ಜುಲೈ 23ರ ಆದಿತ್ಯವಾರ ಮಧ್ಯಾಹ್ನ ನಂತರ 2 ಗಂಟೆಗೆ ಸಭೆ. ಆ ದಿನ ಎಲ್ಲ ಮನೆಗಳಲ್ಲಿ ಮಾಡಿದ ಬಾಕಾಹು ತಿನಸು ತರುತ್ತಾರೆ. ಅನುಭವ ಹಂಚಿಕೆ, ತಿಂಡಿಗಳ ಮೌಲ್ಯಮಾಪನೆ.
ಸಂಕಟ ಬಂದಾಗ ಹೊಸ ಪರಿಹಾರಗಳು ಮೂಡಿಬರುವುದಿದೆ. ’ಮನೆಯಲ್ಲೇ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ತಯಾರಿಯ ವಿದ್ಯೆ ಹೀಗೆ ಸಂಕಟದ್ದೇ ಕೂಸು. ಮಲೆನಾಡಿನಲ್ಲಿ ’ಬಾಕಾಹು’ ಕ್ರಾಂತಿ ಆಗಿರುವುದನ್ನು ತಿಳಿಯದ ಕೋಟ್ಟಯಂ ಜಿಲ್ಲೆಯ ಪೆರಿಂಗುಲಂನಲ್ಲೂ ಈ ಹುಮ್ಮಸ್ಸು ಪುಟಿದೆದ್ದಿದೆ.
’ಬನಾನಾ ಬಡ್ಸ್’ ಎಂದು ಈಚೆಗೆ ನೊಂದಾವಣೆಯಾದ ಪುಟ್ಟ ಸಂಘಟನೆಯಲ್ಲಿ ಒಂದು ಡಜನ್ ಕೃಷಿಕುಟುಂಬಗಳಿವೆ. ಇವರಿಗೆ ’ಬಾಳೆಕಾಯಿಯ ಹುಡಿ’ ಮಾಡಿ ಎಂದು ಸಲಹೆ ಕೊಟ್ಟವರು ಸಾಮಾಜಿಕ ಕಾರ್ಯಕರ್ತ ಎಬಿ ಮ್ಯಾನ್ಯುವೆಲ್. ಅವರ ಹಿನ್ನೆಲೆಯ ಮಾರ್ಗದರ್ಶಿ ಭರಣಂಗಾನಂನ ಕೃಷಿಕರ ಸಂಘಟನೆ ’ಗ್ರಾಮಂ’ನ ಅಧ್ಯಕ್ಷ ಜೋಸೆಫ್ ಲುಕೋಸ್. ಹಲಸಿನ ಮೌಲ್ಯವರ್ಧನೆಗೆ ದಶಕದಿಂದ ಗಣನೀಯ ಕೊಡುಗೆ ಇತ್ತವರು ಇವರೆಲ್ಲಾ.
ಮೂರು ದಿನ ಹಿಂದೆ ಇವರು ಪೇಟೆಯಿಂದ ಅರ್ಧ ಕ್ವಿಂಟಾಲ್ ನೇಂದ್ರ ಬಾಳೆ ಕೊಂಡುತಂದಿದ್ದಾರೆ. ಎಲ್ಲರೂ ಸೇರಿ ಸಿಪ್ಪೆ ತೆಗೆಯದೆಯೇ ತುಂಡರಿಸಿದ್ದಾರೆ. ಈ ಮನೆಗಳಲ್ಲಿ ಡ್ರೈಯರ್ ಇಲ್ಲ. ನೆರೆ ಕೃಷಿಕರಲ್ಲಿ ಒಯ್ದು ಒಣಗಿಸಿದಾಗ ಸಿಕ್ಕಿದ್ದು 23 %. ಇದನ್ನಿಂದು ಹುಡಿ ಮಾಡಿ ಮನೆಮನೆಗೆ ಕೊಡುತ್ತಾರೆ.
ಇಂದಿನಿಂದ ಬಾಕಾಹು ಪಾಕ ಸುರು. ಆದಿತ್ಯವಾರ ಮಧ್ಯಾಹ್ನ ನಂತರ 2 ಗಂಟೆಗೆ ಸಭೆ. ಎಲ್ಲರೂ ಆ ದಿನ ಬಾಕಾಹು ತಿನಸು ತರುತ್ತಾರೆ. ಅನುಭವ ಹಂಚಿಕೆ, ತಿಂಡಿಗಳ ಮೌಲ್ಯಮಾಪನೆ. ನಂತರ ಮುಂದಿನ ಮಾರ್ಗೋಪಾಯ ನಿರ್ಧಾರ.
"ಮೊತ್ತಮೊದಲು ನೀವೆಲ್ಲಾ ಮಾಡಬೇಕಾದ ಕೆಲಸ ನಿಮ್ಮ ಮನೆಗಳಲ್ಲಿ ಇದನ್ನು ಬಳಸಿನೋಡಿ. ಪರಸ್ಪರ ಮಾತಾಡಿ. ನಿಮ್ಮದೇ ಅಭಿಪ್ರಾಯ ರೂಪಿಸಿ. ಮುಂದಿನದು ಆಮೇಲೆ" ಎನ್ನುವುದು ಈ ಭಾಗದಲ್ಲಿ ’ಅಪ್ಪಚ್ಚ ಚೇಟನ್’ ಎಂದೇ ಜನ ಸಂಬೋಧಿಸುವ ಹಿರಿಯ ಕೃಷಿಕ ಮತ್ತು ಆಹಾರೋದ್ಯಮಿ ಜೋಸೆಫ್ ಲುಕೋಸ್ ಅವರ ಸಲಹೆ. ಎಷ್ಟು ವಿವೇಕಯುತ ಕಿವಿಮಾತು, ಅಲ್ಲವೇ?
إرسال تعليق