ಯಾವುದೇ ಸರಕಾರಿ ವೆಬಿನಾರು- ತರಬೇತಿ ಶಿಬಿರಗಳಿಂದ ಹೆಚ್ಚಿನ ಫಲಶ್ರುತಿ ಫೇಸ್ ಬುಕ್ ಪೋಸ್ಟು ಹುಟ್ಟಿನಿಂದ!
ಮೂರು ದಿನ ಹಿಂದೆ ಊರುತೋಟದ ಹಿರಿಯ ಕೃಷಿಕ ಸುಬ್ರಾಯ ಹೆಗಡೆ ಮನೆಯಲ್ಲೇ ಬಾಳೆಕಾಯಿ ಹುಡಿ ('ಬಾಕಾಹು’) ಮಾಡಿದ್ದನ್ನು ಓದಿದ್ದೀರಿ. ಅದರಿಂದ ರೊಟ್ಟಿ, ವಡಪೆ (ತಾಲಿಪ್ಪಿಟ್ಟು), ಶಂಕರ ಪೊಳೆ, ಕೋಡುಬಳೆ ತಯಾರಾಗಿದೆ, ಮನ- ಮನೆಗಳನ್ನು ಗೆದ್ದಿದೆ.
ಫೇಸ್ ಬುಕ್ಕಿನಲ್ಲಿ ವೈರಲ್ ಆದ ಈ ಸ್ಫೂರ್ತಿದಾಯಕ ಬೆಳವಣಿಗೆ ಈಗ ಹಲವು ಮನೆಗಳಿಗೆ ಹಬ್ಬುವುದರಲ್ಲಿದೆ. ಶಿರಸಿ ತಾಲೂಕಿನ ನೂರಾರು ಅಡಿಕೆ ಕೃಷಿಕರ ಮನೆಗಳಲ್ಲಿ ಡ್ರೈಯರ್ ಇದೆ. ಇನ್ನೇನು ಬೇಕು `ಬಾಕಾಹು’ ತಯಾರಿಗೆ?
ಒಂದಷ್ಟು ಶ್ರಮ, ಜೀವನೋತ್ಸಾಹ ಮತ್ತು ಧನಾತ್ಮಕ ಮನಸ್ಸು. ಇವೆಲ್ಲಾ ಇರುವಲ್ಲೀಗ ಕರಿಬಾಳೆ ತಾಳಿಗಳು ಒಣಗಿ ಹುಡಿಯಾಗಲು ಸಿದ್ಧವಾಗುತ್ತಿವೆ. ಶಿರಸಿ ತಾಲೂಕಿನ ಕನಿಷ್ಠ ಎರಡು ಕುಟುಂಬಗಳಿಗಿಂದು ಬಾಕಾಹು ದಿನ!
'ಎಂತೆಲ್ಲಾ ಮಾಡುಲಕ್ಕು' ಅಂತ ಮನೆಯೊಡತಿಯ ಯೋಚನೆ ಓಡಹತ್ತಿದೆ. 'ನಾಳೆ ಅಮ್ಮ ಈ ಪುಡಿಯ ಏನು ತಯಾರಿ ಮಾಡಬಹುದ' ಎಂದು ಮಕ್ಕಳು ಪಿಸುಗುಟ್ಟುತ್ತಿದ್ದಾರೆ. ನಾವೂ ಕಾಯೋಣ, ಮಂಗಳವಾರದ ವರೆಗೆ!