ಬೇಡ ಮಾದಕ ದ್ರವ್ಯಗಳ ಸಹವಾಸ; ಇರಲಿ ಆರೋಗ್ಯಕರ ಅಭ್ಯಾಸ

Upayuktha
0
ವಿಶ್ವ ಮಾದಕ ದ್ರವ್ಯ ವಿರೋಧಿ ದಿನ- ಜೂನ್ 26



ಜೂನ್ 26ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ.


2021ರ ಧ್ಯೇಯ ವಾಕ್ಯ “ Share Facts On Drugs,  Save Lives” ಎಂದಾಗಿದೆ. “ಮಾದಕ ದ್ರವ್ಯದ ಬಗೆಗಿನ ಮಾಹಿತಿ ಮತ್ತು ನಿಜ ಸಂಗತಿ ಹಂಚಿಕೊಳ್ಳಿ ಹಾಗೂ ಜೀವ ಉಳಿಸಿಕೊಳ್ಳಿ” ಎಂಬುದಾದ ಧ್ಯೇಯ ವಾಕ್ಯ ಇಟ್ಟುಕೊಂಡು ಈ ಆಚರಣೆಯನ್ನು ನಡೆಸಲಾಗುತ್ತಿದೆ.


ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಕಣ್ಣು ಮಿಟುಕಿಸುವುದರ ಒಳಗೆ ಏನೆಲ್ಲಾ ನಡೆದು ಬಿಡುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒತ್ತಡವೂ ಬಹಳ ಇರುತ್ತದೆ. ಈಗಿನ ಒತ್ತಡದ, ಧಾವಂತದ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯುವ ಜನತೆ ವೇಗಕ್ಕೆ  ತಾಳ ಹಾಕಲು ಕಷ್ಟವಾಗಿ ತಪ್ಪುದಾರಿ ಹಿಡಿಯುತ್ತಾರೆ ಎಂದರೂ ತಪ್ಪಲ್ಲ. ನಮ್ಮ ಇಂದಿನ ನಾಗರೀಕ ಜೀವನಶೈಲಿಯಲ್ಲಿ ಮೋಜು,ಮಸ್ತಿ ತಡ ರಾತ್ರ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿವೆ. ಈ ಹಂತದಲ್ಲಿ ಹದಿ ಹರೆಯದ ಯುವ ಜನತೆ ದಾರಿ ತಪ್ಪುವುದು ಸಾಮಾನ್ಯ. ಈ ದಿಸೆಯಲ್ಲಿ ತಂದೆ ತಾಯಂದಿರ ಆಸರೆ, ಮಾರ್ಗದರ್ಶನ ಅತೀ ಅಗತ್ಯ. ಹದಿ ಹರೆಯದಲ್ಲಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯದಿದ್ದಲ್ಲಿ ಅನಾಹುತವಾಗುವ ಸಾಧ್ಯತೆಯಿದೆ.


ಎಲ್ಲಾ ಓಕೆ ಗಾಂಜಾ ಯಾಕೆ?

ಅಪೀಮು, ಗಾಂಜಾ, ಕೋಕೇನ್, ಮಾರಿಜುವಾನಾ ಇವೆಲ್ಲಾ ಮಾದಕ ವಸ್ತುಗಳ ಸೇವನೆ ನಮ್ಮ ದೇಶಗಳಲ್ಲಿ ಶತಶತಮಾನಗಳಿಂದ ಇದೆ. ಒಮ್ಮೆ ಇದರ ಚಟಕ್ಕೆ ಬಿದ್ದಲ್ಲಿ ಮತ್ತೆ ಹೊರಬರುವುದು ಬಹಳ ಕಷ್ಟ. ಅಭ್ಯಾಸ ಬಲದಿಂದ ಮತ್ತೆ ಮತ್ತೆ ಮಾಡುವ ಕೆಲಸವನ್ನು ಚಟ ಎನ್ನುತ್ತೇವೆ. ಸಾಮಾನ್ಯವಾಗಿ ಚಟಗಳೆಲ್ಲಾ ದುಶ್ಚಟಗಳೇ. ಆ ವ್ಯಕ್ತಿಗೆ ಹಾಗೆಂದು ಗೊತ್ತಿದ್ದರೂ ಅದನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾನೆ. ಇದಕ್ಕೆ ಮುಖ್ಯ ಕಾರಣ, ಅದನ್ನು ನಿಲ್ಲಿಸಿದರೆ ಆತನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಹಿಂಸೆಯಾಗುತ್ತದೆ. ಹೀಗಾಗಿ ಹೇಗೊ ಆತನಿಗೆ ಅಂಟಿಕೊಂಡ ಚಟಗಳು ಅವನನ್ನು ಬಿಡದೆ ಆವರಿಸಿಕೊಂಡಿರುತ್ತದೆ.


ಅಪೀಮು ಎನ್ನುವುದು ಗಸಗಸೆಯಿಂದ ತಯಾರು ಮಾಡಲಾದ, ಔಷಧಿಯ ಗುಣವುಳ್ಳ ವಸ್ತು. ಅಪೀಮುನಿಂದ ತಯಾರಾದ Morphine (ಮಾರ್ಫಿನ್) ಎನ್ನುವ ಶುದ್ಧ ರಾಸಾಯನಿಕ ವಸ್ತುವನ್ನು, ಇಂದಿಗೂ ವೈದಕೀಯ ಶಾಸ್ತ್ರದಲ್ಲಿ ನೋವು ನಿವಾರಕ ಚುಚ್ಚುಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ಅಪಘಾತದಲ್ಲಿ ಪೆಟ್ಟುಬಿದ್ದು ತೀವ್ರ ಸ್ಪರೂಪದ ನೋವಿರುವಾಗ, ಹೃದಯಾಘಾತವಾಗಿ ಅತಿಯಾದ ಎದೆನೋವು ಇದ್ದಲ್ಲಿ ನೋವು ನಿವಾರಕವಾಗಿ ಇಂದಿಗೂ ಬಳಸಲಾಗುತ್ತದೆ. ಇದರಿಂದ ಸಣ್ಣ ಪ್ರಮಾಣದಲ್ಲಿ ನಿದ್ದೆ ಬರಬಹುದು.


ಅಪೀಮುನಿಂದ ತಯಾರಿಸಲಾದ ಹೆರಾಯಿನ್ ಎಂಬ ಮಾದಕವಸ್ತು ಕೂಡಾ ಪಾಶ್ಚಾತ್ಯ ದೇಶಗಳಲ್ಲಿ ಹೇರಳವಾಗಿ ಬಳಕೆಯಲ್ಲಿದೆ. ಇದರಿಂದ ಶರೀರದ ನೋವು, ಬಳಲಿಕೆ, ಮಾನಸಿಕ ದುಗುಡ ಕಡಿಮೆಯಾಗಿ ಕ್ಷಣಿಕವಾಗಿ ಖುಷಿ ಸಿಗುತ್ತದೆ. ಮನಸ್ಸಿನ ಬೇಸರ, ನಿರಾಸೆ ಎಲ್ಲವೂ ತಗ್ಗಿ ನಿರಾಳವಾಗುತ್ತದೆ. ಈ ಕಾರಣದಿಂದಲೇ ಜನ ಹೆರಾಯಿನ್ ಚುಚ್ಚುಮದ್ದನ್ನು ಮತ್ತೆ ಮತ್ತೆ ಬಳಸುತ್ತಾರೆ. ಕ್ರಮೇಣ ಚಟವಾಗಿ ಮಾರ್ಪಾಡಾಗುತ್ತದೆ. ಮತ್ತೆ ಮತ್ತೆ ತೆಗೆದುಕೊಳ್ಳಬೇಕೆಂಬ ತುಡಿತ ಉಂಟಾಗುತ್ತದೆ. ತೆಗೆದುಕೊಳ್ಳದಿದ್ದಲ್ಲಿ withdrwal  syndrome ಉಂಟಾಗುತ್ತದೆ. ಮನುಷ್ಯ ಆ ಮಾನಸಿಕ ಸ್ಥಿಮಿತ ಕಳಕೊಂಡು ಹುಚ್ಚನಂತಾಗುತ್ತಾನೆ. ಹೆರಾಯಿನ್ ಬಳಕೆಯಿಂದ ಲೈಂಗಿಕ ಆಸೆ ಹೆಚ್ಚಾಗುತ್ತದೆ. ಆದರೆ ಲೈಂಗಿಕ ಸಾಮರ್ಥ್ಯ ಕುಗ್ಗುತ್ತದೆ.


ಈಗಿನ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಮಾದಕ ವಸ್ತುಗಳ ಬಳಕೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ಅಫೀಮು ಎನ್ನುವುದು ಔಷಧೀಯ ಗುಣವುಳ್ಳ ಮಾದಕವಸ್ತು ಇದರ ಚಟಕ್ಕೆ ಹದಿಹರೆಯದ ಯುವಕರು ಬಿದ್ದಲ್ಲಿ ಮತ್ತೆ ಹೊರ ಬರುವುದು ಬಹಳ ಕಷ್ಟ.


ಇನ್ನು ‘ಗಾಂಜಾ’ದ ವಿಷಯಕ್ಕೆ ಬರೋಣ. ಇದು ಕೂಡಾ ಸಸ್ಯ ಮೂಲದಿಂದಲೇ ಬಂದಂತಹ ಇನ್ನೊಂದು ಮಾದಕವಸ್ತು. ಈಗೀಗ ಹಳ್ಳಿ ಹಳ್ಳಿಗಳಲ್ಲೂ ಇದನ್ನು ಅಕ್ರಮವಾಗಿ ಬೆಳೆಸುತ್ತಿದ್ದಾರೆ. ಸರಕಾರ ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೂ, ಜನರು ಅಕ್ರಮವಾಗಿ ಬೆಳೆದು, ಹಣ ಮಾಡುವ ದಂದೆಯಲ್ಲಿ ತೊಡಗಿದ್ದಾರೆ. ಅದೇ ರೀತಿ ಸಸ್ಯಮೂಲದಿಂದ ಬಂದಿರುವ ಕೋಕೇನ್ (Cocaine) ಮಾರಿಜುವಾನಾ (Marisuana) ಮತ್ತು ಹಷೀಷ್ (Hashish)  ಕೂಡಾ ಮಾದಕ ದ್ರವ್ಯಗಳೇ. ಈ ಮೇಲೆ ತಿಳಿಸಿದ ಎಲ್ಲಾ ವಸ್ತುಗಳ ಬಳಕೆಯಿಂದ ಮನಸ್ಸು ಉತ್ತೇಜಿತ ಗೊಳ್ಳುತ್ತದೆ ಮತ್ತು ಅಸ್ವಾದಗೊಳ್ಳುತ್ತದೆ. ಜೊತೆಗೆ ಒತ್ತಡದಿಂದ ಬಳಲಿದ ದೇಹ ಮತ್ತು ಮನಸ್ಸಿಗೆ ಭ್ರ್ರಮೆ ಮತ್ತು ಭ್ರಾಂತಿಗಳನ್ನು ಮಾಡಿಸುತ್ತದೆ. ಈ ಕಾರಣದಿಂದಲೇ ಅತೀವ ಒತ್ತಡ, ಹತಾಶೆ ಮತ್ತು ನಿರಾಶೆಯಿಂದ ಕೂಡಿದ ಯುವ ಜನರು, ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲಾಗದೆ ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಾರೆ. ಮೊದಮೊದಲು ಒಂದು ಮಾದಕ ದ್ರವ್ಯದ ಬಳಕೆ, ಬಳಿಕ ಎರಡು ಮೂರು ವಸ್ತುಗಳನ್ನು ಬಳಸತೊಡಗುತ್ತಾರೆ. ಇದನ್ನು Polydrug  abuse ಎಂದು ಹೇಳುತ್ತಾರೆ.


ಕಾಲಕ್ರಮೇಣ ಮಾದಕ ವಸ್ತುಗಳ ಬಳಕೆ ಜಾಸ್ತಿಯಾದಂತೆ, ಶರೀರದ ಒಂದೊಂದು ಅಂಗಗಳನ್ನು ಆಪೋಶನ ತೆಗೆದುಕೊಳ್ಳುತ್ತದೆ. ಕೆಲಸ ಮಾಡಲು ಅಶಕ್ತರಾಗಿ, ಗಳಿಕೆ ಇಲ್ಲದಂತಾಗಿ, ಮನೆಮಠ ಕಳೆದುಕೊಂಡು, ಹೆಂಡತಿ ಮಕ್ಕಳನ್ನು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಚಟಕ್ಕೆ ದಾಸರಾಗಿ, ಮಾದಕ ದ್ರವ್ಯ  ಸಿಗದಾದಾಗ ಹಣದ ಅವಶ್ಯಕತೆಗಾಗಿ ಕೊಲೆ, ಸುಳಿಗೆ, ಕಳ್ಳತನ ಮಾಡಲೂ ಹೇಸದ ಮನೋಸ್ಥಿತಿಗೆ ಬಂದು ತಲುಪುತ್ತಾರೆ. ಒಟ್ಟಿನಲ್ಲಿ ಮಾದಕ ದ್ರವ್ಯಗಳ ದಾಸನಾದವನನ್ನು ಚಟ ಬಿಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಒಂದು ದೊಡ್ಡ ಭಗೀರಥ ಪ್ರಯತ್ನವೆಂದರೂ ಸುಳ್ಳಲ್ಲ.


ಮಾದಕ ವಸ್ತು ಚಟಕ್ಕೆ ಬೀಳದಂತೆ ತಡೆಗಟ್ಟುವುದು ಹೇಗೆ?


1. ಹದಿಹರೆಯದಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.

2. ಅತಿಯಾದ ಒತ್ತಡ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸಬಾರದು. ನಮ್ಮ ನಿರೀಕ್ಷೆಗಳಿಗೆ ಕಡಿವಾಣ ಹಾಕಿ ಮಕ್ಕಳ ಮೇಲೆ ವಿಪರೀತ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು.


3. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅನಗತ್ಯವಾಗಿ ಅವರಿಗೆ ಬೈದು, ಹೊಡೆದು, ಬುದ್ಧಿ ಹೇಳುವುದನ್ನು ಬಿಟ್ಟು, ಆಪ್ತಮಿತ್ರರಂತೆ ಅವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಅವರಿಗೆ ಸೂಕ್ತ ಸಾಂತ್ವನ ಕೊಡಬೇಕು. ಇದು ತಂದೆ ತಾಯಿಂದಿರ ಆದ್ಯ ಧರ್ಮ.


4. ಮಕ್ಕಳ ಮೇಲೆ ಅತೀಯಾದ ನಿರೀಕ್ಷೆಗಳನ್ನು ಹೇರಿ, ಒತ್ತಡದ ಸನ್ನಿವೇಶಗಳನ್ನು     ಮಾಡಿಕೊಡಬಾರದು. ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಬುದ್ದಿವಂತಿಕೆಗಳ ಅರಿವು ಹೆತ್ತವರಿಗೆ ಇರಬೇಕು. ಅವರ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಗೆ ಮೀರಿದ ಗುರಿಗಳನ್ನು ಸಾಧಿಸುವಂತೆ ಇವರಿಗೆ ಒತ್ತಡ ತಂದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ತಾವು ಸಾಧಿಸಲಾಗದ ಗುರಿಗಳನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂಬ ಹುಂಬತನಕ್ಕೆ ಪ್ರಯತ್ನಿಸಲೇ ಬಾರದು.


5. ಮಕ್ಕಳನ್ನು ಅತಿಯಾಗಿ ಮುದ್ದುಮಾಡಿ, ಕೈತುಂಬಾ ಹಣ ನೀಡಿ, ಕೇಳಿದ್ದೆಲ್ಲಾ ನೀಡಿದ್ದಲ್ಲಿ ದಾರಿ ತಪ್ಪುವ ಎಲ್ಲಾ ಸಾಧ್ಯತೆ ಇರುತ್ತದೆ. ಮಾಹಿತಿ ತಂತ್ರಜ್ಞಾನ,  ಅಂತರ್ಜಾಲದ ದುರ್ಬಳಕೆಯಿಂದ, ಹದಿಹರೆಯದ ಮಕ್ಕಳು ಬಹುಬೇಗ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಈ ದಿಸೆಯಲ್ಲಿ ಹೆತ್ತವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನಮ್ಮ ಮಕ್ಕಳ ಸಾಮಥ್ರ್ಯದ ಅರಿವಿನ ಜೊತೆಗೆ, ಹೆತ್ತವರು ತಮ್ಮ ಸ್ಥಾನಮಾನದ ಬಗ್ಗೆ ಹೆಚ್ಚು ಪ್ರಾಶಾಸ್ತ ಕೊಡದೆ   ಮಕ್ಕಳನ್ನು ಮಕ್ಕಳ ರೀತಿಯಲ್ಲಿ ಬೆಳೆಸಿದ್ದಲ್ಲಿ ಅವರು ಮುಂದೆ ಸಮಾಜದ ಸತ್ಪ್ರಜೆ ಆಗಬಹುದು. ಅದರಲ್ಲೇ ನಮ್ಮ ನಿಮ್ಮ ಮತ್ತು ಸಮಾಜದ ಹಿತ ಅಡಗಿದೆ.  


ಮಾದಕ ದ್ರವ್ಯ ವ್ಯಸನಿಗಳನ್ನು ಗುರುತಿಸುವುದು ಹೇಗೆ? 

ಮಾದಕ ದ್ರವ್ಯ ಸೇವಿಸುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತದೆ. 

1. ಹಸಿವಿಲ್ಲದಿರುವುದು, ದೇಹದ ತೂಕ ಕಡಿಮೆಯಾಗುವುದು. ಒಮ್ಮೆ ಮಾದಕ ದ್ರವ್ಯ ಸೇವಿಸಿದ ಬಳಿಕ ದಿನವಿಡೀ ಆಹಾರ ಸೇವಿಸದೇ ಇರಬಹುದು. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ. 

2. ನಿದ್ರಾ ಹೀನತೆ, ಮಾದಕ ದ್ರವ್ಯ ಸೇವಿಸಿದ ಬಳಿಕ ವ್ಯಕ್ತಿ ಭ್ರಮಾಲೋಕದಲ್ಲಿ ವಿಹರಿಸುತ್ತಿರುತ್ತಾನೆ. ಮತ್ತು ದಿನವೊಂದರಲ್ಲಿ ಒಂದೆರಡು ಗಂಟೆ ಮಾತ್ರ ನಿದ್ರಿಸುತ್ತಾನೆ.  ನಿದ್ರೆ ಬರುವುದೇ ಇಲ್ಲ. 

3. ಮಲಬದ್ಧತೆ ಉಂಟಾಗುತ್ತದೆ. ಕಾಲಕಾಲಕ್ಕೆ ಸರಿಯಾಗಿ ಆಹಾರ ಸೇವಿಸದೆ ಮಲಬದ್ಧತೆ ಉಂಟಾಗಬಹುದು.  

4. ಸಣ್ಣ ಸಣ್ಣ ವಿಚಾರಕ್ಕೆ ಸಿಡುಕುವುದು, ಮಾನಸಿಕ ಖಿನ್ನತೆ, ಮಾನಸಿಕ ಉದ್ವೇಗ ಕಂಡು ಬರುತ್ತದೆ. 

5. ವ್ಯಕ್ತಿ ಒಬ್ಬನೆ ತಮ್ಮ ಪಾಡಿಗೆ ತಾನು ಮಾತನಾಡುತ್ತಿರುತ್ತಾನೆ. ಭ್ರಮಾ ಲೋಕದಲ್ಲಿ ತೇಲಾಡುತ್ತಿರುತ್ತಾನೆ. 

6. ಕಲಿಕೆಯಲ್ಲಿ ಮುಂದಿದ್ದ ಮಕ್ಕಳು ನಿಧಾನವಾಗಿ ತನ್ನ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ.


ಮುಕ್ತಾಯಕ್ಕೆ ಮುನ್ನ:

ಇಂದಿನ ಜೀವನಶೈಲಿ, ಅತಿಯಾದ ಕೆಲಸದ ಒತ್ತಡ, ಸಂಬಂಧಗಳಲ್ಲಿನ ಭಾವನಾತ್ಮಕತೆಯ ಕೊರತೆ, ದಿನ ನಿತ್ಯದ ಜೀವನದಲ್ಲಿನ ಜಂಜಾಟಗಳು, ಯಾಂತ್ರೀಕೃತ  ಬದುಕಿನ ನೋವು ಮತ್ತು ಸಂಕಟಗಳು, ದಿನನಿತ್ಯದ ವ್ಯವಹಾರದಲ್ಲಿನ ಆರ್ಥಿಕ ಏರು ಪೇರು, ಇವಲ್ಲೆವೂ ಮೇಳ್ಮೆಸಿ ನಮ್ಮ ಮನಸ್ಸು ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮನುಷ್ಯ ಮಾನಸಿಕ ಖಿನ್ನತೆಗೆ ಬಲಿಯಾಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಬಲಿಯಾಗುತ್ತಿರುವವರ ಸಂಖ್ಯೆ ಬಹಳವಾಗಿದ್ದು, ಅದರಲ್ಲೂ ವಿಶೇಷವಾಗಿ ಇಂದು ನಮ್ಮ ಯುವ ಜನತೆ ಹೆಚ್ಚಿನ ಪ್ರಮಾಣದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮಾದಕ ದ್ರವ್ಯಗಳ ದುಷ್ಚಟಗಳಿಗೆ ಬಳಿಯಾಗುವುದು ನಿಜಕ್ಕೂ ವಿಪರ್ಯಾಸ. ಮತ್ತು ನಾಗರೀಕ ಜಗತ್ತಿನ ದುರಂತವೇ ಸರಿ.


ಈ ದಿಸೆಯಲ್ಲಿ ನಾವು ಹಿರಿಯವರೆಲ್ಲಾ ಸೇರಿ ಹದಿಹರೆಯದ ಚಂಚಲ ಮನಸ್ಸಿನ ಯುವ ಜನತೆಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಬೇಕು. ಮತ್ತು ಒತ್ತಡ ನಿರ್ವಹಿಸಲು ಸಹಕರಿಸಬೇಕು. ಮತ್ತು ಮಾದಕ ವಸ್ತುಗಳ ಮೊರೆ ಹೋಗದಂತೆ ಸರಿಯಾದ ಮಾರ್ಗದರ್ಶನ ನೀಡಬೇಕು. ಹಾಗೇ ಮಾಡಿದ್ದಲ್ಲಿ ಮಾತ್ರ ‘ವಿಶ್ವಮಾದಕ ದ್ರವ್ಯ ವಿರೋಧಿ ದಿನ’ ಆಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು. ಮತ್ತು ಅದರಲ್ಲಿಯೇ ನಮ್ಮನಾಡು, ದೇಶ ಮತ್ತು ವಿಶ್ವದ ಶಾಂತಿ ಮತ್ತು ಸಾಮರಸ್ಯ ಅಡಗಿದೆ.


-ಡಾ| ಮುರಲಿ ಮೋಹನ್ ಚೂಂತಾರು

MDS, DNB, MOSRCSED (UK) FPFA, MBA

ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು

ಮೊ: 9845135787


Key Words: International Day against Drug abuse, Say no to Drugs, Ban drugs, ವಿಶ್ವ ಮಾದಕ ದ್ರವ್ಯ ವಿರೋಧಿ ದಿನ, ಆರೋಗ್ಯ, 


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top