ತಮ್ಮ ಪ್ರವಚನದಲ್ಲಿ ಸಂಪತ್ತಿನ ಮಹತ್ವ ಮತ್ತು ಬಳಕೆಯ ಕುರಿತು ಬೆಳಕು ಚೆಲ್ಲಿದ ಶ್ರೀಗಳು, ಹಣವು ನಮ್ಮನ್ನು ಈ ಲೋಕದಲ್ಲಿ ಸ್ವಲ್ಪಕಾಲ ಮಾತ್ರ ರಕ್ಷಿಸಬಲ್ಲದು; ಆದರೆ ನಾವು ಮಾಡಿದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಪುಣ್ಯವು ನಮ್ಮನ್ನು ಸದಾ ಮತ್ತು ಶಾಶ್ವತವಾಗಿ ರಕ್ಷಿಸುತ್ತದೆ ಎಂದು ತಿಳಿಸಿದರು. ಆದ್ದರಿಂದ ಗಳಿಸಿದ ಹಣವನ್ನು ಕೇವಲ ನಮಗಾಗಿಯೇ ಸಂಗ್ರಹಿಸಿಡದೆ, ಅದರ ಒಂದು ಭಾಗವನ್ನು ದೇವತಾ ಸೇವೆ, ಧಾರ್ಮಿಕ ಕಾರ್ಯ, ದಾನ-ದಕ್ಷಿಣೆ, ಜ್ಞಾನಪ್ರಸಾರ ಹಾಗೂ ಬಡವರು ಮತ್ತು ಅಸಹಾಯಕರ ಸೇವೆಗೆ ವಿನಿಯೋಗಿಸಬೇಕು. ಹಣವನ್ನು ಇಂತಹ ಸತ್ಕಾರ್ಯಗಳಿಗೆ ಬಳಸಿದಾಗ ಅದು ಪುಣ್ಯವಾಗಿ ಪರಿವರ್ತನೆಯಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಜ್ಞಾನದಾನದ ಶ್ರೇಷ್ಠತೆಯನ್ನು ವಿವರಿಸಿದ ಅವರು, ಪುಸ್ತಕಗಳ ಪ್ರಕಟಣೆ ಮತ್ತು ವಿತರಣೆಯ ಮುಖ್ಯ ಉದ್ದೇಶ ಕೇವಲ ಹಣ ಸಂಪಾದನೆಯಾಗಿರದೆ, ಜನರಿಗೆ ಉತ್ತಮ ವಿಚಾರಗಳನ್ನು ತಲುಪಿಸುವುದಾಗಿದೆ ಎಂದರು. ಉತ್ತಮ ಪುಸ್ತಕಗಳನ್ನು ಓದುವುದು ಮತ್ತು ಇತರರಿಗೆ ಓದಲು ನೀಡುವುದರಿಂದ ಜ್ಞಾನ ಬೆಳೆಯುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇಂತಹ ಜ್ಞಾನಸೇವೆಯೂ ಒಂದು ಶ್ರೇಷ್ಠ ಪುಣ್ಯಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಕೇವಲ ಧನಸಂಗ್ರಹದಿಂದ ಮನಃಶಾಂತಿ ಸಿಗುವುದಿಲ್ಲ; ಬದಲಾಗಿ ಸಂಪತ್ತನ್ನು ಯೋಗ್ಯ ಕಾರ್ಯಗಳಿಗೆ ಬಳಸಿದಾಗ ಮಾತ್ರ ಆತ್ಮತೃಪ್ತಿ, ನೆಮ್ಮದಿ ಮತ್ತು ದೈವಾನುಗ್ರಹ ದೊರೆಯುತ್ತದೆ ಎಂದು ಪೂಜ್ಯ ಶ್ರೀಗಳು ನುಡಿದರು.
ಇದೇ ಸಂದರ್ಭದಲ್ಲಿ, ಭಕ್ತಜನರ ಅಪೇಕ್ಷೆಯಂತೆ ಪೂಜ್ಯ ಪುತ್ತಿಗೆ ಶ್ರೀಗಳು ತಮ್ಮ 53ನೇ ಚಾತುರ್ಮಾಸ್ಯ ವ್ರತವನ್ನು ನವಿ ಮುಂಬಯಿಯ ಶ್ರೀ ಪುತ್ತಿಗೆ ಶಾಖಾ ಮಠದಲ್ಲಿ ವಿಧಿಪೂರ್ವಕವಾಗಿ ಸ್ವೀಕರಿಸಿದರು. ಇದು ಈ ನೂತನ ಶಾಖಾ ಮಠದಲ್ಲಿ ನಡೆಯುತ್ತಿರುವ ಪ್ರಥಮ ಚಾತುರ್ಮಾಸ್ಯ ಮಹೋತ್ಸವವಾಗಿದೆ. ಈ ಭಾಗದ ಭಕ್ತರಿಗೆ ಚಾತುರ್ಮಾಸ್ಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪವಿತ್ರ ವ್ರತದ ಅವಧಿಯಲ್ಲಿ ನಿತ್ಯ ಪೂಜೆ, ಪಾಠ-ಪ್ರವಚನ, ಭಜನೆ ಹಾಗೂ ಅನ್ನದಾನ ಮುಂತಾದ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಗಳಿಂದ ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀಗಳು ಕರೆ ನೀಡಿದರು.
ಈ ಶುಭ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದು, ಶ್ರೀಗಳ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

