ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಂಟ್ರಾ ಕಂಪನಿಯ ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಸೂಕ್ತ ಸರ್ವಿಸ್, ರಿಪೇರಿ ಹಾಗೂ ಬಿಡಿಭಾಗಗಳು ಸಿಗದೆ ತೀವ್ರ ಸಂಕಷ್ಟಕ್ಕೊಳಗಾಗಿರುವ ಆಟೋ ಚಾಲಕರು ಮತ್ತು ಮಾಲಕರು ಮಂಗಳೂರಿನ ಜೆಪ್ಪಿನಮೊಗರಿನಲ್ಲಿರುವ ಸರ್ವಿಸ್ ಸೆಂಟರ್ ಮುಂಭಾಗ ಬುಧವಾರ (ಸೆ.9) ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 750ಕ್ಕೂ ಹೆಚ್ಚು ಮೊಂಟ್ರಾ ಇ-ಆಟೋರಿಕ್ಷಾಗಳು ರಸ್ತೆಯಲ್ಲಿದ್ದು, ನೂರಾರು ಕುಟುಂಬಗಳು ದಿನನಿತ್ಯದ ಬಾಡಿಗೆಯನ್ನೇ ನಂಬಿ ಜೀವನ ನಡೆಸುತ್ತಿವೆ. ಆದರೆ ಇಡೀ ಜಿಲ್ಲೆಗೆ ಮಂಗಳೂರಿನ ಜೆಪ್ಪಿನಮೊಗರಿನಲ್ಲಿರುವ 'ತನಿಯಾ ಮೋಟಾರ್ಸ್' ಒಂದೇ ಅಧಿಕೃತ ಸರ್ವಿಸ್ ಸೆಂಟರ್ ಆಗಿದೆ. ಇಲ್ಲಿ ಸರಿಯಾಗಿ ಸರ್ವಿಸ್ ಹಾಗೂ ರಿಪೇರಿ ಮಾಡಲು ಅಗತ್ಯ ವ್ಯವಸ್ಥೆಗಳಿಲ್ಲದೆ ಆಟೋ ಚಾಲಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಸರ್ವಿಸ್ ಸೆಂಟರ್ನಲ್ಲಿ ಅಗತ್ಯ ಬಿಡಿಭಾಗಗಳು ಲಭ್ಯವಿರುವುದಿಲ್ಲ ಹಾಗೂ ಅನುಭವಿ ಮೆಕ್ಯಾನಿಕ್ಗಳ ಕೊರತೆಯೂ ಇದೆ. ಆಟೋರಿಕ್ಷಾಗಳನ್ನು ರಿಪೇರಿಗೆ ನೀಡಿದರೆ ದಿನಗಟ್ಟಲೆ ಮತ್ತು ಬಿಡಿಭಾಗಗಳಿಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿನಂಪ್ರತಿ ಆಟೋ ಓಡಿಸಿ ಸಂಸಾರ ನಡೆಸುವ ಬಡ ಆಟೋ ಚಾಲಕರು ಬಾಡಿಗೆಯಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಸಮಸ್ಯೆಯನ್ನು ಖಂಡಿಸಿ ಹಾಗೂ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಆಟೋ ಚಾಲಕರು ಮತ್ತು ಮಾಲಕರು ಇಂದು ಬೆಳಿಗ್ಗೆ 10 ಗಂಟೆಗೆ ಜೆಪ್ಪಿನಮೊಗರಿನ ತನಿಯಾ ಮೋಟಾರ್ಸ್ ಮೊಂಟ್ರಾ ಸರ್ವಿಸ್ ಸೆಂಟರ್ ಮುಂಭಾಗ ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತನಿಖೆ ನಡೆಸಬೇಕು, ಸಮಯಕ್ಕೆ ಸರಿಯಾಗಿ ಸರ್ವಿಸ್ ಹಾಗೂ ಬಿಡಿಭಾಗಗಳನ್ನು ಒದಗಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕು ಮತ್ತು ರಿಪೇರಿ ವಿಳಂಬದಿಂದಾಗಿ ಕೆಲಸವಿಲ್ಲದೆ ಆದಾಯ ಕಳೆದುಕೊಂಡ ಅವಧಿಗೆ ಸೂಕ್ತ ನಷ್ಟಪರಿಹಾರ ಕೊಡಿಸಬೇಕೆಂದು ಚಾಲಕರು ಆಗ್ರಹಿಸಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸಾರಿಗೆ ಅಧಿಕಾರಿಗಳು ಹಾಗೂ ಮಂಗಳೂರು ನಗರದ ನಾಗೋರಿ ಪೊಲೀಸ್ ಠಾಣೆಗೆ ಚಾಲಕರಾದ ಮುಹಮ್ಮದ್ ಫಹಾದ್, ಇಬ್ರಾಹಿಂ ಖಲೀಲ್, ಶಂಸು ಹಾಗೂ ಪ್ರಸಾದ್ ಮನವಿ ಸಲ್ಲಿಸಿದ್ದು, ಪ್ರತಿಭಟನಾ ಸ್ಥಳಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವಂತೆ ಕೋರಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

