ಬೆಂಗಳೂರು: ರಾಯಚೂರು ಜಿಲ್ಲೆಯ ಸಿಂಧನೂರಿನ ಬಹುಮುಖ ಪ್ರತಿಭೆಯ ಕಲಾವಿದ ಮಹ್ಮದ್ ಉಸ್ಮಾನ ಅಲಿ ಅವರ ಏಕ-ಬಣ್ಣದ ಜಲವರ್ಣ ಭೂದೃಶ್ಯ ವರ್ಣಚಿತ್ರಗಳ ಏಕವ್ಯಕ್ತಿ ಪ್ರದರ್ಶನ ‘ವರ್ಣ ವಿಲಾಸ’ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಿತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಹಿರಿಯ ಕಲಾವಿದ ವಾಜೀದ್ ಸಾಜೀದ್ ಉದ್ಘಾಟಿಸಿದರು.
ಪ್ರದರ್ಶನದಲ್ಲಿ ತಿಳಿ ಹಾಗೂ ಗಾಢ ಗುಲಾಬಿ ಬಣ್ಣದ ಛಾಯೆಗಳನ್ನು ಬಳಸಿಕೊಂಡು ರಚಿಸಲಾದ 36 ಭೂದೃಶ್ಯ ವರ್ಣಚಿತ್ರಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಬಾಬು ಜಟ್ಟಕರ್, ಮಹ್ಮದ್ ಉಸ್ಮಾನ ಅಲಿ ಅವರ ವಿಭಿನ್ನ ಪ್ರಯತ್ನವನ್ನು ಶ್ಲಾಘಿಸಿದರು. ಏಕವರ್ಣದ ಚಿತ್ರಗಳ ಮೂಲಕ ಹಳೆಯ ಕಾಲದ ಈಸ್ಟ್ಮನ್ ಬಣ್ಣದ ಚಲನಚಿತ್ರಗಳ ದೃಶ್ಯಾನುಭವವನ್ನು ನೆನಪಿಸುವಂತಿದೆ ಎಂದು ಅಭಿಪ್ರಾಯಪಟ್ಟರು.
ಸಾಮಾನ್ಯವಾಗಿ ಜಲವರ್ಣ ಭೂದೃಶ್ಯ ಚಿತ್ರಗಳಲ್ಲಿ ಹಲವು ಬಣ್ಣಗಳನ್ನು ಬಳಸಲಾಗುತ್ತದೆ. ಆದರೆ ಉಸ್ಮಾನ ಅಲಿ ಅವರು ಒಂದೇ ಬಣ್ಣದ ವಿವಿಧ ಛಾಯೆಗಳಿಗೆ ಸೀಮಿತಗೊಳಿಸುವ ಮೂಲಕ ವಿಶಿಷ್ಟ ಕಲಾಶೈಲಿಯನ್ನು ರೂಪಿಸಿದ್ದಾರೆ. ಇದು ಚಿತ್ರಗಳಿಗೆ ವಿಭಿನ್ನ ಆಯಾಮ ನೀಡುವುದರೊಂದಿಗೆ ವೀಕ್ಷಕರಿಗೆ ಮನಮೋಹಕ ಅನುಭವವನ್ನು ಒದಗಿಸುತ್ತದೆ ಎಂದು ಹೇಳಿದರು.
ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ವಾಜೀದ್ ಸಾಜೀದ್ ಪ್ರದರ್ಶನದಲ್ಲಿನ ಕಲಾಕೃತಿಗಳ ಸೌಂದರ್ಯ ಮತ್ತು ಆಕರ್ಷಣೆಯನ್ನು ಮೆಚ್ಚಿದರು. ಮತ್ತೊಬ್ಬ ಖ್ಯಾತ ಜಲವರ್ಣ ಕಲಾವಿದ ಕಾಂತರಾಜ್ ಎನ್. ಜಲವರ್ಣ ಮಾಧ್ಯಮದಲ್ಲಿ ಏಕವ್ಯಕ್ತಿ ಪ್ರದರ್ಶನ ಆಯೋಜಿಸುವುದು ಸವಾಲಿನ ಕೆಲಸವಾಗಿದ್ದು, ಉಸ್ಮಾನ ಅಲಿ ಅವರ ಕಲಾ ಗುಣಮಟ್ಟ ಮತ್ತು ಶೈಲಿ ಗಮನಾರ್ಹವಾಗಿದೆ ಎಂದು ಪ್ರಶಂಸಿಸಿದರು. ಜಲವರ್ಣ ಕಲಾವಿದರ ಬಳಗಕ್ಕೆ ಮತ್ತೊಬ್ಬ ಪ್ರತಿಭೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿ ಎಂದರು.
ಡಿಜಿಟಲ್ ಮಾಧ್ಯಮದ ಕಲಾವಿದ ವೀರೇಶ್ ಪಾಟೀಲ್ ಕಲಾಕೃತಿಗಳ ವೈವಿಧ್ಯತೆಯನ್ನು ಶ್ಲಾಘಿಸಿದರು. ಚಿತ್ರಕಲಾ ಪರಿಷತ್ತಿನ ಲಲಿತಕಲಾ ಕಾಲೇಜಿನ ನಿವೃತ್ತ ಅಧ್ಯಾಪಕ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಶಿಲ್ಪಿ ನಾಗಪ್ಪ ಪ್ರಧಾನಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲಾವಿದ ಮಹ್ಮದ್ ಉಸ್ಮಾನ ಅಲಿ ಮಾತನಾಡಿ, ಹಿರಿಯ ಕಲಾವಿದ ವಾಜೀದ್ ಸಾಜೀದ್ ಅವರಂತಹ ಪ್ರತಿಭಾವಂತರ ಮಾರ್ಗದರ್ಶನ ಹಾಗೂ ಸ್ಫೂರ್ತಿ ದೊರೆತಿರುವುದು ತಮ್ಮಂತಹ ಯುವ ಕಲಾವಿದರ ಪುಣ್ಯ ಎಂದು ಹೇಳಿದರು. ಹಿರಿಯರ ಪ್ರೋತ್ಸಾಹವೇ ಕಲಾ ಪಯಣಕ್ಕೆ ಮತ್ತಷ್ಟು ಬಲ ನೀಡುತ್ತದೆ ಎಂದರು.
ವಕೀಲ ಮೆಹಬೂಬ್ ಪಾಷಾ ಸಾಲಗುಂದ ಉದ್ಘಾಟನಾ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದರಾದ ಉಮೇಶ್, ಮೊಸಿನ್, ಯಾಸಿನ್ ಮತ್ತು ನವಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


