ಹಾಸನ: ವಿಶೇಷ ಸಮಗ್ರ ಮತದಾರರ ಪರಿಷ್ಕರಣೆಯ ಕಾರ್ಯಕ್ರಮವು ಪ್ರಸ್ತುತ ನಡೆಯುತ್ತಿದ್ದು, ನನ್ನ ಮತ ನನ್ನ ಹಕ್ಕು ಎಂದು ಸಾರ್ವಜನಿಕರು ಅರಿತುಕೊಳ್ಳಬೇಕು. ಅದಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಂದ ಮತದಾರರ ಪರಿಷ್ಕೃತ ಪಟ್ಟಿಯ ಕುರಿತು ಜಾಗೃತ ಜಾಥಾ ಮಾಡುವ ಮೂಲಕ ಅರಿವು ಮೂಡಿಸುವುದು ಎಲ್ಲರ ಗುರುತರ ಜವಾಬ್ದಾರಿಯಾಗಿದೆ ಎಂದು ಉಪಪ್ರಾಂಶುಪಾಲರಾದ ಮಂಜನಾಥ್ ರವರು ಹೇಳಿದರು.
ನಗರದ ಆರ್. ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢ ಶಾಲಾ ವಿಭಾಗದ ಮಕ್ಕಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಪ್ರಜಾಪ್ರಭುತ್ವದ ಯಶಸ್ವಿಗೆ ಜಾಗೃತ ಮತದಾರರ ಅಗತ್ಯವಿದೆ. ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದರು.
ಶಾಲೆಯ ಚುನಾವಣಾ ಸಾಕ್ಷರತಾ ಸಂಘದ ನೋಡಲ್ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಮಾತನಾಡಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವು ಈಗಾಗಲೇ ಪ್ರಾರಂಭವಾಗಿದ್ದು ಬಿ.ಎಲ್. ಓ ರವರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಸಾರ್ವಜನಿಕರು ಸೌಜನ್ಯತೆಯಿಂದ ವರ್ತಿಸಲು ಅವರಿಗೆ ನಾವೆಲ್ಲ ಅರಿವು ಮೂಡಿಸಬೇಕು. ನಾಗರಿಕರು ಎಸ್.ಐ.ಆರ್ ಕುರಿತು ಮಾಹಿತಿ ತಿಳಿದುಕೊಳ್ಳಬೇಕು. ತಮ್ಮ ವ್ಯಾಪ್ತಿಯ ಮತಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಂಡು ಅಗತ್ಯವಿದ್ದರೆ ಅರ್ಜಿ ನಮೂನೆಯಲ್ಲಿ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ಸ್ವಚ್ಛ ಮತದಾರರಪಟ್ಟಿಯ ರಚನೆಗೆ ಸಹಕರಿಸುವಂತೆ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಾಗೃತಿ ಜಾಥಾ ಕಾರ್ಯಕ್ರಮ, ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಮೂಲಕ ಎಸ್ ಐ ಆರ್ ಕಾರ್ಯಕ್ರಮಗಳನ್ನು ತಿಳಿಸುವುದು, ಕೊಳಚೆ ಪ್ರದೇಶಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭೇಟಿ ನೀಡಿ ಜಾಗೃತಿ ಮೂಡಿಸುವುದು, ವೃತ್ತ ಪತ್ರಿಕೆಗಳಲ್ಲಿ ಎಸ್ ಐ ಆರ್ ಕುರಿತ ವರದಿಗಳನ್ನು ಸಂಗ್ರಹಿಸಿ ತಿಳಿದುಕೊಳ್ಳುವುದು ಮತ್ತು ನಾಗರಿಕರಿಗೂ ತಿಳಿಸುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಎಸ್ ಐ ಆರ್ ಜಾಗೃತಿ ಜಾಥಾದಲ್ಲಿ ಹಿರಿಯ ಶಿಕ್ಷಕರಾದ ಹೆಚ್.ಪಿ. ಮಂಜುಳ, ಎ ವಿ ಗೀತಾರಾಣಿ, ರುದ್ರೇಶ್, ಎಂ.ಆರ್ ರಂಗಾಮಣಿ, ಸತ್ಯನಾರಾಯಣ ಮುರಳಿ, ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


