ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಟ್ಟು 32 ದತ್ತಿ ನಿಧಿಗಳಿದ್ದು ಅವುಗಳಲ್ಲಿ ಅತಿ ಹೆಚ್ಚು 12 ದತ್ತಿ ಬಂಟ್ವಾಳ ತಾಲ್ಲೂಕಿನಲ್ಲಿದೆ. ಇದರ ಸದ್ವಿನಿಯೋಗವನ್ನು ನಾವು ವರ್ಷಂಪ್ರತಿ ಪಡೆಯುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಜಿಲ್ಲಾ ಕಸಾಪ ನಿರಂತರ ಕಾರ್ಯಕ್ರಮಗಳನ್ನು, ಸಮ್ಮೇಳನ ಮತ್ತುಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ದತ್ತಿ ನಿಧಿ ಉಪನ್ಯಾಸಗಳನ್ನಂತೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಆಯೋಜಿಸುತ್ತಾ ಬಂದಿದ್ದು ವಿದ್ಯಾರ್ಥಿಗಳೆಲ್ಲರೂ ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂಬುದಾಗಿ ದ.ಕ.ಜಿಲ್ಲಾ ಕಸಾಪದ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ ಹೇಳಿದರು.
ಅವರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತುಂಬೆ ಪದವಿ ಪೂರ್ವ ಕಾಲೇಜು ಜಂಟಿಯಾಗಿ ಏರ್ಪಡಿಸಿದ್ದ ದತ್ತಿ ನಿಧಿ ಉಪನ್ಯಾಸ ಸಮಾರಂಭದಲ್ಲಿ ಅಧ್ಯಕ್ಷತೆ ವಹಸಿ ಮಾತನಾಡಿದರು.
ವಿಶ್ರಾಂತ ಮುಖ್ಯೋಪಾಧ್ಯಾಯರಾಗಿರುವ ಮಹಾಬಲೇಶ್ವರ ಹೆಬ್ಬಾರ್ ಅವರು ದಿ.ಕೆ ಸುಬ್ಬಣ್ಣ ಭಟ್ ದತ್ತಿ ಉಪನ್ಯಾಸ ವಿಷಯ "ಕನ್ನಡ ಕಾವ್ಯಗಳ ಮೇಲೆ ಸಂಸ್ಕೃತದ ಪ್ರಭಾವ" ಎಂಬುದರ ಕುರಿತು ಮಾತನಾಡುತ್ತ, ಕನ್ನಡದಲ್ಲಿ ರಾಮಾಯಣ ಮಹಾಭಾರತ ಕೃತಿ ರಚನೆಯಲ್ಲಿಂದ ತೊಡಗಿ ಇವತ್ತಿನ ತನಕವೂ ಕನ್ನಡ ಕಾವ್ಯ ಹಾಗೂ ಇತರ ಪ್ರಕಾರದ ಕೃತಿಗಳ ಮೇಲೆ ಸಂಸ್ಕೃತ ಭಾಷೆಯು ಪ್ರಭಾವ ಬೀರುತ್ತಾ ಬಂದಿದೆ.ಕಥಾ ವಸ್ತು, ಕಾವ್ಯ ವಸ್ತು, ಛಂದಸ್ಸು-ವ್ಯಾಕರಾಣಾದಿಳಲ್ಲಿ ಎಂಬಂತೆ ಗದ್ಯ-ಪದ್ಯಗಳೆರಕ್ಕೂ ಸಂಸ್ಕೃತ ಭಾಷೆ ಹಾಸು ಹೊಕ್ಕಾಗಿರುವುದನ್ನು ಗಮನಿಸಬಹುದು ಹೇಳಿದರು.
ಎನ್.ಗಣಪತಿ ಭಟ್ ಅವರ ಹೆಸರಿನ ದತ್ತಿ "ಸಂಸ್ಕಾರ ಸಮಾಜ' ಎಂಬ ವಿಷಯದಲ್ಲಿ ಕವಯತ್ರಿ ರಜನಿ ಚಿಕ್ಕಯಮಠ ಮಾತನಾಡಿ, ಸಂಸ್ಕಾರ ಎನ್ನುವುದು ಬದುಕಿಗೆ ಮುನ್ನುಡಿ ಮತ್ತು ಕನ್ನಡಿ ಇದ್ದ ಹಾಗೆ. ನಮ್ಮ ಬದುಕನ್ನು ಸುಂದರವಾಗಿಸಲು ಹಿರಿಯರು ಹಾಕಿ ಕೊಟ್ಟ ಸಂಸ್ಕಾರದ ಚೌಕಟ್ಟನ್ನು ಅರಿತು ಅನುಸರಿಸಿ ನಾವು ಉಳಿಸಬೇಕಾಗಿದೆ ಎಂದು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಮೆಲ್ಕಾರ್ ಮಹಿಳಾ ಪದವಿ ಮತ್ತು ಪ.ಪೂ. ಕಾಲೇಜುಗಳ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್ ಹಾಜಿ ಜಿ. ಅಬ್ದುಲ್ ಖಾದರ್, ಗೋಳ್ತಮಜಲು ಅವರ ಹೆಸರಿನ ದತ್ತಿ, "ಜಾತ್ಯತೀತ ಸಮಾಜ ನಿರ್ವಹಣೆ" ಎಂಬ ವಿಷಯದಲ್ಲಿ ಮಾತನಾಡುತ್ತಾ, ಜಾತಿ-ಧರ್ಮದ ನಡುವಿನ ಗೋಡೆಯಿಂದ ಹೊರಬಂದು ಜಾತ್ಯತೀತ ಸಮಾಜ ಕಟ್ಟುವ ಏಕೈಕ ವ್ಯವಸ್ಥೆ ಇದ್ದರೆ ಅದು ಸಾಹಿತ್ಯವಾಗಿದೆ. ಸಾಹಿತ್ಯ ಪ್ರಪಂಚದಲ್ಲಿ ಮೇಲು-ಕೀಳು, ಜಾತಿ-ಧರ್ಮ, ಸ್ಪರ್ಶ-ಅಸ್ಪ್ರಶ್ಯ ಎಂಬ ಮಾತೇ ಬರುವುದಿಲ್ಲ. ಸಾಹಿತ್ಯ ಕ್ಷೇತ್ರ ಎಲ್ಲರಿಗೂ ಮುಕ್ತವಾಗಿದೆ ಎಂದು ಹೇಳಿದರು.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಸು.ಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಹಜಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಹನೀಫ್ ಹಾಜಿ ಅವರು ತನ್ನ ತಂದೆಯ ಹೆಸರಿನ ದತ್ತಿ ಕಾರ್ಯಕ್ರಮವನ್ನು ಪರಿಷತ್ತು ನಡೆಸುತ್ತಾ ಬರುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಉಪನ್ಯಾಸಕಿ ಪ್ರಫುಲ್ಲ ಶೆಟ್ಟಿ ಉಸ್ತುವಾರಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು.
ಬಂಟ್ವಾಳ ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪದಾಧಿಕಾರಿ ಸದಸ್ಯ ಸಾಯಿರಾಂ ಜೆ ನಾಯಕ್ ಕೆ, ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ನ ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್, ಮತ್ತಿತರರು ಉಪಸ್ಥಿತರಿದ್ದ ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ದಿನೇಶ ಶೆಟ್ಟಿ ಅಳಿಕೆ ಸ್ವಾಗತಿಸಿದರು. ಬಂಟ್ವಾಳ ಕಸಾಪ ದ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಡಿ.ಬಿ.ವಂದಿಸಿ, ಇತಿಹಾಸ ಉಪನ್ಯಾಸಕ ಶರತ್ ಆಳ್ವ ಚನಿಲ ನಿರೂಪಣೆಗೈದರು. ಅಶೋಕ್ ಸಹಕರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

