ಕೊಪ್ಪ: ತಾಲೂಕಿನ ಸಿಗದಾಳ್ ಗ್ರಾಮದಲ್ಲಿ ನಡೆಯುತ್ತಿರುವ ಗಣೇಶೋತ್ಸವವು ಈ ಬಾರಿ ರಾಜ್ಯಕ್ಕೆ ಮಾದರಿಯಾಗಿದೆ. ಪ್ರಸಾದ ವಿತರಣೆಗೆ ಎಲ್ಲಿಯೂ ಪ್ಲಾಸ್ಟಿಕ್, ಪೇಪರ್ ತಟ್ಟೆ, ಲೋಟ, ಚಮಚವನ್ನು ಬಳಸದೆ ಸಂಪೂರ್ಣವಾಗಿ ಬಾಳೆ ಎಲೆ ಬಳಸುವ ಮೂಲಕ ಪರಿಸರ ಸ್ನೇಹಿ ಉತ್ಸವವನ್ನು ಆಚರಿಸಲಾಗುತ್ತಿದೆ.
ಸಾಮಾನ್ಯವಾಗಿ ಜಾತ್ರೆ, ಹಬ್ಬಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚು. ಆದರೆ ಸಿಗದಾಳ್ ನ ಯುವಕರು ಮತ್ತು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯವರು "ನಮ್ಮ ಹಬ್ಬ, ನಮ್ಮ ಪರಿಸರದ ಜವಾಬ್ದಾರಿ" ಎಂಬ ಘೋಷಣೆಯೊಂದಿಗೆ ಈ ನಿರ್ಧಾರ ಕೈಗೊಂಡಿದ್ದಾರೆ. ನೂರಾರು ಭಕ್ತರಿಗೆ ಬಾಳೆ ಎಲೆಯಲ್ಲಿ ಪ್ರಸಾದ ಬಡಿಸಲಾಗುತ್ತಿದ್ದು, ಭಕ್ತರು ಸಹ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬಾಳೆ ಎಲೆಯಲ್ಲಿ ಊಟ/ ಆಹಾರ ಸೇವನೆ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಜೊತೆಗೆ ಎಲೆಯು ಭೂಮಿಯಲ್ಲಿ ಕೊಳೆತು ಗೊಬ್ಬರವಾಗುತ್ತದೆ, ಪ್ಲಾಸ್ಟಿಕ್ ನಂತೆ ನೂರಾರು ವರ್ಷ ಭೂಮಿಯನ್ನು ಹಾಳು ಮಾಡುವುದಿಲ್ಲ ಬೇಕಾದ ಬಾಳೆಎಲೆಯನ್ನ ಊರಿನವರ ಸಹಕಾರದಿಂದ ಸಂಗ್ರಹ ಮಾಡಲಾಗುತ್ತಿದೆ.ವಿಸರ್ಜನಾ ದಿನದ ಅನ್ನ ಸಂತರ್ಪಣೆಗೆ ಸ್ಟೀಲ್ ತಟ್ಟೆಯನ್ನ ಕೊಪ್ಪ ಗಾಯತ್ರಿ ಸಹಕಾರ ಸಂಘದ ಪ್ಲೇಟ್ ಬ್ಯಾಂಕ್ ನಿಂದ ತರಲಾಗುತ್ತದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಈ ಪರಿಸರ ಸ್ನೇಹಿ ಕಾರ್ಯಕ್ರಮವು ಇನ್ನೂ ನಾಲ್ಕು ದಿನಗಳ ಕಾಲ ಇದೇ ರೀತಿ ನಡೆಯಲಿದೆ. ಸಿಗದಾಳ್ ಗ್ರಾಮದ ಈ ಕಾರ್ಯಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಂತಹ ಕಾರ್ಯಗಳು ಎಲ್ಲಾ ದೇವಸ್ಥಾನಗಳಿಗೂ, ಉತ್ಸವಗಳಿಗೂ ಮಾದರಿಯಾಗಲಿ.
- ಅಶೋಕ. ಸಿಗದಾಳ್
