ನಮ್ಮ ದೇಶದ ಸೈನಿಕರ ವೀರಗಾಥೆ ಪ್ರೇರಣಾದಾಯಿ ; ಅವಿನಾಶ್ ಕೊಡೆಂಕಿರಿ
ಪುತ್ತೂರು: ಸಹಸ್ರಾರು ವರ್ಷಗಳಿಂದ ಪರಕೀಯರ ದಾಳಿಯನ್ನು ಎದುರಿಸಿ ನಿಂತ ನಮ್ಮ ದೇಶದ ಸೈನಿಕರ ವೀರಗಾಥೆ ಪ್ರೇರಣಾದಾಯಿ ಕಥೆಯಾಗಿದೆ. ನಮ್ಮ ಸೈನಿಕರ ಕಾರಣದಿಂದಲಾಗಿ ನಾವಿಂದು ನಿರ್ಭಯ ರಾತ್ರಿಗಳನ್ನು ಕಳೆಯುತ್ತಿದ್ದೇವೆ. 1999ರ ಕಾರ್ಗಿಲ್ ಯುದ್ಧದಲ್ಲಿ ದೇಹಕ್ಕೆ ಗುಂಡು ಬಿದ್ದರೂ ಕೂಡ ತೆವಳಿಕೊಂಡು ಯುದ್ಧ ಮಾಡಿದ ಇತಿಹಾಸ ನಮ್ಮ ಸೈನಿಕರದ್ದು ಎಂದು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಸೋಮವಾರ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ 527 ಮಂದಿ ನಮ್ಮ ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆಗೈದಿದ್ದಾರೆ. ಕ್ಯಾಪ್ಟನ್ ವಿಕ್ರಂ ಭಾತ್ರಾ, ಕ್ಯಾಪ್ಟನ್ ಮನೋಜ್ ಪಾಂಡೆ ಹಾಗೂ ಕ್ಯಾಪ್ಟನ್ ಸೌರಭ್ ಕಾಲಿಯಾರಂತಹ ಅಪ್ಪಟ ದೇಶಭಕ್ತ ಸೈನಿಕ ಅಧಿಕಾರಿಗಳನ್ನು ನಾವು ಯುದ್ಧದಲ್ಲಿ ಕಳೆದುಕೊಂಡಿದ್ದೇವೆ. ಭಾರತ ದೇಶದ ದಕ್ಷಿಣದ ತುತ್ತತುದಿಯಾದ ಕನ್ಯಾಕುಮಾರಿಯಲ್ಲಿ, -40 ಡಿಗ್ರಿ ಸೆಲ್ಸಿಯಸ್ ತಾಪಮಾನದ ಪ್ರದೇಶದಲ್ಲಿ, ಮರುಭೂಮಿಯಲ್ಲಿ, ಸಬ್ ಮೆರೈನ್ನಲ್ಲಿ, ಹಿಮಾಲಯದ ತುತ್ತು ತುದಿಯಲ್ಲಿ, ಸಾಗರದಲ್ಲಿ... ಹೀಗೆ ನಾನಾ ಪ್ರದೇಶಗಳಲ್ಲಿ ಚಳಿ ಗಾಳಿ ಮಳೆ ಲೆಕ್ಕಿಸದೆ ಹೋರಾಡುವ ಸೈನಿಕರನ್ನು ಮಾನಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಮಾತನಾಡಿ ಭಾರತವು ಎಂದೂ ಯಾರ ಮೇಲೂ ಆಕ್ರಮಣ ಮಾಡಿಲ್ಲ. ಆದರೆ ತನ್ನ ಮೇಲೆ ಆಕ್ರಮಣ ನಡೆಸಿದವರಿಗೆ ತಕ್ಕ ಪ್ರತಿಫಲವನ್ನು ಕೊಟ್ಟಿದೆ. ಕೇವಲ ಗಡಿಯಲ್ಲಷ್ಟೇ ಅಲ್ಲದೆ ನಮ್ಮ ನಡುವೆಯೂ ದೇಶದ ವೈರಿಗಳಿದ್ದಾರೆ. ಅಂತಹಜ ಶತ್ರುಗಳ ಬಗೆಗೆ ಸದಾ ಎಚ್ಚರದಿಂದಿರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಯೂರ್ ಎಸ್. ಮಯ್ಯ ಪ್ರಾರ್ಥಿಸಿ, ಸ್ಪಂದನಾ ಭಟ್ ಎಮ್. ಸ್ವಾಗತಿಸಿದರು. ಯುದ್ಧಕ್ಕೆ ಹೋರಾಡುವ ಸೈನಿಕನು ತನ್ನ ಸ್ನೇಹಿತನಿಗೆ ಬರೆದ ಪತ್ರದ ಕುರಿತಾಗಿ ಯಶಸ್ ಬಿ.ಜೆ ಹಾಡಿನ ಮೂಲಕ ಪ್ರಸ್ತುತಪಡಿಸಿದರು. ರತುಲ್ ಅದ್ವೈತ್ ಕೆ. ವಂದಿಸಿ, ಪ್ರಣಮ್ಯ ಪಿ. ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


