ಚಲಿಸುತ್ತಿದ್ದ ರೈಲಿನಲ್ಲಿ ಸುರಕ್ಷಿತ ಹೆರಿಗೆ; ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಂದ ನೆರವು

Upayuktha
0


 

ಉಜಿರೆ: ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಾನಸರೋಗ ಹಾಗೂ ಮನೋವಿಜ್ಞಾನ ವಿಭಾಗದ ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳು ಚಲಿಸುತ್ತಿದ್ದ ರೈಲಿನಲ್ಲೇ ಗರ್ಭಿಣಿಗೆ ಸುರಕ್ಷಿತ ಹೆರಿಗೆ ಮಾಡಿಸಿ ತಾಯಿ-ಮಗುವಿನ ಜೀವ ಉಳಿಸುವ ಮೂಲಕ ಮಾನವೀಯತೆ ಹಾಗೂ ವೈದ್ಯಕೀಯ ಕೌಶಲ್ಯಕ್ಕೆ ಮಾದರಿಯಾಗಿದ್ದಾರೆ.


ಡಾ. ರಶ್ಮಿ ಬೀಳಗಿ, ಡಾ. ಶಾಹಿನ್ ಎಂ ಮತ್ತು ಡಾ. ಲತಾಶ್ರೀ ಎನ್ ಅವರು ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ನಡೆಯುತ್ತಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಹಪ್ರಯಾಣಿಕೆಯಾಗಿದ್ದ ಪೂರ್ಣಗರ್ಭಿಣಿಗೆ ಹೆರಿಗೆ ನೋವು ಆರಂಭವಾಗಿ, ಗರ್ಭಜಲ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಅವರು ಕೂಡಲೇ ಪರಿಸ್ಥಿತಿಯನ್ನು ಪರಿಶೀಲಿಸಿ ಚಿಕಿತ್ಸೆ ಆರಂಭಿಸಿದರು.


ಗರ್ಭಿಣಿಯ ಕುಟುಂಬದವರು ಈ ಗರ್ಭಧಾರಣೆ ಅಪಾಯಕಾರಿಯಾಗಿದೆ, ಮಗು ಗಂಭೀರ ಸ್ಥಿತಿಯಲ್ಲಿದೆ ಹಾಗೂ ಸಹಜ ಹೆರಿಗೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರೆಂದು ಹೇಳಿದ್ದರು. ಚಿಕಿತ್ಸೆ ವೆಚ್ಚದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರು ವೈದ್ಯರು ಕುಟುಂಬದವರಿಗೆ ಧೈರ್ಯ ತುಂಬಿ, ರೈಲಿನಲ್ಲೇ ಸಾಧ್ಯವಾದಷ್ಟು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಿ ತುರ್ತು ಹೆರಿಗೆಗೆ ಸಿದ್ಧತೆ ನಡೆಸಿದರು.


ಹೆರಿಗೆಯ ವೇಳೆ ಮಗುವಿನ ಕುತ್ತಿಗೆಯ ಸುತ್ತ ಹೊಕ್ಕುಳ ಬಳ್ಳಿ ಸುತ್ತಿಕೊಂಡಿರುವುದು (ನುಕಲ್ ಕಾರ್ಡ್) ಪತ್ತೆಯಾಯಿತು. ಡಾ. ರಶ್ಮಿ ಬೀಳಗಿ ಅವರು ಅತ್ಯಂತ ಎಚ್ಚರಿಕೆಯಿಂದ ಹೊಕ್ಕುಳ ಬಳ್ಳಿಯನ್ನು ಸರಿಪಡಿಸಿದರೆ, ಡಾ. ಶಾಹಿನ್ ಎಂ ಹಾಗೂ ಡಾ. ಲತಾಶ್ರೀ ಎನ್ ಅವರು ಹೆರಿಗೆ ಪ್ರಕ್ರಿಯೆಗೆ ನೆರವಾಗಿ ಮಗುವನ್ನು ಸುರಕ್ಷಿತವಾಗಿ ಹೊರತಂದರು. ಜನನದ ನಂತರ ಮಗುವಿಗೆ ಸ್ವಲ್ಪ ಸಮಯ ಪುನರುಜ್ಜೀವನ (ರೆಸಸಿಟೇಶನ್) ನೀಡಲಾಗಿದ್ದು, ಬಳಿಕ ಆರೋಗ್ಯಕರವಾಗಿ ಅಳುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿತು.


ಸೀಮಿತ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಹೊಕ್ಕುಳ ಬಳ್ಳಿಯನ್ನು ಸುರಕ್ಷಿತವಾಗಿ ಕತ್ತರಿಸಿ ಕಟ್ಟಿ, ತಾಯಿ-ಮಗುವಿನ ನಡುವೆ ತಕ್ಷಣವೇ ಚರ್ಮ-ಚರ್ಮದ ಸ್ಪರ್ಶ (ಸ್ಕಿನ್-ಟು-ಸ್ಕಿನ್ ಕಾಂಟ್ಯಾಕ್ಟ್) ಕಲ್ಪಿಸಲಾಯಿತು. ನಂತರ ಪ್ಲಸೆಂಟಾ ಹೊರಬರಲು ವಿಳಂಬವಾದಾಗ ಅದನ್ನೂ ಯಶಸ್ವಿಯಾಗಿ ನಿರ್ವಹಿಸಿದರು. ಬಳಿಕ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ನಿಲ್ದಾಣದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಿ ತಾಯಿ ಮತ್ತು ನವಜಾತ ಶಿಶುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.


ಈ ಘಟನೆಯ ಕುರಿತು ಎಸ್‌ಡಿಎಂಇ ಸೊಸೈಟಿಯ ನಿರ್ದೇಶಕ ಶ್ರೀ ಶ್ರೇಯಸ್ ಕುಮಾರ್ ಡಿ ಮಾತನಾಡಿ, "ವೈದ್ಯರ ಕರ್ತವ್ಯ ಆಸ್ಪತ್ರೆಗಳಿಗಷ್ಟೇ ಸೀಮಿತವಲ್ಲ. ತುರ್ತು ಪರಿಸ್ಥಿತಿ ಎಲ್ಲಿಯೇ ಎದುರಾದರೂ ಸೇವೆ ಸಲ್ಲಿಸುವುದು ವೈದ್ಯಕೀಯ ವೃತ್ತಿಯ ಮೂಲ ಧರ್ಮ. ನಮ್ಮ ವಿದ್ಯಾರ್ಥಿಗಳ ಸಮಯೋಚಿತ ನಿರ್ಧಾರ, ತಂಡದ ಕಾರ್ಯಕ್ಷಮತೆ ಹಾಗೂ ಮಾನವೀಯ ಸೇವೆ ಸಂಸ್ಥೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ," ಎಂದು ಹೇಳಿದರು.


ಈ ಅಪರೂಪದ ಘಟನೆ ವೈದ್ಯಕೀಯ ಜ್ಞಾನ, ತಂಡದ ಕಾರ್ಯ ಹಾಗೂ ಸಮಯೋಚಿತ ನಿರ್ಧಾರಗಳು ಯಾವುದೇ ಪರಿಸ್ಥಿತಿಯಲ್ಲೂ ಜೀವ ಉಳಿಸಬಲ್ಲವು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top