ಸಾಧನೆಗೆ ನಮನ: ಪದ್ಮಶ್ರೀ ಪುರಸ್ಕೃತ ತೃತೀಯ ಲಿಂಗಿ ನರ್ತಕಿ ನಟರಾಜನ್

Upayuktha
0

ಚಿತ್ರ ಕೃಪೆ: ದಿ ಹಿಂದೂ

ತೃತೀಯ ಲಿಂಗಿಗಳೆಂದರೆ ಏನೋ ಅಸ್ಪೃಶ್ಯತಾ ಭಾವ ನಮ್ಮ ಸಮಾಜದಲ್ಲಿ. ತನ್ನದಲ್ಲದ ತಪ್ಪಿಗೆ ಕೊರಗುವ ಇವರನ್ನು ಇಂದಿಗೂ ಸಮಾಜ ಮುಖ್ಯವಾಹಿನಿಯಿಂದ ದೂರವೇ ಇಟ್ಟಿದೆ. ಇವರ ಆಸೆ- ಆಕಾಂಕ್ಷೆಗಳಿಗೆ ಮನ್ನಣೆಯೇ ಸಿಗದಿರುವುದು ಈ ಕಾಲಮಾನದ ವಿಪರ್ಯಾಸ. ಇಂಥವರ ನಡುವೆಯೇ ತಾನು ಅನುಭವಿಸಿದ ಅವಮಾನವನ್ನು ಸಹಿಸಿಕೊಂಡು, ತನ್ನ ಗುರಿಯನ್ನು ನಿಶ್ಚಯಿಸಿಕೊಂಡು, ಅಂದುಕೊಂಡದ್ದನ್ನು ಸಾಧಿಸಿದ ಮಹಾನ್ ಸಾಧಕಿ ಪದ್ಮಶ್ರೀ ಪುರಸ್ಕೃತ ತೃತೀಯ ಲಿಂಗಿ ನರ್ತಕಿ ನಟರಾಜನ್. ತೃತೀಯ ಲಿಂಗಿ ಎಂಬ ಕಾರಣಕ್ಕೆ 11ರ ಹರೆಯದ ಬಾಲ್ಯದಲ್ಲೆ ಮನೆಯಿಂದ ಹೊರ ಹಾಕಲ್ಪಟ್ಟ ಇವರ ಸಾಧನೆ ನಮ್ಮೆಲ್ಲರ ಕಣ್ಣು ತೆರೆಸುವಂತದ್ದು.


ತಮಿಳುನಾಡಿನ ಮಧುರೈ ಸಮೀಪದ ಕುಗ್ರಾಮ ಅನುಪ್ಪನಾಡಿ ನಟರಾಜನ್ ಹುಟ್ಟಿದೂರು. ಕಡು ಬಡತನ ಕುಟುಂಬದ ಜೊತೆಯಾಗಿತ್ತು. 1984ರಲ್ಲಿ ಜನಿಸಿದ ನಟರಾಜನ್ ಗೆ 9 ಜನ ಒಡಹುಟ್ಟಿದವರು. 10 ವರ್ಷವಾಗುತ್ತಲೇ ನಟರಾಜನ್ ಹೆತ್ತವರು ಅವರ ವರ್ತನೆಯಲ್ಲಿ ಮತ್ತು ದೇಹದಲ್ಲಾದ ಬದಲಾವಣೆಯನ್ನು ಗಮನಿಸುತ್ತಾರೆ. ನಟರಾಜನ್ ತೃತೀಯ ಲಿಂಗಿ ಎಂಬುದು ಅರಿವಾಗುತ್ತಲೇ ಕಠಿಣ ಹೃದಯಿ ಹೆತ್ತವರು ನಟರಾಜನ್ ರನ್ನು ಮನೆಯಿಂದ ಹೊರ ಹಾಕುತ್ತಾರೆ, ಅವರಿಗೆ ಸಮಾಜದಲ್ಲಿ ತಮ್ಮ ಮಗ ತೃತೀಯ ಲಿಂಗಿ ಎಂದು ಕರೆಸಿಕೊಳ್ಳುವುದು ಇಷ್ಟವಿರಲಿಲ್ಲ.


ಮನೆಯಿಂದ ಹೊರಬಂದು ಅನಾಥನಾದ ನಟರಾಜನ್ ರನ್ನು ಸಮಾಜ ಕೂಡ ಅಸ್ಪೃಶ್ಯತೆಯಿಂದ ನೋಡುತ್ತದೆ. ಅವಮಾನದಿಂದ ಬೆಂದು ಹೋದರು ನಟರಾಜನ್. ತನ್ನದಲ್ಲದ ತಪ್ಪಿಗೆ ಸಮಾಜ ಅವರನ್ನು ನೋಡುವ ದೃಷ್ಠಿಯೇ ಬದಲಾಗಿತ್ತು. ಈ ಸಂದರ್ಭ ಅವರ ಜೊತೆಯಾದವರು ಗೆಳೆಯ ಶಕ್ತಿಪ್ರಸಾದ್. ಬಾಲ್ಯದಿಂದಲೇ ನೃತ್ಯದಲ್ಲಿ ಅದು ಹೇಗೋ ಆಸಕ್ತಿ ಬೆಳೆದಿತ್ತು ಅವರಿಗೆ. ಈಗ ಮತ್ತೆ ಆ ಆಸೆ ಗರಿಗೆದರುತ್ತದೆ. ಭರತನಾಟ್ಯ ಪಟುವಾಗಬೇಕೆಂಬ ಮಹದಾಸೆ ಜೊತೆಗೆ ತಾನು ಅನುಭವಿಸಿದ ಮುಜುಗರಕ್ಕೆ ಪ್ರತಿಯಾಗಿ ಸಾಧಿಸಬೇಕೆಂದು ನಿಶ್ಚಯಿಸುತ್ತಾರೆ. ಊರು ಬಿಡಲು ನಿಶ್ಚಯಿಸುತ್ತಾರೆ. ಗೆಳೆಯ ಶಕ್ತಿಪ್ರಸಾದ್ ಜೊತೆ ತಂಜಾವೂರಿಗೆ ಬರುತ್ತಾರೆ ನಟರಾಜನ್.


ಕಿಟ್ಟಪ್ಪ ಪಿಳ್ಳೈ ಆಗ ತಂಜಾವೂರಿನ ಖ್ಯಾತ ಭರತನಾಟ್ಯ ಕಲಾವಿದ ಮತ್ತು ಗುರು. ಅವರನ್ನು ಭೇಟಿಯಾದ ನಟರಾಜನ್ ತನ್ನ ಇಚ್ಛೆಯನ್ನು ತಿಳಿಸುತ್ತಾರೆ. ಮೊದಲು ಒಪ್ಪದ ಕಿಟ್ಟಪ್ಪ, ನಟರಾಜನ್ ಕಥೆ ಕೇಳಿ ಅವರನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಲೋಕದ ನಿಂದೆಯ ನಡುವೆಯೇ ತನ್ನ ಅಭ್ಯಾಸ ಆರಂಭಿಸುತ್ತಾರೆ ನಟರಾಜನ್.


ತೃತೀಯ ಲಿಂಗಿಯೊಬ್ಬ ನೃತ್ಯ ಕಲಿಯುವುದನ್ನು ಸಮಾಜ ವ್ಯಂಗ್ಯ ಕಣ್ಣಿನಂದಲೇ ನೋಡಿತು. ಬೇರೆ ಯಾರೇ ಆಗಿದ್ದರು ಅರ್ಧದಲ್ಲೇ ಹಿಂತಿರುಗಿ ಬರುತ್ತಿದ್ದರೇನೋ... ಅಥವಾ ಇತರ ತೃತಿಯ ಲಿಂಗಿಗಳಂತೆ ಕಾಡಿ-ಬೇಡಿ ತಿನ್ನುವ ಬದುಕು ಸಾಗಿಸುತ್ತಿದ್ದರೇನೋ...? ಆದರೆ ತಾನು ಯಾರೆಂಬುದನ್ನು ನಟರಾಜನ್ ಸಮಾಜಕ್ಕೆ ತೋರಿಸಬೇಕಾಗಿತ್ತು. ಅವರ ದೃಢ ನಿಲುವು ಅವರನ್ನು ಹಿಮ್ಮೆಟ್ಟಿಸಲಿಲ್ಲ.


ನಟರಾಜನ್ ಗೆ ನರ್ತಕಿ ಎಂಬ ಹೆಸರು ಸೇರಿಸುತ್ತಾರೆ ಗುರು ಕಿಟ್ಟಪ್ಪ ಪಿಳ್ಳೈ. ನಟರಾಜನ್ ಈಗ ನರ್ತಕಿ ನಟರಾಜನ್. ಆಗ ತಮಿಳುನಾಡಿನಲ್ಲಿ ನರ್ತಕಿ ನಟರಾಜನ್ ಭರತನಾಟ್ಯ ಕಲಿಯುತ್ತಿರುವ ವಿಚಾರ ಭಾರೀ ಕೋಲಾಹಲಕ್ಕೀಡು ಮಾಡಿತ್ತು. ತೃತೀಯ ಲಿಂಗಿಗೆ ಭರತನಾಟ್ಯ ಕಲಿಸಿದ್ದಕ್ಕಾಗಿ ಕಿಟ್ಟಪ್ಪ ಪಿಳ್ಳೈ ಟೀಕೆಗೊಳಗಾಗಬೇಕಾಯಿತು.  ಶಾಸ್ತ್ರೀಯ ದೈವದತ್ತ ಕಲೆಯನ್ನು ಭ್ರಷ್ಟಗೊಳಿಸಿದರೆಂಬ ಆಪಾದನೆ ಅವರ ಮೇಲೆ ಬಂತು. ಆದರೆ ತಲೆ ಕೆಡಿಸಿಕೊಳ್ಳದ ಗುರುಗಳು ನಟರಾಜನ್ ಗೆ ತನಗೆ ತಿಳಿದುದನ್ನೆಲ್ಲ ಹೇಳಿ ಕೊಡುತ್ತಾರೆ. ಪ್ರತಿಭಾವಂತ ನಟರಾಜನ್ ಎಲ್ಲವನ್ನೂ ಕಲಿಯುತ್ತಾರೆ.


ಮುಂದಿನದು ಸತತ 15 ವರ್ಷಗಳ ತಪಸ್ಸು. ಏಕಚಿತ್ತದಿಂದ ನೃತ್ಯ ಕಲಿತ ನರ್ತಕಿ ನಟರಾಜನ್ ಪರಿಪೂರ್ಣ ಭರತನಾಟ್ಯ ಕಲಾವಿದರಾಗುತ್ತಾರೆ. ದೇವಸ್ಥಾನಗಳಲ್ಲಿ ಪ್ರದರ್ಶನ ನೀಡಲು ಆರಂಭಿಸುತ್ತಾರೆ. ತಮಿಳುನಾಡಿನ ಮನೆ ಮಾತಾಗುತ್ತಾರೆ ನಟರಾಜನ್.


ಈ ನಡುವೆ ದ್ವಿತೀಯ ಪಿಯುಸಿ ಪಾಸ್ ಮಾಡುವ ನಟರಾಜನ್ ಕಾನೂನು ಅಭ್ಯಸಿಸಲು ಹೊರಡುತ್ತಾರೆ. ಆದರೆ ಮತ್ತೆ ಅವಮಾನ, ತಮಿಳುನಾಡಿನ ಕಾಲೇಜುಗಳು ತೃತೀಯ ಲಿಂಗಿಯೆಂಬ ಕಾರಣಕ್ಕೆ ನಟರಾಜನ್ ಗೆ ಪ್ರವೇಶವನ್ನೇ ನೀಡುವುದಿಲ್ಲ. ಆದರೆ ಇದು ಅವರ ಸಾಧನೆಯ ಹಾದಿಗೆ ಅಡ್ಡಿಯಾಗುವುದಿಲ್ಲ. ನೃತ್ಯವನ್ನೇ ತನ್ನ ಉಸಿರಾಗಿಸಿಕೊಂಡ ನಟರಾಜನ್ ತನ್ನ ಅವಮಾನ-ಭಾವನೆಗಳೆಲ್ಲವನ್ನು ನೃತ್ಯದ ಮೂಲಕ ಅಭಿವ್ಯಕ್ತಿಸುತ್ತಾರೆ.


ಚೆನ್ನೆನಲ್ಲಿ "ವೆಲ್ಲಿಯಂಬಲಮ್ ಟ್ರಸ್ಟ್ ಡ್ಯಾನ್ಸ್ ಸ್ಕೂಲ್" ಎಂಬ ನೃತ್ಯ ಶಾಲೆ ಆರಂಭಿಸುತ್ತಾರೆ. ಈಗ ನರ್ತಕಿ ನಟರಾಜನ್ ಎಂಬ ಹೆಸರು ದೇಶಾದ್ಯಂತ ಹರಡುತ್ತದೆ. ಅಮೆರಿಕಾ, ಬ್ರಿಟನ್, ನಾರ್ವೆಯಲ್ಲಿ ತನ್ನ ನೃತ್ಯ ಶಾಲೆಯ ಶಾಖೆಗಳನ್ನು ತೆರೆಯುತ್ತಾರೆ.  ದೇಶಾದ್ಯಂತ ತನ್ನ ನೃತ್ಯ ಪ್ರದರ್ಶನ ನೀಡುತ್ತಾರೆ. ನರ್ತಕಿ ನಟರಾಜನ್. ರೋಲ್ ಮಾಡೆಲ್ ಆಗಿ ಬೆಳೆಯುವ ನಟರಾಜನ್ ತೃತಿಯ ಲಿಂಗಿಗಳಿಗೆ ಮಾದರಿಯಾಗುತ್ತಾರೆ. ತನ್ನ ಸಂಪಾದನೆಯ ಬಹುಪಾಲನ್ನು ತನ್ನಂತೆಯೇ ತುಳಿತಕ್ಕೊಳಗಾಗಿರುವ ತೃತೀಯ ಲಿಂಗಿಗಳ ಸಮುದಾಯದ ಅಭಿವೃದ್ಧಿಗೆ ನೀಡುತ್ತಾರೆ.


ನರ್ತಕಿ ನಟರಾಜನ್ ಸಾಧನೆ ಗೌರವಿಸಿ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ನೀಡಿ ಗೌರವಿಸುತ್ತದೆ. ಈ ಗೌರವ ಪಡೆದ ಪ್ರಥಮ ತೃತೀಯ ಲಿಂಗಿಯೆನಿಸಿಕೊಳ್ಳುತ್ತಾರೆ. ನರ್ತಕಿ ನಟರಾಜನ್. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಸೀನಿಯರ್ ಫೆಲೋಶಿಪ್ ಕೂಡ ಲಭಿಸುತ್ತದೆ. ಪೆರಿಯಾರ್ ಮನಿಯಮ್ಮೈ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತದೆ.  ತಮಿಳುನಾಡು ಸರ್ಕಾರ 11ನೇ ತರಗತಿಯ ಪಠ್ಯ ಪುಸ್ತಕಕ್ಕೆ ಇವರ ಜೀವನ ಚರಿತ್ರೆ ಯನ್ನು ಅಳವಡಿಸುತ್ತದೆ.


"ತೃತೀಯ ಲಿಂಗಿಯೆಂಬ ಕಾರಣಕ್ಕೆ ತನಗೆ ಪ್ರಶಸ್ತಿ-ಗೌರವಗಳು ಲಭಿಸಿದವು ಎಂಬ ಮಾತುಗಳು ಕೇಳಿ ಬಂದವು. ಆದರೆ ನನ್ನ ಪ್ರತಿಭೆ-ಪರಿಶ್ರಮಗಳೇ ಇದಕ್ಕೆ ಕಾರಣ ಎಂಬುದನ್ನು ಟೀಕಿಸುವವರು ತಿಳಿಯಬೇಕು" ಎಂದು ನರ್ತಕಿ ನಟರಾಜನ್ ಬೇಸರದಿಂದ ಹೇಳುತ್ತಾರೆ.


2002ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ನಟರಾಜನ್ ಪಾಸ್ ಪೋರ್ಟ್ ನಲ್ಲಿರುವ ತೃತಿಯ ಲಿಂಗಿಗಳಿಗಿರುವ ಕಾಲಂನಲ್ಲಿ U ಬದಲಿಗೆ F(Female) ಎಂದು ಮುದ್ರಿಸಬೇಕೆಂದು ಒತ್ತಾಯಿಸುತ್ತಾರೆ.


ತಮಿಳುನಾಡು ಸರ್ಕಾರ ತನ್ನ ಅಧಿಸೂಚನೆಯಲ್ಲಿ ಬಳಸುವ ಅರವಾನಿ ಪದವನ್ನು ತೆಗೆದು ತಿರುನಂಗೈ (ವಿಶೇಷ ಮಹಿಳೆ) ಎಂದು ಬಳಸುವಂತೆ ಹೋರಾಟ ನಡೆಸುತ್ತಾರೆ. ಇವರ ಹೋರಾಟಕ್ಕೆ ಮಣಿದ ಸರ್ಕಾರ ಆ ಪದವನ್ನು ತೆಗೆದು ಹಾಕುತ್ತದೆ.


ನರ್ತಕಿ ನಟರಾಜನ್ ಸಾಧನೆಯನ್ನು ಗಮನಿಸಿರುವ ತಮಿಳುನಾಡು ಸರ್ಕಾರ ಅವರನ್ನು ರಾಜ್ಯ ಅಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿದೆ. ತೃತೀಯ ಲಿಂಗಿ ಎಂಬ ಕಾರಣದಿಂದಾಗಿ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿರುವ ಈ ಸಮುದಾಯ ನಟರಾಜನ್ ನೇಮಕದಿಂದ ಸಂತಸಪಟ್ಟಿತು.


ತೃತೀಯ ಲಿಂಗಿ ಎಂಬ ಕಾರಣದಿಂದಾಗಿ ಕುಟುಂಬ,ಊರಿನಿಂದ ದೂರವಾಗಲ್ಪಟ್ಟ ನರ್ತಕಿ ನಟರಾಜನ್ ತನ್ನ ಗುರಿಯಿಂದ ಮಾತ್ರ ವಿಮುಖರಾಗಲಿಲ್ಲ. ತನ್ನ ಕನಸಿನ ಸಾಕಾರಕ್ಕೆ ದಶಕಗಳ ಕಾಲ ಶ್ರಮಿಸಿದ ಅವರು ಕಡೆಗೂ ತಾನಂದುಕೊಂಡದ್ದನ್ನು ಸಾಧಿಸಿಯೇ ಬಿಟ್ಟರು. ಮುಜುಗರ, ಹಿಂಜರಿಕೆಯ ಕಾರಣದಿಂದ ಸಮಾಜದಿಂದ ದೂರವಾಗಿರುವ ತೃತಿಯ ಲಿಂಗಿಗಳಿಗೆ ನರ್ತಕಿ ನಟರಾಜನ್ ಸಾಧನೆ ಮತ್ತಷ್ಟು ಪ್ರೇರಣೆ ನೀಡಲಿದೆ.


-ತೇಜಸ್ವಿ. ಕೆ, ಪೈಲಾರು, ಸುಳ್ಯ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top