ಪುತ್ತೂರು: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲೇಬೇಕಾದಂತ ವಿಚಾರ ವಸುದೈವ ಕುಟುಂಬಕಂ. ಈ ವಿಚಾರದಲ್ಲಿ ಜಾಗೃತಿಯನ್ನು ಮೂಡಿಸುವಂತಹ ಕಾರ್ಯ ಉಪನ್ಯಾಸಕರು ಮಾಡಲೇಬೇಕು. ಪ್ರತಿ ಮನೆಯಲ್ಲೂ ಇರಲೇಬೇಕಾದ ಪುಸ್ತಕ ಮಹಾಭಾರತ ಮತ್ತು ರಾಮಾಯಣ. ಶಿಕ್ಷಣದ ಜೊತೆಗೆ ರಾಮಾಯಣ, ಮಹಾಭಾರತದಲ್ಲಿ ಬರುವಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ತ್ಯಾಗ, ಸಮರ್ಪಣೆ, ಪಿತ್ರವಾಕ್ಯ ಪರಿಪಾಲನೆಯ ವಿಷಯದಲ್ಲಿ ರಾಮ, ಭರತರು ಮೇಲ್ಪಂಕ್ತಿಯಾಗಿದ್ದ ವಿಷಯವನ್ನು ಉಪನ್ಯಾಸಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೂ ನೆನಪಿಸಬೇಕು ಎಂದು ನಿವೃತ್ತ ಶಿಕ್ಷಕರು, ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಅಧ್ಯಾಪಕರ ಅಭಿವೃದ್ಧಿ ಘಟಕ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದಿಂದ ಉಪನ್ಯಾಸಕರಿಗಾಗಿ ಆಯೋಜಿಸಿರುವ ದೃಷ್ಟಿ - ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಭಾರತದ ಅನೇಕ ಜ್ಞಾನ ಪರಂಪರೆಗಳ ಬಗೆಗೆ ತರಗತಿಯಲ್ಲಿ ಅರಿವು ಮೂಡಿಸುತ್ತಾ, ಪಾಠದ ಜೊತೆಗೆ ಪಠ್ಯೇತರ ವಿಚಾರಗಳನ್ನು ತಿಳಿಸಿದಾಗ ಪಾಠ ರಸವತ್ತಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಇರುವ ಒಳ್ಳೆಯತನ ಮತ್ತು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಸಾಧನೆಗೈಯಲು ದಾರಿ ಮಾಡಬೇಕು. ವಿದ್ಯಾರ್ಥಿಗಳು ಸಾಧನೆಯ ಜೊತೆಗೆ ದೇಶದ ಹಿತ ದತ್ತ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮತ್ತು ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಕಾಲೇಜಿನ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್ ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿಶೇಷ ಅಧಿಕಾರಿ, (ಶಿಕ್ಷಕರ ಅಭಿವೃದ್ಧಿ) ಡಾ. ವಿದ್ಯಾ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ನಿರೂಪಿಸಿದರು.


