ಹೊಸಂಗಡಿ: ಮರಗಿಡ, ಕಾಡು ಮೇಡುಗಳು ಭೂಮಂಡಲದ ಶ್ವಾಸಕೋಶಗಳಿದ್ದಂತೆ. ಕಲ್ಮಷÀಯುಕ್ತ ಗಾಳಿಯನ್ನು ಹೀರಿಕೊಂಡು ಪ್ರಾಣ ವಾಯು, ಪರಿಶುದ್ಧ ಆಮ್ಲಜನಕವನ್ನು ಮರಗಿಡಗಳು ಮನುಷ್ಯನಿಗೆ ನಿರಂತರವಾಗಿ ನೀಡುತ್ತದೆ. ಆದರೆ ಮನುಷ್ಯ ಮಾತ್ರ ನಿರಂತರವಾಗಿ ಕಾಡು ಕಡಿದು ಕಾಂಕ್ರೀಟು ಕಾಡು ಮಾಡಿ, ಪರಿಸರದ ಸಮತೋಲನವನ್ನು ಹಾಳುಗೆಡವುತ್ತಿದ್ದಾನೆ. ಪರಿಸರದ ಸಮತೋಲನ ಕಳೆದು ಹೋದಾಗ ಸಾಂಕ್ರಾಮಿಕ ರೋಗಗಳು ಹೆಚ್ಚು ಹೆಚ್ಚು ಕಂಡುಬರುತ್ತದೆ. ಕಲುಷಿತ ನೀರು, ಗಾಳಿ ಮತ್ತು ಅನಿಲಗಳಿಂದಾಗಿ ನೂರಾರು ರೋಗಗಳು ಮನುಷ್ಯನನ್ನು ಕಾಡುತ್ತದೆ.
ಕೋವಿಡ್-19 ವೈರಾಣು ರೋಗ ಕೂಡಾ ಮನುಷ್ಯನಿಂದ ಪರಿಸರದ ಮೇಲೆ ಉಂಟಾಗಿರುವ ಅತ್ಯಾಚಾರಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ವೈರಾಣುವಿನ ರುದ್ರನರ್ತನಕ್ಕೆ ಮನುಕುಲ ಹೈರಾಣಾಗಿ ಹೋಗಿದೆ. ಇನ್ನಾದರೂ ಮರಗಿಡ ನೆಟ್ಟು ಉಳಿಸಿ ಬೆಳೆಸದಿದ್ದಲ್ಲಿ ಮನುಷ್ಯನಿಗೆ ಉಳಿಗಾಲವಿಲ್ಲ. ಭೂಮಂಡಲ ಬರಿದಾಗಿ, ಅಂತರ್ಜಲ ಬತ್ತಿಹೋಗಿ, ಫಲವತ್ತಾದ ಭೂಮಿ ಮರುಭೂಮಿಯಾಗಬಹುದು ಎಂದು ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲಿ ಮೋಹನ್ ಚೂಂತಾರು ನುಡಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಸುರಕ್ಷಾದಂತ ಚಿಕಿತ್ಸಾಲಯದಲ್ಲಿ ನಡೆದ ವನಮಹೋತ್ಸವ ಮತ್ತು ಗಿಡ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 5 ವರ್ಷಗಳಿಂದ ಸುರಕ್ಷಾದಂತ ಚಿಕಿತ್ಸಾಲಯ ಹೊಸಂಗಡಿಯಲ್ಲಿ ನಿರಂತರವಾಗಿ ವನಮಹೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಇಲ್ಲಿ ಪ್ರತಿ ವರ್ಷ ಜೂನ್ ತಿಂಗಳಿಡೀ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡುವ ರೋಗಿಗಳಿಗೆ ಗಿಡ ನೀಡಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಚಿಕಿತ್ಸಾಲಯದ ವೈದ್ಯೆ ಡಾ|| ರಾಜಶ್ರೀ ಮೋಹನ್, ಸಹಾಯಕಿಯರಾದ ರಮ್ಯ ಮತ್ತು ಸುಶ್ಮಿತಾ ಉಪಸ್ಥಿತರಿದ್ದರು. ಶ್ರೀಮತಿ ರಹಮಲ್ ಅವರಿಗೆ ಗಿಡ ನೀಡುವ ಮೂಲಕ ಈ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.