ಭೂಮಿ ಮತ್ತು ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಲು ಜಲ ಮತ್ತು ವಿದ್ಯುತ್ನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ನೀರನ್ನು ಉಳಿಸುವುದು ಎಂದರೆ ವಿದ್ಯುತ್ ಅನ್ನು ಸಹ ಉಳಿಸುವುದಾಗಿದೆ. ಏಕೆಂದರೆ ನೀರನ್ನು ಶುದ್ಧೀಕರಿಸಿ ಮನೆಗಳಿಗೆ ಪೂರೈಸಲು ಹೆಚ್ಚಿನ ವಿದ್ಯುತ್ ಬಳಸಲಾಗುತ್ತದೆ. ಆದ್ದರಿಂದ ಈ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.
ಜಲ ಸಂರಕ್ಷಣೆ : ಪ್ರತಿಯೊಬ್ಬ ಜೀವಿಯ ಬದುಕಿಗೆ ನೀರು ಅತ್ಯಗತ್ಯ. ಭೂಮಿಯ ಶೇಕಡಾ 70 ರಷ್ಟು ಭಾಗ ನೀರಿನಿಂದ ಕೂಡಿದ್ದರೂ, ಕುಡಿಯಲು ಯೋಗ್ಯವಾದ ಸಿಹಿ ನೀರು ಕೇವಲ ಶೇಕಡಾ 2 ರಷ್ಟು ಮಾತ್ರ ಇದೆ. ಜಲ ಸಂರಕ್ಷಣೆ ಎಂದರೆ ಲಭ್ಯವಿರುವ ಶುದ್ಧ ನೀರನ್ನು ಸಮರ್ಥವಾಗಿ ಬಳಸುವುದು. ಹೆಚ್ಚುತ್ತಿರುವ ಜನಸಂಖ್ಯೆ, ಮಾಲಿನ್ಯ ಮತ್ತು ನಿರ್ಲಕ್ಷ್ಯದ ಬಳಕೆಯಿಂದಾಗಿ ಜಲಕ್ಷಾಮವು ಇಂದು ಜಾಗತಿಕ ಸಮಸ್ಯೆಯಾಗಿದೆ. ಆದ್ದರಿಂದ, ಭವಿಷ್ಯದ ಪೀಳಿಗೆಗೆ ನೀರನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಈಗಾಗಲೇ ಎಲ್ ನಿನೊ ಹವಾಮಾನ ವೈಪರೀತ್ಯದ ಪರಿಣಾಮದಿಂದ ವಿಶ್ವದಾದ್ಯಂತದ ಸಾಮಾನ್ಯ ಹವಾಮಾನ ಮಾದರಿಗಳನ್ನು ವ್ಯತ್ಯಯಗೊಳಿಸುತ್ತಿದ್ದು, ದೇಶದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಬರಗಾಲ ಮೊದಲಾದ ತೀವ್ರ ಹವಾಮಾನ ಪರಿಸ್ಥಿತಿಗಳಿಗೆ ಕಾರಣವಾಗಿದೆ. ಅಲ್ಲದೇ ದೇಶದಲ್ಲಿ ಮಳೆಯ ಕೊರತೆಯುಂಟಾಗುತ್ತಿದೆ. ಇದರಿಂದ, ನಮ್ಮ ರೈತರ ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಆದುದರಿಂದ, ನಾವು ನಮ್ಮಲ್ಲಿರುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ ಮತ್ತು ಜೀವಜಲವಾದ ನೀರನ್ನು ಉಪಯೋಗಿಸುವಾಗ ಆದಷ್ಟು ಎಚ್ಚರಿಕೆಯನ್ನು ವಹಿಸಬೇಕಾಗಿದೆ.
ನೀರು ಏಕೆ ಮುಖ್ಯ?
• ನೀರು ಜೀವನ, ಕೃಷಿ, ಕೈಗಾರಿಕೆ ಹಾಗೂ ಪರಿಸರ ವ್ಯವಸ್ಥೆಗೆ ಅತ್ಯಗತ್ಯವಾದ ಅಮೂಲ್ಯ ಮತ್ತು ಸೀಮಿತ ಸಂಪನ್ಮೂಲವಾಗಿದೆ.
• ವೇಗವಾದ ನಗರೀಕರಣ, ಜನಸಂಖ್ಯೆಯ ಹೆಚ್ಚಳ ಮತ್ತು ಹವಾಮಾನ ವೈಪರೀತ್ಯಗಳು ಜಲ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿವೆ.
• ಇಂದು ನೀರನ್ನು ಸಂರಕ್ಷಿಸುವುದರಿಂದ ಭವಿಷ್ಯದ ಪೀಳಿಗೆಗಳಿಗೆ ನೀರಿನ ಲಭ್ಯತೆ ಖಚಿತವಾಗುತ್ತದೆ.
ನೀರಿನ ಸಂರಕ್ಷಣೆ ಮಾರ್ಗೋಪಾಯಗಳು: ಪ್ರತಿ ನಾಗರೀಕರು ಸಣ್ಣ ಸಣ್ಣ ಪ್ರಮಾಣದಲ್ಲಿ ನೀರನ್ನು ಉಳಿಸುವ ಪ್ರಯತ್ನವನ್ನು ಮಾಡಿದರೆ, ನಾಳೆ ದೊಡ್ಡ ಪ್ರಮಾಣದಲ್ಲಿ ನೀರಿನ ಸಂರಕ್ಷಣೆ ಮಾಡಬಹುದಾಗಿದೆ.
1) ಪ್ರತಿಯೊಂದು ನೀರಿನ ಹನಿಯೂ ಅಮೂಲ್ಯ; ನೀರಿನ ವ್ಯರ್ಥತೆಯನ್ನು ತಪ್ಪಿಸುವುದು.
2) ಸೋರಿಕೆಯಾಗಿರುವ ಕೊಳವೆಗಳು, ಪೈಪ್ಗಳು ಮತ್ತು ನೀರು ಸಂಗ್ರಹ ವ್ಯವಸ್ಥೆಗಳನ್ನು ತಕ್ಷಣ
ದುರಸ್ತಿ ಮಾಡುವುದು.
3) ಮುಖ ತೊಳೆಯುವಾಗ ಹಾಗೂ ಪಾತ್ರೆ ತೊಳೆಯುವಾಗ ನೀರಿನ ಕೊಳವೆಗಳನ್ನು ನಿಲ್ಲಿಸುವುದು.
4) ಸಾಧ್ಯವಾದಷ್ಟು ಬಕೆಟ್ ಬಳಸಿ ಸ್ನಾನ ಮಾಡುವುದು.
5) ನೀರು ಉಳಿತಾಯ ಮಾಡುವ ಉಪಕರಣಗಳನ್ನು ಅಳವಡಿಸುವುದು.
6) ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹಣೆಯನ್ನು
ಅನುಸರಿಸುವುದು.
7) ಕುಡಿಯುವ ನೀರನ್ನು ತೋಟಗಾರಿಕೆ, ವಾಹನಗಳ ಸ್ವಚ್ಛತೆಯಂತಹ ಇತರೆ ಕೆಲಸಗಳಿಗೆ ಬಳಸದೇ,
ತ್ಯಾಜ್ಯ ಸಂಸ್ಕರಿಸಿದ ನೀರನ್ನು ತೋಟಗಾರಿಕೆ ಮತ್ತು ಸ್ವಚ್ಛತೆಗೆ ಮರುಬಳಕೆ ಮಾಡುವುದು.
8) ಸಾಧ್ಯವಾದಷ್ಟು ನೀರಿನ ಕಡಿಮೆ ಬಳಕೆ (ಖeಜuಛಿe), ಮರುಬಳಕೆ (ಖeuse) ಮತ್ತು ಮರು
ಸಂಸ್ಕರಣೆ (ಖeಛಿಥಿಛಿಟe) ಮಾದರಿಗಳನ್ನು ಅನುಸರಿಸುವುದು.
9) ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವಿಧಾನಗಳನ್ನು ಅಳವಡಿಸುವುದು.
10) ಕೆರೆ, ನದಿ ಹಾಗೂ ಭೂಗರ್ಭ ಜಲಮೂಲಗಳನ್ನು ಮಾಲಿನ್ಯ ಮತ್ತು ಅತಿಕ್ರಮಣದಿಂದ ರಕ್ಷಿಸುವುದು.
11) ಅಂತರ್ಜಲ ನಿರ್ವಹಣೆಗಾಗಿ ಗಿಡಗಳನ್ನು ನೆಟ್ಟು ಸಂರಕ್ಷಿಸುವುದು.
ವಿದ್ಯುತ್ ಸಂರಕ್ಷಣೆ: ಆಧುನಿಕ ಜಗತ್ತಿನಲ್ಲಿ ವಿದ್ಯುತ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಕು, ಫ್ಯಾನ್, ಮೊಬೈಲ್ ಚಾರ್ಜರ್ ಮತ್ತು ಕೈಗಾರಿಕೆಗಳು ಸೇರಿದಂತೆ ಎಲ್ಲದಕ್ಕೂ ವಿದ್ಯುತ್ ಬೇಕೇಬೇಕು. ಆದರೆ ವಿದ್ಯುತ್ ಅನ್ನು ಹೆಚ್ಚಾಗಿ ಕಲ್ಲಿದ್ದಲು ಸುಡುವ ಮೂಲಕ ಉತ್ಪಾದಿಸಲಾಗುತ್ತದೆ. ಇದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ ಮತ್ತು ಭೂಮಿಯ ತಾಪಮಾನ ಹೆಚ್ಚುತ್ತಿದೆ. ಈ ಸಮಸ್ಯೆಗಳನ್ನು ತಡೆಯಲು ವಿದ್ಯುತ್ ಸಂರಕ್ಷಣೆ ಅತ್ಯಗತ್ಯ.
ವಿದ್ಯುತ್ ಸಂರಕ್ಷಣೆ ಏಕೆ ಮುಖ್ಯ?
• ವಿದ್ಯುತ್ ಉತ್ಪಾದನೆಗೆ ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳ ಅಗತ್ಯವಿದೆ.
• ವಿದ್ಯುತ್ ಸಂರಕ್ಷಣೆಯಿಂದ ವೆಚ್ಚ ಕಡಿಮೆಯಾಗುತ್ತದೆ, ಪರಿಸರ ಮಾಲಿನ್ಯ ತಗ್ಗುತ್ತದೆ ಮತ್ತು ಶಕ್ತಿ
ಭದ್ರತೆ ಹೆಚ್ಚುತ್ತದೆ.
• ಜವಾಬ್ದಾರಿಯುತ ವಿದ್ಯುತ್ ಬಳಕೆ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾಗಿದೆ.
ವಿದ್ಯುತ್ ಸಂರಕ್ಷಣೆ ಮಾರ್ಗೋಪಾಯಗಳು: ಬಳಕೆಯಿಲ್ಲದಾಗ ದೀಪಗಳು, ಫ್ಯಾನ್ಗಳು ಮತ್ತು ಇತರ ಉಪಕರಣಗಳನ್ನು ಆರಿಸುವುದು. ಸಾಮಾನ್ಯ ಬಲ್ಬುಗಳ ಬದಲಿಗೆ ಎಲ್ಇಡಿ ದೀಪಗಳನ್ನು ಬಳಸುವುದು. ಮೇಲ್ಛಾವಣಿ ಸೌರ ವ್ಯವಸ್ಥೆಗಳು ಮತ್ತು ನವೀಕರಿಸಬಹುದಾದ ಶಕ್ತಿ ಮೂಲಗಳನ್ನು ಉತ್ತೇಜಿಸುವುದು, ಸೋಲಾರ್ ಉಪಕರಣಗಳನ್ನು ಬಳಸುವುದು. ಸಾಧ್ಯವಾದಷ್ಟು ನೈಸರ್ಗಿಕ ಬೆಳಕು ಮತ್ತು ಗಾಳಿಯನ್ನು ಬಳಸುವುದು. ಚಾರ್ಜರ್ಗಳು ಮತ್ತು ವಿದ್ಯುತ್ ಸಾಧನಗಳನ್ನು ಬಳಕೆಯ ನಂತರ ಬೇರ್ಪಡಿಸುವುದು. ಏರ್ ಕಂಡೀಷನರ್ಗಳನ್ನು 24–26 ಡಿಗ್ರಿ ಸೆ. ತಾಪಮಾನದಲ್ಲಿ ನಿರ್ವಹಿಸಿ. ಶಾಲೆ/ಕಾಲೇಜುಗಳು ಮತ್ತು ಕಚೇರಿಗಳಲ್ಲಿ ನಿಯಮಿತ ವಿದ್ಯುತ್ ಲೆಕ್ಕಪರಿಶೋಧನೆ ನಡೆಸುವುದು. ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ವಿದ್ಯುತ್ ಉಳಿಸುವ ಪದ್ಧತಿಗಳನ್ನು ಅನುಸರಿಸುವುದು. ಮಕ್ಕಳಿಗೆ ಮತ್ತು ಸಮುದಾಯಕ್ಕೆ ವಿದ್ಯುತ್ ಸಂರಕ್ಷಣೆಯ ಮಹತ್ವವನ್ನು ತಿಳಿಸುವುದು.
ವಿದ್ಯುತ್ ಸಂರಕ್ಷಣೆ ಚಟುವಟಿಕೆಗಳು: ಶಾಲೆ/ಕಾಲೇಜು ಮತ್ತು ಕಚೇರಿಗಳಲ್ಲಿ ಜಲ ಮತ್ತು ವಿದ್ಯುತ್ ಸಂರಕ್ಷಣಾ ಪ್ರತಿಜ್ಞಾ ಕಾರ್ಯಕ್ರಮಗಳನ್ನು ಆಯೋಜಿಸುವುದು. ಜಾಗೃತಿ ಮೆರವಣಿಗೆಗಳು ಮತ್ತು ಬೀದಿ ನಾಟಕಗಳನ್ನು ಆಯೋಜಿಸುವುದು. ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಪೋಸ್ಟರ್ಗಳು ಹಾಗೂ ಬ್ಯಾನರ್ಗಳನ್ನು ಪ್ರದರ್ಶಿಸುವುದು. ಸಮುದಾಯದ ಭಾಗವಹಿಸುವಿಕೆಯಿಂದ ಜಲ ಸಂರಕ್ಷಣಾ ವಾರ ಮತ್ತು ವಿದ್ಯುತ್ ಸಂರಕ್ಷಣಾ ದಿನವನ್ನು ಆಚರಿಸುವುದು. ಮನೆಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿ ಜಲ ಹಾಗೂ ಶಕ್ತಿ ದಕ್ಷ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.
ವಿದ್ಯುತ್ ಅನ್ನು ಉತ್ಪಾದಿಸಲು ಪ್ರಮುಖವಾಗಿ ನೀರನ್ನು ಬಳಸಲಾಗುವುದರಿಂದ, ರಾಜ್ಯದ ಶೇ. 15-20 ರಷ್ಟು ವಿದ್ಯುತ್ ಉತ್ಪಾದನೆ ಇದರಿಂದ ಆಗುತ್ತಿದೆ. ಒಂದುವೇಳೆ, ನೀರಿನ ಕೊರತೆಯಾದರೆ, ನೀರಿನಿಂದ ಉತ್ಪಾದಿಸುವ ವಿದ್ಯುತ್ನ ಕೊರತೆ ಸಹ ಉಂಟಾಗುತ್ತದೆ. ಇದರಿಂದಾಗಿ ದೈನಂದಿನ ಬಳಕೆಗಾಗಿ ಲಭ್ಯವಾಗುವ ವಿದ್ಯುತ್ ಪ್ರಮಾಣ ಕಡಿಮೆಯಾಗುತ್ತದೆ. ಆದುದರಿಂದ, ಸಾರ್ವಜನಿಕರು ನೀರಿನ ಮಿತವ್ಯಯ ಅಭ್ಯಾಸಗಳನ್ನು ಸ್ವಯಂಪ್ರೇರಿತರಾಗಿ ರೂಢಿಸಿಕೊಳ್ಳುವುದರಿಂದ, ನಮ್ಮ ನಾಡಿಗೆ, ದೇಶಕ್ಕೆ ಮತ್ತು ಈ ಭೂಮಿಗೆ ಇದರಿಂದ ಒಳಿತಾಗುತ್ತದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


