ಮಳೆಗಾಲದ ಸಮಯದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುವ ಕಾರಣದಿಂದ ಸೊಳ್ಳೆಗಳ ಉತ್ಪಾದನೆ ಜಾಸ್ತಿಯಾಗುತ್ತದೆ. ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳು ಜಾಸ್ತಿ ಕಾಣಸಿಗುತ್ತದೆ. ಅದೇ ರೀತಿ ಮಳೆಗಾಲದ ಸಮಯದಲ್ಲಿ ಕಲುಷಿತಗೊಂಡ ನೀರಿನ ಸೇವನೆಯಿಂದಲೂ ಹಲವಾರು ರೋಗಗಳು ಬರುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಕಂಡು ಬರುವ ಅತೀ ಸಾಮಾನ್ಯ ರೋಗಗಳು ಯಾವುದೆಂದರೆ ಮಲೇರಿಯಾ, ಟೈಪಾಯಿಡ್, ನ್ಯೂಮೋನಿಯಾ, ಚಿಕುನ್ ಗುನ್ಯಾ ಜ್ವರ, ಡೆಂಗ್ಯೂ ಜ್ವರ, ಹೆಪಟೈಟಿಸ್ ಅಥವಾ ಜಾಂಡಿಸ್, ಸಾಮಾನ್ಯ ವೈರಲ್ ಶೀತ ಜ್ವರ, ಮತ್ತು ಬೇದಿ ರಸ್ತೆ ಬದಿಯಲ್ಲಿ ಕಲುಷಿತ ಆಹಾರ ಸೇವನೆ, ಅಶುದ್ದವಾದ ನೀರಿನ ಸೇವನೆ ದೇಹದ ಸ್ವಚ್ಚತೆ ಕಾಯ್ದುಕೊಳ್ಳದಿರುವುದು. ಶೌಚದ ಬಳಿಕ ಸರಿಯಾಗಿ ಕೈ ತೊಳೆಯದೆ ಇರುವುದು ಮುಂತಾದ ಕಾರಣಗಳಿಂದ ವೈರಾಣುಗಳು ಬೇಗನೆ ಹರಡುತ್ತದೆ. ಮಳೆಗಾಲದಲ್ಲಿ ಸೊಳ್ಳೆಗಳು ಜಾಸ್ತಿ ವಂಶಾಭಿವೃದ್ದಿ ಮಾಡುವ ಕಾರಣದಿಂದ ಸೊಳ್ಳೆಗಳಿಂದ ಹರಡುವ ರೋಗಗಳು ಜಾಸ್ತಿ ಕಂಡು ಬರುತ್ತದೆ. ಒಟ್ಟಿನಲ್ಲಿ ಪರಿಸರದ ಸ್ವಚ್ಚತೆ ಕಾಪಾಡಿಕೊಂಡು ಸೊಳ್ಳೆ ಉತ್ಪಾದನೆಯಾಗದಂತೆ ಮಾಡಿ, ಶುದ್ದವಾದ ಕಾದಾರಿದ ನೀರನ್ನು ಮತ್ತು ಸ್ವಚ್ಚವಾದ ಪಾತ್ರೆಯಲ್ಲಿ ತಯಾರು ಮಾಡಿದ ಆಹಾರ ಸೇವನೆ ಮಾಡಿದ್ದಲ್ಲಿ ಹೆಚ್ಚಿನ ರೋಗಗಳನ್ನು ತಡೆಯಬಹುದು.
ಟೈಪಾಯಿಡ್ ಜ್ವರ (ವಿಷಮಶೀತ ಜ್ವರ)
ಟೈಪಾಯಿಡ್ ಜ್ವರ ಒಂದು ಸಾಂಕ್ರಾಮಿಕ ರೋಗ. ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ರೋಗವನ್ನು ವಿಷಮ ಜ್ವರ, ವಿಷಮಶೀತ ಜ್ವರ ಮತ್ತು ವಾಯಿದೆ ಜ್ವರ ಎಂದೂ ಕರೆಯುತ್ತಾರೆ. ಈ ಜ್ವರ ಬಂದಾಗ ಸಾಮಾನ್ಯವಾಗಿ 3ರಿಂದ 4 ವಾರಗಳ ಕಾಲ ಕಾಡುವುದರಿಂದ ಈ ರೋಗಕ್ಕೆ ವಾಯಿದೆ ಜ್ವರ ಎಂಬ ಅನ್ವರ್ಥನಾಮ ಬಂದಿದೆ. ಪ್ರಪಂಚದಾದ್ಯಂತ ಕಾಣಿಸಿಕೊಳ್ಳುವ ಈ ರೋಗ, ಸಾರ್ವಜನಿಕ ಮತ್ತು ವೈಯುಕ್ತಿಕ ಶುಚಿತ್ವ ಹಾಗೂ ಸ್ವಚ್ಛತೆ ಕಡಮೆ ಇರುವ ಜನಾಂಗಗಳಲ್ಲಿ ಹೆಚ್ಚಾಗಿ ಕಾಣಿಸಿಗುತ್ತದೆ. 2015ರಲ್ಲಿ 12.5 ಮಿಲಿಯನ್ ಮಂದಿ ಈ ರೋಗದಿಂದ ಬಳಲಿದ್ದಾರೆ. ಭಾರತದಲ್ಲಿದಂತಹ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಈ ರೋಗ ಸರ್ವೇಸಾಮಾನ್ಯ. ವರ್ಷದ ಎಲ್ಲಾ ಋತುಗಳಲ್ಲಿ ಕಾಡುವ ಈ ರೋಗ ಬೇಸಗೆಯಲ್ಲಿ ಹೆಚ್ಚಾಗಿ ಕಲುಷಿತ ನೀರು ಕುಡಿಯುವುದರಿಂದ ಮತ್ತು ಕಲುಷಿತ ಆಹಾರದ ಸೇವನೆಯ ಮುಖಾಂತರ ಹರಡುತ್ತದೆ. ಪ್ರತಿ ವರ್ಷ ಭಾರತ ದೇಶವೊಂದರಲ್ಲಿಯೇ 1 ಮಿಲಿಯನ್ ಮಂದಿ ಈ ರೋಗದಿಂದ ಬಳಲುತ್ತಾರೆ. ರೋಗಾಣು ದೇಹಕ್ಕೆ ಸೇರಿದ 6 ದಿನಗಳಿಂದ 30 ದಿನಗಳ ಒಳಗೆ ರೋಗ ಬರುವ ಸಾಧ್ಯತೆ ಇರುತ್ತದೆ. ಮಕ್ಕಳಲ್ಲಿ ಹೆಚ್ಚು ಕಾಣಬರುವ ಈ ರೋಗ, ಆಧುನಿಕತೆ ಮತ್ತು ಮೂಲ ಸೌಕರ್ಯ ಬೆಳೆದಂತೆಲ್ಲಾ ರೋಗದ ಸಂಖ್ಯೆ ಇಳಿಮುಖವಾಗಿದೆ. 1990ರಲ್ಲಿ 2 ಲಕ್ಷ ಮಂದಿ ಜಾಗತಿಕವಾಗಿ ಸಾವನ್ನಪ್ಪಿದ್ದಾರೆ. 2015ರಲ್ಲಿ 1.5 ಲಕ್ಷ ಮಂದಿ ಮಾತ್ರ ಸಾವನ್ನಪ್ಪಿದ್ದಾರೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ 20 ಶೇಕಡಾ ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆಯ ಬಳಿಕವೂ 3 ಶೇಕಡಾ ಮಂದಿ ಸಾವನ್ನಪ್ಪುವ ಸಾಧ್ಯತೆಯೂ ಇದೆ.
ರೋಗ ಗುಣಮುಖವಾದ ಬಳಿಕವೂ ರೋಗಾಣು ರೋಗಿಯ ಪಿತ್ತಕೋಶದಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ. 1907ರಲ್ಲಿ ಮೇರಿ ಮಲಾನ್ ಎಂಬಾಕೆ, ಅಮೇರಿಕಾದಲ್ಲಿ ನ್ಯೂಯಾರ್ಕ್ ನಗರದ ಹೋಟೆಲೊಂದರಲ್ಲಿ ಬಾಣಸಿಗಳಾಗಿ ಕೆಲಸ ಮಾಡುತ್ತಾ ಹಲವಾರು ಮಂದಿಗೆ ರೋಗವನ್ನು ಹಂಚಿದ ಕುಖ್ಯಾತಿಗೆ ಒಳಗಾದವಳು. ಆಕೆಯನ್ನು ಟೈಪಾಯಿಡ್ ಮೇರಿ ಎಂದೂ ಕರೆಯಲಾಗಿತ್ತು. ನಂತರ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಆ ಬಳಿಕ ಆಕೆ ಹೆಸರು ಬದಲಾಯಿಸಿ ಬೇರೆಡೆ ಕೆಲಸ ಸೇರಿ, ರೋಗ ಹಂಚುತ್ತಾ ಹೋಗಿ ಮಗದೊಮ್ಮೆ ಸಿಕ್ಕಿಬಿದ್ದು, ದೇಶದಿಂದ ಗಡಿಪಾರಾದಳು. ಕೊನೆಗೂ ಆಕೆ ಟೈಪಾಯಿಡ್ ಮತ್ತು ನ್ಯೂಮೊನಿಯಾದಿಂದ 26 ವರ್ಷಗಳ ಬಳಿಕ ಮೃತಳಾದಳು.
ರೋಗದ ಲಕ್ಷಣಗಳು:
1. ರೋಗ ಆರಂಭವಾದ ಮೊದಲ ವಾರದಲ್ಲಿ ದೇಹದ ಉಷ್ಣತೆ ನಿಧಾನವಾಗಿ ಏರುತ್ತದೆ. ಜ್ವರ, ಮೈಕೈ ನೋವು, ಸುಸ್ತು, ದೇಹಾಲಸ್ಯ, ತಲೆನೋವು ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತದೆ. ಹೃದಯ ಬಡಿತ (ನಾಡಿಮಿಡಿತ) ನಿಧಾನವಾಗುವುದು ಈ ರೋಗದ ಲಕ್ಷಣ. ಸಾಮಾನ್ಯವಾಗಿ ಜ್ವರ ಬಂದಾಗ ಹೃದಯದ ಬಡಿತ ಜೋರಾಗುತ್ತದೆ. ಹೊಟ್ಟೆ ನೋವು ಕೂಡಾ ಇರುತ್ತದೆ. ದೇಹದಲ್ಲಿನ ಬಿಳಿ ರಕ್ತಕಣಗಳ ಸಂಖ್ಯೆ ಇಳಿಮುಖವಾಗುತ್ತದೆ. ರಕ್ತದ ಪರೀಕ್ಷೆ ಮಾಡಿದಲ್ಲಿ ವೈಡಾಲ್ ಟೆಸ್ಟ್ ಮೊದಲವಾರದಲ್ಲಿ ಋಣಾತ್ಮಕ ಫಲಿತಾಂಶ ನೀಡುತ್ತದೆ. ಆದರೆ ರಕ್ತದಲ್ಲಿನ ರೋಗಾಣು ಬೆಳೆಸುವಿಕೆ ಮತ್ತು ಪ್ರತಿಕ್ರಿಯೆ ಪರೀಕ್ಷೆ ಮಾಡಿದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕಂಡು ಬರುತ್ತದೆ.
2. ಎರಡನೇ ವಾರದಲ್ಲಿ ವಿಪರೀತವಾದ ಸುಸ್ತು ಮತ್ತು ಜ್ವರ ಇರುತ್ತದೆ. 1040ಈ ವರೆಗೂ ಜ್ವರ ಏರುತ್ತದೆ. ವಿಪರೀತ ಜ್ವರದಿಂದಾಗಿ ನರಳುವಿಕೆ ಮತ್ತು ರೋಗಿ ಕೆರಳುವಿಕೆ ಕೂಡಾ ಇರುತ್ತದೆ. ಮೈಮೇಲೆ ಬೆವರು ಸಾಲೆಯಂತಹಾ ಕೆಲವು ಕಲೆÉಗಳು ಬೆನ್ನಿನ ಮತ್ತು ಹೊಟ್ಟೆಯ ಭಾಗದಲ್ಲಿ ಕಾಣಿಸುತ್ತದೆ. ಇದನ್ನು ರೋಸ್ ಸ್ಪಾಟ್ ಎಂದೂ ಕರೆಯುತ್ತಾರೆ. ದೇಹದ ಬಲ ಕುಗ್ಗುತ್ತದೆ. ಹೊಟ್ಟೆ ಉಬ್ಬರಿಸುವುದು, ಹೊಟ್ಟೆನೋವು, ಪದೇ ಪದೇ ಬೇಧಿ ವಾಂತಿಗಳು ಕಾಣಿಸುತ್ತದೆ. ದಿನಾ 6ರಿಂದ 8 ಬಾರಿ ಹಸಿರು ಬಣ್ಣದ ಬೇಧಿ ಉಂಟಾಗಬಹುದು. ವಿಪರೀತ ವಾಸನೆ ಕೂಡಾ ಇರುತ್ತದೆ. ಯಕೃತ್ ಮತ್ತು ದುಗ್ಧಗ್ರಂಥಿ ದೊಡ್ಡದಾಗುತ್ತದೆ ಮತ್ತು ನೋವಿನಿಂದ ಕೂಡಿರುತ್ತದೆ. ಕೆಲವೊಮ್ಮೆ ಮಲಬದ್ಧತೆಯೂ ಉಂಟಾಗಬಹುದು. ಯಕೃತ್ತಿನ ಕಿಣ್ಣಗಳ ಸಂಖ್ಯೆ ಜಾಸ್ತಿಯಾಗುತ್ತದೆ. 2ನೇ ವಾರದಲ್ಲಿ ವೈಡಾಲ್ ಪರೀಕ್ಷೆ ಧನಾತ್ಮಕ ಫಲಿತಾಂಶವನ್ನೇ ನೀಡುತ್ತದೆ. ಮೊದಲ ಮತ್ತು ಎರಡನೇ ವಾರದಲ್ಲಿ ಮದ್ಯಾಹ್ನದ ಬಳಿಕ ಜ್ವರದ ತೀವ್ರತೆ ಜಾಸ್ತಿಯಾಗುತ್ತದೆ. ಜ್ವರ ಟೈಪಾಯಿಡ್ ರೋಗದ ಪ್ರಮುಖ ಲಕ್ಷಣ. ಜ್ವರವು ರೋಗದ ಮೊದಲಿನ 3-4 ದಿನ ದಿನಂಪ್ರತಿ ಏರುತ್ತಲೇ ಹೋಗುತ್ತದೆ. ಮೊದಲ ವಾರಾಂತ್ಯದಲ್ಲಿ ವಿಪರೀತ ಜ್ವರ ಉಂಟಾಗಿ 2-3-4 ವಾರಗಳಲ್ಲಿ ಎಡೆಬಿಡದೆ ಏರಿಯೇ ಇರುವುದರಿಂದ ವಿಷಮಶೀತ ಜ್ವರ ಎಂದೂ ಕರೆಯುತ್ತಾರೆ.
3. ಮೂರನೇ ವಾರದಲ್ಲಿ ಕರುಳಿನಲ್ಲಿ ಹುಣ್ಣಾಗುವ ಸಾಧ್ಯತೆ ಹೆಚ್ಚು. ಈ ಕರುಳಿನ ಹುಣ್ಣುಗಳು ಒಡೆದು ರಕ್ತಸ್ರಾವವಾಗುತ್ತದೆ. ಕೆಲವೊಮ್ಮೆ ಕರುಳು ತೂತಾಗಿ ರಕ್ತಕ್ಕೆ ಸೋಂಕು ಹರಡುವ ಸಾಧ್ಯತೆಯೂ ಇರುತ್ತದೆ. ರಕ್ತಕ್ಕೆ ಹರಡಿದ ಸೋಂಕಿನಿಂದಾಗಿ, ಮೆದುಳಿನ ಉರಿಯೂತ, ನ್ಯೂಮೋನಿಯಾ ಮತ್ತು ಶ್ವಾಸಕೋಶದ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ರಕ್ತ ತಟ್ಟೆಗಳ ಸಂಖ್ಯೆ ಕಡಮೆಯಾಗಿ ಆಂತರಿಕ ರಕ್ತಸ್ರಾವವಾಗುವ ಸಾಧ್ಯತೆಯೂ ಇದೆ. ವಿಪರೀತ ಜ್ವರದಿಂದ ನಿರ್ಜಲೀಕರಣವಾಗುವ ಸಾಧ್ಯತೆಯೂ ಇರುತ್ತದೆ. ಮೂರನೇ ವಾರದ ಬಳಿಕ ಜ್ವರ ಇಳಿಮುಖವಾಗುತ್ತದೆ.
ಹೇಗೆ ಹರಡುತ್ತದೆ?:
1. ಕಲುಷಿತಗೊಂಡ ನೀರು ಮತ್ತು ಕಲುಷಿತಗೊಂಡ ಆಹಾರದ ಮುಖಾಂತರ ರೋಗ ಬೇಗನೆ ಹರಡುತ್ತದೆ. ಸಾಲ್ಮೋನೆಲ್ಲಾ ಟೈಫಿ ಎಂಬ ರೋಗಾಣು ರೋಗಿಯ ಮಲ ಮೂತ್ರ ಮತ್ತು ವಾಂತಿಗಳಲ್ಲಿ ಲಕ್ಷಗಟ್ಟಲೆ ಇರುತ್ತದೆ. ಈ ರೋಗಾಣುವಿನಿಂದ ಮಿಶ್ರವಾದ ನೀರು, ಆಹಾರ ಪಾನೀಯ ಸೇವನೆಯಿಂದ ರೋಗ, ಆರೋಗ್ಯವಂತ ವ್ಯಕ್ತಿಯ ದೇಹದ ಅನ್ನಕೋಶವನ್ನು ಸೇರಿ ಕರುಳಿನ ಮುಖಾಂತರ ದೇಹಗತವಾಗುತ್ತದೆ. ಕೆಲವೊಮ್ಮೆ ರೋಗದಿಂದ ಗುಣವಾದ ಬಳಿಕವೂ, ರೋಗಾಣು ಪಿತ್ತಕೋಶದಲ್ಲಿ ಮನೆ ಮಾಡಿಕೊಂಡು, ನಿರ್ಭೀತಿಯಿಂದ ಇರುತ್ತದೆ. ಆ ವ್ಯಕ್ತಿಯ ಮಲದ ಮುಖಾಂತರ ಇತರರಿಗೆ ಸುಲಭವಾಗಿ ಹರಡುತ್ತದೆ.
2. ಟೈಪಾಯಿಡ್ ರೋಗಾಣುವಿನಿಂದ ಕಲುಷಿತವಾದ ಪ್ರಾಣಿಗಳ ಮಾಂಸಹಾರ ಸೇವನೆಯಿಂದಲೂ ರೋಗ ಹರಡುತ್ತದೆ. ಕರುಳಿನ ಮುಖಾಂತರ ದೇಹವನ್ನು ಸೇರಿ ಬಳಿಕ ರಕ್ತಕ್ಕೆ ಸೇರಿಕೊಂಡು ತನ್ನ ನಿಜವಾದ ರೂಪವನ್ನು ತೋರಿ ವಿಷಮ ಶೀತ ಜ್ವರಕ್ಕೆ ಕಾರಣವಾಗುತ್ತದೆ.
3. ಕೆಲವೊಮ್ಮೆ ಮೂತ್ರಗಳಿಂದ, ನೊಣಗಳ ಮುಖಾಂತರವೂ ಆಹಾರ ಕಲುಷಿತಗೊಂಡು ರೋಗ ಹರಡುತ್ತದೆ. ದೇಹಭಾದೆ ತೀರಿಸಿದÀ ಬಳಿಕ ಸರಿಯಾಗಿ ಸೋಪಿನ ದ್ರಾವಣ ಹಚ್ಚದಿದ್ದಲ್ಲಿ ರೋಗ ಹರಡುವ ಸಾಧ್ಯತೆ ಇರುತ್ತದೆ.
ಪತ್ತೆ ಹಚ್ಚುವುದು ಹೇಗೆ?
ರಕ್ತ ಪರೀಕ್ಷೆ, ಮಲ ಪರೀಕ್ಷೆ, ಅಸ್ತಿಮಜ್ಜೆ ಪರೀಕ್ಷೆ ಮುಖಾಂತರ ರೋಗ ಪತ್ತೆ ಹಚ್ಚಲಾಗುತ್ತದೆ. ವೈಡಾಲ್ ಪರೀಕ್ಷೆ ಮೊದಲ ವಾರದಲ್ಲಿ ಋಣಾತ್ಮಕ ಫಲಿತಾಂಶ ನೀಡುವ ಸಾಧ್ಯತೆ ಇದೆ. ಆದರೆ ಟೈಪಿಡಾಟ್ ಎಂಬ ಪರೀಕ್ಷೆ ರೋಗಿಯ ದೇಹಕ್ಕೆ ಸೇರಿದ 2-3 ದಿನದೊಳಗೆ ಪತ್ತೆ ಹಚ್ಚಲಾಗುತ್ತದೆ. IgG ಮತ್ತು IgM ಆಂಟಿಬಾಡಿಗಳನ್ನು ಸಾಲ್ಮೊನೆಲ್ಲಾ ರೋಗಾಣುವಿನ ವಿರುದ್ಧ ELIZA ಪರೀಕ್ಷೆ ಮುಖಾಂತರ ಪತ್ತೆ ಹಚ್ಚಲಾಗುತ್ತದೆ. ಹಿಂದಿನ ಕಾಲದಲ್ಲಿ ರಕ್ತ ಪರೀಕ್ಷೆ ಮಲಪರೀಕ್ಷೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿತ್ತು. ಆದರೆ ಇದಕ್ಕೆ ಬಹಳ ಸಮಯ ತಗಲುತ್ತದೆ. ಈಗ ತಂತ್ರಜ್ಞಾನ ಮುಂದುವರಿದುದರಿಂದ ‘ಟೈಫಿಡಾಟ್’ ಪರೀಕ್ಷೆ ಹೆಚ್ಚು ಜನಪ್ರಿಯವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ರೋಗಿಯ ರೋಗದ ಲಕ್ಷಣಗಳನ್ನು ಕೂಲಂಕÀುಷವಾಗಿ ಅಧ್ಯಯನ ಮಾಡಿ, ರೋಗದ ಲಕ್ಷಣಗಳು, ರೋಗದ ತೀವ್ರತೆ ಮತ್ತು ರೋಗದ ಹಿಂದಿನ ಚರಿತ್ರೆಯನ್ನು ವೈದ್ಯರು ಕೂಲಂಕುಷವಾಗಿ ಮನನ ಮಾಡಿದ ಬಳಿಕ, ಬೇರೆ ಪರೀಕ್ಷೆಗಳನ್ನು ಸೂಚಿಸುತ್ತಾರೆ. ರೋಗದ ಲಕ್ಷಣ ಮತ್ತು ರಕ್ತ ಪರೀಕ್ಷೆಗಳ ಫಲಿತಾಂಶಗಳನ್ನು ತಾಳೆ ನೋಡಿ ವೈದ್ಯರು ರೋಗವನ್ನು ಪತ್ತೆ ಹಚ್ಚುತ್ತಾರೆ.
ತಡೆಗಟ್ಟುವುದು ಹೇಗೆ?:
ಸ್ವಚ್ಛತೆ ಮತ್ತು ವಾತಾವರಣ ಕಲುಷಿತಗೊಳ್ಳದಂತೆ ನೋಡಿಕೊಂಡಲ್ಲಿ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಪ್ರಾಣಿಗಳಿಗೆ ಈ ವಿಷಮ ಜ್ವರ ಭಾದಿಸುವುದಿಲ್ಲ, ಕೇವಲ ಮಾನವನಿಗೆ ಮಾತ್ರ ಬಾಧಿಸುತ್ತದೆ. ರೋಗಾಣುವಿನಿಂದ ಕಲುಷಿತಗೊಂಡು ಮಲಮೂತ್ರ, ನಮ್ಮ ಆಹಾರ ಮತ್ತು ಪಾನೀಯಗಳ ಸಂಪರ್ಕಕ್ಕೆ ಬರದಂತೆ ಮುಂಜಾಗರೂಕತೆ ವಹಿಸಬೇಕು. ಆಹಾರ ಸೇವಿಸುವಾಗ ಚೆನ್ನಾಗಿ ಕೈತೊಳೆದು ಸ್ವಚ್ಛಗೊಳಿಸಿದಲ್ಲಿ ರೋಗ ಬರದಂತೆ ತಡೆಯಬಹುದು. 1908ರಲ್ಲಿ ಆರಂಭಿಸಲಾದ ನೀರಿನ ಕ್ಲೋರಿನ್ಕರಣದಿಂದಾಗಿ ಸಾಕಷ್ಟು ಟೈಫಾಯಿಡ್ ಸಂಖ್ಯೆ ಇಳಿಮುಖಗೊಂಡಿತು.
1942ರಲ್ಲಿ ಆಂಟಿಬಯೋಟಿಕ್ಗಳ ಬಳಕೆಯಿಂದ ಮತ್ತಷ್ಟು ಇಳಿಮುಖಗೊಂಡಿತು. ಮೂಲಭೂತ ಸೌಕರ್ಯಗಳಾದ ಶುದ್ಧಗಾಳಿ, ಶುದ್ಧನೀರು, ಬೆಳಕು ನೀಡಿದ್ದಲ್ಲಿ ರೋಗವನ್ನು ತಡೆಗಟ್ಟಬಹುದು. ಸಕ್ರಮವಾದ ಮಲಮೂತ್ರ ವಿಸರ್ಜನೆ, ಶುದ್ಧ ಕುಡಿಯುವ ನೀರಿನ ಸೌಕರ್ಯಗಳು, ಶುಚಿ ಅಭ್ಯಾಸಗಳಾದ ಕುದಿಸಿ ಆರಿಸಿದ ಪಾನೀಯಗಳು ಮತ್ತು ಬೇಯಿಸಿದ ಆಹಾರದ ಸೇವನೆಗಳಿಂದ ಟೈಪಾಯಿಡ್ ರೋಗವನ್ನು ತಡೆಯಬಹುದು. ರಸ್ತೆ ಬದಿಯ ಮತ್ತು ತೆರೆದ ಅಂಗಡಿಗಳಲ್ಲಿ ತೆರೆದಿಟ್ಟ ಪಾನೀಯ, ಸಿಹಿ ತಿಂಡಿಗಳನ್ನು ವರ್ಜಿಸಬೇಕು. ಸರ್ಕಾರ ಮತ್ತು ನಗರಪಾಲಿಕೆಗಳು ಜನರಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ ನೀಡಿದಲ್ಲಿ ರೋಗ ಬರದಂತೆ ಮಾಡಬಹುದು. ಟೈಫಾಯಿಡ್ ರೋಗ ತಡೆಯಲು ಪರಿಣಾಮಕಾರಿ ಲಸಿಕೆ ಮತ್ತು ಚುಚ್ಚು ಮದ್ದು ಲಭ್ಯವಿದೆ. 1990ರಲ್ಲಿ ವಿಶ್ವ ಸಂಸ್ಥೆ ಚುಚ್ಚುಮದ್ದು ಮತ್ತು ಬಾಯಿಯ ಮುಖಾಂತರ ತೆಗೆದುಕೊಳ್ಳುವ ಲಸಿಕೆಯನ್ನು ಜಾರಿಗೆ ತಂದರು. 2 ವರ್ಷದ ಕೆಳಗಿನವರಿಗೆ 1ರಿಂದ 2 ಬಾರಿ ಈ ಚುಚ್ಚು ಮದ್ದು ನೀಡಲಾಗುತ್ತದೆ. 2 ವರ್ಷದ ಬಳಿಕ ಮಗದೊಮ್ಮೆ ಬೂಸ್ಟರ್ ಡೋಸ್ ನೀಡಬೇಕು. ಟೈಫಾಯಿಡ್ ಗುಳಿಗೆ ಲಸಿಕೆಯನ್ನು 5 ವರ್ಷದ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಇದು 5 ರಿಂದ 7 ವರ್ಷಗಳ ವರೆಗೆ ರಕ್ಷಣೆ ಮಾಡುತ್ತದೆ. ಆ ಬಳಿಕ ಪುನಃ ಬೂಸ್ಟ್ರ್ ಡೋಸ್ ನೀಡಬೇಕು. ಎರಡೂ ಲಸಿಕೆಗಳು ಪರಿಣಾಮಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದೀಗ ಹೆಪಟೈಟಿನ್ ‘A’ ಯ ಜೊತೆಗಿರುವ ಟೈಪಾಯಿಡ್ ಲಸಿಕೆ ಲಭ್ಯವಿದೆ.
ಚಿಕಿತ್ಸೆ ಹೇಗೆ?:
ಟೈಪಾಯಿಡ್ ರೋಗ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ನಿರ್ಜಲೀಕರಣವಾದಾಗ ಸಾಕಷ್ಟು ನೀರಿನ ಸೇವನೆ ಅಗತ್ಯ. ಆಂಟಿಬಯೋಟಿಕ್ಗಳ ಬಳಕೆಯಿಂದಾಗಿ ರೋಗದಿಂದಾಗುವ ಸಾವು ನೋವಿನ ಪರಿಣಾಮ ಗಣನೀಯವಾಗಿ ಕುಗ್ಗಿದೆ. ಆಂಫಿಸಿಲಿನ್, ಕ್ಲೋರಾಮ್ಫೆನಿಕಾಲ್, ಅಮಾಕ್ಸಿಸಿಲಿನ್, ಸಿಪ್ರೊಪ್ಲಾಕ್ಸಿಸಿಲಿನ್ ಮುಂತಾದ ಔಷಧಿಗಳು ರೋಗವನ್ನು ತಹಬದಿಗೆ ತರಬಲ್ಲದು. ಚಿಕಿತ್ಸೆ ನೀಡದಿದ್ದಲ್ಲಿ 20ರಿಂದ 30 ಶೇಕಡಾ ಮಂದಿಗೆ ಸಾವು ನಿಶ್ಚಿತ. ಚಿಕಿತ್ಸೆ ನೀಡಿದ ಬಳಿಕವೂ ಶೇಕಡಾ 1 ರಿಂದ 4ರಷ್ಟು ಮಂದಿ ಸಾವಿಗೀಡಾಗುವ ಸಾಧ್ಯತೆಯೂ ಇರುತ್ತದೆ. ಹೆಚ್ಚಾಗಿ ಔಷಧಿಗೆ ಬಗ್ಗುವ ಈ ರೋಗ, ವಿಷಮ ಸ್ಥಿತಿಗೆ ತಲುಪಿದ ಬಳಿಕ ಶಸ್ತ್ರ ಚಿಕಿತ್ಸೆಯ ಅಗತ್ಯವೂ ಬರಬಹುದು. ಅಗತ್ಯಕ್ಕನುಗುಣವಾಗಿ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸಿ ಗುಣಪಡಿಸುತ್ತಾರೆ.
ನ್ಯೂಮೋನಿಯಾ (ಪುಪ್ಪುಸ ಜ್ವರ)
ನ್ಯೂಮೋನಿಯ ಜ್ವರ ಶ್ವಾಸಕೋಶಕ್ಕೆ ಸಂಬಂಧಿದ ಸಾಂಕ್ರಾಮಿಕ ಖಾಯಿಲೆಯಾಗಿರುತ್ತದೆ. ಕನ್ನಡದಲ್ಲಿ ಈ ರೋಗವನು ಪುಪ್ಪುಸ ಜ್ವರ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಖಾಯಿಲೆಯು ಎಲ್ಲಾ ವರ್ಗದ ಜನರಲ್ಲಿಯೂ ಎಲ್ಲವಯಸ್ಸಿನವರಲ್ಲಿಯೂ ಕಂಡುಕೊಳ್ಳುತ್ತದೆ. ಅದರಲ್ಲಿಯೂ ಮುಖ್ಯವಾಗಿ ಚಿಕ್ಕವಯಸ್ಸಿನ ಮಕ್ಕಳಲ್ಲಿ ಮತ್ತು ವಯೋವೃದ್ದರಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ಶ್ವಾಸ ಕೋಶ ಗಳಲ್ಲಿ ಬ್ಯಾಕ್ಟೀರಿಯ, ವೈರಸ್, ಶಿಲೀಂದ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೋಂಕು ತಗಲಿದಾಗ ಉಂಟಾಗುವ ಉರಿಯಾತವನ್ನು ನ್ಯೂಮೋನಿಯಾ ಎಂದು ಕರೆಯುತ್ತಾರೆ. ಶ್ವಾಸ ಕೋಶದಲ್ಲಿ
ಉರಿಯೂತವಾದಾಗ ಉರಿಯೂತಕ್ಕೊಳಗಾದ ಭಾಗ ಘನೀಕೃತಗೊಳ್ಳುತ್ತದೆ. (ಗಟ್ಟಿಯಾಗುತ್ತದೆ) ಸ್ಪಂಜಿನಂತೆ ಮೃದುವಾಗಿದ್ದ ಶ್ವಾಸ ಕೋಶ ಭಾಗ ಸೇಬಿನಂತೆ ಗಟ್ಟಿಯಾಗುತ್ತದೆ. ಈ ಘನೀಕರಣಗೊಂಡ ಶ್ವಾಸ ಕೋಶದ ಭಾಗವನ್ನು “ಕನ್ಸಾಲಿಡೀಶನ್” ಎನ್ನುತಾರೆ. ಎದೆಗೂಡಿನ ಕ್ಷಕಿರಣವನ್ನು ತೆಗೆದು ಈ ರೀತಿಯ ಘನೀಕರಣವನ್ನು ಪತ್ತೆ ಹಚ್ಚಲಾಗುತ್ತದೆ.
ರೋಗ ಹೇಗೆ ಹರಡುತ್ತದೆ?
ಸಾಮಾನ್ಯವಾಗಿ ರೋಗಗ್ರಸ್ಥ ವ್ಯಕ್ತಿಯ ಜೀವರಸಗಳಿಂದ ರೋಗ ಹರಡುತ್ತದೆ. ಸಾಂಕ್ರಮಿಕ ರೋಗವಾದ ನ್ಯೂಮೋನಿಯಾ, ಕೆಮ್ಮಿದಾಗ, ಸೀಳಿದಾಗ ಮತ್ತು ಮೂಗಿನ ಸಿಂಬಳದಿಂದ ಇತರರಿಗೆ ಹರಡಬಹುದು. ಜೊಲ್ಲುರಸದ ಮುಖಾಂತರವು ಜೀವಕಣಗಳು ಹರಡÀಬಹುದು. ರೋಗಿ ಬಳಸಿದ ತಟ್ಟೆ, ಬಟ್ಟಲು, ಲೋಟ, ಚಮಚ, ಕರವಸ್ತ್ರ, ಟೆವೆಲ್, ಉಡುಪುಗಳಿಂದಲೂ ರೋಗ ಹರಡುವ ಸಾದ್ಯತೆ ಇರುತ್ತದೆ.
ರೋಗದ ಲಕ್ಷಣಗಳು:
ವಿಪರೀತ ಜ್ವರ, ಚಲಿಯಾಗುವುದು, ಉಸಿರುಗಟ್ಟುವುದು, ಕೆಮ್ಮುಕಫ, ಕಫದಲ್ಲಿ ರಕ್ತ, ಮೈ ಕೈ ನೋವು ಸುಸ್ತುವಾÀಕರಿಕೆ, ವಾಂತಿ, ಸಂದಿವಾತ, ಸ್ನಾಯುಎಳೆತ ಇವೆಲ್ಲವು ನ್ಯೂಮೋನಿಯಾ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ.
ಪತ್ತೆ ಹಚ್ಚುವುದು ಹೇಗೆ?
ಸಾಮಾನ್ಯವಾಗಿ ನುರಿತ ವೈದ್ಯರು ರೋಗದ ಲಕ್ಷಣವನ್ನು ಅಭ್ಯಸಿಸಿ ರೋಗವನ್ನು ನಿರ್ಧರಿಸುತ್ತಾರೆ. ಎದೆಗೂಡಿನ ಚಲನೆ, ಎದೆಗೂಡಿನಲ್ಲಿ ಸಂಚಲನೆಗಳನ್ನು ಸ್ಟೆತೋಸ್ಕೊಪ್ ಮುಖಾಂತರ ಪರೀಕ್ಷಿಸಿಸುತ್ತಾರೆ. ಸಾಮಾನ್ಯವಾಗಿ ನ್ಯೂಮೋನಿಯಾ ಆದ ಎದೆಯ ಭಾಗದಲ್ಲಿ ಉಸಿರಾಟದ ಕ್ಷಯಿಸುವಿಕೆ ಕಂಡುಬರುತ್ತದೆ. ಶ್ವಾಸಕೋಶದ ಒಳಗೆ ನೀರು ತುಂಬಿದಾಗ, ಕೀವು ತುಂಬಿದಾಗ ಅತೀಯಾದ ಉಸಿರಾಟದ ತೊಂದರೆ ಉಂಟಾಗಬಹುದು. ದೇಹದ ಪರೀಕ್ಷೆಯ ಜೊತೆಗೆ ಎದೆಗೂಡಿನ ಕ್ಷಕಿರಣ, ರಕ್ತ ಪರೀಕ್ಷೆ, ಕಫ ಮುಂತಾದ ಪರೀಕ್ಷೆಗಳ ಮುಖಾಂತರ ಯಾವ ಕಾರಣಕ್ಕಾಗಿ ನ್ಯೂಮೋನಿಯಾ ಎಂಬುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಬ್ಯಾಕ್ಟಿರಿಯಾ ನ್ಯೂಮೋನಿಯಾವನ್ನು ಬಯೋಟಿಕ್ಗಳ ನೆರವಿನಿಂದ ಗುಣಪಡಿಸಲಾಗುತ್ತದೆ. ಆದರೆ ವೈರಾಣುಗಳಿಂದಾಗುವ ನ್ಯೂಮೋನಿಯಾನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ರೋಗ ವಿರೋಧಕ ಶಕ್ತಿ ಕಡಿಮೆಯಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗೆ ಚಿಕಿತ್ಸೆ ಅತೀ ಅವಶ್ಯಕ.
ತಡೆಗಟ್ಟುವುದು ಹೇಗೆ?
1. ರೋಗಿಗಳು ಬಳಸಿದ ಕರವಸ್ತ್ರ ಟವೆಲ್ಗಳನ್ನು ಬಳಸಬಾರದು.
2. ಕೆಮ್ಮು, ಜೊಲ್ಲುರಸ, ಸಿಂಬಳ, ಸೀನು ಇತ್ಯಾದಿಗಳಿಂದ ಜೀವಕಣಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇವುಗಳಿಂದ ದೂರವಿರಬೇಕು.
3. ರೋಗಿಗಳು ಬಳಸಿದ ಬಟ್ಟೆ, ತಟ್ಟೆ, ಲೋಟ, ಬಟ್ಟಲು, ಚಮಚ ಇತ್ಯಾದಿಗಳನ್ನು ಬಳಸಬಾರದು. ರೋಗಿಗಳು ಬಳಸಿದ ಈ ಪರಿಕರಗಳನ್ನು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆಯತಕ್ಕದ್ದು.
ಸಾಮಾನ್ಯವಾಗಿ ವೈರಸ್ ನ್ಯೂಮೋನಿಯಾ ಅತಿಯಾದ ಸಾಂಕ್ರಾಮಿಕ ರೋಗವಾಗಿದ್ದು ರೋಗಿಯನ್ನು ಬೇರೆಯಾದ ಕೋಣೆಯಲ್ಲಿರಿಸಿ ಇತರಿಗೆ ರೋಗ ಹರಡದಂತೆ ಮುಂಜಾಗರೂಕತೆ ವಹಿಸಲಾಗುತ್ತದೆ.
ಮುಕ್ತಾಯಕ್ಕೆ ಮುನ್ನ:
ನ್ಯೂಮೋನಿಯಾ ಬಹಳ ಸಾಮಾನ್ಯವಾದ ಖಾಯಿಲೆ ಎಂದು ಮೂಗು ಮುರಿಯುವುದು ತಪ್ಪಾಗುತ್ತದೆ. ರೋಗಿಯ ದೇಹ ಪ್ರಕೃತಿ ರೋಗ ನಿರೋಧಕ ಶಕ್ತಿ ಯಾವ ರೋಗಾಣು ಕಾರಣದಿಂದಾಗಿ ನ್ಯೂಮೋನಿಯಾ ಉಂಟಾಗಿದೆ ಎಂಬುವುದನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಬರೀ ಜ್ವರ, ಶೀತ, ಕೆಮ್ಮು, ನೆಗಡಿ ಎಂದು ನಿರ್ಲಕ್ಷಿಸಿದಲ್ಲಿ ರೋಗವನ್ನು ಅಲಕ್ಷಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಎಲ್ಲಾ ರೀತಿಯ ನ್ಯೂಮೋನಿಯಾ ಮಾರಣಾಂತಿವಲ್ಲದಿದ್ದರೂ ಕೆಲವೊಮ್ಮೆ ಮಾರಣಾಂತಿಕವಾಗುವ ಸಾಧ್ಯತೆ ಇಲ್ಲವೆಂದಿಲ್ಲ. ಚಿಕಿತ್ಸೆ ಸರಿಯಾಗಿ, ಸರಿಯಾದ ಸಮಯದಲ್ಲಿ ನೀಡದಿದ್ದಲ್ಲಿ ಶ್ವಾಸಕೋಶದೊಳಗೆ ಕೀವು ತುಂಬಿಕೊಂಡು ಘನೀಕರಣಗೊಂಡು ಶ್ವಾಸಕೋಶದ ಆ ಭಾಗ ಜಡಗೊಂಡು ನಿಷ್ಕ್ರಿಯವಾಗಬಹುದು ಮತ್ತು ಶ್ವಾಸಕೋಶದ ಆ ಬಾಗ ಶಾಶ್ವತವಾಗಿ ಶಿಥಿಲವಾಗಬಹುದು ಮತ್ತು ಇದರಿಂದಾಗಿ ಉಸಿರಾಟದ ತೊಂದರೆ ಮತ್ತಷ್ಟು ಉಲ್ಬಣವಾಗಬಹುದು. ಆರಂಭಿಕ ಹಂತದಲ್ಲಿಯೇ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ನ್ಯೂಮೋನಿಯಾ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಹೆಮ್ಮಾರಿ ರೋಗ ಹೆಪಟೈಟಿಸ್- ಬಿ
ಹೆಪಟೈಟಿಸ್ -ಬಿ ಎನ್ನುವುದು ಯಕೃತ್ತಿಗೆ ಸಂಬಂಧ ಪಟ್ಟ ರೋಗವಾಗಿದ್ದು ಹೆಪಟೈಟಿಸ್ -ಬಿ ಎಂಬ ವೈರಾಣುವಿನ ಸೋಂಕಿನಿಂದ ಈ ರೋಗ ಬರುತ್ತದೆ. ಯಕೃತ್ತು ನಮ್ಮ ದೇಹದ ಅತಿ ಮುಖ್ಯವಾದ ಅಂಗವಾಗಿದ್ದು, ದೇಹದ ರಕ್ಷಣಾ ಪ್ರಕ್ರಿಯೆ ಮತ್ತು ಜೀರ್ಣಾಂಗ ಪ್ರಕ್ರಿಯೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಹೆಪಟೈಟಿಸ್ ವೈರಾಣುವಿನಿಂದ ಸೋಂಕಿಗೊಳಗಾದ ಯಕೃತ್ತು ತನ್ನ ಕೆಲಸವನ್ನು ಸರಿಯಾಗಿ ನಿಭಾಯಿಸಲಾಗದೆ ದೇಹದ ಆರೋಗ್ಯ ಹದಗೆಟ್ಟು ವ್ಯಕ್ತಿ ಜಾಂಡೀಸ್ ರೋಗದಿಂದ ಬಳಲುತ್ತಾನೆ. ಸಕಾಲದಲ್ಲಿ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಯಕೃತ್ತಿನ ವೈಪಲ್ಯ ಮತ್ತು ಯಕೃತ್ತಿನ ಕ್ಯಾನ್ಸರ್ ಉಂಟಾಗಿ ಜೀವ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.
ಏನಿದು ಹೆಪಟೈಟಿಸ್?:
ಯಕೃತ್ತಿನ ಉರಿಯೂತವನ್ನು ಹೆಪಟೈಟಿಸ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ವೈರಾಣುವಿನ ಸೋಂಕಿನಿಂದಲೇ ಹೆಚ್ಚಾಗಿ ಹೆಪಟೈಟಿಸ್ ಉಂಟಾಗುತ್ತದೆ. ಹೆಪಟೈಟಿಸ್ ವೈರಾಣುವಿನಲ್ಲಿ ಎ,ಬಿ,ಸಿ,ಡಿ, ಮತ್ತು ಇ ಎಂದು ಐದು ಪ್ರಭೇದಗಳಿವೆ. ವೈರಾಣುವಿನ ರಚನೆಯನ್ನು ಆಧರಿಸಿ ಈ ವಿಂಗಡಣೆ ಮಾಡಲಾಗಿದೆ. ಸಾಮಾನ್ಯವಾಗಿ ಹೆಪಟೈಟಿಸ್ ಎ ಡಿ ಮತ್ತು ಇ ವೈರಾಣುವಿನಿಂದ ಉಂಟಾಗುವ ಹೆಪಟೈಟಿಸ್ ಹೆಚ್ಚು ಮಾರಾಣಾಂತಿಕವಾಗಿರುವುದಿಲ್ಲ ಮತ್ತು ಹೆಚ್ಚಿನ ಸಂಧರ್ಭಗಳಲ್ಲಿ ತನ್ನಿಂತಾನೆ ಗುಣವಾಗುತ್ತದೆ. ಆದರೆ ಹೆಪಟೈಟಿಸ್ ಬಿ ಮತ್ತು ಸಿ ಬಹಳ ಅಪಾಯಕಾರಿ ರೋಗವಾಗಿರುತ್ತದೆ. ಈ ರೋಗವನ್ನು ಗುಣಪಡಿಸುವ ಔಷಧಿ ಇಲ್ಲದಿರುವುದರಿಂದ ಲಸಿಕೆ ಹಾಕಿಸಿ ರೋಗ ತಡೆಗಟ್ಟಬೇಕಾದ ಅನಿವಾರ್ಯತೆ ಇದೆ. ಜಾಗತಿಕವಾಗಿ ವರ್ಷವೊಂದರಲ್ಲಿ 240 ರಿಂದ 2455 ಮಿಲಿಯನ್ ಮಂದಿ
ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ. ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ ಈ ಹೆಪಟೈಟಿಸ್ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತ ದೇಶವೊಂದರಲ್ಲಿಯೇ ಸುಮಾರು 40 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಗಳಿಂದ ತಿಳಿದುಬಂದಿದೆ. ವೈದ್ಯಕೀಯ ರಂಗದಲ್ಲಿ ಸಾಕಷ್ಟು ಸಂಶೋಧನೆಗಳು, ಆವಿಷ್ಕಾರಗಳು ಹಾಗೂ ಕ್ರಾಂತಿಗಳು ನಡೆಯತ್ತಿದ್ದರೂ, ತಡೆಗಟ್ಟಬಹುದಾದ ರೋಗಗಳಲ್ಲಿ ಒಂದಾದ ಹೆಪಟೈಟಿಸ್ ದಿನೇ ದಿನೇ ಮನುಕುಲದ ಮೇಲೆ ಸವಾರಿ ಮಾಡುವುದು ಸೋಜಿಗದ ವಿಚಾರವಾಗಿದೆ. ಏಡ್ಸ್ನಷ್ಟೇ ಮಾರಕವಾದ ಹೆಪಟೈಟಿಸ್ ಬಿ ಮತ್ತು ಸಿ ರೋಗವನ್ನು ಸೂಕ್ತವಾದ ವೈದ್ಯಕೀಯ ಮಾರ್ಗದರ್ಶನ ಮತ್ತು ಸಾಕಷ್ಟು ಮುಂಜಾಗರೂಕತೆಯಿಂದ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.
ಹೆಪಟೈಟಿಸ್ ‘ಬಿ’ ರೋಗದ ಲಕ್ಷಣಗಳು ಏನು?
ಹೆಪಟೈಟಿಸ್ ‘ಬಿ’ ವೈರಾಣು ಸೋಂಕು ತಗುಲಿದ ಬಳಿಕ ಕೆಲವರಲ್ಲಿ ಯಾವ ತೊಂದರೆಯೂ ಕಾಣಿಸುವುದಿಲ್ಲ. ಇನ್ನು ಕೆಲವರಲ್ಲಿ ವಾಂತಿ, ಭೇದಿ, ಹಸಿವಿಲ್ಲದಿರುವುದು, ಹೊಟ್ಟೆನೋವು, ಸುಸ್ತು, ಕಾಮಾಲೆ ಅಥವಾ ಜಾಂಡೀಸ್ (ದೇಹದ ಚರ್ಮ ಮತ್ತು ಕಣ್ಣಿನ ಮೇಲ್ಪದರ ಹಳದಿ ಬಣ್ಣಕ್ಕೆ ತಿರುಗುವುದು) ಜ್ವರ, ಮೈಕೈ ನೋವು, ದೇಹದ ತೂಕ ಕಡಿಮೆಯಾಗುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ ಗಾಢ ವರ್ಣದ ಮೂತ್ರ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲಿಕ ತೊಂದರೆ ಇರುವವರಲ್ಲಿ ಹೆಚ್ಚಿನ ತೊಂದರೆ ಕಾಣಸಿಗದು. ಆದರೆ ಯಕೃತ್ತಿನಲ್ಲಿ ನಾರಿನ ಅಂಶ (Fibrosis or Cirrhosis) ಜಾಸ್ತಿಯಾದಾಗ ಯಕೃತ್ತಿನ ಕಾರ್ಯಕ್ಷಮತೆ ಕ್ಷೀಣಿಸಿಕೊಂಡು ಯಕೃತ್ತಿನ ಕೆಲಸಗಳು ಸ್ಥಗಿತಗೊಳ್ಳುತ್ತದೆ. ಯಕೃತ್ತು ಊದಿಕೊಂಡು ದೊಡ್ಡದಾಗಬಹುದು ಇಲ್ಲವೇ ಉದರದಲ್ಲಿ ನೀರು ಶೇಖರಣೆ ಆಗುವ ಸಾಧ್ಯತೆಯೂ ಇದೆ.
ಹೇಗೆ ಹರಡುತ್ತದೆ?
1. ವೈರಾಣು ಸೋಂಕಿತ ರಕ್ತದ ಮತ್ತು ದೇಹದ ದ್ರವ್ಯಗಳಾದ ವೀರ್ಯ, ಯೋನಿದ್ರವಗಳ ಸಂಪರ್ಕದಿಂದ ಹರಡುತ್ತದೆ. ಸೋಂಕು ಇರುವ ವ್ಯಕ್ತಿಗಳ ಜೊತೆ ಅಸುರಕ್ಷಿತ ಸಂಭೋಗದಿಂದ ಹರಡುವ ಸಾಧ್ಯತೆ ಇದೆ.
2. ವೈರಾಣು ಸೋಂಕು ಇರುವ ರಕ್ತಪೂರಣದಿಂದಲೂ ರೋಗ ಹರಡಬಹುದು.
3. ಕಿಡ್ನಿ ರೋಗಗಳ ‘ಡಯಾಲಿಸೀಸ್’ ಚಿಕಿತ್ಸೆ ನೀಡುವ ಸಮಯದಲ್ಲಿ ವೈರಾಣು ಸೋಂಕು ತಗಲುವ ಸಾಧ್ಯತೆ ಇದೆ.
4. ವೈರಾಣು ಸೋಂಕಿತ ತಾಯಿಯಿಂದ ಮಗುವಿಗೆ ಹೆರಿಗೆ ಸಮಯದಲ್ಲಿ ಹರಡುವ ಸಾಧ್ಯತೆ ಇದೆ.
5. ಹಚ್ಚೆ ಹಾಕಿಸಿಕೊಳ್ಳುವವರು, ಆಕ್ಯುಪಂಚರ್ ಮಾಡಿಸಿಕೊಂಡಾಗ ಒಂದೇ ಸೂಜಿಯಿಂದ ಮಾದಕ ದ್ರವ್ಯಗಳನ್ನು ಹಲವರು ಸೇವಿಸಿಕೊಂಡಾಗ ಸೋಂಕು ತಗಲುವ ಸಾಧ್ಯತೆ ಇದೆ. ವಿಶ್ವದಾದ್ಯಂತ ಎರಡು ಮಿಲಿಯನ್ ಮಂದಿ ಅಸುರಕ್ಷಿತ ಚುಚ್ಚು ಮದ್ದಿನ ಬಳಕೆಯಿಂದ ಹೆಪಟೈಟಸ್ ‘ಬಿ’ ಮತ್ತು ಸಿ ರೋಗಕ್ಕೆ ತುತ್ತಾಗುವುದು ಈ ಇಪ್ಪತ್ತೊಂದನೇ ಶತಮಾನದ ದುರಂತ ಎಂದರೂ ತಪ್ಪಾಗದು.
6. ಅಸುರಕ್ಷಿತ ವೈದ್ಯಕೀಯ ಚಿಕಿತ್ಸೆ, ರೋಗಪೂರಿತ ವೈದ್ಯಕೀಯ ಉಪಕರಣಗಳ ಮೂಲಕವೂ ಹೆಪಟೈಟಿಸ್ ಬಿ ವೈರಾಣು ಹರಡುವ ಸಾಧ್ಯತೆ ಇದೆ.
ಹೇಗೆ ಹರಡುವುದಿಲ್ಲ:
ಹೆಪಟೈಟಿಸ್ ಬಿ ಸೋಂಕು ಇರುವ ವ್ಯಕ್ತಿಯ ಕೈಗಳನ್ನು ಮುಟ್ಟುವುದು, ಆಲಂಗಿಸುವುದು, ಅವರೊಡನೆ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಮುಂತಾದವುಗಳಿಂದ ರೋಗ ಹರಡುವುದಿಲ್ಲ. ಆದರೆ ಹೆಪಟೈಟಿಸ್ ‘ಎ’ ವೈರಾಣು ದೇಹದ ಸಂಪರ್ಕದಿಂದ, ದೇಹಬಾದೆ ತೀರಿಸಿದ ಬಳಿಕ ಸರಿಯಾಗಿ ಸೋಪಿನ ದ್ರಾವಣ ಬಳಸದೇ ಕೈ ತೊಳೆಯುವುದರಿಂದ ರೋಗ ಹರಡುವ ಸಾಧ್ಯತೆ ಇರುತ್ತದೆ.
ಕೆಮ್ಮು, ಸೀನುಗಳಿಂದ ಹೆಪಟೈಟಸ್ ‘ಬಿ’ ಹರಡುವುದಿಲ್ಲ. ಸೊಳ್ಳೆಗಳಿಂದಲೂ ಹೆಪಟೈಟಿಸ್ ‘ಬಿ’ ರೋಗ ಹರಡುವುದಿಲ್ಲ. ರೋಗಿಯ ಜೊತೆ ಮಲಗುವುದರಿಂದ, ಒಂದೇ ಹೊದಿಕೆ ಬಳಸುವುದರಿಂದ ಹೆಪಟೈಟಿಸ್ ಬಿ ಹರಡುವುದಿಲ್ಲ.
ಹೇಗೆ ತಡೆಗಟ್ಟಬಹುದು?
1. ಹೆಪಟೈಟಿಸ್ ರೋಗವನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ. ವೈದರ ಸೂಚನೆಯಂತೆ ಹುಟ್ಟಿನಿಂದ 9 ತಿಂಗಳ ಒಳಗೆ ಮೂರು ಬಾರಿ ಈ ಲಸಿಕೆ ನೀಡಲಾಗುತ್ತದೆ. ಇದರಿಂದ ಶೇಕಡಾ 99% ರಷ್ಟು ರಕ್ಷಣೆ ದೊರಕುತ್ತದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು (ಶೂಶ್ರೂಶಕರಿಗೆ) ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಆರಂಭಿಕ ಲಸಿಕೆ ಮೂರು ಬಾರಿ ಹಾಕಿಸಿದ ಬಳಿಕ ಪ್ರತೀ 5 ವರ್ಷಕ್ಕೊಮ್ಮೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳತಕ್ಕದ್ದು.
2. ವಿವಾಹೇತರ ಕಾಮತೃಷೆಗಳನ್ನು ಕಾಂಡೂನ್ ಬಳಸಿಯೇ ಮಾಡತಕ್ಕದ್ದು. ಹೆಪಟೈಟಿಸ್ ಸೋಂಕು ಇರುವ ವ್ಯಕ್ತಿಯ ಜೊತೆ ದೈಹಿಕ ಸಂಪರ್ಕ ಮಾಡಬಾರದು. ದೈಹಿಕ ದ್ರವ್ಯಗಳಾದ ವೀರ್ಯ, ರಕ್ತ ಎಂಜಲು, ಯೋನಿದ್ರವ ಮುಂತಾದವುಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕು.
3. ಮಾದಕ ದ್ರವ್ಯ ವ್ಯಸನಿಗಳು ಬಳಸಿದ ಸೂಜಿಯನ್ನು ಮತ್ತೊಬ್ಬರಿಗೆ ಬಳಸಬಾರದು.
4. ರಕ್ತಪೂರಣ ಮಾಡಿಸುವಾಗ ಡಯಾಲಿಸೀಸ್ ಮಾಡಿಸುವಾಗ ಸಾಕಷ್ಟು ಮುಂಜಾಗರೂಕತೆ ವಹಿಸತಕ್ಕದ್ದು.
5. ಹೆಪಟೈಟಿಸ್ ರೋಗಿಗೆ ಬಳಸಿದ ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಬೇರೆಯವರಿಗೆ ಉಪಯೋಗಿಸಬಾರದು. ಮರುಬಳಕೆ ಮಾಡದ ಉಪಕರಣಗಳನ್ನೇ ಹೆಚ್ಚು ಬಳಸತಕ್ಕದ್ದು.
ಚಿಕಿತ್ಸೆ ಹೇಗೆ?
ಹೆಪಟೈಟಿಸ್ ಬಿ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ತಗ್ಗಿಸುವ ಹಲವಾರು ಔಷಧಿಗಳು ಲಭ್ಯವಿದೆ. ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿಗಳು ಲಭ್ಯವಿದೆ. ಯಕೃತ್ತು ಮತ್ತಷ್ಟು ಹಾಳಾಗದಂತೆ ತಡೆಯುವ ಔಷಧಿಗಳು ಲಭ್ಯವಿದೆ. ಯಕೃತ್ತಿಗೆ ಮಾರಕವಾಗುವ ಔಷಧಿಗಳು, ಮದ್ಯಪಾನ, ಜಂಕ್ ಆಹಾರಗಳು, ಕರಿದ ತಿಂಡಿಗಳು ಮುಂತಾದವುಗಳನ್ನು ವರ್ಜಿಸಬೇಕು. ಪೌಷ್ಠಿಕ ಆಹಾರ ಸೇವಿಸತಕ್ಕದ್ದು. ದೇಹದ ರಕ್ಷಣಾ ವ್ಯವಸ್ಥೆಗೆ ಪೂರಕವಾದ ಆಹಾರ ಮತ್ತು ಔಷಧಿ ಸೇವಿಸಬೇಕು. ಯಕೃತ್ ಸಂಪೂರ್ಣವಾಗಿ ಹಾಳಾಗಿ ‘ಸಿರ್ವೋಸಿಸ್’ ರೋಗ ಅಂತಿಮ ಹಂತ ತಲುಪಿದ್ದಲ್ಲಿ ಯಕೃತ್ತಿನ ಕಸಿ ಮಾಡಬೇಕಾಗುತ್ತದೆ.
-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷದಂತ ಚಿಕಿತ್ಸಾಲಯ
ಹೊಸಂಗಡಿ-671323
ಮೊ :09845135787
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ