ಸದಾಶಿವರೆಡ್ಡಿಯವರ ನೂತನ ಕೃಷಿ ಉದ್ಯಮಕ್ಕೆ ಮುನ್ನೋಟ
ಕೊಪ್ಪಳದ ಬಿರುಬಿಸಿಲಿನಲ್ಲಿ ರಸಭರಿತ ಮೋಸಂಬಿ ಬೆಳೆಯಲು ಸಾಧ್ಯವೇ ಎಂದು ಅಚ್ಚರಿ ವ್ಯಕ್ತ ಪಡಿಸುವವರಿಗೆ ಉತ್ತರ ಚಿಕ್ಕಡಂಕನಕಲ್ ಗ್ರಾಮದ ಸದಾಶಿವರೆಡ್ಡಿ ಅವರ 13 ಎಕರೆ ತೋಟ. ಸಂಪೂರ್ಣ ಸಾವಯವದಲ್ಲಿ ನಿರ್ವಹಿಸಿದ ಈ ತೋಟ ವರ್ಷದಲ್ಲಿ ಎರಡು ಭಾರಿ ಫಲ ನೀಡುತ್ತದೆ. ಫಲ ಭರಿತ ತೋಟ ನೋಡುಗರ ಕಣ್ಣಿಗೆ ಹಬ್ಬ ಅಲ್ಲದೇ ಬಾಯಲ್ಲಿ ನೀರೂರಿಸುತ್ತದೆ. ಕಾಯಿ ಹಸಿರು ಬಣ್ಣದ್ದಿದ್ದರೂ ಹಣ್ಣು ಸಿಹಿಯಾಗಿರುವುದು ಈ ತೋಟದ ವೈಶಿಷ್ಠ್ಯ.
ಸದಾಶಿವರೆಡ್ಡಿಯವರು ಕೋಕಾಕೋಲಾ ವಿತರಕರಾಗಿ ದೇಶದ ಉದ್ದಗಲಕ್ಕೂ ಓಡಾಡಿದವರು. ಇವರ ಕರ್ತವ್ಯನಿಷ್ಠೆಗೆ ಮನಸೋತ ಕಂಪನಿಯಿಂದ ವಿದೇಶಕ್ಕೆ ಕೆಲಸಕ್ಕೆ ಆಹ್ವಾನ ಬಂದರೂ ಮನೆಯವರ ಒತ್ತಡಕ್ಕೆ ಮಣಿದು ಕರ್ತವ್ಯಕ್ಕೆ ರಾಜೀನಾಮೆ ನೀಡಿ ಕೃಷಿಗೆ ಇಳಿದವರು. ಮೊದಲಿನಿಂದಲೇ ರಾಸಾಯನಿಕ ಬಳಕೆಗೆ ವಿರೋಧಿಯಾಗಿ ಸಾವಯವ ಪದ್ದತಿಗೆ ಮಾರುಹೋದವರು. ಸಗಣಿ ಗೊಬ್ಬರವೇ ಮಣ್ಣಿನ ಆರೋಗ್ಯಕ್ಕೆ ಮೂಲವೆಂದು ಅರಿತು ಸುತ್ತಮುತ್ತಲ ಹಲವಾರು ಗ್ರಾಮಗಳಿಂದ ಗುಣಮಟ್ಟದ ಸಗಣಿ ಗೊಬ್ಬರ ಖರೀದಿಸುತ್ತಾರೆ. ಅದನ್ನು ಕೂಡಲೇ ತೋಟಕ್ಕೆ ತಂದು ಅದರ ಮೇಲೆ ಮಣ್ಣು ಹಾಗೂ ಹುಲ್ಲು ಮುಚ್ಚಿ ಪೋಷಕಾಂಶ ವ್ಯರ್ಥವಾಗದಂತೆ ಜತನದಿಂದ ಕಾಪಾಡುತ್ತಾರೆ.
ನಿಜವಾದ ಕೃಷಿಕನಿಗೆ ಇವರ ಗೊಬ್ಬರ ಸಂಗ್ರಹಿಸುವ ರೀತಿ ನಿಜಕ್ಕೂ ಸಂತೋಷವನ್ನು ಕೊಡುತ್ತದೆ. ಗೊಬ್ಬರ ಗುಡ್ಡೆಗಳ ಅಪಾರ ಸಂಗ್ರಹ, ಅದನ್ನು ಸಂಗ್ರಹಿಸಿ ಸಂರಕ್ಷಿಸಿದ ರೀತಿ ಎಲ್ಲವೂ ಒಬ್ಬ ವೃತ್ತಿಪರ ಕೃಷಿಕ ರೆಡ್ಡಿಯವರಲ್ಲಿದ್ದಾನೆ ಎಂದು ನಿರೂಪಿಸುತ್ತದೆ. ಮೋಸಂಬಿ ಗಿಡದ ಕೊಂಬೆಗಳಲ್ಲಿ ಗೂಡುಮಾಡಿ ಮುಂಜಾನೆ ವೇಳೆಯಲ್ಲಿ ಅಂತರ ಬೆಳೆಯಾದ ದಾಳಿಂಬೆಯ ಎಲೆ ತುದಿಯಲ್ಲಿ ಒಸರುವ ಸಿಹಿಹನಿ ಹೀರಲು ಸಹಸ್ರ ಸಹಸ್ರ ಸಂಖೈಯಲ್ಲಿ ನೆರೆಯುವ ಜೇನುಹುಳುಗಳ ಝೇಂಕಾರ ಮನಸ್ಸಿಗೆ ಮುದನೀಡುತ್ತವೆ. ಪ್ರತಿ ಹಂಗಾಮಿನಲ್ಲೂ ನೂರಾರು ಗೂಡುಗಳನ್ನು ನಾವು ನೋಡಬಹುದು.
ಪ್ರತಿವಾರ ಪ್ರತಿ ಗಿಡಗಳಿಗೆ ವೇಸ್ಟ್ ಡಿಕಾಂಪೋಸರ್ ಹನಿ ನೀರಾವರಿ ಮೂಲಕ ಸರಬರಾಜು. ಇದಕ್ಕಾಗಿ ಪ್ರತಿವಾರ ಸಾವಿರಾರು ಲೀಟರ್ ಡಿಕಂಪೋಸರ್ ತಯಾರಿಕೆ. ಭುವಿಗೆ ಬೀಳುವ ಪ್ರತಿ ಹನಿ ಮಳೆಯನ್ನು ಹಿಡಿದಿಡಲು ನಿರ್ಮಿಸಿರುವ ಬೃಹತ್ ಕೃಷಿಹೊಂಡ. ನೀರಿನೊಂದಿಗೆ ಹರಿದು ಹೋಗುವ ಜೀವದ್ರವಗಳು ವ್ಯವಸ್ಥಿತವಾಗಿ ಗಿಡದ ಸುತ್ತ ಸಮಾನವಾಗಿ ಚದುರಲು ಸೂಕ್ತ ವ್ಯವಸ್ಥೆ. ಹೊಲದಲ್ಲಿ ಬೆಳೆ ಮದ್ಯ ಒಂದೂ ಅನವಶ್ಯಕ ಕಳೆಗಿಡಗಳಿಲ್ಲದಂತೆ ನಿರ್ವಹಿಸುವ ರೀತಿ ಎಲ್ಲರಿಗೂ ಮಾದರಿ. ಹಗಲೂ ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದರಿಂದ ತೋಟ ಊರ ಹೊರಗಿದ್ದರೂ ಯಾವುದೇ ಕಳ್ಳತನದ ಭಯವಿಲ್ಲ ಎನ್ನುತ್ತಾರೆ ರೆಡ್ಡಿಯವರು.
ಆಂಧ್ರದ ವ್ಯಾಪಾರಿಗಳು ತೋಟಕ್ಕೆ ಬಂದು ಉತ್ತಮ ಬೆಲೆ ನೀಡಿ ಹಣ್ಣು ಒಯ್ಯುವುದರಿಂದ ಆಂಧ್ರದಾದ್ಯಂತ ಇವರ ತೋಟದ ಹಣ್ಣಿಗೆ ಬೇಟಿಕೆ ಇದೆ. ಲಾಕ್ ಡೌನ್ ಸಂದರ್ಭದಲ್ಲಿ ಎದೆಗುಂದದೆ ಮನೆಮನೆಗೆ ಹಣ್ಣುಮಾರಿದಾಗ ಸ್ಥಳೀಯವಾಗಿಯೇ ಹೆಚ್ಚಿಗೆ ಬೇಡಿಕೆ ಬಂದು ಸಗಟು ಮಾರಾಟಕ್ಕಿಂತ ಹೆಚ್ಚಿನ ಲಾಭ ಆಗಿದೆ ಎಂದು ರೆಡ್ಡಿಯವರು ಹೇಳುತ್ತಾರೆ.
ಕೋಕಾಕೋಲ ಕಂಪೆನಿಯಲ್ಲಿ ದೇಶ ಸುತ್ತಿದ ಅನುಭವದಿಂದ ಈಗ ಸ್ವತಃ ಮೋಸಂಬಿ ಜ್ಯೂಸ್ ತಯಾರಿಕೆ ಮಾಡಿ ಉತ್ತಮ ಪ್ಯಾಕಿಂಗ್ನೊಂದಿಗೆ ವಿತರಣೆ ಮಾಡಬೇಕೆಂಬ ತಯಾರಿಯಲ್ಲಿದ್ದಾರೆ. ಪ್ರಸ್ತುತ 150 ಟನ್ ಇಳುವರಿ ಇರುವ ಉತ್ಪಾದನೆಯನ್ನು 200 ಟನ್ ಮುಟ್ಟಿಸುವ ಗುರಿ ಹಾಕಿಕೊಂಡಿದ್ದಾರೆ. ಇಲ್ಲಿಯವರೆಗೆ ಬಂದಿರುವ ಲಾಭದಿಂದ ಜಮೀನು ಖರೀದಿ ಹಾಗೂ ಅಭಿವೃದ್ದಿಗೆ ಹಾಕಿರುವ ಬಂಡವಾಳ ವಾಪಸ್ ಬಂದಿದೆ ಎನ್ನುವ ರೆಡ್ಡಿಯವರು ತೋಟವನ್ನು ಮಾದರಿಯಾಗಿಸಿ ಕೃಷಿ ಪ್ರವಾಸೋದ್ಯಮಕ್ಕೆ ಅಣಿಗೊಳಿಸುತ್ತಿದ್ದಾರೆ. ಇವರ ಸಾಧನೆಯ ಬಗ್ಗೆ ಹೆಚ್ಚು ಅರಿಯಲು 7892530389 ಸಂಖ್ಯೆಗೆ ಕರೆಮಾಡಿ.
-ಡಾ. ಪಿ. ಆರ್ ಬದರಿ ಪ್ರಸಾದ್ (9900145705)
ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ)
ಕೃಷಿ ಮಹಾವಿದ್ಯಾಲಯ, ಗಂಗಾವತಿ
(ಉಪಯುಕ್ತ ನ್ಯೂಸ್)