ಉಡುಪಿ: ಪರ್ಯಾಯ ಶ್ರೀ ಶೀರೂರು ಮಠದ ಆಡಳಿತಾವಧಿಯಲ್ಲಿ, ಶ್ರೀ ಕೃಷ್ಣ ಮಠದ ಸನ್ನಿಧಾನದಲ್ಲಿ ಆಷಾಢ ಮಾಸದ ಕೃಷ್ಣ ಪಕ್ಷದ ಪಂಚಮಿಯಂದು (ಆಗಸ್ಟ್ 3, 2026) ಶ್ರೀ ಮಜ್ಜಯತೀರ್ಥರ ಆರಾಧನಾ ಮಹೋತ್ಸವವನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವೈಭವದಿಂದ ಆಚರಿಸಲಾಯಿತು.
ದಿನದ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ಮಠದ ಸನ್ನಿಧಾನದಲ್ಲಿ ವಿದ್ವಾಂಸರಿಂದ ಶ್ರೀ ಜಯತೀರ್ಥರ ಮಹೋನ್ನತ ಕೃತಿಯಾದ ‘ಶ್ರೀಮನ್ ನ್ಯಾಯ ಸುಧಾ’ ಗ್ರಂಥದ ಸಸ್ವರ ಪಾರಾಯಣ ಜರುಗಿತು.
ಸಂಜೆ 5:00 ಗಂಟೆಗೆ ಪರ್ಯಾಯ ಶ್ರೀ ಶೀರೂರು ಮಠಾಧೀಶರ ನೇತೃತ್ವದಲ್ಲಿ ಶ್ರೀಮದ್ ಜಯತೀರ್ಥರ ಪ್ರತಿಮೆ ಹಾಗೂ ಗ್ರಂಥಗಳ ಭವ್ಯ ಮೆರವಣಿಗೆಯು ಉಡುಪಿಯ ರಥಬೀದಿಯಲ್ಲಿ ಅತ್ಯಂತ ಶೋಭಾಯಮಾನವಾಗಿ ನಡೆಯಿತು. ರಥಬೀದಿಯಲ್ಲಿದ್ದ ನೂರಾರು ಭಕ್ತಾದಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಧನ್ಯತೆ ಮೆರಿದರು.
ಸಾಂಸ್ಕೃತಿಕ ಹಾಗೂ ವಿದ್ವತ್ ಕಾರ್ಯಕ್ರಮಗಳ ಭಾಗವಾಗಿ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದಂಗಳು ಆಶೀರ್ವಚನ ನೀಡಿ, ಶ್ರೀ ಜಯತೀರ್ಥರ ತತ್ತ್ವಚಿಂತನೆ ಹಾಗೂ ದ್ವೈತ ಸಿದ್ಧಾಂತಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು.
ತದನಂತರ, ವಿದ್ವಾಂಸರಾದ ಡಾ. ಪ್ರತೋಷ ಆಚಾರ್ಯ ಹಾಗೂ ಡಾ. ಆನಂದತೀರ್ಥ ಸಗ್ರಿ ಅವರಿಂದ ‘ಜಯತೀರ್ಥರ ಸಾರ್ವಭೌಮ ವ್ಯಕ್ತಿತ್ವ’ ಎಂಬ ವಿಷಯದ ಕುರಿತು ವೈಚಾರಿಕ ಸಂವಾದ ಕಾರ್ಯಕ್ರಮ ನಡೆಯಿತು. ಜಯತೀರ್ಥರ ಜೀವನ, ಸಾಹಿತ್ಯ ಹಾಗೂ ಅವರ ವೈಚಾರಿಕ ಕೊಡುಗೆಗಳ ಕುರಿತು ಗಂಭೀರ ಚರ್ಚೆ ಜರುಗಿತು.
ಕಾರ್ಯಕ್ರಮದ ಅಂತ್ಯದಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಧುರೀಣರು ಹಾಗೂ ವಿದ್ವಾಂಸರನ್ನು ಪರ್ಯಾಯ ಮಠದ ವತಿಯಿಂದ ಸಾಂಪ್ರದಾಯಿಕವಾಗಿ ಗೌರವಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಠದ ಸಿಬ್ಬಂದಿ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

