ಉಜಿರೆ: ಪಶ್ಚಿಮ ಬಂಗಾಳದ ನೆಲದಿಂದ ಉದಯಿಸಿ, ಇಡೀ ಅಖಂಡ ಭಾರತವನ್ನು ವ್ಯಾಪಿಸಿದ 'ವಂದೇ ಮಾತರಂ' ಗೀತೆಯು 150 ವರ್ಷಗಳನ್ನು ಪೂರೈಸಿದರೂ ಇಂದಿಗೂ ಭಾರತೀಯರ ಎದೆಯಲ್ಲಿ ಜಾಗೃತವಾಗಿರುವ ಸಾರ್ವಕಾಲಿಕ ರಣಮಂತ್ರವಾಗಿದೆ ಎಂದು ಪ್ರಮುಖ ಬರಹಗಾರ ಶಿವಪ್ರಸಾದ್ ಸುರ್ಯ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಉಜಿರೆಯ ಸಿದ್ದವನ ಗುರುಕುಲದಲ್ಲಿ ಆಯೋಜಿಸಲಾಗಿದ್ದ 'ವಂದೇ- ಗುರುಪರಂಪರಾಮ್' (ಗುರುವಂದನಾ ವ್ಯಾಸಪೂರ್ಣಿಮೆ ಹಾಗೂ ವಂದೇ ಮಾತರಂ 150ನೇ ವರ್ಷದ ಸಂಭ್ರಮಾಚರಣೆ) ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
"ವಂದೇ ಮಾತರಂ ಗೀತೆಯು ಕೇವಲ ಸಾಲುಗಳಲ್ಲ; ಅದು ಶಸ್ತ್ರ ಮತ್ತು ಶಾಸ್ತ್ರಗಳ ಪ್ರತೀಕ, ಅಧ್ಯಾತ್ಮದ ಅನುಭೂತಿ ಹಾಗೂ ಗಿರಿ-ಕಾನನಗಳ ಪ್ರಕೃತಿಯನ್ನು ಆರಾಧಿಸುವ ಭಾರತೀಯ ಪರಂಪರೆಯ ಕಲಶಪ್ರಾಯವಾಗಿದೆ. ಬಂಕಿಮಚಂದ್ರರ 'ಆನಂದಮಠ' ಕಾದಂಬರಿಯ ಸಂತಾನ ಸನ್ಯಾಸಿಗಳ ಕಥಾವಸ್ತುವು ಭಾರತದ ಜಾಗೃತಿಯ ನಾನಾ ಸಾಧ್ಯತೆಗಳನ್ನು ಬಿಂಬಿಸುತ್ತದೆ. ಅದರಲ್ಲಿ ಬರುವ ಶಾಂತಿ, ಮಹೇಂದ್ರ, ಕಲ್ಯಾಣಿ ಹಾಗೂ ಸಂತರುಗಳ ಪಾತ್ರಗಳು ಇಂದಿನ ಕಾಲಕ್ಕೂ ಸಾರ್ವಕಾಲಿಕವಾಗಿ ಪ್ರಸ್ತುತವಾಗಿವೆ. ದೇಶಕ್ಕೆ ಆಪತ್ತು ಎದುರಾದಾಗ ಪ್ರತಿಯೊಬ್ಬ ನಾಗರಿಕನೂ ಎಲ್ಲಾ ಆಯಾಮಗಳಲ್ಲೂ ಹೋರಾಟಕ್ಕೆ ಸಜ್ಜಾಗಬೇಕು" ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತದ ಬೌದ್ಧಿಕ ಸಾರಕ್ಕೆ ಮಹರ್ಷಿ ವೇದವ್ಯಾಸರು ನೀಡಿದ ಅನನ್ಯ ಕೊಡುಗೆಗಳನ್ನು ಸ್ಮರಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರಂಭ ಮತ್ತು ಸಮಾರೋಪ: ಸಮಿತಿ ಜಂಟಿ ಕಾರ್ಯದರ್ಶಿ ಶ್ರೀಮತಿ ಸಂತೋಷಿಣಿ ಅವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಮಕ್ಕಳ ಪ್ರಕಾರ ಪ್ರಮುಖ್ ಶ್ರೀಮತಿ ಮೇಧಾ ಅವರ ವಂದೇ ಮಾತರಂ ಗಾಯನದೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆ: ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಆಶಾ ಅಡೂರ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಡಾ. ಶ್ರೀಧರ್ ಭಟ್ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ, ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ, ಉಪಾಧ್ಯಕ್ಷ ರಾಮಕೃಷ್ಣ ಭಟ್, ಜಿಲ್ಲಾ ಸಮಿತಿ ಸದಸ್ಯ ಪ್ರಕಾಶ್ ನಾರಾಯಣ್, ಸಿದ್ದವನ ಗುರುಕುಲದ ಮುಖ್ಯ ಪಾಲಕ ಕೇಶವ್, ಮಹಿಳಾ ಪ್ರಕಾರ ಪ್ರಮುಖ್ ಶ್ರೀಮತಿ ವನಿತಾ ವಿ. ಶೆಟ್ಟಿ, ಮಹಿಳಾ ಘಟಕ ಕಾರ್ಯದರ್ಶಿ ಶ್ರೀಮತಿ ಮೇಘನಾ ಪ್ರಶಾಂತ್, ಪ್ರಮುಖರಾದ ಶ್ರೀಮತಿ ಅಕ್ಷತಾ ಅಡೂರು, ಶ್ರೀಮತಿ ವಿದ್ಯಾ ಅಡೂರು, ಡಾ. ತಾರಕೇಶ್ವರಿ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಗುರುಕುಲದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

