ಅನುವಾದದ ಮೂಲಕ ಸಾಹಿತ್ಯಕ್ಷೇತ್ರ ಸಂಪನ್ನ- ಹರಿಕೃಷ್ಣ ಪುನರೂರು
ಮಂಗಳೂರು: ಅನುವಾದ ಕಾರ್ಯ ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸುತ್ತದೆ. ಅನುವಾದಕ್ಕೆ ಒಳಗಾದ ಭಾಷೆ ಮತ್ತು ಅನುವಾದ ಮಾಡಲಾದ ಭಾಷೆ ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು.
ತೆಲುಗಿಗೆ ಅನುವಾದವಾದ ಡಾ. ವಸಂತಕುಮಾರ ಪೆರ್ಲ ಅವರ ‘ನಾಕೂರು’ ಕೃತಿಯನ್ನು ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತಾಡಿದರು.
ಇದೇ ಮೊದಲ ಬಾರಿ ತುಳು ಸಣ್ಣಕಥೆಗಳ ಸಂಕಲನವೊಂದು ತೆಲುಗಿಗೆ ಅನುವಾದವಾಗಿ ಹೈದರಾಬಾದ್ ನ ಪ್ರಸಿದ್ಧ ಪ್ರಕಾಶನ ಸಂಸ್ಥೆಯೊಂದರ ಮೂಲಕ ಪ್ರಕಟವಾಗಿ ಹೊರಬರುತ್ತಿದೆ. ಇದು ತುಳುವರಿಗೆ ಹೆಮ್ಮೆಯ ಸಂಗತಿ ಎಂದು ಪುನರೂರು ಹೇಳಿದರು.
ಕೃತಿಯನ್ನು ಪರಿಚಯಿಸಿ ಮಾತಾಡಿದ ಪ್ರಸಿದ್ಧ ತೆಲುಗು ಮತ್ತು ಇಂಗ್ಲಿಷ್ ಸಾಹಿತಿ ಡಾ. ಜಿ. ಆರ್. ಕೃಷ್ಣ ಅವರು, ‘ನಾಕೂರು’ ಕೃತಿಯಲ್ಲಿ ಡಾ. ಪೆರ್ಲ ಅವರು ತುಳುನಾಡಿನ ಸಂಸ್ಕೃತಿ, ಜನಜೀವನವನ್ನು ತುಂಬ ಉತ್ತಮವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕಳೆದ ಒಂದು ಶತಮಾನದ ಕರಾವಳಿಯ ಜೀವನದ ಸಂಗತಿಗಳು ಅತ್ಯಂತ ಹತ್ತಿರದಿಂದ ಚಿತ್ರಿತವಾಗಿದೆ. ತೆಲುಗಿಗೆ ಅನುವಾದ ಮಾಡಿದ ಹೈದರಾಬಾದ್ ನ ಸಾಹಿತಿ ರಂಗನಾಥ ರಾವ್ ಅವರು ತುಳು ಸಂಸ್ಕೃತಿಯನ್ನು ವಿಶಾಲಾಂಧ್ರಕ್ಕೆ ಪರಿಚಯಿಸುವ ದೃಷ್ಟಿಯಿಂದ ಈ ಅಪರೂಪದ ಅನುವಾದ ಕಾರ್ಯ ಮಾಡಿದ್ದಾರೆ. ಅನುವಾದವು ತೆಲುಗಿನಲ್ಲಿ ಉತ್ತಮವಾಗಿ ಮೂಡಿಬಂದಿದೆ ಎಂದರು.
ಮೂಲ ಕೃತಿಕಾರರಾದ ಕವಿ - ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಕೂರು ಎಂಬುದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕುಮಾರಾಧಾರಾ ನದಿಯಲ್ಲಿರುವ ಒಂದು ಆಳ ನೀರಿನ ಗಯ. ಅದು ಈಗ ಪುಣ್ಯಕ್ಷೇತ್ರವಾಗಿದೆ. ಅದನ್ನು ಸಂಕೇತವಾಗಿ ಇಟ್ಟುಕೊಂಡು ನಾಕೂರು, ವಿಷ್ಣುಮಂಗಲ ಮುಂತಾದ ಕಥೆಗಳ ಮೂಲಕ ಕರಾವಳಿಯ ತುಳು ಜನಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಾಗಿದೆ ಎಂದರು.
ತೆಲುಗು ಕವಯಿತ್ರಿ ಡಾ. ಮೈಥಿಲಿ ಮತ್ತು ಸಂಗೀತ ಕಲಾವಿದ ಆಗಮ ಪೆರ್ಲ ಅತಿಥಿಗಳಾಗಿ ಆಗಮಿಸಿದ್ದರು. ಡಾ. ಪೆರ್ಲ ಅವರು ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು. ಲೇಖಕ ಸದಾನಂದ ನಾರಾವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಕವಯಿತ್ರಿ ಕೆ. ಶೈಲಾಕುಮಾರಿ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


