ತನಗೆ ಕೊರೋನ ಸೋಂಕು ತಗುಲಿದೆ ಎಂಬ ಭಾವದಿಂದ ಎಲ್ಲರೂ ವ್ಯವಹರಿಸಿ: ಡಾ ಸುರೇಶ್ ನೆಗಳಗುಳಿ

Upayuktha
1 minute read
0

ಮಂಗಳೂರು: ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜೂನ್ 12ರಂದು ಶನಿವಾರ ಸಂಜೆ 05 ಗಂಟೆಗೆ ಗೂಗಲ್ ಮೀಟ್ ಮೂಲಕ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


'ಪ್ರಸ್ತುತ ಸಂದರ್ಭದಲ್ಲಿ ಕೋವಿಡ್ ರಕ್ಷಣೆ ಮತ್ತು ಜಾಗೃತಿ' ಎಂಬ ವಿಷಯದ ಮೇಲೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿವಮೊಗ್ಗ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಕೊ.ಮ.ಮುತ್ತಣ್ಣ ಇವರು 'ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ' ಕುರಿತು ತಿಳಿಸಿದರು.


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಇವರು ಉದ್ಘಾಟಿಸಿ ಮಾತನಾಡುತ್ತ, ತಮ್ಮ ವೇದಿಕೆಯ ಪರಿಚಯ ಮಾಡಿಕೊಟ್ಟು ಕೋರೋನ ಸಂಕಷ್ಟ ಕಾಲದಲ್ಲಿ ಸಾಮಾನ್ಯ ಜನರ ಪಾತ್ರಗಳೇನು ಎಂಬುದನ್ನು ತಿಳಿಸಿದರು.


ಮಂಗಳೂರಿನ ಖ್ಯಾತ ವೈದ್ಯರು ಹಾಗೂ ಸಾಹಿತಿಗಳಾದ ಡಾ. ಸುರೇಶ್ ನೆಗಳಗುಳಿ ಇವರು ವಿಶೇಷ ಉಪನ್ಯಾಸ ನೀಡಿದರು.


ಕೊರೋನಾ ವೈರಾಣು ಅಂದರೇನು? ಅದು ಹೇಗೆ ಹರಡುತ್ತದೆ, ಲಕ್ಷಣಗಳೇನು, ತಡೆಗಟ್ಟುವ ಉಪಾಯಗಳೇನು? ಸೋಂಕು ತಗುಲಿದರೆ ಏನು ಮಾಡಬೇಕು ಎಂಬ ಹಲವು ವಿಚಾರಗಳನ್ನು ಅವರು ಪ್ರಸ್ತುತಪಡಿಸಿದರು.


ಸದಾ ಇರಿಸಬೇಕಾದ ನಿಯಮಗಳೆಂದರೆ, ಮಾಸ್ಕ್ ಧರಿಸುವುದು, ಸೇನಿಟೈಸರ್ ಬಳಸುವುದು, ಶುಚಿ ಕಾಪಾಡಿಕೊಳ್ಳುವುದು, ಅಂತರ ಕಾಪಾಡಿಕೊಳ್ಳುವುದು, ಬಿಸಿಲ ಸ್ನಾನ ಮಾಡುವುದು,  ಪ್ರಾಣಾಯಾಮ, ಮುದ್ರೆ, ಸೂರ್ಯನಮಸ್ಕಾರ ಮತ್ತಿತರ ಆಸನಗಳ ಅನುಷ್ಠಾನ ಮಾಡುವುದು ಉತ್ತಮ ಎಂದು ಅವರು ತಿಳಿಸಿದರು.


ಎಲ್ಲಕ್ಕಿಂತ ಗಮನಾರ್ಹ ಅಂಶವೆಂದರೆ "ಪ್ರಜ್ಞಾಪರಾಧ" ಮಾಡದೇ ಇರುವುದು. ಕಳೆದ ವರ್ಷ ಮಾಡಿದ ತಪ್ಪುಗಳು ಈ ವರ್ಷ ಕಾಡಿದುವು. ಈಗಲೂ ಮರೆತರೆ ಮುಂದೆ ಮಹಾ ಗಂಡಾಂತರ ನಿಶ್ಚಯ ಎಂಬುದು ನೆನಪಿರಲಿ ಎಂದು ಕಿವಿಮಾತು ಹೇಳಿದರು.


ಸಂವಾದದಲ್ಲಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಎ.ಎ. ದರ್ಗಾ ಮತ್ತು ಕೀನ್ಯಾದ ನೈರೋಬಿಯಿಂದ ಸಾಹಿತಿಗಳಾದ ಡಾ. ಸುಕನ್ಯಾ ಸೂನಗಹಳ್ಳಿ ಇವರು ಭಾಗವಹಿಸಿದ್ದರು.


ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಹಸೀನಾ ಎಚ್.ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಮನುಷ್ಯ ಅವಿನಾಭಾವ ಸಂಬಂಧಗಳನ್ನು ಇಟ್ಟುಕೊಂಡು ಸಾಮಾಜಿಕವಾಗಿ ಸಾರ್ವತ್ರಿಕ ಜವಾಬ್ದಾರಿಯಿಂದ ವರ್ತಿಸಬೇಕು. ಕರೋನ ಕಾಲ ಸಂಕಷ್ಟದ ಕಾಲ. ಇದನ್ನು ಎಲ್ಲರೂ ಸಮಾನವಾಗಿ ನಿಭಾಯಿಸಬೇಕು. ಮುಂಜಾರೂಕತೆಯನ್ನು ವಹಿಸಬೇಕು ಎಂದರು.


ಶ್ರೀಮತಿ ವೀಣಾ ಆರ್. ಕಾರಂತ, ತೀರ್ಥಹಳ್ಳಿ ಇವರು ನಿರೂಪಿಸಿ ಶ್ರೀಧರೇಶ್  ಭಾರದ್ವಾಜ್, ಭದ್ರಾವತಿ ಇವರು ಪ್ರಾರ್ಥಿಸಿದರು. ಅಣ್ಣಪ್ಪ ಜೆಡ್ಡಿನಮನೆ, ಶಿಕಾರಿಪುರ ಇವರು ಸ್ವಾಗತಿಸಿದರು. ಡಾ. ಉಮೇಶ್ ಭದ್ರಾಪುರ, ಸೊರಬ ಇವರು ವಂದಿಸಿದರು.

Post a Comment

0 Comments
Post a Comment (0)
To Top