ಕೊರೊನಾ ಕೃಪೆಯ ವರಗಳತ್ತ ಇಣುಕು ನೋಟ
ನಾಗೇಂದ್ರ ಸಾಗರ್ ಕೃಷಿಕರು. ಸಾಗರ ಸನಿಹದ ವರದಾಮೂಲ-ಚಿಪ್ಲಿಯವರು. ಸ್ವ-ಶ್ರಮದ ಬದುಕು. ಅವರ ಸಹಾಯಕ ಉದಯ. ಇವರ ಮಗಳು ನಿಶಾ ಈಗ ಎಸ್.ಎಸ್.ಎಲ್.ಸಿ. ಯಾ ಮೆಟ್ರಿಕ್. ಕೊರೊನಾದಿಂದಾಗಿ ಶಾಲೆಗಳು ಆರಂಭಗೊಂಡಿಲ್ಲ. ನೇರ ಪಾಠದ ಬದಲಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಅದು ಸ್ಮಾರ್ಟ್ ಫೋನ್ ಹೊಂದಿದವರಿಗೆ ಅನುಕೂಲ. ನಿಶಾಳಲ್ಲಿ ಮೊಬೈಲ್ ಇಲ್ಲದೆ ಪಾಠಗಳಿಂದ ವಂಚಿತಳಾಗಿದ್ದಳು.
ಮಗುವಿನ ಮನಸ್ಸರಿತ ನಾಗೇಂದ್ರರು ರೇಖಾಳಿಗೆ ತನ್ನ ಹೆಚ್ಚುವರಿ ಮೊಬೈಲನ್ನು ನೀಡಿದರು. ಅದು 3ಜಿ ಸೆಟ್ ಆಗಿತ್ತು. ಅದು ಉಪಯೋಗಕ್ಕೆ ಬರಲಿಲ್ಲ. ನಾಗೇಂದ್ರರು ಈ ವಿಚಾರವನ್ನು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದರು. ಸ್ನೇಹಿತರೊಬ್ಬರು ತಕ್ಷಣ ಸ್ಪಂದಿಸಿ ಮೊಬೈಲು ಕಳುಹಿಸಿಕೊಟ್ಟರು. ಇದು ನಿಶಾಳಿಗೆ ಆನ್ಲೈನ್ ತರಗತಿ ಕಲಿಕೆಗೆ ನೆರವಾಯಿತು. ನಿಶಾ ಖುಷ್. ಈ ಖುಷಿಯು ನಾಗೇಂದ್ರರ ಮನದೊಳಗೆ ನೂತನ ಆಭಿಯಾನದ ಬೀಜವೊಂದನ್ನು ಹುಟ್ಟು ಹಾಕಿತು. ಇವಳಂತೆ ಸ್ಮಾರ್ಟ್ ಫೋನ್ ಹೊಂದಿರದೆ ಆನ್ಲೈನ್ ಪಾಠಗಳಿಂದ ದೂರವಾಗಿರುವ ಮಕ್ಕಳ ಮನಸ್ಸಿನ ಕೊರಗು ಕಾಡಲಾರಂಭಿಸಿತು.
ಬಹುತೇಕರು ಒಂದೋ ಎರಡೋ ಸ್ಮಾರ್ಟ್ ಫೋನ್ ಹೊಂದಿರುತ್ತಾರೆ. ಹೆಂಡತಿಗೊಂದು, ಮಗಳಿಗೊಂದು, ಮಗನಿಗೊಂದು ಮೊಬೈಲ್. ಬೇಕಾದರೆ ಇನ್ನೊಂದೆರಡು ಹೆಚ್ಚುವರಿ. ಐದಾರು ತಿಂಗಳಲ್ಲಿ ಮತ್ತೆ ಹೊಸ ಮೊಬೈಲ್ ಬುಕ್ ಆಗಿರುತ್ತದೆ. ಹಳೆಯದು ಉತ್ತಮ ಸ್ಥಿತಿಯಲ್ಲಿದ್ದರೂ ಬದಿಗೆ ಸರಿಯುತ್ತದೆ. ಹೀಗೆ ಸರಿದ, ಸರಿಯುತ್ತಿರುವ ಮೊಬೈಲುಗಳನ್ನು ಸಂಗ್ರಹಿಸಿ, ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗೆ ಹಂಚಿದರೆ ಅನುಕೂಲ. ಈ ಯೋಚನೆಗೆ ಜಾಲತಾಣಿಗರು ಸ್ಪಂದಿಸಿದರು. ಯೋಜನೆಗೆ ಮಾಧ್ಯಮ ಬೆಳಕು ಬಿತ್ತು.
ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಸಹೃದಯಿಗಳಿಂದ ಆಶ್ವಾಸನೆಗಳು ಬಂದುವು. ಈಗಾಗಲೇ ಆತ್ಮೀಯರು, ಸ್ನೇಹಿತರಿಂದ ಪಡೆದ ನೂರಕ್ಕೂ ಮಿಕ್ಕಿ ಮೊಬೈಲುಗಳು ವಿದ್ಯಾರ್ಥಿಗಳ ಕೈಸೇರಿವೆ. ಕೆಲವರು ಹೊಸತನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕೊರಗು ದೂರವಾಗಿದೆ. ಎಂಬ ಖುಷಿಯನ್ನು ಹಂಚಿಕೊಂಡರು ನಾಗೇಂದ್ರ.
-ನಾ. ಕಾರಂತ ಪೆರಾಜೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ