" ತುಳು ಸಂಸ್ಕೃತಿ ದಿನನಿತ್ಯದ ಬದುಕಾಗಲಿ: ಅರುಣ ಕುಲಾಲ್ "
ಮಂಗಳೂರು: "ಆಟಿ ಆಚರಣೆಯು ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೆ, ನಮ್ಮ ನಿತ್ಯದ ಬದುಕಿನಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿರಂತರ ಜವಾಬ್ದಾರಿಯಾಗಬೇಕು" ಎಂದು ಮಂಗಳೂರಿನ ಪ್ರೆಸ್ಟೀಜ್ ಪದವಿ-ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅರುಣ ಕುಲಾಲ್ ಕರೆ ನೀಡಿದರು.
ನಗರದ ಕಾವೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ (IQAC), ಯುವ ರೆಡ್ ಕ್ರಾಸ್, ರೇಂಜರ್ಸ್ ಹಾಗೂ ಸಾಂಸ್ಕೃತಿಕ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 'ಆಟಿಡೊಂಜಿ ದಿನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
"ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಸೌರಮಾನ ಕ್ಯಾಲೆಂಡರ್ನ ನಾಲ್ಕನೇ ತಿಂಗಳಾದ ಆಷಾಢ (ಆಟಿ) ಮಾಸವು ಕೇವಲ ಭಾರಿ ಮಳೆ ಮತ್ತು ಕೃಷಿ ಚಟುವಟಿಕೆಗಳ ವಿರಾಮದ ಸಮಯವಲ್ಲ; ಅದು ಪ್ರಕೃತಿ ಆರಾಧನೆಗೆ ಮೀಸಲಾದ ಪವಿತ್ರ ಅವಧಿ. ಆಟಿ ಅಮಾವಾಸ್ಯೆ, ಹಾಲೆ ಮರದ ತೊಗಟೆಯ ಕಷಾಯ (ಪಾಲೆ ಕಶಾಯ), ಆಟಿ ಕಳೆಂಜ ನೃತ್ಯ ಹಾಗೂ ವಿಶಿಷ್ಟ ಖಾದ್ಯಗಳು ಈ ಮಾಸದ ಅನನ್ಯತೆ. ಊರಿನ ಅನಿಷ್ಟಗಳನ್ನು ಹೋಗಲಾಡಿಸುವ ಜಾನಪದ ಕಲೆಯಾದ 'ಆಟಿ ಕಳೆಂಜ' ನಮ್ಮ ಸಂಸ್ಕೃತಿಯ ಜೀವಂತ ಸಂಕೇತ," ಎಂದು ಅವರು ಆಟಿ ಮಾಸದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೀತಾ ಎಂ.ಎಲ್. ಅವರು ಆಟಿ ಕಳಂಜದ ಪಾರಂಪರಿಕ ಶ್ರೇಷ್ಠತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಉದ್ಯೋಗ ಕೋಶದ ಅಧಿಕಾರಿ ಶ್ರೀಮತಿ ಮಮತಾ, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀ ಅಶ್ವಿನ್ ಮೆಂಡೋನ್ಸಾ ಹಾಗೂ ರೇಂಜರ್ ಲೀಡರ್ ಶ್ರೀಮತಿ ಪ್ರಮೀಳ ಕೆ. ಉಪಸ್ಥಿತರಿದ್ದರು.
ವಿಶೇಷ ಖಾದ್ಯಗಳ ಪ್ರದರ್ಶನ ಹಾಗೂ ಸ್ಪರ್ಧೆಗಳು
ಸಭಾ ಕಾರ್ಯಕ್ರಮದ ನಂತರ ಆಷಾಢ ಮಾಸದ ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳಲ್ಲಿ ಆಟಿ ತಿಂಗಳ ಆಚರಣೆ ಮತ್ತು ತುಳುನಾಡಿನ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಸಂತೋಷ್ ಸ್ವಾಗತಿಸಿದರು. ಐಕ್ಯುಎಸಿ ಸಹ ಸಂಯೋಜನಾಧಿಕಾರಿ ಶ್ರೀಮತಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರೆ, ಸಾಂಸ್ಕೃತಿಕ ಸಂಘದ ಸಂಯೋಜಕರಾದ ಶ್ರೀ ಕೃಷ್ಣಮೂರ್ತಿ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

