ಮುಂಗಾರಿನ ಈ ತುಂತುರು ಮಳೆ
ಜುಳು ಜುಳು ಹರಿಯುವ ನೀರಿನ ಸಂಗೀತದ ಸೆಳೆ
ಹಚ್ಚ ಹಸುರಾಗಿ ಬೆಳೆದು ನಿಂತಿರುವ ಭತ್ತದ ಕಳೆ
ಕರುನಾಡಿಗೆ ಬಂದಿದೆ ಮುಂಗಾರು ಕಳೆ||
ಕಾರ್ಮುಗಿಲು ಕರಗಿ ಧೋ...
ಆಗಮಿಸಿತು ವರ್ಷಧಾರೆಯು
ಜೀವಸಂಕುಲ ಸಂಭ್ರಮದಿ ಬೆರಗಾದವು
ಮಳೆಹನಿಯ ತಲ್ಲಣಕ್ಕೆ ಮರಗಿಡಗಳು ಚಿಗುರಿದವು
ಈಗ ಎಲ್ಲವೂ ತನ್ಮಯ
ಹಸಿರುಡುಗೆಯಲ್ಲಿ ಮಿಂಚಿ
ಒಡಲು ತುಂಬಿಕೊಂಡ ಧರಣಿ
ರಂಗಿನೋಕುಳಿ ಬರೆದ ಸುಮಗಳ ಮೇಳ||
ಕಾಜಾಣ ಕೋಗಿಲೆಗಳ ಝೇಂಕಾರ
ಸೌಂದರ್ಯದಿ ಜಗ ಬೆರಗಾಗುವ
ಗರಿಬಿಚ್ಚಿ ನಲಿಯುವ ನವಿಲುಗಳ ನರ್ತನ
ಎಲ್ಲೆಂದರಲ್ಲಿ ಹೊಸತನ, ಚೈತನ್ಯ
ಬಿರುಗಾಳಿಗೆ ನರ್ತಿಸುವ ದಟ್ಟವಾದ ಮರಗಳು
ಧುಮ್ಮಿಕ್ಕಿ ಹರಿಯುವ ನದಿ, ಜಲಪಾತಗಳು||
ಭುವಿತುಂಬ ನಿಟ್ಟುಸಿರ ಮೂಕಮಾಯೆ
ಕಂಗಳು ತಣಿಯುವ ಸಂಭ್ರಮದ ಛಾಯೆ
ಅಮೃತಧಾರೆಯ ಸ್ಪರ್ಶದಿ ಇಳೆ ಆಗುವುದು ಧನ್ಯ
ಮುಂಗಾರಿನ ಸೊಬಗು ಕವಿತೆಯಲ್ಲಿ ವರ್ಣಿಸಲಾಗದಷ್ಟು ಅನನ್ಯ....!!||
- ಕು.ಸಂಧ್ಯಾ ಕುಮಾರಿ ಎಸ್, ವಿಟ್ಲ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ