ಸುರತ್ಕಲ್: ಸಾರ್ವಜನಿಕ ಆರೋಗ್ಯ ಸುಧಾರಣೆಯಲ್ಲಿ ಸ್ವಚ್ಛತಾ ಅಭಿಯಾನ ಮಹತ್ತರ ಪಾತ್ರ ವಹಿಸುತ್ತಿದೆ. ಜನತೆಯಲ್ಲಿ ನೈರ್ಮಲ್ಯದ ಕುರಿತು ಸಕಾರಾತ್ಮಕ ಬದಲಾವಣೆ ತರಲು ವಿದ್ಯಾರ್ಥಿಗಳು ಹಾಗೂ ಯುವಜನರ ಪಾತ್ರ ಹಿರಿದಾಗಿದ್ದು, ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ವಚ್ಛ ರಾಷ್ಟ್ರದ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ಬೈಕಂಪಾಡಿಯ ಸರಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ ಪ್ರಾಂಶುಪಾಲ ಲಕ್ಷ್ಮೀನಾರಾಯಣ್ ಹೇಳಿದರು.
ಅವರು ನಾಗರಿಕ ಸಲಹಾ ಸಮಿತಿ ಸುರತ್ಕಲ್ ನೇತೃತ್ವದಲ್ಲಿ, ಎಂ.ಆರ್.ಪಿ.ಎಲ್ ಪ್ರಾಯೋಜಕತ್ವದೊಂದಿಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ 'ಸ್ವಚ್ಛ ಸುರತ್ಕಲ್ ಅಭಿಯಾನ- 2026'ರ ಅಂಗವಾಗಿ ಆಯೋಜಿಸಲಾಗಿದ್ದ ಒಂಬತ್ತನೇ ಸ್ವಚ್ಛತಾ ಶ್ರಮದಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೈಕಂಪಾಡಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಈ ಸ್ವಚ್ಛತಾ ಶ್ರಮದಾನದ ನೇತೃತ್ವವನ್ನು ಸರಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರವು ವಹಿಸಿತ್ತು. ಸಂಸ್ಥೆಯ ಘಟಕ ಮುಖ್ಯಸ್ಥ ಕುಮಾರಸ್ವಾಮಿ, ಪ್ರಾಧ್ಯಾಪಕರಾದ ತಿಮ್ಮರಾಜು, ಸೋಮೇಶ್, ವಿದ್ಯಾರ್ಥಿ ನಿಲಯದ ಪಾಲಕ ಕುಸುಮಾಕರ್, ಭದ್ರತಾ ಸಿಬ್ಬಂದಿ ಮೊಹಮ್ಮದ್ ಬಾವ ಹಾಗೂ ಹೊಸಬೆಟ್ಟು ನಾಗರಿಕ ಹಿತರಕ್ಷಣ ಸಮಿತಿಯ ಅಧ್ಯಕ್ಷ ಆನಂದ ಬಂಡಾರಿ, ರಮೇಶ್ ಶೆಟ್ಟಿ, ಪೂವಪ್ಪ ನಾಯ್ಕ್, ಅನಿಲ್ ರಾವ್, ಧನರಾಜ್ ಸನಿಲ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಗುಂಪುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ಉಪ ವಿಭಾಗ ಆರೋಗ್ಯ ಇಲಾಖೆ ಸಿಬ್ಬಂದಿಯ ಸಹಕಾರದೊಂದಿಗೆ ವರ್ಷಗಳಿಂದ ಸಂಗ್ರಹಗೊಂಡಿದ್ದ ಸುಮಾರು ಒಂದು ಲಾರಿಯಷ್ಟು ತ್ಯಾಜ್ಯವನ್ನು ತೆರವುಗೊಳಿಸಿದರು.
ಇದೇ ವೇಳೆ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ರಾಜ್ ಮೋಹನ್ ರಾವ್, ಟ್ರಸ್ಟಿಗಳಾದ ಶ್ರೀನಿವಾಸ್ ರಾವ್, ರಮೇಶ್ ಅಳಪೆ ಹಾಗೂ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸ್ಥಳೀಯ ಅಂಗಡಿ ಮಾಲೀಕರಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು. ಸಮಿತಿಯ ಕಾರ್ಯದರ್ಶಿ ಸತೀಶ್ ಸದಾನಂದ್ ಸ್ವಯಂಸೇವಕರಿಗೆ ಅಗತ್ಯ ಮಾಹಿತಿ ನೀಡಿ, ಮಾರುಕಟ್ಟೆ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಲು ಇಂದೂ ಹಲವು ಶ್ರಮದಾನಗಳ ಅಗತ್ಯವಿದೆ ಎಂದು ತಿಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

