ಪ್ರಪಂಚದಲ್ಲಿ ಮಾನವ ಸಂಬಂಧದೊಳಗೆ ಗಂಡ ಹೆಂಡತಿ ಎಂಬ ಸಂಬಂಧದಷ್ಟು ಪವಿತ್ರವಾದ ಸಂಬಂಧ ಮತ್ತೊಂದಿರಲು ಸಾಧ್ಯವೇ ಇಲ್ಲ. ಕೆಲವು ಜ್ಞಾನಿಗಳು ಹೇಳುವಂತೆ ಈ ಸಂಬಂಧವು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತದೆ ಎಂದು. ಇರಬಹುದು ಯಾಕೆಂದರೆ ಇತರ ಸಂಬಂಧಗಳು ಒಂದು ರೀತಿಯಾದರೆ, ದಾಂಪತ್ಯದ ವಿಚಾರವೇ ಬೇರೆ. ಅದೇರೀತಿ ಈ ಪತಿ ಪತ್ನಿ ಎಂಬ ವ್ಯವಸ್ಥೆ ಸಮಾಜವನ್ನು ನಾಗರಿಕತೆಯ ಉತ್ತುಂಗಕ್ಕೆ ಕೊಂಡುಹೋಗುವಲ್ಲಿ ಕೂಡ ಪ್ರಧಾನ ಪಾತ್ರ ವಹಿಸಿದೆ ಎಂದರೆ ತಪ್ಪಲ್ಲ.
ಇಲ್ಲಿ ಪತಿ ಎಂಬ ಸ್ಥಾನದ ಭಾವ ಹೇಗೆ ಮುಖ್ಯವೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಭಾವ ಪತ್ನಿ ಎಂಬ ಸ್ಥಾನಕ್ಕೆ ಇರಬೇಕಾದುದೂ ಅತಿಯಾದ ಅಗತ್ಯವೇ. ಆದರೆ ಯಾವ ಕಾಲದಲ್ಲೂ ಶ್ರೀರಾಮಚಂದ್ರನಂಥ ಬೆರಳೆಣಿಕೆಯ ಕೆಲವರನ್ನು ಹೊರತು ಪಡಿಸಿ ಉಳಿದೆಲ್ಲ ಪತಿಯಂದಿರೂ ಪತ್ನಿ ಎಂಬ ಸ್ಥಾನವನ್ನು ಉಪೇಕ್ಷಿಸಿದರೆಂದರೆ ತಪ್ಪಾಗಲಾರದು. ಅಂತೆಯೇ ಪುರುಷ ಪ್ರಧಾನವಾದಂಥ ಸಮಾಜದಲ್ಲಿ ಇದು ಸಹಜವೂ ಕೂಡ. ಸ್ತ್ರೀ ಎಂದರೆ ಮಾತೃ ಸ್ವರೂಪಿಣಿ ಎಂದು ಪೂಜ್ಯ ಭಾವದಿಂದ ಕಂಡಂಥ ನಮ್ಮ ಪರಂಪರೆಯ ಜತೆಗೆ ಸ್ತ್ರೀಯನ್ನು ಭೋಗ ವಸ್ತುವೆಂಬಂತೆ ಉಪಯೋಗಿಸಿ ಶೋಷಣೆ ಮಾಡಿದಂಥ ಪರಂಪರೆಯೂ ನಮ್ಮಲ್ಲಿದೆ.
ಹಿಂದಿನ ಅರಸರ ಕಾಲದಿಂದಲೂ ಬಹುಪತ್ನಿತ್ವವೆಂಬುದು ಮಾನ್ಯವೇ ಆಗಿತ್ತು. ಆದ್ದರಿಂದಲೇ ಧರ್ಮಪತ್ನಿ ಎಂಬ ಶಬ್ದ ಹುಟ್ಟಿಕೊಂಡಿತು. ಅದರರ್ಥ ಧರ್ಮವಲ್ಲದ ಅಂದರೆ ಅಧರ್ಮಪತ್ನಿ ಎಂಬ ಸಂಬಂಧವೂ ಇರಬಹುದು ಅಥವಾ ಇದೆ ಎಂದು ಒಪ್ಪಿಕೊಂಡಂತೆ ತಾನೆ. ಆದರೆ ಅಧರ್ಮಪತ್ನಿ ಎನ್ನುವ ಶಬ್ದೋಚ್ಚಾರ ನಾಗರಿಕ ಪ್ರಪಂಚಕ್ಕೆ ಸರಿ ಕಾಣಲಿಲ್ಲ ಎಂದು ಕಾಣುತ್ತದೆ. ಅದಕ್ಕೆ ಅಧರ್ಮಪತ್ನಿ ಎಂಬ ವ್ಯವಹಾರಕ್ಕೆ ಉಪಪತ್ನಿ ಎಂಬ ನಾಮಕರಣ. ಆಹಾ ಎಷ್ಟೊಂದು ಜಾಣತನ. ಇದನ್ನು ಕೂಡ ಮಾಡಿದ್ದು ಪುರುಷನೇ ಆದ್ದರಿಂದ ಸರಿ ತಪ್ಪು ಅನ್ನುವಂತಿಲ್ಲ.
ಮಾಡುವಂಥ ಅನೈತಿಕ ವ್ಯವಹಾರದ ಸಮರ್ಥನೆಗೆ ನಾನಾ ಪದ ಪ್ರಯೋಗಗಳು, ನಾನಾ ಸೂತ್ರಗಳು, ನಾನಾ ವಿಚಾರಗಳು. ಇರಲಿ ಎಂದು ಒಪ್ಪಿಕೊಂಡರೆ ಇದೇ ವ್ಯವಹಾರವನ್ನು ಒಂದು ಸ್ತ್ರೀ ಮಾಡಿದರೆ ಅಂಥ ಸ್ತ್ರೀಗೆ ಸಮಾಜ ಕೊಡುವ ಪಟ್ಟವೇ ಬೇರೆ. ಅಥವಾ ಕಾಣುವ ದೃಷ್ಟಿಯೇ ಬೇರೆ. ಯಾಕಾಗಬಾರದು ಉಪಪತ್ನಿ ಎಂಬುದಕ್ಕೆ ಪರ್ಯಾಯವಾಗಿ ಉಪಪತಿ ಎಂಬುದೂ ಇರಬಹುದಲ್ಲವೇ. ಆದರೆ ಹಾಗಿಲ್ಲ ಭಾರತದ ಸಂಸ್ಕೃತಿಯ ವೈಶಿಷ್ಟ್ಯವೇ ಇದು. ಪುರುಷ ಎಷ್ಟೇ ನೀತಿಗೆಟ್ಟರೂ ಸ್ತ್ರೀಯಾದವಳು ಅಥವಾ ಪತ್ನಿಯಾದವಳು ಅದನ್ನೆಲ್ಲ ಸಹಿಸಿಕೊಂಡು ಶತಶತಮಾನದಿಂದ ಬಾಳುವೆ ನಡೆಸಿದ್ದರಿಂದಲೇ ಇಂದು ಭಾರತದ ಅಸ್ತಿತ್ವ ಅಲುಗಾಡದಂತಿದೆ. ಅಪವಾದಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಹಾದಿ ತಪ್ಪಿದ್ದಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಧರ್ಮಪತ್ನಿ ಎನ್ನುವ ಉನ್ನತವಾದ ಸ್ಥಾನವೇ ನಿರ್ಣಾಯಕವಾದುದು.
ಆದರೆ ಇಂದು ಏನಾಗುತ್ತಿದೆ ಎಂದರೆ ಪತ್ನಿಯಾದವಳು ತನ್ನ ಗಂಡನಿರಲಿ ಮಕ್ಕಳಿರಲಿ ಆಪತ್ತು ಬಂದಾಗ ವೈದ್ಯೆಯೂ ಆಗುತ್ತಾಳೆ, ದಾದಿಯೂ ಆಗುತ್ತಾಳೆ, ಧೈರ್ಯವನ್ನೂ ಕೊಡುತ್ತಾಳೆ, ಚೈತನ್ಯವನ್ನೂ ನೀಡುತ್ತಾಳೆ, ರಕ್ಷಣೆಯನ್ನೂ ನೀಡುತ್ತಾಳೆ, ಹೆಚ್ಚೇಕೆ ತನ್ನ ಸುಖವನ್ನೇ ತ್ಯಾಗ ಮಾಡುತ್ತಾಳೆ. ಅಂದರೆ ಯಾವ ಯಾವ ಕಾಲಕ್ಕೆ ಯಾವ ಯಾವ ಹೊಣೆಯನ್ನು ಹೊತ್ತುಕೊಳ್ಳಬೇಕೋ ಅದನ್ನು ನಿಸ್ವಾರ್ಥ ರೀತಿಯಿಂದ ನಿರ್ವಹಿಸುವುದೇ ಈ ಧರ್ಮಪತ್ನಿಯರು. ಹಾಗೆಂದು ಅದೇ ಜವಾಬ್ದಾರಿಗಳನ್ನು ಗಂಡಸರು ನಿಭಾಯಿಸುವುದು ಮಾತ್ರ ಅಷ್ಟರಲ್ಲೇ ಇದೆ. ಒಂದು ವೇಳೆ ತನ್ನ ಪತ್ನಿಗೆ ಆಪತ್ತು ಬಂದಾಗ ಪತಿಯಾದವನು ಯಾವ ರೀತಿ ಸ್ಪಂದಿಸುವನೋ ಎನ್ನುವುದು ಒಳ್ಳೆಯ ಫಲಿತಾಂಶ ಕೊಡುವ ಪ್ರಶ್ನೆಯಲ್ಲ.
ಮೊದಲನೆಯದಾಗಿ ಉಪಪತ್ನಿಗಳಿರಬಾರದು, ಧರ್ಮಪತ್ನಿಯಲ್ಲಿ ಪ್ರೀತಿ ಇರಬೇಕು, ಪತ್ನಿಯನ್ನು ಬರಿದೆ ಸುಖ ಕೊಡುವವಳೆಂದು ಪರಿಗಣಿಸಬಾರದು. ಸಂದರ್ಭಕ್ಕನುಗುಣವಾಗಿ ಪತ್ನಿಯನ್ನು ತಾಯಿಯಂತೆಯೂ, ಮಗಳಂತೆಯೂ, ಸಹೋದರಿಯಂತೆಯೂ, ಗೆಳತಿಯಂತೆಯೂ, ಹಿತೈಷಿಯಂತೆಯೂ, ಗುರುವಿನಂತೆಯೂ, ಅಷ್ಟೇ ಯಾಕೆ ದುರ್ಗಾ ಮಾತೆಯಂತೆಯೂ ಯಾರು ಕಾಣಬಲ್ಲನೋ ಆತನೇ ನಿಜವಾಗಿ ಧರ್ಮಪತ್ನಿ ಎಂಬ ಪದಕ್ಕೆ ಭಾಷ್ಯ ಬರೆದವನೆನ್ನಬಹುದು.
ಯಾವಾಗ (ಅಧಿಕೃತವಿರಬಹುದು ಅನಧಿಕೃತವಿರಬಹುದು) ಬಹುಪತ್ನಿತ್ವ ಎಂಬಂಥ ವ್ಯವಸ್ಥೆ ಇರುವುದೋ ಅಲ್ಲಿವರೆಗೆ ಧರ್ಮಪತ್ನಿ ಎನ್ನುವ ಶಬ್ದ ಚಾಲ್ತಿಯಲ್ಲಿರುತ್ತದೆ. ಇವತ್ತು ಪತಿ ಪತ್ನಿಯರಲ್ಲಿ ಹಲವಾರು ಕಾರಣಗಳಿಂದ ಹೊಂದಾಣಿಕೆಯ ಕೊರತೆಯೂ ಅಗಾಧವಾಗಿರುವುದರಿಂದ ಏಕಪತ್ನಿ ವೃತಸ್ಥರಾದವರೂ ಸಂಸಾರ ನಡೆಸುವಲ್ಲಿ ಸೋಲುತ್ತಾರೆ. ಆದರೆ ಹಿಂದಿನ ಕಾಲದಂತೆ ಆರ್ಥಿಕ ಬಿಕ್ಕಟ್ಟಾಗಲಿ, ವಿದ್ಯೆಯ ಕೊರತೆಯಾಗಲಿ, ಸಂಕುಚಿತ ಮನೋಭಾವವಾಗಲಿ, ಮೂಢನಂಬಿಕೆಗಳಾಗಲಿ ಇಲ್ಲದಿರುವುದರಿಂದ ಜೀವನವನ್ನು ಸಾಕಷ್ಟು ಚಂದವಾಗಿಸಬಹುದು.
ಜತೆಗೆ ಸಂತೋಷವಾಗಿರಿಸಬಹುದು. ಪತಿ ಪತ್ನಿ ಎನ್ನುವ ಸಂಬಂಧವನ್ನು ದೇವರು ಯಾವತ್ತಿನವರೆಗೆ ಅವಕಾಶ ಕೊಡುತ್ತಾನೋ ಅಲ್ಲಿವರೆಗೆ ಕಾಪಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೇ. ಧರ್ಮಪತ್ನಿ, ಉಪಪತ್ನಿ, ಧರ್ಮಪತಿ ಉಪಪತಿಗಳೆಂಬ ಅಪಸವ್ಯಗಳನ್ನು ತೊರೆದಾಗಲೇ ಪತಿ ಪತ್ನಿ ಎಂಬ ಅತ್ಯುನ್ನತ ಸಂಬಂಧಗಳಿಗೆ ಬೆಲೆ ಬರುವುದು ಮಾತ್ರವಲ್ಲ ಆ ಸಂಬಂಧದಲ್ಲಿ ದೈವತ್ವವೇ ಕಂಡುಬರುವುದು.. ಏನಂತೀರಿ..??
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ