‘ನೆನೆಗುಬ್ಬಿ’ಗಳನ್ನು ಕುರಿತ ತಿಳಿರುತೋರಣ ಅಂಕಣಬರಹದಲ್ಲಿ (23 ಮೇ 2021) ಇಸ್ಪೀಟ್ ಎಲೆಗಳ ಒಂದು ಮ್ಯಾಜಿಕ್ ವಿಚಾರ ಬರೆದಿದ್ದೆ. ‘ವೇದಃ ಪಂಚ ದ್ವಯೇ ಏಕ ತ್ರೀಣಿ ಚಂದ್ರ ನಿಶಾಪತಿ| ದ್ವಯೇ ದ್ವಯೇ ತ್ರಿರೇಕಂಚ ದ್ವಯೇ ದ್ವಯೇತಿ ಚಂದ್ರಮಃ||’ ಎಂಬ ಸಂಸ್ಕೃತ ಶ್ಲೋಕದಂತೆ, ಎರಡು ಬಣಗಳಲ್ಲಿರುವ ತಲಾ 15 ಸೈನಿಕರನ್ನು ಯಾದೃಚ್ಛಿಕವಾಗಿಯೋ ಎಂದು ಭಾಸವಾಗುವಂತೆ ವೃತ್ತಾಕಾರದಲ್ಲಿ ಕುಳ್ಳಿರಿಸಿ, ಪ್ರದಕ್ಷಿಣಾಕಾರ ಎಣಿಸುತ್ತ ಪ್ರತಿ 9ನೆಯವನನ್ನು ಕೊಲ್ಲುವುದು, ಹಾಗೇ ಮುಂದುವರಿಸಿದಾಗ ಕೊನೆಗೆ ಒಂದೇ ಬಣದ ಎಲ್ಲ 15 ಸೈನಿಕರು ನಾಶವಾಗುತ್ತಾರೆ ಮತ್ತು ಇನ್ನೊಂದು ಬಣದ ಎಲ್ಲ 15 ಸೈನಿಕರೂ ಬದುಕುಳಿಯುತ್ತಾರೆ- ಎಂದು ತೋರಿಸುವ ಆಟ.
ಆ ಅಂಕಣಬರಹವನ್ನು ಓದಿದ, ಕ್ಯಾಲಿಫೋರ್ನಿಯಾದಲ್ಲಿರುವ ಕನ್ನಡಿಗ ಹುಡುಗ ಸ್ಮಯನ್ ಭಟ್ (8 ವರ್ಷ) ಆ ಶ್ಲೋಕವನ್ನು ಮತ್ತು ಆಟದ ವಿಧಾನವನ್ನು ಕಲಿತುಕೊಂಡು ತನ್ನ ಬಳಿಯಿದ್ದ ಕೆಂಪು ಮತ್ತು ನೀಲಿ ಕಾರ್ಡುಗಳನ್ನು ಬಳಸಿ ಆಡಿ ತೋರಿಸಿದ್ದಾನೆ!
ಈಗ ಅವನಿಗೆ ಮತ್ತು ತಮ್ಮ ಚಿನ್ಮಯ್ನಿಗೆ ಇದೊಂದು ಭಾರೀ ಖುಷಿಯ ಆಟವಾಗಿದ್ದು ಅಕ್ಕಪಕ್ಕದ ಮಕ್ಕಳಿಗೆಲ್ಲ ಮಹಾ ಮ್ಯಾಜಿಕ್ ಎಂಬಂತೆ ಆಡಿ ತೋರಿಸುತ್ತಿದ್ದಾರಂತೆ. ಕನ್ನಡ ಬರುವ ಮಕ್ಕಳಿಗಾಗಿ ಕನ್ನಡದಲ್ಲೊಂದು, ಮತ್ತು ಕನ್ನಡ ಬಾರದ ಮಕ್ಕಳಿಗಾಗಿ ಇಂಗ್ಲಿಷ್ನಲ್ಲೊಂದು ವಿಡಿಯೊ ಸಹ ಮಾಡಿದ್ದಾರೆ!
ಸ್ಮಯನ್ ಭಟ್ ಈಗಷ್ಟೇ ಎರಡನೆಯ ತರಗತಿ ಮುಗಿಸಿ ಬೇಸಗೆ ರಜೆಯ ಮಜಾ ಅನುಭವಿಸುತ್ತಿದ್ದಾನೆ. ಆದರೆ ‘ಸಂಸ್ಕೃತ ಭಾರತಿ’ಯವರ ಸಂಸ್ಕೃತ ತರಗತಿಗಳು, ‘ಗೀತಾ ಪರಿವಾರ’ದ ಭಗವದ್ಗೀತೆ ಕಲಿಕೆ ತರಗತಿಗಳು, ಹಾಗೆಯೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಗುರುಗಳೊಬ್ಬರಿಂದ ಮೃದಂಗ ಕಲಿಕೆ ತರಗತಿಗಳು ಈಗಲೂ ಇವೆ.
ಗೀತಾಪರಿವಾರವು ಮೊನ್ನೆ ಜೂನ್ 6ರಂದು ನಡೆಸಿದ ‘ಗೀತಾಜಿಜ್ಞಾಸು’ ಪರೀಕ್ಷೆಯಲ್ಲಿ ಭಗವದ್ಗೀತೆಯ 12, 15, ಮತ್ತು 16ನೆಯ ಅಧ್ಯಾಯಗಳನ್ನು ಕಂಠಪಾಠ ಮಾಡಿ, ಪರೀಕ್ಷೆಯಲ್ಲಿ ಕೇಳಿದ ಶ್ಲೋಕಗಳನ್ನೆಲ್ಲ ಒಂದೂ ತಪ್ಪದೆ ಪಟಪಟನೆ ಒಪ್ಪಿಸಿ 100/100 ಅಂಕಗಳನ್ನು ಗಳಿಸಿದ ಪ್ರತಿಭೆ ಈ ಸ್ಮಯನ್ ಭಟ್! Zoomನಲ್ಲಿ ಗೀತೆ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ, ಪದ್ಮಾಸನದಲ್ಲಿ ಕುಳಿತು ಅವನು ಶ್ಲೋಕಗಳನ್ನು ಪಠಿಸುವುದನ್ನು ನೋಡುವುದೇ ಅತಿ ಹೆಮ್ಮೆಯೆನಿಸುವ ಸಂಗತಿ ಎಂದು ಸ್ಮಯನ್ನ ಶಿಕ್ಷಕರು ಹೇಳುತ್ತಿದ್ದರು.
ಸ್ಮಯನ್ ಭಟ್ನ ತಂದೆ ಅಕ್ಷಯ ಭಟ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾದವರು. ತಾಯಿ ಕಾವ್ಯಾ ಭಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಕಳೆದ ಕೆಲ ವರ್ಷಗಳಿಂದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್ ನಗರದಲ್ಲಿ ವಾಸಿಸುತ್ತಿರುವ ಇವರು ಅಲ್ಲಿಯ ಕನ್ನಡ ಕೂಟದ ಚಟುವಟಿಕೆಗಳಲ್ಲಿ, ‘ಕನ್ನಡ ಕಲಿ’ ಕನ್ನಡ ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸದಭಿರುಚಿ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿ-ಬೆಳೆಸಿಕೊಂಡಿರುವ ಒಂದು ಸುಸಂಸ್ಕೃತ ಕುಟುಂಬವಿದು. ಅವರೆಲ್ಲರನ್ನೂ ದೇವರು ಚೆನ್ನಾಗಿ ಇಟ್ಟಿರಲಿ.
- ಶ್ರೀವತ್ಸ ಜೋಶಿ. 11 ಜೂನ್ 2021