ಬಾನಿನಲ್ಲಿ ಕಪ್ಪು ಮೋಡಗಳು ಕವಿದು ತಂಪಾದ ಗಾಳಿ ಬೀಸತೊಡಗಿದಾಗ ಮಳೆಗಾಲದ ಆಗಮನದ ಸಿಹಿ ಸುದ್ದಿ ಎಲ್ಲೆಡೆ ಹರಡುತ್ತದೆ. ಮಣ್ಣಿನ ಮೇಲೆ ಬೀಳುವ ಮಳೆಯ ಹನಿಗಳು ಪ್ರಕೃತಿಯ ಮಡಿಲಿಗೆ ಹೊಸ ಜೀವ ತುಂಬುತ್ತವೆ. ಹಸಿರಿನ ಹೊದಿಕೆ ಹೊದ್ದ ಭೂಮಿ ಜುಳು ಜುಳು ಹರಿಯುವ ತೊರೆಗಳು ಮತ್ತು ಮಳೆಯ ಸದ್ದು ಮನಸ್ಸಿಗೆ ತಂಪು ನೀಡುತ್ತದೆ. ಈ ಮಳೆಯ ಹನಿಗಳು ಭೂಮಿಯನ್ನು ತಂಪಾಗಿಸುವುದಷ್ಟೇ ಅಲ್ಲ ವಿದ್ಯಾರ್ಥಿಗಳ ಮನಸ್ಸಿನಲ್ಲೂ ಸಂತೋಷದ ಸಾವಿರಾರು ಹನಿಗಳನ್ನು ಮೂಡಿಸುತ್ತದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರಕೃತಿಯ ರೂಪವೇ ಬದಲಾದ ಹಾಗೆ ವಿದ್ಯಾರ್ಥಿಗಳ ಮನಸ್ಸು ಚಂಚಲಿಸುತ್ತದೆ. ಮೋಡಗಳು ಕವಿಯ ತೊಡಗಿದಾಗ ಮಳೆಯ ಹನಿಗಳು ಕಿಟಕಿಯ ಗಾಜಿನ ಮೇಲೆ ಪಟಪಟನೆ ಬೀಳತೊಡಗಿದಾಗಈ ಎಲ್ಲಾ ದೃಶ್ಯಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಶೇಷವಾದ ಸಂತೋಷ ವನ್ನು ಮೂಡಿಸುತ್ತದೆ. ಇತ್ತ ಶಿಕ್ಷಕರು ಪಾಠ ಮಾಡುವ ಸಂದರ್ಭದಲ್ಲಿ ಮಳೆಯ ಹನಿಗಳು ತನ್ನತ್ತ ವಿದ್ಯಾರ್ಥಿಗಳನ್ನು ತಿಳಿಯ ತೊಡಗುತ್ತದೆ. ಸಂಪೂರ್ಣ ಪಾಠದಲ್ಲಿ ತೊಡಗಿಕೊಂಡಿದ್ದ ಮಕ್ಕಳು ಮಳೆಯ ಕರೆಗೆ ಮನಸೋತು ಕುಳಿತಿರುತ್ತಾರೆ.
ಮಳೆಗಾಲವು ವಿದ್ಯಾರ್ಥಿಗಳ ಜೀವನದಲ್ಲಿ ಕೇವಲ ಒಂದು ಋತು ವಲ್ಲ ಅದು ಅನೇಕ ಮಧುರ ನೆನಪುಗಳನ್ನು ನೀಡುವ ಸುಂದರಕಾಲ ಬೆಳಿಗ್ಗೆ ಕಾಲೇಜಿಗೆ ಹೊರಡುವ ಸಮಯದಲ್ಲಿ ಮಳೆ ಸುರಿಯುತ್ತಿದ್ದರೆ. ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಉತ್ಸಾಹ ಮೂಡುತ್ತದೆ. ಕೈಯಲ್ಲಿ ಛತ್ರಿ ಹಿಡಿದು ಮಳೆಯ ಹನಿಗಳ ನಡುವೆ ಸ್ನೇಹಿತರೊಂದಿಗೆ ನಡೆಯುತ್ತಾ ಹೋಗುವುದು ಒಂದು ವಿಶೇಷ ಅನುಭವ. ಈ ಕ್ಷಣವನ್ನು ಕಳೆದು ಕೊಳ್ಳುತ್ತಾ ತರಗತಿಗೆ ತಡವಾಗಿ ಹೋದಾಗ ಶಿಕ್ಷಕರು ಕೇಳುವ ಪ್ರಶ್ನೆಗೆ ಗಲಿಬಿಲಿ ಗೊಂಡು ತರಗತಿ ಸೇರಿಕೊಳ್ಳುತ್ತಿದ್ದೆವು. ನೆನೆದ ಬಟ್ಟೆ, ಒದ್ದೆಯಾದ ಪುಸ್ತಕ ಗಳು ಮತ್ತು ಮಳೆಯಲ್ಲಿನ ಸಣ್ಣ-ಪುಟ್ಟ ತೊಂದರೆಗಳು ಮಧುರ ನೆನಪುಗಳಾಗಿ ಉಳಿಯುತ್ತವೆ.
ಮಳೆ ನಿಂತ ನಂತರ ಕಾಲೇಜಿನ ಆವರಣದ ಸೌಂದರ್ಯವೇ ಬದಲಾಗುತ್ತದೆ. ಎಲೆಗಳ ಮೇಲೆ ಮುತ್ತಿನಂತೆ ಹೊಳೆಯುವ ನೀರಿನ ಹನಿಗಳು ಹಸಿರು ಹುಲ್ಲು ಮತ್ತು ತಂಪಾದ ಗಾಳಿ ವಿದ್ಯಾರ್ಥಿಗಳ ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಮಳೆ ಬಂದಾಗ ಗೆಳೆಯರ ಜೊತೆಗೆ ಛತ್ರಿ ಇದ್ದರೆ ತನ್ನ ಬಳಿ ಛತ್ರಿ ಇಲ್ಲ ಎಂದು ಸುಳ್ಳು ಹೇಳಿ ಅವರ ಜೊತೆ ನಡೆದ ಕ್ಷಣಗಳು ಅತ್ಯಂತ ಮೌಲ್ಯಯುತವಾಗಿದೆ. ಒಟ್ಟಿನಲ್ಲಿ ಮಳೆಗಾಲವು ವಿದ್ಯಾರ್ಥಿಗಳ ಬದುಕಿನಲ್ಲಿ ಪುಸ್ತಕಗಳ ನಡುವಿನ ಒಂದು ಸುಂದರ ಅಧ್ಯಯದಂತೆ ಮಳೆಯ ಆ ದಿನಗಳ ಸಣ್ಣ- ಸಣ್ಣ ಸಂತೋಷಗಳು ವಿದ್ಯಾರ್ಥಿ ಜೀವನದ ಅತ್ಯಂತ ಮಧುರ ನೆನಪುಗಳಾಗಿ ಸದಾ ಉಳಿಯುತ್ತದೆ.
- ದೀಪಿಕಾ ದೋಳ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

