ಕೊಪ್ಪಳ: ಸಾವಯವ ಕೃಷಿಯ ಆನಂದವನ್ನು ಇಮ್ಮಡಿಗೊಳಿಸಿದ ಆನಂದ ರೆಡ್ಡಿ ಇಮ್ಮಡಿ

Upayuktha
0

 



ಕೊಪ್ಪಳ ತಾಲ್ಲೂಕಿನ ಡಂಬ್ರಳ್ಳಿ ಪ್ರಗತಿಪರ ಕೃಷಿಕರಿರುವ ಗ್ರಾಮ. ಇಲ್ಲಿನ ಹಲವಾರು ರೈತರು ಹಲವಾರು ಕೃಷಿ ಬೆಳೆಗಳ ಜೊತೆ ಹತ್ತಾರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಸಮೀಪದ ಕೊಪ್ಪಳ, ಗದಗ ಹಾಗೂ ಹೊಸಪೇಟೆ ಮಾರುಕಟ್ಟೆಗೆ ಸಾಗಿಸಿ ಆದಾಯ ಗಳಿಸುವುದನ್ನು ನಾವು ಕಾಣಬಹುದು. ಈ ಗ್ರಾಮದ ಮಾದರಿ ರೈತ ಶ್ರೀ ಆನಂದ ರೆಡ್ಡಿ ಇಮ್ಮಡಿ. ಹೆಸರಿನಲ್ಲಷ್ಟೇ ಅಲ್ಲ ಕೃಷಿಯಲ್ಲೂ ಆನಂದವನ್ನೇ ಕಂಡವರು ಇವರು. ಸಾವಯವ ಕೃಷಿಯನ್ನೇ ಉಸಿರಾಗಿಸಿಕೊಂಡು ನಳನಳಿಸುವ ಇವರ ಆರು ಎಕರೆಯ ತೋಟ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಸಾವಯವ ಕೃಷಿಯನ್ನು ದೃಢೀಕರೀಸಲೆಂದೇ ಇವೆಯೆನೋ ಎಂಬಂತೆ ತೋಟದ ಬದುಗಳಲ್ಲಿ ಹಾಗೂ ಬೆಳೆದಿರುವ ಮರಗಳ ಕೊಂಬೆಗಳಲ್ಲಿ ಹತ್ತಾರು ಜೇನುಗೂಡುಗಳು ಕಂಡುಬರುತ್ತವೆ.


ಸ್ನೇಹಿತರ ಜೊತೆಗೂಡಿ ಮಾರುಕಟ್ಟೆ ಅಧ್ಯಯನ ನಡೆಸಿ ಬೇಡಿಕೆ ಇರುವ ತರಕಾರಿಗಳನ್ನು ಐದು ಜನ ರೈತರು ಸೇರಿ ಪ್ರತಿವಾರ ಲಭ್ಯವಾಗುವಂತೆ ಬೆಳೆದು ಪರಸ್ಪರ ಸಹಕಾರದಿಂದ ಮಾರಾಟ ಮಾಡುವ ಇವರ ವಿಧಾನ ನಿಜಕ್ಕೂ ಅನುಕರಣನೀಯ. ಲಾಕ್ ಡೌನ್ ಅವಧಿಯಲ್ಲಿ ಕೊಯ್ಲಿಗೆ ಬಂದ ಅಂಜೂರ ಹಣ್ಣನ್ನು ತಮ್ಮದೇ ಗ್ರಾಹಕರ ವಾಟ್ಸಾಪ್ ಗುಂಪು ರಚಿಸಿ ಕೇವಲ ಅಂತರ್ಜಾಲ ಮೂಲಕವೇ ಬೇಡಿಕೆ ಪಡೆದು ಅತ್ಯಂತ ಉತ್ತಮ ಬೆಲೆಗೆ ಗುಣಮಟ್ಟದ ಹಣ್ಣನ್ನು ಗ್ರಾಹಕರ ಮನೆ ಬಾಗಿಲಿಗೆ ಮುಟ್ಟಿಸಿದ ಹೆಗ್ಗಳಿಕೆ ಇವರದು.


ಸಾಧಾರಣವಾಗಿ ಎಲೆಕೋಸು ಬೆಳೆಯುವುದು ಬಹಳಷ್ಟು ಜನರಿಗೆ ತಲೆನೋವು. ಎಷ್ಟೇ ಕೀಟನಾಶಕ ಸಿಂಪಡಿಸಿದರೂ ಕೀಟಬಾಧೆ ಇದ್ದದ್ದೇ. ಆಂತಹದರಲ್ಲಿ ಸಾವಯವದಲ್ಲಿ ಬೆಳೆದು ಸೈ ಎನಿಸಿಕೊಂಡವರು. ಜೇನು ಕೃಷಿಯಲ್ಲೂ ಎತ್ತಿದ ಕೈ. ಸಂಜೀವಿನಿ ಜೇನು ಕೃಷಿಕರ ಸಂಘದ ಸಕ್ರಿಯ ಕಾರ್ಯಕರ್ತರಾಗಿ ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ರೈತರಿಗೆ ತರಭೇತಿ ನೀಡಿ ಜೇನು ಹಾಗು ಪರಿಸರ ಉಳಿವಿಗೆ ಕಾರಣೀಕರ್ತರಾಗಿದ್ದಾರೆ. ಆಕಳ ಸಾಕಾಣಿಕೆಯು ಕೃಷಿ ಉಪಕಸುಬಾಗಿ ಹೊಂದಿರುವ ಇವರು ಎರೆಹುಳ ಘಟಕ, ಜೀವಾಮೃತ, ಘನ ಜೀವಾಮೃತ ಮುಂತಾದ ಎಲ್ಲ ಕೃಷಿ ಒಳಸುರಿಗಳನ್ನು ಸ್ವತಃ ಅಗತ್ಯಕ್ಕೆ ತಕ್ಕಂತೆ ತಯಾರಿಸಿ ಬಳಕೆ ಮಾಡುವುದರಲ್ಲಿ ಸಿದ್ದಹಸ್ತರು. ಇವರ ಕೃಷಿ ಅನ್ವೇಷಣೆಗೆ ಮನ್ನಣೆಯಾಗಿ ಕೃಷಿ ಇಲಾಖೆಯ ಅತ್ಯುನ್ನತ ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸದಾನಂದ ಗೌಡರು ಇವರ ಮನೆಯಲ್ಲಿ ಒಂದು ದಿನ ವಾಸ್ತವ್ಯ ಮಾಡಿ ಇವರ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕೃಷಿ ವಿಜಾÐನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇಂತಹ ಕೃಷಿರತ್ನದ ಜ್ಞಾನದ ಲಾಭ ಯುವ ಕೃಷಿಕರಿಗೆ ದೊರೆಯಲಿ ಎಂಬ ಸದಾಶಯದೊಂದಿಗೆ ಇವರನ್ನು ಸಂಪರ್ಕಿಸಲು ಬಯಸುವವರು 9900617676 ಸಂಖ್ಯೆಗೆ ಕರೆಮಾಡಬಹುದು.

 

-ಡಾ. ಪಿ. ಆರ್ ಬದರಿ ಪ್ರಸಾದ್

(9900145705)

ಸಹಾಯಕ ಪ್ರಾದ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ

(ಉಪಯುಕ್ತ ನ್ಯೂಸ್)


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top