ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳ ಘಟಕ ಉದ್ಘಾಟನೆಗೆ ಸಂಬಂಧಿಸಿದಂತೆ ಇಂದು ನಗರದ ಕೂಳೂರಿನ ಶ್ರೀಶಕ್ತಿ ನಿಲಯದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.
ಘಟಕದ ಪ್ರಧಾನ ಕಾರ್ಯದರ್ಶಿ ವೇದಬ್ರಹ್ಮ ಶ್ರೀ ಸುಬ್ರಹ್ಮಣ್ಯ ಮಯ್ಯರ ನಿವಾಸದಲ್ಲಿ ಇಂದಿನ ಸಭೆ ನಡೆದಿದ್ದು, 17 ಮಂದಿ ಸದಸ್ಯರು ಭಾಗವಹಿಸಿದ್ದರು.
ಕೋವಿಡ್ ನಿರ್ಬಂಧಗಳು ಸಡಿಲಿಕೆಯಾದ ಬಳಿಕ ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ಘಟಕದ ಉದ್ಘಾಟನಾ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.
ಕೇಂದ್ರ ಸಂಘಟನಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಕಂದಾಯ ಸಚಿವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುವ ಬಗ್ಗೆ ಹಾಗೂ ಸಮಾರಂಭಕ್ಕೆ ಅಗತ್ಯವಿರುವ ಖರ್ಚುವೆಚ್ಚಗಳ ಬಗ್ಗೆ ಚರ್ಚಿಸಲಾಯಿತು.
ಕೊರೊನಾ ಸಂಕಷ್ಟ ಕಾಲದಲ್ಲಿ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಜತೆಗೆ ಇನ್ನಿತರ ಸವಲತ್ತುಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಈ ಸಂಘಟನೆ ಕಾರ್ಯ ನಡೆಸಲಾಗುತ್ತಿದೆ.
ಸಂಘಟನೆಯ ಕೇಂದ್ರ ಘಟಕ ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಡಾ. ವೇದಬ್ರಹ್ಮ ಎಂ.ಬಿ. ಅನಂತಮೂರ್ತಿ ಅವರು ಅಧ್ಯಕ್ಷರಾಗಿ ರಾಷ್ಟ್ರವ್ಯಾಪಿ ಸಂಘಟನೆಯ ಕಾರ್ಯದಲ್ಲಿ ತೊಡಗಿದ್ದಾರೆ.
ದ.ಕ- ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರಕಾಶ್ ಹೊಳ್ಳ ಶಕ್ತಿ ನಗರ ಹಾಗೂ ಗೌರವಾಧ್ಯಕ್ಷರಾಗಿ ರಘುರಾಮರಾವ್, ವೇ.ಬ್ರ. ಸುಬ್ರಹ್ಮಣ್ಯ ಮಯ್ಯ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಇವರಲ್ಲದೆ ಇತರ 12 ಮಂದಿ ಪದಾಧಿಕಾರಿಗಳಿದ್ದು, ಸಂಘಟನೆಯ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.