ಜುಲೈ 11: ಮಂಗಳೂರು ತಾಲೂಕು ಚುಸಾಪದಿಂದ ಜಾಗತಿಕ ಮಹಿಳಾ ಕವಿಗೋಷ್ಠಿ 'ಕಾವ್ಯ ಸಿಂಧೂರ'

Upayuktha
0

 


ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಜುಲೈ 11ನೇ ಭಾನುವಾರ ಸಂಜೆ ಆರು ಗಂಟೆಗೆ ಮಂಗಳೂರಿನಲ್ಲಿ 'ಕಾವ್ಯ ಸಿಂಧೂರ' ಎಂಬ ವಿಶ್ವ ಮಹಿಳಾ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜನಪ್ರಿಯ ಕವಯಿತ್ರಿ ಅಂಕಣ ಬರಹಗಾರ್ತಿ ವಿಜಯಲಕ್ಷ್ಮೀ ಕಟೀಲು ವಹಿಸಲಿದ್ದಾರೆ.


ಗೂಗಲ್ ಮೀಟ್ ವೆಬಿನಾರ್ ಮೂಲಕ 'ನಂಜನಗೂಡು ತಿರುಮಲಾಂಬ' ವೇದಿಕೆಯಲ್ಲಿ ನಡೆಯುವ ಈ ಮಹಿಳಾ ಕವಿಗೋಷ್ಠಿಯಲ್ಲಿ ಅಮೆರಿಕಾದ ಮೇರಿಲ್ಯಾಂಡ್ ನಿಂದ ಫಣಿಶ್ರೀ ನಾರಾಯಣನ್, ಮುಂಬೈ ನಿಂದ ಶಾರದಾ ಎ. ಅಂಚನ್, ಅಕ್ಷಯ ಆರ್ ಶೆಟ್ಟಿ, ಮಂಗಳೂರು,ಪಾರ್ವತಿ ಜೋರಾಪುರ್ ಮಠ್, ವಿಜಯಪುರ, ನವಿ ಮುಂಬೈ ನಿಂದ ರಶ್ಮಿ ಭಟ್ ಕಾಘರ್, ಹೆಸರಾಂತ ವಾಗ್ಮಿ ಸಾಹಿತಿ ಡಾ.ಶುಭಾ ಮರವಂತೆ,  

ಯುವ ಕವಯಿತ್ರಿ ಶಮೀಮಾ ಕುತ್ತಾರ್, ಹಿರಿಯ ಕವಿಯಿತ್ರಿ ಮರೋಳಿ ಸಬೀತಾ ಕಾಮತ್, ಪತ್ರಕರ್ತೆ ಲೇಖಕಿ ವಿದ್ಯಾ ಗಣೇಶ್ ಕಾಸರಗೋಡು, ಹಲವು ಪುರಸ್ಕಾರಗಳನ್ನು ಪಡೆದಿರುವ ಕವಯಿತ್ರಿ ಕಾತ್ಯಾಯಿನಿ ಕುಂಜಿಬೆಟ್ಟು, ಹಿರಿಯ ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು, ಲೇಖಕಿ ನಳಿನಾಕ್ಷಿ ಉದಯರಾಜ್, ಶಿಕ್ಷಕಿ ಕವಯಿತ್ರಿ ಸುಪ್ರಿಯ ಮಂಗಳೂರು, ನಿರ್ಮಲಾ ಶೇಷಪ್ಪ ಖಂಡಿಗೆ, ಸಾಹಿತಿ ಮಲ್ಲಿಕಾ ಜೆ ರೈ ಪುತ್ತೂರು, ಲೇಖಕಿ ಶೈಲಜಾ ಪುದುಕೋಳಿ, ಹೈದರಾಬಾದ್ ನಿಂದ ವಿಜಯಲಕ್ಷ್ಮೀ ಅಶೋಕ್ ಬಸವ, ಎನ್. ಆರ್. ರೂಪಶ್ರೀ ಮೈಸೂರು, ಅಸುಂತಾ ಡಿಸೋಜಾ ಮಂಗಳೂರು ಮತ್ತು ವಿದ್ಯಾರ್ಥಿನಿ ವೈಭವಿ ಸುರತ್ಕಲ್ ಹೀಗೆ ಒಟ್ಟು ಆಹ್ವಾನಿತ 20 ಮಂದಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.


ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಆಶಯ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಭಾಗವಹಿಸುವರು.


ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಹೆಸರಾಂತ ನಿರೂಪಕಿ ಡಾ.ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸುವರು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.


*****


ಕಾರ್ಯಕ್ರಮದ ವೇದಿಕೆಗೆ ತಿರುಮಲಾಂಬಾ ಹೆಸರೇಕೆ?!


19ನೇ ಶತಮಾನದ ಕನ್ನಡದ ಮೊದಲ ಮಹಿಳಾ ಸಾಹಿತಿ ತಿರುಮಲಾಂಬಾ


19ನೇ ಶತಮಾನದ ಕನ್ನಡದ ಪ್ರಥಮ ಲೇಖಕಿ, ಕಾದಂಬರಿಗಾರ್ತಿ, ಕವಯತ್ರಿ ತಿರುಮಲಾಂಬಾ ಎಂದರೆ ತಪ್ಪಾಗಲಾರದು. ಅವರು ಪೂರ್ಣ ಹೆಸರು ನಂಜನಗೂಡು ತಿರುಮಲಾಂಬ 1887 ಮಾರ್ಚ್ 15 ರಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಜನಿಸಿದರು. ಹತ್ತನೇ ವಯಸ್ಸಿಗೆ ವಿಧವೆಯಾದ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಆಚೀಚಿನ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದ ತಿರುಮಲಾಂಬ ಅವರ ಮನೆ ಕ್ರಮೇಣವಾಗಿ ಒಂದು ಪಾಠಶಾಲೆಯಾಗಿಯೇ ರೂಪುಗೊಂಡಿತು. ಮಕ್ಕಳು ಮಾತ್ರವಲ್ಲದೆ ನೆರೆಹೊರೆಯ ಮಹಿಳೆಯರೂ ತಮ್ಮ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ ತಮ್ಮ ಮಕ್ಕಳೊಂದಿಗೆ ತಾವೂ ಕಲಿಯತೊಡಗಿದರು. ಹೀಗೆ ಕ್ರಮೇಣದಲ್ಲಿ ಇದು "ಮಾತೃಮಂದಿರ" ಎಂಬ ಹೆಸರು ಪಡೆಯಿತು. ಈ ದಿನಗಳಲ್ಲಿ ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗಾಗಿ ತಿರುಮಲಾಂಬ ಅವರು "ಸನ್ಮಾರ್ಗದರ್ಶಿನಿ" ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.


ತಮ್ಮ ಅಧ್ಯಯನ ವೇಳೆಯಲ್ಲಿ ತಮಗೆ ಇಷ್ಟವಾದದ್ದನ್ನು ಬರೆದಿಟ್ಟುಕೊಳ್ಳುವುದು ತಿರುಮಲಾಂಬ ಅವರಿಗಿದ್ದ ಒಂದು ಹವ್ಯಾಸ. ಇದಕ್ಕೆ ಚಿಂತನೆಗಳ ವ್ಯಾಪ್ತಿಯೂ ಒಡಗೂಡತೊಡಗಿದಂತೆ ಅವರ ಬರಹಗಳ ವ್ಯಾಪ್ತಿ ನಾಟಕ, ಕಾದಂಬರಿ, ಕತೆ, ಭಕ್ತಿಗೀತೆಗಳಿಗೆ ವಿಸ್ತರಿಸತೊಡಗಿತು. ಒಮ್ಮೆ "ಮಧುರವಾಣಿ" ಎಂಬ ಮೈಸೂರಿನಲ್ಲಿದ್ದ ಮಾಸ ಪತ್ರಿಕೆ ಒಂದು ಕಥಾಸ್ಪರ್ಧೆಯನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ತಿರುಮಲಾಂಬ ಅವರೂ ತಮ್ಮ ಕತೆಯನ್ನು ಕಳುಹಿಸಿಕೊಟ್ಟರು. ಇಷ್ಟು ಸುಂದರವಾದ ಕಥೆ ಬರೆದ ಲೇಖಕಿಯನ್ನು ಹುಡುಕಿಕೊಂಡು ಸ್ವಯಂ "ಮಧುರವಾಣಿ"ಯ ಸಂಪಾದಕ  ಕೆ. ಹನುಮಾನ್ ಅವರೇ ತಿರುಮಲಾಂಬ ಅವರ ಮನೆಗೆ ಬಂದರಂತೆ. ಆಗ ಅಲ್ಲಿ ಅವರಿಗೆ ಕಂಡದ್ದು ಹಲವಾರು ಬರಹಗಳ ಕಣಜ. ಹಲವು ಕತೆಗಳು, ಕಾದಂಬರಿ, ನಾಟಕ, ಪ್ರಬಂಧಗಳು ಹೀಗೆ ವೈವಿಧ್ಯಮಯ ಬರಹಗಳು ಆ ಕಣಜದಲ್ಲಿದ್ದವು. ಇವುಗಳಲ್ಲಿ "ವಿಧವಾ ಕರ್ತವ್ಯ" ಎಂಬ ಬರಹದಿಂದ ಪ್ರಭಾವಿತರಾದ ಹನುಮಾನರು, ಅದನ್ನು ತಮ್ಮ "ಮಧುರವಾಣಿ" ಪತ್ರಿಕೆಯಲ್ಲಿ ಪ್ರಕಟಿಸಿದರು.


ಅಂದಿನ ಮಡಿವಂತಿಕೆಯ ಸಮಾಜದಲ್ಲಿ ಅದರ ಕುರಿತು ಹಲವಾರು ಟೀಕೆಗಳು ಬಂದುವಾದರೂ, ಅವಕ್ಕೆಲ್ಲ ಧೃತಿಗೆಡದ ತಿರುಮಲಾಂಬ, ತಮಗೆ ಸರಿ ಎನಿಸುವುದನ್ನು ಆತ್ಮವಿಶ್ವಾಸದಿಂದ ಮಾಡುತ್ತಾ ಹೋದರು. ಸುಶೀಲ, ನಭ, ವಿದ್ಯುಲ್ಲತಾ, ಮಣಿಮಾಲಾ, ರಮಾನಂದ, ಚಂದ್ರವದನ ಅವರ ಅತ್ಯತ್ತಮ ಕಾದಂಬರಿಗಳು.


ಭಕ್ತಿ ಗೀತಾವಳಿ ಅವರ ಕವನ ಸಂಕಲನ. ಕರ್ನಾಟಕ ನಂದಿನಿ, ಸನ್ಮಾರ್ಗ ದರ್ಶಿನಿ ಪತ್ರಿಕೆಗಳ ಸಂಪಾದಕಿ ಮತ್ತು ಪ್ರಕಾಶಕಿ, ಸನ್ಮಾನ ಗ್ರಂಥಮಾಲೆಯ ಜನಕಿ. ವಿದ್ಯಾಇಲಾಖೆ ಮೈಸೂರು, ಮುಂಬಯಿ, ಮದರಾಸು (ಚೆನ್ನೈ)ಗಳಿಂದ ಬಹುಮಾನಗಳು, ಕರ್ನಾಟಕ ಸಾಹಿತ್ಯ ಪರಿಷತ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಸಂದಿದೆ. ಅವರು 1982 ಆಗಸ್ಟ್ 31ರಂದು ನಿಧನರಾದರು.


Key Words: ಚುಟುಕು ಸಾಹಿತ್ಯ ಪರಿಷತ್, ಮಂಗಳೂರು, ಕವಿಗೋಷ್ಠಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top