" ಕ್ರೀಡೆ ಏಕಾಗ್ರತೆ ಮತ್ತು ಚುರುಕುತನವನ್ನು ಹೆಚ್ಚಿಸುತ್ತದೆ: ಬಿಇಒ ಜೇಮ್ಸ್ ಕುಟಿನ್ಹೋ "
ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ (ಮಂಗಳೂರು ಉತ್ತರ ವಲಯ) ಹಾಗೂ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯ ಜಂಟಿ ಆಶ್ರಯದಲ್ಲಿ 2026-27ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಮಂಗಳೂರು ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟವು ಇಲ್ಲಿನ ವಿದ್ಯಾದಾಯಿನೀ ಸಂಕೀರ್ಣದ 'ಪಡುಕೋಣೆ ಟೇಬಲ್ ಟೆನ್ನಿಸ್ ಅಕಾಡೆಮಿ'ಯಲ್ಲಿ ಇತ್ತೀಚೆಗೆ ವೈಭವದಿಂದ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜೇಮ್ಸ್ ಕುಟಿನ್ಹೋ ಅವರು ಮಾತನಾಡಿ, "ಟೇಬಲ್ ಟೆನ್ನಿಸ್ ಕೇವಲ ಒಂದು ಆಟವಲ್ಲ; ಅದು ಕಣ್ಣು ಮತ್ತು ಕೈಗಳ ಸಮನ್ವಯತೆಯನ್ನು ಹೆಚ್ಚಿಸುವ ಹಾಗೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ನೆರವಾಗುವ ಕ್ರೀಡೆ. ಮಕ್ಕಳಲ್ಲಿ ಏಕಾಗ್ರತೆ ಮತ್ತು ಚುರುಕುತನವನ್ನು ಉತ್ತಮಗೊಳಿಸಲು ಇದು ಅತ್ಯಂತ ಸಹಕಾರಿ," ಎಂದರು.
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಮಂಗಳೂರು ಉತ್ತರ ವಲಯದ ತಂಡವು ಮುಂಬರುವ ಹಂತಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಉಜ್ವಲ ಯಶಸ್ಸು ಗಳಿಸಲಿ ಎಂದು ಆಶಂಸಿದರು. ಬಳಿಕ, ಬಿಇಒ ಜೇಮ್ಸ್ ಕುಟಿನ್ಹೋ ಅವರು ಸ್ವತಃ ಟೇಬಲ್ ಟೆನ್ನಿಸ್ ಬ್ಯಾಟ್ ಹಿಡಿದು ಕೆಲ ಸಮಯ ಆಡುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿ ಮಕ್ಕಳಲ್ಲಿ ಉತ್ಸಾಹ ತುಂಬಿದರು.
ಸಭಾಧ್ಯಕ್ಷತೆ ವಹಿಸಿದ್ದ ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀ ಎಚ್. ಶ್ರೀರಂಗ ಅವರು ಮಾತನಾಡಿ, "ಕ್ರೀಡೆಯಲ್ಲಿ ಯಶಸ್ಸು ಗಳಿಸಲು ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮವೇ ಮೂಲಮಂತ್ರ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಶ್ರಮಿಸಿ ಸಾಧನೆ ಮಾಡಬೇಕು," ಎಂದು ಶುಭ ಹಾರೈಸಿದರು.
ಗೌರವಾನ್ವಿತ ಅತಿಥಿಗಳ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಜೀವನ್ ಶೆಟ್ಟಿ, ಸುರತ್ಕಲ್ ಕ್ಲಸ್ಟರ್ ಸಿಆರ್ಪಿ ವೇಣುಗೋಪಾಲ್, ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ್, ಗೋವಿಂದ ದಾಸ ಪದವಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ., ವಿದ್ಯಾದಾಯಿನೀ ಸ್ಪೋರ್ಟ್ಸ್ ಅಕಾಡೆಮಿಯ ಸಂಯೋಜಕ ಸುಬ್ರಹ್ಮಣ್ಯ ಟಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ ಆಚಾರ್ಯ ಹೊಸಬೆಟ್ಟು, ಶಾಲಾ ಶಿಕ್ಷಕ–ರಕ್ಷಕ ಸಂಘದ ಗೌರವಾಧ್ಯಕ್ಷ ಗಂಗಾಧರ ಪೂಜಾರಿ, 'ವಿರಾಟ್' ಸಂಸ್ಥೆಯ ಕಾರ್ಯದರ್ಶಿ ಪಿ.ವಿ. ಗಿರೀಶ್ ಹಾಗೂ ಪಡುಕೋಣೆ ಟೇಬಲ್ ಟೆನ್ನಿಸ್ ಅಕಾಡೆಮಿಯ ಅಶ್ವಿನ್ ಪಡುಕೋಣೆ ಉಪಸ್ಥಿತರಿದ್ದರು.
ಅಲ್ಲದೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ರೈ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ವಿನೋದ್ ಕುಮಾರ್, ತಾಲೂಕು ಅಧ್ಯಕ್ಷ ನಿತಿನ್ ಪುತ್ರನ್, ನೋಡಲ್ ಅಧಿಕಾರಿಗಳಾದ ಉದಯಕುಮಾರ್ ಮತ್ತು ವಿನ್ಯಾಸ್, ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತ ಅಧಿಕಾರಿ ಮೃದುಲಾ ಬಿನು, ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮಿ ಪಿ., ನಿವೃತ್ತ ಮುಖ್ಯೋಪಾಧ್ಯಾಯರಾದ ವಸಂತಕುಮಾರ್ ನಾಯಕ್, ರೇವತಿ ಬಿ., ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ಪೋಷಕರು ಭಾಗವಹಿಸಿದ್ದರು.
ಯಶಸ್ವಿ ಸಂಘಟನೆ:
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ದಿವಸ್ಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರೆ, ದೈಹಿಕ ಶಿಕ್ಷಣ ಶಿಕ್ಷಕಿ ಕುಮಾರಿ ಸೌಮ್ಯ ವಂದನಾರ್ಪಣೆ ಸಲ್ಲಿಸಿದರು.
ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಹಳೆ ವಿದ್ಯಾರ್ಥಿ ಸಂಘ, ತೀರ್ಪುಗಾರರು, ಕ್ರೀಡಾ ಸಂಚಾಲಕರು, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡಾಪಟುಗಳು ಹಾಗೂ ತಂಡದ ವ್ಯವಸ್ಥಾಪಕರ ಪೂರ್ಣ ಸಹಕಾರದೊಂದಿಗೆ ತಾಲೂಕು ಮಟ್ಟದ ಈ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

