ಅತ್ಯುತ್ತಮ, ಅಗ್ರಗಣ್ಯ ಕಾಲೇಜು ಸಂಬಂಧಿತ ರಾಷ್ಟ್ರ ಮಟ್ಟದ ಸಮೀಕ್ಷೆ
ಉಜಿರೆ: ರಾಷ್ಟ್ರ ಮಟ್ಟದ ಪ್ರಸಿದ್ಧ ಹಾಗೂ ಜನಪ್ರಿಯ ನಿಯತಕಾಲಿಕೆಗಳಾದ 'ಇಂಡಿಯಾ ಟುಡೇ', 'ದಿ ವೀಕ್' ಮತ್ತು 'ಔಟ್ಲುಕ್' ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಎಲ್ಲಾ ವಿಭಾಗಗಳಲ್ಲೂ ಹಿಂದಿನ ಪ್ರತಿವರ್ಷಗಳಂತೆ ಪ್ರಸಕ್ತ ವರ್ಷವೂ ಅತ್ಯುತ್ತಮ ಶ್ರೇಣಿಯೊಂದಿಗೆ ವಿಶೇಷ ರ್ಯಾಂಕ್ ಮಾನ್ಯತೆ ಪಡೆದಿದೆ.
ಕಲೆ, ವಿಜ್ಞಾನ, ವಾಣಿಜ್ಯ, ಬಿ.ಸಿಎ, ಬಿಬಿಎ, ಪತ್ರಿಕೋದ್ಯಮ ಹಾಗೂ ಎಂ.ಎಸ್.ಡಬ್ಲ್ಯೂ ವಿಭಾಗಗಳ ಶೈಕ್ಷಣಿಕ ಸಾಧನೆ, ಚಟುವಟಿಕೆ, ಕಲಿಕಾ ಸೌಲಭ್ಯ, ಪ್ರವೇಶಾತಿ, ನೇಮಕಾತಿ, ಕಲಿಕಾ ಶುಲ್ಕ ಹಾಗೂ ಕಾಲೇಜಿಗೆ ಸಂದ ಪ್ರಶಸ್ತಿ, ಗೌರವ, ಪೋಷಕರು, ವಿದ್ಯಾರ್ಥಿಗಳ ಅಭಿಪ್ರಾಯಗಳು, ಆಡಳಿತ ನಿರ್ವಹಣಾ ವ್ಯವಸ್ಥೆ ಸೇರಿದಂತೆ ವಿವಿಧ ಪ್ರಮುಖ ಮಾನದಂಡಗಳನ್ನು ಆಧರಿಸಿ ಈ ಎರಡೂ ನಿಯತಕಾಲಿಕೆಗಳು ರಾಷ್ಟçಮಟ್ಟದ ವಿವಿಧ ಕಾಲೇಜುಗಳ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿದೆ.
'ಇಂಡಿಯಾ ಟುಡೇ' ಸಮೀಕ್ಷೆಯಲ್ಲಿ ಉಜಿರೆ ಕಾಲೇಜಿನ ಬಿ.ಎ ವಿಭಾಗ 64ನೇ ರ್ಯಾಂಕ್ ಗಳಿಸಿದ್ದು, ಬಿಎಸ್ಸಿಗೆ 80ನೇ ಸ್ಥಾನ ಲಭಿಸಿದೆ. ಕಾಮರ್ಸ್ ವಿಭಾಗವು 102ನೇ ಸ್ಥಾನದಲ್ಲಿದ್ದು, ಬಿ.ಸಿ.ಎ ವಿಭಾಗವು 29ನೇ ರ್ಯಾಂಕ್ನ ಹಿರಿಮೆ ಗಳಿಸಿದೆ. ಬಿಬಿಎ ವಿಭಾಗವು 42ನೇ ಸ್ಥಾನದಲ್ಲಿದ್ದು ಎಂ.ಎಸ್.ಡಬ್ಲ್ಯೂ. ವಿಭಾಗಕ್ಕೆ 28ನೇ ಸ್ಥಾನ ಲಭ್ಯವಾಗಿದೆ. ಪತ್ರಿಕೋದ್ಯಮ ವಿಭಾಗಕ್ಕೆ 26ನೇ ಸ್ಥಾನ ಲಭಿಸಿದ್ದು, ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಮುಂಚೂಣಿ ಸ್ಥಾನಮಾನ ಗಳಿಸಿರುವ ಕಾಲೇಜುಗಳ ಪಟ್ಟಿಯಲ್ಲಿ ಪತ್ರಿಕೋದ್ಯಮವು ಏಳನೇ ಸ್ಥಾನ ಪಡೆದು ಅಗ್ರಪಂಕ್ತಿಗೆ ಸೇರಿದೆ. ರಾಜ್ಯಮಟ್ಟದ 'ಇಂಡಿಯಾ ಟುಡೇ' ಸಮೀಕ್ಷೆಯಲ್ಲಿ ಬಿ.ಎ. ವಿಭಾಗ ಎಂಟನೇ ರ್ಯಾಂಕ್, ಬಿ.ಎಸ್ಸಿ ಒಂಭತ್ತನೇ ರ್ಯಾಂಕ್, ಕಾಮರ್ಸ್ 17ನೇ ರ್ಯಾಂಕ್, ಬಿ.ಸಿ.ಎ ಒಂಭತ್ತನೇ ರ್ಯಾಂಕ್, ಬಿ.ಬಿ.ಎ ಹತ್ತನೇ ರ್ಯಾಂಕ್, ಎಂ.ಎಸ್.ಡಬ್ಲ್ಯೂ ಆರನೇ ಮತ್ತು ಪತ್ರಿಕೋದ್ಯಮ ವಿಭಾಗವು ಏಳನೇ ರ್ಯಾಂಕ್ ಪಡೆದಿವೆ.
'ದಿ ವೀಕ್' ಅತ್ಯುತ್ತಮ ಕಾಲೇಜುಗಳಿಗೆ ಸಂಬಂಧಿಸಿದಂತೆ ನಡೆಸಿದ ಸಂಶೋಧನಾ ಸಮೀಕ್ಷೆಯಲ್ಲೂ ಬಿ.ಎ ವಿಭಾಗಕ್ಕೆ 65ನೇ ಸ್ಥಾನ ಲಭಿಸಿದ್ದು, ಬಿಎಸ್ಸಿಗೆ 101, ಬಿ.ಕಾಂಗೆ 116 ಹಾಗೂ ಪತ್ರಿಕೋದ್ಯಮಕ್ಕೆ 24ನೇ ರ್ಯಾಂಕ್ ಲಭ್ಯವಾಗಿದೆ.
'ಔಟ್ಲುಕ್' ನಿಯತಕಾಲಿಕೆಯು ಅಗ್ರಗಣ್ಯ ಮಾಸ್ ಕಮ್ಯುನಿಕೇಷನ್ ಸಂಸ್ಥೆಗಳನ್ನು ಗುರುತಿಸುವ ಉದ್ದೇಶದಿಂದ ನಡೆಸಿದ ರಾಷ್ಟ್ರೀಯ ಐಸಿಎಆರ್ಇ ಸಮೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವು 16ನೇ ರ್ಯಾಂಕ್ ಪಡೆದುಕೊಂಡಿದೆ. ಸಮೂಹ ಸಂವಹನಕ್ಕೆ ಸಂಬಂಧಿಸಿದ ಇದೇ ಸಮೀಕ್ಷೆಯಲ್ಲಿ ಕಾಲೇಜಿನ ಎಂ.ಎಸ್.ಡಡಬ್ಲ್ಯೂ 26ನೇ ರ್ಯಾಂಕ್, ಬಿ.ಬಿ.ಎ 33ನೇ ರ್ಯಾಂಕ್, ಬಿಎಸ್ಸಿ 43, ಕಾಮರ್ಸ್ 62 ಮತ್ತು ಬಿ.ಎ 65ನೇ ರ್ಯಾಂಕ್ ಗಳಿಸಿವೆ.
ರಾಷ್ಟ್ರಮಟ್ಟದ ನಿಯತಕಾಲಿಕೆಗಳ ಸಮೀಕ್ಷೆಗಳಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಗ್ರಗಣ್ಯ ರ್ಯಾಂಕ್ ಗಳಿಕೆಯ ಮೂಲಕ ಗಮನ ಸೆಳೆಯುತ್ತಲೇ ಬಂದಿದೆ. ಪ್ರಸಕ್ತ ವರ್ಷದ ಸಮೀಕ್ಷೆಯೂ ಕಾಲೇಜಿನ ಅಗ್ರಗಣ್ಯ ವೈಶಿಷ್ಟ್ಯತೆಯನ್ನು ಮತ್ತೊಮ್ಮೆ ದೃಢೀಕರಿಸಿದೆ ಎಂದು ಎಂದು ಪ್ರಾಂಶುಪಾಲ ಡಾ. ವಿಶ್ವನಾಥ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


