ಸಿರಿಬಾಗಿಲು ಪ್ರತಿಷ್ಠಾನದಿಂದ ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ; ಚಿಂತನ-ಮಂಥನ
ಸುರತ್ಕಲ್: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಇಂದು (ಆಗಸ್ಟ್ 9) ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ....! ಎಂಬ ಶೀರ್ಷಿಕೆಯ ಸರಣಿ ಕಾರ್ಯಕ್ರಮ- ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ, ವಿಶೇಷ ಚಿಂತನ- ಮಂಥನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಟಾಟಿಸಿ ಸುರತ್ಕಲ್ ಇಡ್ಯಾ ದೇವಸ್ಥಾನದ ಶ್ರೀಮತಿ ಶಕುಂತಳಾ ರಮಾನಂದ ಭಟ್ರವರು "ಯಕ್ಷಗಾನ ಮಹಿಳಾ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ. ಸಿರಿಬಾಗಿಲು ಪ್ರತಿಷ್ಠಾನದ ಇಂತಹ ಗೋಷ್ಠಿಯಿಂದ ಮತ್ತಷ್ಟು ತೊಡಗಿಸಿಕೊಳ್ಳುವಂತಾಗಲು ಸ್ಪೂರ್ತಿ ದೊರಕಿದಂತಾಯಿತು" ಎಂದರು. ಸಮಾವೇಶದ ಅಧ್ಯಕ್ಷತೆಯನ್ನು ಕಾಸರಗೋಡಿನ ಹಿರಿಯ ಕಲಾವಿದೆ ವಿಶ್ರಾಂತ ಪ್ರಾಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ಯವರು "ಇಂದು ಮಹಿಳೆಯರು ಸಮಾಜದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ಕ್ಕೊಳ್ಳುವುದರ ಮೂಲಕ ಮುಖ್ಯ ವಾಹಿನಿಯಲ್ಲಿ ಕಾಣಿಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಇಂತಹ ವಿಚಾರ ಸಂಕಿರಣದಿಂದ ನಡೆದಾಗ ಆತ್ಮಸ್ಥೈರ್ಯ ಹೆಚ್ಚುತ್ತದೆ" ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ಶ್ರೀಮತಿ ನಿರ್ಮಲ ಹೆಗಡೆ ಶಿರಸಿ ಭಾಗವಹಿಸಿದರೆ ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ಕೈಯಾರು ಉಪಸ್ಥಿತರಿದ್ದರು.
ತದನಂತರ ವಿಶೇಷ ಚಿಂತನ ಮಂಥನ ಕಾರ್ಯಕ್ರಮದಲ್ಲಿ- ಮಹಿಳೆಯರು ಮತ್ತು ಯಕ್ಷಗಾನದ ಭವಿಷ್ಯ; ಯಕ್ಷಗಾನದಲ್ಲಿ ಮಹಿಳೆಯರು: ಅವಕಾಶ, ಸವಾಲು ಮತ್ತು ನಾಯಕತ್ವ; ಮಹಿಳಾ ಶಕ್ತಿ ಮತ್ತು ಯಕ್ಷಗಾನದ ಮುಂದಿನ ಪೀಳಿಗೆ; ಯಕ್ಷಗಾನದ ಬೆಳವಣಿಗೆಯಲ್ಲಿ ಮಹಿಳೆಯರ ಪೂರಕ ಪಾತ್ರ; ಭವಿಷ್ಯದ ಯಕ್ಷಗಾನ: ಮಹಿಳೆಯರ ದೃಷ್ಟಿ ಮತ್ತು ದಿಕ್ಕು; ಮುಂತಾದ ವಿಷಯಗಳಲ್ಲಿ ಶ್ರೀಮತಿ ಜಯಂತಿ ಎಸ್. ಹೊಳ್ಳ ಕೃಷ್ಣಾಪುರ, ಶ್ರೀಮತಿ ಲಲಿತಾ ಭಟ್ ಕುಳಾಯಿ, ಶ್ರೀಮತಿ ನಿರ್ಮಲ ಹೆಗಡೆ ಶಿರಸಿ, ಶ್ರೀಮತಿ ಪದ್ಮ ಆಚಾರ್ ಪುತ್ತೂರು, ಶ್ರೀಮತಿ ವೃಂದಾ ಕೊನ್ನಾರ್ ಮುಂತಾದವರು ವಿಷಯ ಮಂಡಿಸಿದರು. ಡಾ. ಆರತಿ ಪಟ್ರಮೆ ತುಮಕೂರು ಸಂವಾದ ದ ಸಮಗ್ರ ಅವಲೋಕನ ನಡೆಸಿದರು.
ಉಪಾನ್ಯಾಸಕಿ ಶ್ರೀಮತಿ ಸಾಯಿಸುಮಾ ನಾವಡ ನಿರೂಪಿಸಿದರೆ, ಶ್ರೀಮತಿ ಸುಮಿತ್ರಾ ಆರ್. ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಯವ ಭಾಗವತೆ ಕು. ಹೇಮಸ್ವಾತಿ ಕುರಿಯಾಜೆ ಪ್ರಾರ್ಥಿಸಿದರು.
ಮಧ್ಯಾಹ್ನ ನಂತರ ನಡೆದ ಸಮರೋಪ ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಮಹಿಳಾ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಸುರತ್ಕಲ್ ಹಾಗೂ ಶ್ರೀಮತಿ ಕೃತಿ ಪುರಪ್ಪೆಮನೆ ಸಾಗರ ಭಾಗವಹಿಸಿ ಮಾತನಾಡಿದರು. ನೂರಕ್ಕೂ ಹೆಚ್ಚಿನ ಮಹಿಳಾ ಕಲಾವಿದರು ಈ ಕಾರ್ಯಕ್ರಮದ ಸಂವಾದ ದಲ್ಲಿ ಭಾಗವಹಿಸಿದರು. ಕೊನೆಗೆ ಜಯಲಕ್ಷ್ಮಿ ಆರ್ ಹೊಳ್ಳ ಧನ್ಯವಾದವಿತ್ತರು.
ಯಕ್ಷಗಾನದ ಭವಿಷ್ಯ ಮಹಿಳೆಯರಿಗೆ ಅವಕಾಶ ನೀಡುವುದರಲ್ಲಿ ಇಲ್ಲ: ಮಹಿಳೆಯರ ನಾಯಕತ್ವವನ್ನು ಸ್ವಾಭಾವಿಕವಾಗಿ ಸ್ವೀಕರಿಸುವುದರಲ್ಲಿ ಇದೆ. ಮಹಿಳೆಯರ ನಾಯಕತ್ವ ಬಲಗೊಂಡಷ್ಟೂ ಯಕ್ಷಗಾನದ ಬೇರುಗಳು ಇನ್ನಷ್ಟು ಆಳವಾಗಿ, ಅದರ ವ್ಯಾಪ್ತಿ ಇನ್ನಷ್ಟು ವಿಶಾಲವಾಗಿ ಬೆಳೆಯುತ್ತದೆ. ಸಿರಿಬಾಗಿಲು ಪ್ರತಿಷ್ಠಾನದ ಮಹಿಳಾ ಸಮಾವೇಶದ ಗೋಷ್ಠಿಯ ಪ್ರದಾನ ಸಂದೇಶವಾಗಿ ಮೂಡಿಬಂತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

