ಜೀವವೈವಿಧ್ಯದ ನೆಲೆ ‘ಸೌಗಂಧಿಕಾ’ ಮುಜಂಟಿಗೆ ನೆಚ್ಚಿನ ತಾಣ

Upayuktha
0



ಜೂನ್ ತಿಂಗಳಲ್ಲಿಯೂ ಕುಟುಂಬ ಪಾಲಾಗುತ್ತದೆ! ಹೌದು. ಕರಾವಳಿಯಲ್ಲಿ ಮಳೆಗಾಲ ಕಾಲಿಡುವ ಹೊತ್ತಿನಲ್ಲಿಯೂ ಮುಜಂಟಿ (ಮಿಸ್ರಿ/ನಸರಿ) ಕುಟುಂಬ ಪಾಲಾಗಿ ಬರುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪದ ‘ಸೌಗಂಧಿಕಾ’ದಲ್ಲಿ ಅಂತಹ ಒಂದು ಕುಟುಂಬ ಸೆರೆಗೂಡಿನಲ್ಲಿ ನೆಲೆಸಿದೆ.


ಪುತ್ತೂರು-ಸುಳ್ಯ ರಸ್ತೆಯಲ್ಲಿ ಪರ್ಪುಂಜ ಬಳಿ ‘ಸೌಗಂಧಿಕಾ’ ನರ್ಸರಿ ನಡೆಸುತ್ತಿರುವ ಗೆಳೆಯ ಚಂದ್ರ ಜೇನ್ನೊಣಗಳಿಗೆ ಸಾಕಷ್ಟು ಪರಾಗ-ಮಕರಂದ ಒದಗಿಸುವ ಸಸ್ಯವೈವಿಧ್ಯವನ್ನು ಬೆಳೆಸಿದ್ದಾರೆ. ಹಕ್ಕಿಗಳಿಗೂ ಅದು ಪ್ರಿಯವಾದ ತಾಣ. ಮುಖ್ಯವಾಗಿ, ನಾನಾ ಬಗೆಯ ವಾಟರ್ ಲಿಲ್ಲಿಗಳು ‘ಸೌಗಂಧಿಕಾ’ದ ವಿಶೇಷ ಆಕರ್ಷಣೆ. ಬೆಳಿಗ್ಗೆ ಕೆಂಪು, ಗುಲಾಬಿ, ಹಳದಿ, ನೇರಳೆ, ಬಿಳಿ ಹೀಗೆ ಬಣ್ಣಬಣ್ಣದ ಲಿಲ್ಲಿಗಳು ಅರಳುತ್ತಲೇ ಪುಟಾಣಿ ಮುಜಂಟಿ ಜೇನ್ನೊಣಗಳು ಅವುಗಳಿಗೆ ಮುತ್ತಿಕ್ಕುತ್ತವೆ. ಪರಸ್ಪರ ಪೈಪೋಟಿಗಿಳಿದವರಂತೆ ಪರಾಗ ಸಂಗ್ರಹಿಸುತ್ತವೆ.


ವಾಟರ್ ಲಿಲ್ಲಿಗಳಲ್ಲಿ ಪರಾಗಸ್ಪರ್ಶ ಏರ್ಪಡುವಲ್ಲಿಯೂ ಮುಜಂಟಿಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಹೂವುಗಳ ಮಧ್ಯದಲ್ಲಿರುವ ಬಟ್ಟಲಿನಲ್ಲಿ ಕಂಡುಬರುವ ಮಂದದ್ರವದಲ್ಲಿ ಮುಜಂಟಿಗಳು ಏಕೆ ಮುಳುಗೇಳುತ್ತಿರುತ್ತವೆ ಮತ್ತು ಕೆಲವು ಅಲ್ಲೇ ಜೀವ ಕಳೆದುಕೊಳ್ಳುತ್ತವೆ ಎಂಬುದರ ಬಗ್ಗೆ ತಿಳಿಯಹೊರಟಾಗ ಲಿಲ್ಲಿಗಳಲ್ಲಿ ನಡೆಯುವ ಪರಾಗಸ್ಪರ್ಶ ಕ್ರಿಯೆಯ ರೋಚಕ ಸಂಗತಿ ತಿಳಿಯಿತು. ಅದು ಬೇರೆಯೆ ವಿಚಾರ.


ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಡಿಸೆಂಬರ್-ಜನವರಿ ಸಮಯದಲ್ಲಿ ಮುಜಂಟಿ ಕುಟುಂಬಗಳು ಸದೃಢವಾಗಿದ್ದು ರಾಣಿಕೋಶಗಳು ಕಾಣಿಸಿಕೊಳ್ಳುತ್ತವೆ. ಆಗ ನಿಸರ್ಗದಲ್ಲಿ ಸಾಕಷ್ಟು ಆಹಾರ ಕೂಡ ಸಿಗುವುದರಿಂದ ಕುಟುಂಬಗಳು ಸಹಜವಾಗಿ ಪಾಲಾಗುತ್ತವೆ. ಕೃತಕವಾಗಿ ಪಾಲು ಮಾಡಲು ಕೂಡ ಅದು ಸಕಾಲ.


ಕೆಲವರು ಏಪ್ರಿಲ್  ಕೊನೆಯಲ್ಲಿ ಜೇನು ತೆಗೆದು ಅದೇ ಸಂದರ್ಭದಲ್ಲಿ ಕುಟುಂಬವನ್ನು ಪಾಲು ಮಾಡುವುದೂ ಇದೆ. ಮಳೆಗಾಲದಲ್ಲಿ ಮುಜಂಟಿಗಳಿಗೆ ನಿಸರ್ಗದಲ್ಲಿ ಆಹಾರ ಲಭ್ಯತೆ ಕ್ಷೀಣಿಸುವುದರಿಂದ ಜೇನು ತೆಗೆದ ಬಳಿಕ ಅಗತ್ಯ ಆಹಾರ ಸಂಗ್ರಹಕ್ಕೆ ಕನಿಷ್ಠ ಒಂದು ತಿಂಗಳ ಕಾಲಾವಕಾಶ ಕೊಡಬೇಕೆಂಬುದು ಪರಿಣಿತರ ಅಭಿಪ್ರಾಯ. ಆದ್ದರಿಂದ ಮಳೆ ಶುರುವಾಗುವ ಸಂದರ್ಭದಲ್ಲಿ ಜೇನು ತೆಗೆಯುವುದಾಗಲೀ ಪಾಲುಮಾಡುವುದಾಗಲೀ ಸೂಕ್ತವಲ್ಲ ಎನ್ನುತ್ತಾರೆ.


ಮಿಸ್ರಿಗಳ ನಡವಳಿಕೆಗಳ ಬಗ್ಗೆ ಇನ್ನೂ ಸಮಗ್ರ ಚಿತ್ರಣ ಸಿಕ್ಕಿಲ್ಲ. ಕಲಿತಷ್ಟೂ ಹೊಸಹೊಸ ಸಂಗತಿ ಕಲಿಯುವುದು ಇನ್ನೂ ಇದೆ. ‘ಒಂದು ಗೂಡಿನಿಂದ ವರ್ಷಕ್ಕೆ ಎಷ್ಟು ಜೇನುತುಪ್ಪ ಸಿಕ್ಕೀತು? ಅದಕ್ಕೆ ಎಷ್ಟು ರೇಟು ಇದೆ? ಮಾರಾಟ ಹೇಗೆ?’ ಎಂದು ಇದನ್ನು ವಾಣಿಜ್ಯಿಕವಾಗಿ ನೋಡುವ ಮೊದಲು ಆರಂಭದಲ್ಲಿ ಒಂದು ಹವ್ಯಾಸವಾಗಿ ಪರಿಗಣಿಸುವುದೇ ಸೂಕ್ತ. ಆಗ ಈ ನೊಣಗಳ ಚಟುವಟಿಕೆಗಳನ್ನು ಸೂಕ್ಷವಾಗಿ ಗಮನಿಸುವುದು ಮತ್ತು ಆಯಾ ಪರಿಸರದಲ್ಲಿ ಅವುಗಳ ಜೀವನಕ್ರಮ ಹೇಗಿರುತ್ತದೆ ಎಂಬುದನ್ನು ಅಭ್ಯಸಿಸುವುದು ಸಾಧ್ಯವಾಗುತ್ತದೆ.


ಹೀಗೆ ಹವ್ಯಾಸವಾಗಿ ಮುಜಂಟಿ ಸಾಕಣೆ ಆರಂಭಿಸಿದವರು ಚಂದ್ರ ಸೌಗಂಧಿಕಾ. ತಾರಸಿಯ ಮೇಲೆ ಮಳೆನೀರು ತಾಗದ ಮೂಲೆಯೊಂದರಲ್ಲಿ ಇಟ್ಟಿದ್ದ ಒಂದು ಮಣ್ಣಿನ ಕುಂಡಕ್ಕೆ (ನಿರುಪಯುಕ್ತ ಟೆರ್ರಾಕೋಟ ಫ್ರಿಜ್) ಮೂರು ವರ್ಷಗಳ ಹಿಂದೆ ಮುಜಂಟಿ ಕುಟುಂಬವೊಂದು ಎಲ್ಲಿಂದಲೋ ಬಂದು ನೆಲೆಯೂರಿತು. ಚಂದ್ರ ಅದನ್ನು ಪ್ರೀತಿಯಿಂದಲೆ ಒಪ್ಪಿಕೊಂಡರು. ಅಲ್ಲಿಂದ ಮುಜಂಟಿ ನಂಟು ಆರಂಭವಾಯಿತು. ಮುಜಂಟಿಗಳಿಗೆ ನೂರಾರು ಹೂವುಗಳಲ್ಲಿ ದಿನಪೂರ್ತಿ ಭೂರಿ ಭೋಜನ; ಚಂದ್ರರಿಗೆ ಬಿಡುವಿನ ವೇಳೆಯಲ್ಲಿ ಅವುಗಳ ಲವಲವಿಕೆಯನ್ನು ಗಮನಿಸುವ ಕೆಲಸ.


ಅಷ್ಟರಲ್ಲಿ ‘ಚುಚ್ಚದ ಜೇನು’ ಪುಸ್ತಕ ಓದಿದ್ದ ಚಂದ್ರ ಮನೆಯ ಹಿತ್ತಿಲಲ್ಲಿರುವ ರಂಬುಟಾನ್ ಮರವೊಂದರಲ್ಲಿ ಬಿದಿರಿನ ಗೂಡೊಂದನ್ನು (trap-nest) ನೇತುಹಾಕಿದ್ದರು. ನೋಡನೋಡುತ್ತಲೇ ಅದಕ್ಕೆ ಇನ್ನೊಂದು ಮುಜಂಟಿ ಕುಟುಂಬದ ಆಗಮನವಾಯ್ತು.

ಅದು ಈಗಾಗಲೆ ನೆಲೆಯೂರಿದ್ದ ಕುಟುಂಬ ಪಾಲಾಗಿ ಬಂದದ್ದೂ ಆಗಿರಬಹುದು. ಅಂತೂ ಎರಡನೇ ಮುಜಂಟಿ ಸಂಸಾರದ ಗೃಹಪ್ರವೇಶವಾಗಿ ಚಂದ್ರರ ಉಮೇದು ಹೆಚ್ಚಿತೆನ್ನಬಹುದು.

ಆರು ತಿಂಗಳ ಹಿಂದೆ ಕರೆಂಟ್ ಸ್ವಿಚ್ ಬೋರ್ಡಿನ ಬಳಿ ಮುಜಂಟಿಗಳ ಹಾರಾಟ ಗಮನಿಸಿದ ಚಂದ್ರ ತಕ್ಷಣ ಚುರುಕಾದರು. ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಪಿವಿಸಿ ಪೈಪಿನ ಸೆರೆಗೂಡೊಂದನ್ನು ಸ್ವಿಚ್ ಬೋರ್ಡಿನ ಪಕ್ಕ ಅಳವಡಿಸಿದ್ದೇ ತಡ, ಮುಜಂಟಿಗಳು ಅದನ್ನು ತಮ್ಮ ಮನೆಯೆಂದು ಘೋಷಿಸಿಬಿಟ್ಟವು! ಅಲ್ಲಿಗೆ ‘ಸೌಗಂಧಿಕಾ’ದಲ್ಲಿ ಮುಜಂಟಿ ಗೂಡುಗಳ ಸಂಖ್ಯೆ ಮೂರಕ್ಕೇರಿತು.


ಮೊನ್ನೆಮೊನ್ನೆ ಜೂನ್ ಮೊದಲ ವಾರದಲ್ಲಿ ಇನ್ನೂ ಒಂದು ಕುಟುಂಬ ಅಲ್ಲಿ ಅವತರಿಸಿತು. ಒಂದು ಮಣ್ಣಿನ ಹೂಜಿಯಲ್ಲಿ. ಚಂದ್ರರ ಸಂತೋಷಕ್ಕೆ ಪಾರವೇ ಇಲ್ಲ. ಆ ಕುಟುಂಬ ಸದೃಢವಾಗಿರುವ ಎಲ್ಲ ಸೂಚನೆಗಳಿವೆ.


ಈ ಸಮಯದಲ್ಲಿ ಕುಟುಂಬ ಪಾಲಾಗಿ ಬಂದಿದೆ ಎಂದರೆ ಮುಜಂಟಿ ಮಳೆಗಾಲದ ಆರಂಭದಲ್ಲೂ ಪಾಲಾಗುತ್ತದೆ ಎಂದಾಯಿತು. ಇದನ್ನು ಇನ್ನೊಂದು ರೀತಿಯಲ್ಲೂ ಅರ್ಥೈಸಿಕೊಳ್ಳಬಹುದು. ಅಲ್ಲಿರುವ ಮೂರು ಕುಟುಂಬಗಳ ಪೈಕಿ ಯಾವುದಾದರೊಂದು ಪಾಲಾಗಿದ್ದರೆ ಆ ಜಾಗದಲ್ಲಿ ಸಾಕಷ್ಟು ಆಹಾರ ಸಿಗುತ್ತಿರುವುದು ಆ ನೊಣಗಳಿಗೆ ತಿಳಿದೇ ಇದೆ. ಆ ಭರವಸೆಯಿಂದಲೇ ಅವು ಪಾಲಾಗಿವೆ.


“ಮುಜಂಟಿಗಳಿಗೆ ಬೇರೆಲ್ಲ ಹೂವುಗಳಿಗಿಂತ ಹೆಚ್ಚು ಆಕರ್ಷಣೆ ಇರುವುದು ಲಿಲ್ಲಿಗಳಲ್ಲಿ. ಮುಂಜಾನೆ ಅವು ಇತರ ಹೂವುಗಳಿಗೆ ಹೋಗುವುದಕ್ಕಿಂತ ಮೊದಲೇ ಲಿಲ್ಲಿಗಳತ್ತ ಬರುತ್ತವೆ. ಅವು ಗೂಡಿಗೆ ವಾಪಸಾಗುವಾಗ ಕಾಲುಗಳಲ್ಲಿ ಪರಾಗದ ಎರಡು ಪುಟ್ಟ ಉಂಡೆಗಳಿರುತ್ತವೆ. ಈ ಓಡಾಟ ನೋಡುವುದೇ ಒಂದು ವಿಶಿಷ್ಟ ಅನುಭವ” ಎನ್ನುವ ಚಂದ್ರ ಅವರು ಈಗ ಇನ್ನೂ ಒಂದೆರಡು ಸೆರೆಗೂಡುಗಳನ್ನು ಇಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಹೀಗೆ ಅಯಾಚಿತವಾಗಿ ಮುಜಂಟಿ ಕುಟುಂಬಗಳು ಬಂದು ನೆಲೆಸಬಹುದು ಎಂಬ ನಿರೀಕ್ಷೆ ಅವರದು.


ಅಂತೆಯೇ ಈಗಿನ ಕೊರೋನಾ ಸಂಕಷ್ಟದ ದಿನಗಳು ನಿವಾರಣೆಯಾದ ಬಳಿಕ ತಮ್ಮಲ್ಲಿ ಮುಜಂಟಿ ಸಾಕಣೆ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ಕಾರ್ಯಾಗಾರ ನಡೆಸುವ ಯೋಚನೆಯೂ ಅವರಿಗಿದೆ. ಇದಕ್ಕಾಗಿ ಮೇಲ್ಭಾಗದಲ್ಲಿ ಗಾಜು ಅಳವಡಿಸಿರುವ ಗೂಡೊಂದನ್ನು ಸಿದ್ಧಪಡಿಸಿ ಅದರಲ್ಲಿ ಮುಜಂಟಿ ಕುಟುಂಬ ನೆಲೆಗೊಳಿಸಬೇಕೆಂಬ ಚಿಂತನೆಯೂ ಇದೆ.


ಚಂದ್ರ ಅವರ ಮುಜಂಟಿ ಸಾಕಣೆ ಹವ್ಯಾಸ ‘ಶೂನ್ಯ ವೆಚ್ಚದ ಸ್ಟಾರ್ಟ್ ಅಪ್’ ಆಗಿ ಬೆಳೆಯಲಿ ಎಂದು ಹಾರೈಕೆ. ಜೇನಿಗೆ ಪೂರಕವಾದ ಗಿಡಗಳು, ಮುಖ್ಯವಾಗಿ ವಾಟರ್ ಲಿಲ್ಲಿ ಗಿಡಗಳು ಅವರ ನರ್ಸರಿಯಲ್ಲಿ ಲಭ್ಯವಿರುವುದು ಒಂದು ಪ್ಲಸ್ ಪಾಯಿಂಟ್.


‘ಸೌಗಂಧಿಕಾ’ದ ವಾಟರ್ ಲಿಲ್ಲಿಗಳ ಬಗ್ಗೆ ಕಳೆದ ವರ್ಷ ನಾನು ಮಾಡಿದ್ದ ಪುಟ್ಟ ವೀಡಿಯೋ ನೋಡಲು ಲಿಂಕ್ - 


  

ಅಂದ ಹಾಗೆ  ಜೇನ್ನೊಣಗಳಿಗೆ ಪ್ರಿಯವಾದ ಜೀವವೈವಿಧ್ಯ ನಮ್ಮ ಪರಿಸರದಲ್ಲಿದ್ದರೆ ಅಥವಾ ಕೆಲವೊಂದು ಹೂಗಿಡಗಳನ್ನು ನಾವೇ ಬೆಳೆಸಿದರೆ ಮುಜಂಟಿ ಕುಟುಂಬಗಳು ತಾವಾಗಿಯೇ ಬಂದು ಆಸರೆ ಹುಡುಕುವ ಸಾಧ್ಯತೆ ಹೆಚ್ಚು. ಅವುಗಳಿಗಾಗಿ ಕೆಲವು ಖಾಲಿ ಗೂಡುಗಳನ್ನು ತೂಗುಹಾಕಿದರೆ ಸಾಕು.  


-ಶಿವರಾಂ ಪೈಲೂರು 

#Meliponiculture, Bee Keeping, Stingless Bee, ಚುಚ್ಚದ ಜೇನು, ಮುಜಂಟಿ ಜೇನು


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top