" ನಾಗೇಂದ್ರ ರಾಜೀನಾಮೆಗೆ ಜಗದೀಶ್ ಆರ್.ಚಂದ್ರ ಒತ್ತಾಯ "
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುದೊಡ್ಡ ಹಗರಣದ ಸಂಬಂಧ ನಾಗೇಂದ್ರರ ರಾಜೀನಾಮೆ ಪಡೆಯುವಂತೆ ಬಿಜೆಪಿ ಯುವ ಮೋರ್ಚಾ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಗದೀಶ್ ಆರ್. ಚಂದ್ರ ಅವರು ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.ಬಿಜೆಪಿ ಬೆಂಗಳೂರು ಮಹಾನಗರ ಯುವ ಮೋರ್ಚಾ ವತಿಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಗರಣ ಸಂಬಂಧ ಕೇಸ್ ಈಗಲೂ ನಡೆಯುತ್ತಿದೆ. ಹಿಂದೆ ಅವರು ರಾಜೀನಾಮೆ ನೀಡಿದ್ದರು. ಮತ್ತೊಮ್ಮೆ ಅವರಿಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ತಿಳಿಸಿದರು. ಅವರು ರಾಜೀನಾಮೆ ಕೊಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು ಅವರ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ರೈತರು, ವಿದ್ಯಾರ್ಥಿಗಳು, ಮಹಿಳಾ ಪರವಾಗಿ ಇಲ್ಲ ಎಂದು ಅವರು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ ಎಂದು ಟೀಕಿಸಿದರು. ಇವರಿಗೆ ಮಹಿಳೆಯರ ಮತ ಮಾತ್ರ ಬೇಕೇ? ಇದು ಯಾವ ನ್ಯಾಯ ಎಂದು ಕೇಳಿದರು.
ಧಾರವಾಡದಲ್ಲಿ ವಿದ್ಯಾರ್ಥಿ ಪ್ರತಿಭಟನೆ ನಡೆದರೆ ಯಾರೂ ಅವರ ಬಳಿ ತೆರಳುವುದಿಲ್ಲ; ದೆಹಲಿಗೆ ಮಾತ್ರ ಮುಖ್ಯಮಂತ್ರಿಗಳು ಓಡಿ ಹೋಗುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಇದು ಹೈಕಮಾಂಡ್ ಹೇಳಿದಂತೆ ಕೇಳುವ ಕಾಂಗ್ರೆಸ್ ಸರಕಾರ ಎಂದು ಟೀಕಿಸಿದರು.
ಸಚಿವರ ಖಾತೆ ಹಂಚಿಕೆ ವಿಳಂಬವನ್ನು ಅವರು ಆಕ್ಷೇಪಿಸಿದರು. ಇದರಿಂದ ಜನತೆಗೆ ತೊಂದರೆ ಆಗುತ್ತಿದೆ. ಅಭಿವೃದ್ಧಿ ನೆಲಕಚ್ಚಿದೆ ಎಂದು ದೂರಿದರು. ಇದು ಅತ್ಯಂತ ದುರ್ಬಲ ಸರಕಾರ ಎಂದು ತಿಳಿಸಿದರು. ಯುವ ಮೋರ್ಚಾ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಯತಿನ್ ವೆಂಕಟೇಶ್, ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

