ಮಂಗಳೂರು: ನಾವು ನಮ್ಮ ಕುಲದೇವರು, ಗ್ರಾಮದೇವರು ಹಾಗೂ ಇಷ್ಟದೇವರನ್ನು ಹೇಗೆ ಭಕ್ತಿ-ಆರಾಧನೆಗಳಿಂದ ಪೂಜಿಸುತ್ತೇವೆಯೋ, ಅಂತೆಯೇ ಪಣಂಬೂರಿನ ಐತಾಳ ಕುಟುಂಬವೂ ಇಂದು ಕಲಾಭಿಮಾನಿಗಳಿಂದ ಆರಾಧಿಸಲ್ಪಡುತ್ತಿದೆ. ಭಾಷೆಯ ಬೇಲಿಗಳನ್ನು ದಾಟಿ ಆಂಗ್ಲ ಭಾಷಾ ಯಕ್ಷಗಾನವನ್ನು ಬೆಳೆಸಿದ ಕೀರ್ತಿ ಈ ಕುಟುಂಬಕ್ಕೆ ಸಲ್ಲುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಅವರು ಆಶೀರ್ವಚನ ನೀಡಿದರು.
ಇವರು ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದ ರಾಮರಮಣ ವೇದಿಕೆಯಲ್ಲಿ ಜರಗಿದ 'ಯಕ್ಷನಂದನ' ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂಗ್ಲಿಷ್ ಎಂದರೆ ಅದು ಕೇವಲ ಭಾಷೆಯಲ್ಲ, 'ಲಾಂಗ್-ಏಜ್' (Language) ಅಂದರೆ ದೀರ್ಘಕಾಲ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿರುವುದು. ದಿವಂಗತ ಪಿ.ವಿ. ಐತಾಳರು ಹುಟ್ಟುಹಾಕಿದ ಈ ಸಂಸ್ಥೆಯು ಯಾವುದೇ ಅಡೆತಡೆಗಳಿಲ್ಲದೆ ಅವರ ಮಕ್ಕಳು-ಮೊಮ್ಮಕ್ಕಳ ಕಾಲಕ್ಕೂ ಬೆಳೆದು ನಿಂತಿರುವುದು ಶ್ಲಾಘನೀಯ. ನಂದನೇಶ್ವರ ಸ್ವಾಮಿಯ ಅನುಗ್ರಹ ಈ ಸಂಸ್ಥೆಯ ಮೇಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಮಾತನಾಡಿ, ಯಕ್ಷನಂದನದ ಆರಂಭಿಕ ಕಾಲದಿಂದಲೂ ದಿ. ಪಿ.ವಿ. ಐತಾಳರ ಸ್ನೇಹವಲಯದಲ್ಲಿ ನಾವೆಲ್ಲರೂ ಇದ್ದೆವು. ಅಂದು ಅವರು ಪಟ್ಟ ಪರಿಶ್ರಮವೇ ಇಂದು ಸಂಸ್ಥೆ ಈ ಮಟ್ಟಿಗೆ ಬೆಳೆದು ಫಲ ನೀಡಲು ಕಾರಣ ಎಂದು ಶುಭ ಹಾರೈಸಿದರು.
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ (PDG) ಪ್ರೊ. ಎನ್. ಪ್ರಕಾಶ್ ಕಾರಂತ್ ಸಾಲಿಗ್ರಾಮ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಮನ್ವಿತ್ ಬಿ. ಶೆಟ್ಟಿ ಅವರ ನಿರ್ವಹಣೆಯಲ್ಲಿ ಸಿದ್ಧಗೊಂಡ 'ಯಕ್ಷನಂದನ' ಸಂಸ್ಥೆಯ ನೂತನ ವೆಬ್ಸೈಟ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ, ದಿವಂಗತ ಪಿ.ವಿ. ಐತಾಳರೇ ಆಂಗ್ಲ ಭಾಷೆಯಲ್ಲಿ ಸಂಭಾಷಣೆ ಬರೆದಿದ್ದ "ನರಕಾಸುರ ಮೋಕ್ಷ" ಮತ್ತು "ಬ್ರಹ್ಮಕಪಾಲ" ಎಂಬ ದ್ವಯ ಯಕ್ಷಗಾನ ಪ್ರಸಂಗಗಳು ಕಾಲಮಿತಿಯಲ್ಲಿ ಪ್ರದರ್ಶನಗೊಂಡು ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದವು.
ವೇದಿಕೆಯಲ್ಲಿ ಯಕ್ಷನಂದನದ ಮಾರ್ಗದರ್ಶಕ ಪ್ರೊ. ಎಂ.ಎಲ್. ಸಾಮಗ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಸಂಚಾಲಕ ಸಂತೋಷ್ ಐತಾಳ್ ಕುಳಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಡಾ. ಪಿ. ಸತ್ಯಮೂರ್ತಿ ಐತಾಳ್ ಸ್ವಾಗತಿಸಿ, ಪಿ. ಸುರೇಶ್ ಐತಾಳ್ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


