ಸುರತ್ಕಲ್: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯ ರಕ್ಷಕ-ಶಿಕ್ಷಕ ಸಂಘದ 32ನೇ ವಾರ್ಷಿಕ ಮಹಾಸಭೆಯು ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಸಂಸ್ಕಾರಯುತ ಶಿಕ್ಷಣಕ್ಕೆ ಕರೆ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷರಾದ ಶ್ರೀ ಜಯಚಂದ್ರ ಹತ್ವಾರ್ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಹಾಗೂ ಅವರು ಸಮಾಜಮುಖಿಯಾಗಿ ಬದುಕುವುದನ್ನು ಕಲಿಸಬೇಕು ಎಂದು ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಲಹೆ ನೀಡಿದರು.
HPV ಲಸಿಕೆ ಕುರಿತು ಆರೋಗ್ಯ ಜಾಗೃತಿ:
ಕಾರ್ಯಕ್ರಮದಲ್ಲಿ ಕುಳಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅಪರ್ಣ ಅವರು 14 ಮತ್ತು 15 ರ ವಯೋಮಾನದ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ವಿರುದ್ಧ ನೀಡಲಾಗುವ HPV ಲಸಿಕೆಯ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಸರಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಹೆಚ್ಚಿನ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದರು.
ನಿವೃತ್ತ ಶಿಕ್ಷಕರಿಗೆ ಸನ್ಮಾನ:
ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಚಂದ್ರ ಕೆ., ಶ್ರೀ ದೇವಪ್ಪ ವಸಂತ ಕುಮಾರ್ ನಾಯ್ಕ್ ಹಾಗೂ ಸಹಶಿಕ್ಷಕಿ ಶ್ರೀಮತಿ ಸುಜಾತಾ ಕುಳಾಯಿ ಇವರುಗಳ ಸೇವೆಯನ್ನು ಸ್ಮರಿಸುತ್ತಾ, ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಲಾಯಿತು.
ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ:
2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಶ್ರೀ ರಘುರಾಮ್ ರಾವ್ ಅವರ ವತಿಯಿಂದ ಕನ್ನಡ ಮಾಧ್ಯಮದಲ್ಲಿ ಗರಿಷ್ಠ ಅಂಕ ಗಳಿಸಿದ 5 ವಿದ್ಯಾರ್ಥಿಗಳಿಗೆ ಗೌರವ ಧನ ವಿತರಿಸಲಾಯಿತು. ಹಾಗೆಯೇ ದಾನಿಗಳಾದ ಮುಂಬೈನ ಶ್ರೀಮತಿ ದಿವ್ಯಗೌರಿ ಮುಖರ್ಜಿ ಮತ್ತು ಉಡುಪಿಯ ಶ್ರೀ ಪ್ರದೀಪ್ ಕುಮಾರ್ ಅವರು ನೀಡಿದ ಆರ್ಥಿಕ ನೆರವಿನಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಉಚಿತ ಸಮವಸ್ತ್ರ ವಿತರಣೆ:
ಉಚಿತ ಸಮವಸ್ತ್ರ ವಿತರಣೆಗಾಗಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಬಾಲಚಂದ್ರ ಕೆ. ಅವರು ಸ್ಥಾಪಿಸಿದ 1,50,000 ರೂಪಾಯಿಗಳ ಶಾಶ್ವತ ದತ್ತಿನಿಧಿ ಬಡ್ಡಿ ಮೊತ್ತ, ಪ್ರಸ್ತುತ ಸಹಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮಿ ಅವರ ಸುಪುತ್ರ ಶ್ರೀ ಆಶಿಕ್ ಕೃಷ್ಣ ಎಡಕ್ಕಾನ ಮತ್ತು ನಿವೃತ್ತ ಶಿಕ್ಷಕಿ ಕುಮಾರಿ ರೇಷ್ಮಾ ಅವರ ಸೊಸೆ ಶ್ರೀಮತಿ ಅನುರಾಧ ನಿತಿನ್ ನೀಡಿದ ಸಹಾಯಧನದಿಂದ ಶಾಲೆಯ ಅರ್ಹ 33 ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ:
ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶ್ರೀಮತಿ ಸುಜಾತಾ ಬಿ. ಮಂಡಿಸಿದರು. ಬಳಿಕ 2026-27ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಶ್ರೀ ಹರಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ರೇಣುಕಾ ಹಾಗೂ ಇತರ ಪದಾಧಿಕಾರಿಗಳನ್ನು ನೇಮಿಸಲಾಯಿತು. ನೂತನ ಪದಾಧಿಕಾರಿಗಳನ್ನು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ದಿವಸ್ಪತಿ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದರು.
ವೇದಿಕೆಯಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಜೊತೆ ಕೋಶಾಧಿಕಾರಿ ಟಿ. ಎನ್. ರಮೇಶ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶ್ರೀಲಕ್ಷ್ಮಿ, ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಶಾಲಾ ಸಂಚಾಲಕ ಶ್ರೀ ಸುಧಾಕರರಾವ್ ಪೇಜಾವರ್ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಶ್ರೀ ದಿವಸ್ಪತಿ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಉಮಾವತಿ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಶ್ರೀಮತಿ ವಿದ್ಯಾಲಕ್ಷ್ಮಿ ಕೆ. ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು, ಪೋಷಕರು ಮತ್ತು ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

