸಾಕಣೆ, ಸಣ್ಣಮಟ್ಟದ ಜೇನು ಸಾಕಣೆ ನನಗೆ ಎಳವೆಯಿಂದಲೇ ಆಸಕ್ತಿ. ಇಪ್ಪತ್ತರ ಪ್ರಾಯದಲ್ಲಿ ನಾನು ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿದೆ. (ಪೂರ್ಣಾವಧಿ ಕೃಷಿಕನಾದೆ) ಯವ್ವನದ ಅತ್ಯುತ್ಸಾಹದಲ್ಲಿ ನಾನು ಅನೇಕ ಕೃಷಿ ತಜ್ಞರ ಸಭೆಗಳಲ್ಲಿ ಭಾಗವಹಿಸಿದೆ. ಮಣ್ಣು ತಜ್ಞರು, ಕೀಟ ತಜ್ಞರು, ಸಸ್ಯ ತಜ್ಞರು ಹೇಳುವ ಎಲ್ಲಾ ಮಾತುಗಳನ್ನು ಗಮನವಿಟ್ಟು ಕೇಳಿದೆ. ಗದ್ದೆ ಬೇಸಾಯದಲ್ಲಿ ನಾನು ಕೈಗೊಂಡ ಆಧುನಿಕ ಕೃಷಿಯ ಬಗ್ಗೆ ಹಿಂದೆ ಬರೆದಿದ್ದೆ.
ತಜ್ಞರಿಂದ ಕೇಳಿದ ಮಣ್ಣು ಪರೀಕ್ಷೆ, ಹದಿನಾರು ಬಗೆಯ ಲವಣಾಂಶಗಳು, ಎನ್ ಪಿಕೆ ಅದರ ಮಹತ್ವ, ಅಡಿಕೆಯ ಮಿಡಿ ಉದುರುವ ಸಮಸ್ಯೆ, ಕುಂಡೆ ಒಡೆಯುವ ಸಮಸ್ಯೆ ಇವಕ್ಕೆಲ್ಲ ಪರಿಹಾರಗಳು, ಇವನ್ನೆಲ್ಲಾ ಅಚ್ಚುಕಟ್ಟಾದ ತರ್ಕಬದ್ಧವಾದ ವಿಷಯ ಮಂಡನೆ ಯೊಂದಿಗೆ ಹೇಳುತ್ತಿದ್ದರು. ಗೊನೆ ಭಾರದಿಂದ ತುಂಬಿರುವ ಅಡಿಕೆ ಮರಗಳು ನನ್ನ ಕಣ್ಣಮುಂದೆ ನಿಂತಿದ್ದುವು. ನನ್ನ ಇಪ್ಪತ್ತಕ್ಕೂ ಹೆಚ್ಚಿನ ದನಗಳ ಗೊಬ್ಬರ ಮತ್ತು ತಜ್ಞರು ಹೇಳಿದಂತ ರಸಾಯನಿಕಗಳನ್ನು ಅಡಿಕೆ ತೋಟದಲ್ಲಿಯು ಬಳಸಿದೆ.
ನಮ್ಮದು ಹಳೆತೋಟ ಮರಗಳು 60 ಅಡಿಯ ಮೇಲ್ಪಟ್ಟವುಗಳು ಇವೆ. ಅಡಿಕೆಯ ಇಳುವರಿ ಜಾಸ್ತಿ ಆಯ್ತು. ಸಂತೋಷವೂ ಆಯಿತು. ಗೊನೆ ಭಾರದಿಂದಾಗಿ ಅಡಿಕೆ ಮರ ಮುರಿತವು ಜಾಸ್ತಿಯಾಯಿತು. ಮಿಡಿ ಉದುರುವುದಕ್ಕೆ ರೋಗರ್ ಸ್ಪ್ರೇ ಮೂರು ಸರ್ತಿ. ಇಳುವರಿ ಜಾಸ್ತಿಯಾದಂತೆ ಮಹಾಳಿ ಜಾಸ್ತಿಯಾಯಿತು. ಹಾಗಾಗಿ ಎರಡು ಸರ್ತಿ ಬಿಡುತ್ತಿದ್ದ ಬೋರ್ಡೋ ಮೂರು ಸರ್ತಿಗೆ ಏರಿತು. ಮಳೆಗಾಲದ ಹುಲ್ಲು ದನಗಳಿಗೆ ಮೇವು ಆಗುತ್ತಿದ್ದರೂ, ಬೇಸಿಗೆಯಲ್ಲಿ ಕಾಣದಾಗುತ್ತಿದ್ದ ಒಂದೊಂದು ಅಡಕೆಯು ಅಮೂಲ್ಯ ಎಂದು ತಿಳಿದು ಹುಲ್ಲು ಕೊಲ್ಲುವ ಗ್ರಮಾಕ್ಸೋನ, ಫೆರೆನೆಕ್ಸೋನ್ ಎಂಬ ಔಷಧಿಗಳನ್ನು ಬಳಸಿದೆ.
ಯಾವಾಗ ಗದ್ದೆಯಲ್ಲಿ ವಿಷದ ಪರಿಣಾಮದಿಂದ ಆದ ಅನುಭವ, ನಾನು ಅಡಿಕೆ ತೋಟದಲ್ಲಿಯು ಸಾವಯವದ ಬಗ್ಗೆ ಚಿಂತಿಸುವಂತೆ ಮಾಡಿತು. ಮಿಡಿ ಉದುರುವುದಕ್ಕಾಗಿ ಬಿಡುವ ವಿಷದ ಪರಿಣಾಮದಿಂದಾಗಿ ಜೇನು ಗೂಡಿನಲ್ಲಿ ಜೇನು ಹುಳಗಳು ನೂರಾರು ಸಂಖ್ಯೆಯಲ್ಲಿ ಸತ್ತು ಬೀಳುತ್ತಿದ್ದುದನ್ನು ಕಂಡೆ. ಎಷ್ಟೇ ವಿಷವನ್ನು ಹೊಡೆದರು ಉದುರುವ ಮಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸುವುದು "ಗಾಳಿಯೊಡನೆ ಗುದ್ದಾಟ" ಎಂಬ ಅರಿವಾಯಿತು. ಮಿಡಿ ಉದುರುವುದು ಪರಾಗಸ್ಪರ್ಶದ ಕೊರತೆಯೇ ವಿನಹ ಕೀಟಬಾಧೆ ಅತ್ಯಂತ ಕನಿಷ್ಠ ಎಂಬುದು ಗೊತ್ತಾಯಿತು. ಜೇನು ಸಂತಾನವನ್ನು ನಾಶಮಾಡಿ ಮಿಡಿಯನ್ನು ಉಳಿಸುವ ಯೋಚನೆ ನನಗಾದರೂ ಯಾಕೆ ಬಂತು ಎಂದು ದುಃಖವಾಯಿತು.
ಅಡಿಕೆ ಕುಂಡೆ ಒಡೆದು ಬೀಳುವುದು ಆ ಮರದ ಧಾರಣಶಕ್ತಿಯ ಸಮಸ್ಯೆಯೇ ಹೊರತು ಯಾವುದೇ ಕೊರತೆಗಳ ಕಾರಣ ಅಲ್ಲ ಎಂಬ ಅರಿವಾಯಿತು. ಅಪ್ಪಿತಪ್ಪಿ ಏನೇ ಕೊರತೆಗಳು ಇದ್ದರೂ ಮರಗಳಿಗೆ ತನ್ನನ್ನು ತಾನು ಸಂಭಾಳಿಸುವ ಸಾಮರ್ಥ್ಯ ಇದೆ ಎಂದು ಮರು ವರ್ಷದಲ್ಲಿ ಆ ಮರದಲ್ಲಿ ಕುಂಡೆ ಒಡೆಯುವ ಸಮಸ್ಯೆ ಇಲ್ಲದುದನ್ನು ನೋಡಿ ಕಂಡುಕೊಂಡೆ. ಮಣ್ಣಿನಲ್ಲಿ ಸಹಜ ಫಲವತ್ತತೆ ಇದ್ದಾಗ ರಾಸಾಯನಿಕ ಗೊಬ್ಬರಗಳನ್ನು ಬಳಸಿದರೆ ಇಳುವರಿ ಜಾಸ್ತಿ ಆಗುವುದಂತೂ ಸತ್ಯ. ಆದರೆ ರಾಸಾಯನಿಕಗಳು ಗೊಬ್ಬರಗಳಲ್ಲ, ಅವು ಉದ್ದೀಪನ ಔಷಧಿಗಳು ಎಂಬ ಸತ್ಯವನ್ನು ಕಂಡುಕೊಂಡೆ.
ಒಲಿಂಪಿಕ್ಸ್ ಆಟಗಾರನು ಉದ್ದೀಪನ ಔಷಧಿಯನ್ನು ಬಳಸಿ ಓಟದಲ್ಲಿ ಗೆದ್ದಂತೆ. ನಾವು ರಾಸಾಯನಿಕಗಳನ್ನು ಬಳಸದೆ ಇರುವುದು ಓಟಗಾರ ಉದ್ದೀಪನ ಔಷಧಿ ಇಲ್ಲದೆ ಓಡುವಂತೆ. ಹಾಗಾಗಿ ಕೃಷಿಯಲ್ಲಿ ಪ್ರಕೃತಿ ಸಹಜವಾದದ್ದು ಮಾತ್ರ ಗೊಬ್ಬರಗಳು. ಅವುಗಳನ್ನು ಬಳಸಿ ಪಡೆವ ಇಳುವರಿ ಮಾತ್ರ ಸಹಜವಾದದ್ದು ಪ್ರಕೃತಿದತ್ತವಾದದ್ದು.
ರವಿ ಕಾಣದ್ದನ್ನು ಕವಿ ಕಾಣುತ್ತಾನಂತೆ. ಅಂತೆಯೇ ಕೃಷಿಕ ಕಾಣದ್ದನ್ನು ಕವಿ ಕಂಡು ಹೀಗೆ ಹಾಡಿರಬಹುದು.
ಉಂಡು ಬಿಡುವ ಎಂಜಲೆಲೆಯಲ್ಲ ಈ ಪ್ರಕೃತಿ,
ಕೊಂಡು ಕಾಪಿಡುವ ಹೊಂದಳಿಗೆ ದಿಟದಿ,
ಹಿರಿಯರುಳಿಸಿದ ಸಿರಿಯ ಕಿರಿಯರಿಗೆ ಸರಿಯಾಗಿ,
ದೊರಕಿಪುದೆ ನಮಗಿರ್ಪ ಸುಕೃತಿ ಜಗದಿ.
-ಎ.ಪಿ. ಸದಾಶಿವ ಮರಿಕೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ