ತೋಟಗಾರಿಕಾ ಬೆಳೆಗಾರರ ರಕ್ಷಣೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಚೌಕಟ್ಟು ಮರುಪರಿಶೀಲಿಸಿ: ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹ

Upayuktha
0


ನವದೆಹಲಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳವಾರ ಲೋಕಸಭೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ತೋಟಗಾರಿಕಾ ರೈತರ ಜ್ವಲಂತ ಸಮಸ್ಯೆಯನ್ನು ಪ್ರಸ್ತಾಪಿಸಿದ್ದು, ಅಡಿಕೆ, ತೆಂಗು, ಕೋಕೋ ಮತ್ತು ಮಸಾಲೆ ಪದಾರ್ಥಗಳಂತಹ ಬಹುವಾರ್ಷಿಕ ತೋಟಗಾರಿಕಾ ಬೆಳೆಗಳಿಗೆ 'ಪುನಾರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ' (RWBCIS) ಅನ್ನು ಸಮಗ್ರವಾಗಿ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಲೋಕಸಭೆಯ ನಿಯಮ 377 ರ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಋತುಮಾನಕ್ಕೆ ತಕ್ಕಂತೆ ಬೆಳೆಯುವ ಸಾಮಾನ್ಯ ಹೊಲದ ಬೆಳೆಗಳಿಗೂ ಮತ್ತು ದೀರ್ಘಾವಧಿಯ ತೋಟಗಾರಿಕಾ ಬೆಳೆಗಳಿಗೂ ಹವಾಮಾನ ಅಪಾಯದ ಸ್ವರೂಪದಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ಬೆಟ್ಟು ಮಾಡಿದರು.


ಸುದೀರ್ಘ ಮಳೆ, ಹೆಚ್ಚಿನ ಆರ್ದ್ರತೆ (Humidity), ರೋಗಬಾಧೆಗಳು, ಸಮರ್ಪಕ ನೀರು ಬಸಿಯದ ಸ್ಥಿತಿ ಹಾಗೂ ಸ್ಥಳೀಯ ಸೂಕ್ಷ್ಮ ಹವಾಮಾನ ವ್ಯತ್ಯಾಸಗಳಿಂದಾಗಿ ತೋಟಗಾರಿಕಾ ಬೆಳೆಗಳಿಗೆ ನಿರಂತರ ಮತ್ತು ಹಂತ-ಹಂತವಾಗಿ ಅಪಾರ ಹಾನಿ ಉಂಟಾಗುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಹತ್ತಿರದ ಹವಾಮಾನ ಕೇಂದ್ರದಲ್ಲಿ ನಿರ್ದಿಷ್ಟ ಮಿತಿಯ ಹವಾಮಾನ ವ್ಯತ್ಯಾಸ ದಾಖಲಾಗದಿದ್ದರೂ ಸಹ ರೈತರ ತೋಟಗಳಲ್ಲಿ ಬೆಳೆ ನಾಶವಾಗಿ ಯೋಜನೆಯಿಂದ ಪರಿಹಾರ ಸಿಗದಿರುವ ಲೋಪವನ್ನು ಅವರು ಸರ್ಕಾರದ ಗಮನಕ್ಕೆ ತಂದರು.


ಪ್ರಮುಖ ಬೇಡಿಕೆಗಳು ಮತ್ತು ಸಮಗ್ರ ಪರಿಶೀಲನೆಯ ಅಂಶಗಳು:

ವಿಜ್ಞಾನ ಆಧಾರಿತ ಮರುಪರಿಶೀಲನೆ: ತೋಟಗಾರಿಕಾ ಬೆಳೆ ವಲಯಗಳ ನಿರ್ದಿಷ್ಟ ಅಪಾಯದ ಸ್ವರೂಪವನ್ನು ಪ್ರತಿಬಿಂಬಿಸುವಂತೆ ವಿಮಾ ಉತ್ಪನ್ನಗಳ ನೋಟಿಫೈಡ್ ಯೂನಿಟ್‌ಗಳು, ಹವಾಮಾನ ಕೇಂದ್ರಗಳು ಹಾಗೂ ಪಾಲಿಸಿ ಷರತ್ತುಗಳನ್ನು ಸಿದ್ಧಪಡಿಸಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಜಂಟಿ 'ಆಕ್ಚುಯರಿಯಲ್ ಮತ್ತು ಆಗ್ರೋನಾಮಿಕ್' (ಗಣಿತೀಯ ಮತ್ತು ಕೃಷಿ ವಿಜ್ಞಾನ) ಪರಾಮರ್ಶೆ ನಡೆಸಬೇಕು.


ಹವಾಮಾನ ಕೇಂದ್ರಗಳ ಸಾಂದ್ರತೆ: ಹವಾಮಾನ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು, ಅವುಗಳ ಸ್ಥಾಪನೆಯ ಸ್ಥಳ, ಮಳೆ ಮತ್ತು ಆರ್ದ್ರತೆಯ ಟ್ರಿಗ್ಗರ್‌ಗಳು, ಪ್ರತಿಕೂಲ ಹವಾಮಾನದ ಅವಧಿ, ಬೆಳೆಯ ಹಂತಗಳ ಸೂಕ್ಷ್ಮತೆ ಹಾಗೂ ವಿಮಾ ಪರಿಹಾರ ವಿತರಣೆಯ ಸಮಯಾವಧಿಯನ್ನು ಸರಿಯಾಗಿ ನಿಗದಿಪಡಿಸುವುದು.


ಸ್ಟೇಕ್‌ಹೋಲ್ಡರ್‌ಗಳ ಭಾಗವಹಿಸುವಿಕೆ: ಈ ಮರುಪರಿಶೀಲನಾ ಪ್ರಕ್ರಿಯೆಯಲ್ಲಿ ಐಸಿಎಆರ್ (ICAR) ಸಂಸ್ಥೆಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ವಿಮಾ ಕಂಪನಿಗಳು, ಕರ್ನಾಟಕ ಸರ್ಕಾರ ಹಾಗೂ ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆಗಳನ್ನು ಕಡ್ಡಾಯವಾಗಿ ತೊಡಗಿಸಿಕೊಳ್ಳುವುದು.


ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಪೈಲಟ್ ಯೋಜನೆಗೆ ಪ್ರಸ್ತಾವನೆ:

ಪರಿಷ್ಕೃತ ವಿಮಾ ನಿಯಮಾವಳಿಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವ ಮೊದಲು, ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ 'ಪೈಲಟ್ ಯೋಜನೆ'ಯಾಗಿ ಅನುಷ್ಠಾನಗೊಳಿಸಬೇಕೆಂದು ಸಂಸದರು ಪ್ರಸ್ತಾಪಿಸಿದರು.


ರೈತರ ಜಮೀನಿನಲ್ಲಿ ಪ್ರತ್ಯಕ್ಷವಾಗಿ ಉಂಟಾದ ನೈಜ ನಷ್ಟ ಹಾಗೂ ಹವಾಮಾನ ಟ್ರಿಗ್ಗರ್ ಆಧಾರದ ಮೇಲೆ ವಿತರಿಸಲಾದ ವಿಮಾ ಪರಿಹಾರದ ಮೊತ್ತದ ನಡುವಿನ ತೌಲನಿಕ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದರೊಂದಿಗೆ ಸೂಕ್ತ ತೋಟಗಾರಿಕಾ ಬೆಳೆಗಳನ್ನು ಈ ಯೋಜನೆಯಡಿ ತರಲು ರಾಜ್ಯ ಸರ್ಕಾರಗಳಿಗೆ ಮಾದರಿ ಅಧಿಸೂಚನೆ ಟೆಂಪ್ಲೇಟ್‌ಗಳು ಮತ್ತು ನಿಖರ ಕಾಲಮಿತಿಯನ್ನು ನಿಗದಿಪಡಿಸಬೇಕೆಂದು ಅವರು ಒತ್ತಾಯಿಸಿದರು.


"ವಿಮಾ ಯೋಜನೆಯ ಮುಖ್ಯ ಉದ್ದೇಶ ಪ್ರತಿಯೊಂದು ಸಣ್ಣ ನಷ್ಟಕ್ಕೂ ಕೇವಲ ಪರಿಹಾರ ನೀಡುವುದಷ್ಟೇ ಅಲ್ಲ; ಬದಲಿಗೆ ವಿಮಾ ವ್ಯವಸ್ಥೆಯು ನಿರೀಕ್ಷಿತ ಅಪಾಯಗಳನ್ನು ನಿಖರವಾಗಿ ಅಳೆದು, ತೋಟಗಾರಿಕಾ ರೈತರಿಗೆ ಪಾರದರ್ಶಕ ಹಾಗೂ ಸಮಯೋಚಿತ ರಕ್ಷಣೆ ಒದಗಿಸುವುದಾಗಿದೆ."

— ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ


ತೋಟಗಾರಿಕಾ ಬೆಳೆ ವಿಮಾ ಚೌಕಟ್ಟನ್ನು ವೈಜ್ಞಾನಿಕ ಮತ್ತು ಸಾಕ್ಷ್ಯಾಧಾರಿತವಾಗಿ ಮರುಪರಿಶೀಲಿಸುವುದರಿಂದ ಅಪಾಯದ ಪ್ರಮಾಣ ಕಡಿಮೆಯಾಗಲಿದ್ದು, ಹವಾಮಾನ ಆಧಾರಿತ ವಿಮೆಯ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಇದು ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಹೆಚ್ಚು ವಿಶ್ವಾಸಾರ್ಹ ಹಾಗೂ ನಿಖರವಾದ ಆರ್ಥಿಕ ಸುಕ್ಷೇಮವನ್ನು ಒದಗಿಸಲಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಶ್ವಾಸ ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top