ವಿವಿ ಕಾಲೇಜು: ʼಕಾರ್ಗಿಲ್ ವಿಜಯ ದಿವಸʼ ಆಚರಣೆಯಲ್ಲಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪತ್ರಿಕೋದ್ಯಮದ ವಿಭಾಗದ ʼಮಾಧ್ಯಮ ವೇದಿಕೆʼ ಇತ್ತೀಚೆಗೆ ಕಾರ್ಗಿಲ್ ವೀರ ಯೋಧರ ಸ್ಮರಣಾರ್ಥ ವರ್ಚುವಲ್ ವೇದಿಕೆಯಲ್ಲಿ 22ನೇ ʼಕಾರ್ಗಿಲ್ ವಿಜಯ ದಿವಸʼ ಆಯೋಜಿಸಿತ್ತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಯೋಧ, ವಿವಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ, ಬೇಹುಗಾರಿಕೆ ವೈಫಲ್ಯ, ಆಯುಧಗಳು ಮತ್ತು ಚಳಿಯಿಂದ ರಕ್ಷಣೆ ನೀಡುವ ವಸ್ತ್ರಗಳ ಕೊರತೆಯ ನಡುವೆಯೂ ಯೋಧರ ಸಾಹಸದಿಂದ ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖವಾದ ಕಾರ್ಗಿಲ್ ಪ್ರದೇಶವನ್ನು ಭಾರತ ಉಳಿಸಿಕೊಳ್ಳುವಂತಾಯಿತು, ಎಂದು ಯೋಧರ ಸಾಹಸವನ್ನು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾರ್ಗಿಲ್ ಯುದ್ಧದಲ್ಲಿ ಮೃತರಾದ 527 ಯೋಧರು, ಗಾಯಾಳುಗಳನ್ನು ನಾವು ಜುಲೈ 26 ರಂದು ಮಾತ್ರ ನೆನಪಿಸಿಕೊಳ್ಳುವಂತಾಗಬಾರದು, ಯೋಧರೆಡೆಗಿನ ಅಭಿಮಾನ ಸದಾ ಜಾಗೃತವಾಗಿರಬೇಕು, ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಡಾ. ಶಾನಿ ಕೆ ಆರ್, ಕಾರ್ಗಿಲ್ ವಿಜಯ ಒಗ್ಗಟ್ಟಿನ, ದೇಶಪ್ರೇಮದ, ಸಾಹಸದ ಸಂದೇಶ ಸಾರುತ್ತದೆ, ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿನಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿ, ಶಂಕರ ಓಬಳಬಂಡಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರಾವ್ಯಾ ಅತಿಥಿಗಳ ಪರಿಚಯದ ಮೂಲಕ ಗಮನಸೆಳೆದರೆ, ವಿಧಿಶ್ರೀ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕರಾದ ಡಾ. ಸೌಮ್ಯ ಕೆ.ಬಿ ಮತ್ತು ಗುರುಪ್ರಸಾದ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ