ಕಾರ್ಕಳ: ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರಿಗಾಗಿ ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು "ಸಿಸ್ಟಮ್ಸ್ ಎಂಜಿನಿಯರಿಂಗ್- ಆರ್ಕಿಟೆಕ್ಚರ್, ಮಾಡೆಲಿಂಗ್, ಸಿಮ್ಯುಲೇಶನ್ ಮತ್ತು ವ್ಯಾಲಿಡೇಶನ್" ಕುರಿತು ಜು.೨೭ ರಿಂದ ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 50 ಮಂದಿ ಅಧ್ಯಾಪಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಯಮದ ಪ್ರತಿಷ್ಠಿತ ತಜ್ಞರು: ಡಾ.ಗೌರವ್ ದುಬೆ (ಕನ್ಸಲ್ಟಿಂಗ್ ಅಪ್ಲಿಕೇಶನ್ ಎಂಜಿನಿಯರ್, ಮ್ಯಾಥ್ವರ್ಕ್ಸ್ ಬೆಂಗಳೂರು), ಡಾ.ದೇಬಾನಂದ್ ಸಿಂಗ್ದೇವ್ (ಹಿರಿಯ ಎಂಜಿನಿಯರ್, ಮ್ಯಾಥ್ವರ್ಕ್ಸ್ ಬೆಂಗಳೂರು) ಮತ್ತು ಡಾ.ರಿಯಾಜ್ ಎ ರಹಿಮನ್ (ಅಪ್ಲಿಕೇಶನ್ ಮ್ಯಾನೇಜರ್, ಕೋರ್-ಎಲ್ ಟೆಕ್ನಾಲಜೀಸ್ ಬೆಂಗಳೂರು) ಭಾಗವಹಿಸಿದ್ದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಇನ್ಚಾರ್ಜ್ ಮುಖ್ಯಸ್ಥ ಡಾ.ನರಸಿಂಹ ಮರಕಲಾ ಸ್ವಾಗತಿಸಿದರು ಮತ್ತು ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಸಭಿಕರಿಗೆ ವಿವರಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಧ್ಯಾಪಕ ಡಾ. ಅನಂತಕೃಷ್ಣ ಸೋಮಯಾಜಿ ಅತಿಥಿಗಳನ್ನು ಪರಿಚಯಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಸುಬ್ರಹ್ಮಣ್ಯ ಭಟ್ (ಸಿಒಇ, ನಿಟ್ಟೆ ಡಿಯು ಆಫ್-ಕ್ಯಾಂಪಸ್ ಸೆಂಟರ್, ನಿಟ್ಟೆ) ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ನಿತಿನ್ ಕುಮಾರ್ ವಂದಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡಾ.ಕುಮಾರ್ ಎಚ್.ಎಸ್ ಕಾರ್ಯಕ್ರಮ ನಿರೂಪಿಸಿದರು.

