ನವದೆಹಲಿ: ಇಲ್ಲಿನ ವಸಂತ್ ಕುಂಜ್ನಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ಮಠಾಧೀಶರ ಚಾತುರ್ಮಾಸ್ಯ ವ್ರತದ ಅಂಗವಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಶನಿವಾರ ವೈಭವೋಪೇತ ಮೊಸರು ಕುಡಿಕೆ ಉತ್ಸವದೊಂದಿಗೆ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.
ಶನಿವಾರ ಸಂಜೆ ಪೂಜ್ಯ ಶ್ರೀಗಳವರಿಂದ ಸಾಲಂಕೃತ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಕಾಲೀಯ ಮರ್ದನ ಕೃಷ್ಣದೇವರಿಗೆ ಭಕ್ತಿಪೂರ್ವಕ ಮಂಗಳಾರತಿ ನೆರವೇರಿತು. ತದನಂತರ ವಸಂತ್ ಕುಂಜ್ನ ಪ್ರಮುಖ ಬೀದಿಗಳಲ್ಲಿ ದೇವೋತ್ಸವ ಹಾಗೂ ವೈಭವದ ಶೋಭಾಯಾತ್ರೆ ಜರುಗಿತು.
ಶೋಭಾಯಾತ್ರೆಯ ಮುಖ್ಯ ಆಕರ್ಷಣೆಯಾಗಿದ್ದ ಮೊಸರು ಕುಡಿಕೆ (ವಿಟ್ಲ ಪಿಂಡಿ) ಉತ್ಸವದಲ್ಲಿ, ಧೋ-ಧೋ ಎಂದು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಗುರುಕುಲದ ವಿದ್ಯಾರ್ಥಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಗೋವಿಂದನಾಮ ಸ್ಮರಣೆಯೊಂದಿಗೆ ಅತ್ಯಂತ ಸೌಹಾರ್ದತೆ ಮತ್ತು ಉತ್ಸಾಹದಿಂದ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಕಳೆದ ಮೂರು ದಿನಗಳಿಂದ ಜರುಗಿದ ಈ ಉತ್ಸವದ ಭಾಗವಾಗಿ ವಿವಿಧ ಜ್ಞಾನ ಸತ್ರಗಳು, ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳಿಗೆ ಕೃಷ್ಣವೇಷ ಸೇರಿದಂತೆ ಹಲವು ವಿಭಿನ್ನ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ರಾಜಧಾನಿ ದೆಹಲಿಯಲ್ಲಿ ದಕ್ಷಿಣ ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸೌರಭವನ್ನು ಪಸರಿಸಿದ ಈ ಉತ್ಸವವು ಭಕ್ತಾದಿಗಳ ಮನಸೂರೆಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


