ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸೆಪ್ಟೆಂಬರ್ 2ರಂದು ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಜ್ಞಾನ ಮೇಳದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳ ವೈಜ್ಞಾನಿಕ ಚಿಂತನೆ ಹಾಗೂ ಪ್ರಯೋಗಾತ್ಮಕವಾಗಿ ತೊಡಗಿಸಿಕೊಳ್ಳುವ ಕ್ರಿಯಾಶೀಲತೆ ಶ್ಲಾಘನೀಯವಾಗಿದೆ. ವೈಜ್ಞಾನಿಕ ಮನೋಭಾವ ಬೆಳೆಸಲು ಪೂರಕವಾದ ವಾತಾವರಣ ದೊರೆತಾಗ ಮಕ್ಕಳು ಸಾಧಕರಾಗಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸುದಾನ ಶಾಲೆ ಸದಾ ಸನ್ನದ್ಧವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮಾತನಾಡಿ, ವಿಜ್ಞಾನ ಮಾದರಿಗಳನ್ನು ತಯಾರಿಸುವ ಪ್ರಯತ್ನದಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಯುತ್ತದೆ. ಬಹುಮಾನಕ್ಕಿಂತ ಅನುಭವ ಮತ್ತು ಅರಿವು ಮುಖ್ಯವಾಗಿದ್ದು, ಭವಿಷ್ಯದಲ್ಲಿ ಮಾನವೀಯತೆಯನ್ನು ಮರೆಯದಂತಹ ವಿಜ್ಞಾನದ ಆವಿಷ್ಕಾರಗಳು ಮೂಡಿಬರಲಿ ಎಂದು ಹಾರೈಸಿದರು.
ಸಂಯೋಜಕಿ ಪ್ರತಿಮಾ ಎನ್.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಅಧ್ಯಕ್ಷ ನವನೀತ್ ವೈ.ಕೆ. (10ನೇ ತರಗತಿ) ವಿಜ್ಞಾನ ಮೇಳದ ಉದ್ದೇಶ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಂಸ್ಮರಣೆಯ ಅಗತ್ಯತೆಯನ್ನು ವಿವರಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ಆದಿತ್ಯ ಕೆ. (9ನೇ ತರಗತಿ) ಕಾರ್ಯಕ್ರಮವನ್ನು ನಿರೂಪಿಸಿದರು.
ವಿಜ್ಞಾನ ಶಿಕ್ಷಕರಾದ ನಿವೇದಿತಾ, ಪೂಜಾ ಎಂ.ವಿ., ಶ್ಯಾಮಲಾ ಬಂಗೇರ, ರೀನಾ ಹಾಗೂ ಟಿಂಕರ್ ಲ್ಯಾಬ್ ಶಿಕ್ಷಕರಾದ ಶಿವಪ್ರಸಾದ್ ಸಿ.ಎಚ್. ಅವರು ತೀರ್ಪುಗಾರರಾಗಿ ಸಹಕರಿಸಿದರು.
ಸುದಾನ ಶಾಲೆಯ ಅವನಿ ವಿಜ್ಞಾನ ಸಂಘದ ವತಿಯಿಂದ, ವಿಜ್ಞಾನ ಶಿಕ್ಷಕಿಯರಾದ ರೇಖಾಮಣಿ ಹಾಗೂ ಶ್ರೀಮತಿ ರಂಜಿತಾ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


