ಆಟಿ ಎನ್ನುವುದು ತುಳುನಾಡಿನ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ. ಇದು ಜುಲೈ-ಆಗಸ್ಟ್ ತಿಂಗಳಿನಲ್ಲಿ, ಅಂದರೆ ಆಷಾಢ ಮಾಸದಲ್ಲಿ ಆಚರಿಸಲ್ಪಡುತ್ತದೆ. ಆಷಾಢ ನಕ್ಷತ್ರದ ಹೆಸರಿನಿಂದ ಈ ಮಾಸಕ್ಕೆ ಆಷಾಢ ಎಂಬ ಹೆಸರು ಬಂದಿದೆ.
ಪುರಾಣಗಳ ಪ್ರಕಾರ ಈ ತಿಂಗಳಿನಲ್ಲಿ ಮಹಾವಿಷ್ಣುವು ದೇವಶಯನಿ ಏಕಾದಶಿಯಿಂದ ಯೋಗ ನಿದ್ರೆಗೆ ಪ್ರವೇಶಿಸುತ್ತಾನೆ. ಯೋಗ ನಿದ್ರೆಯ ಉದ್ದೇಶ ಹೊರಗಿನ ಆಡಂಬರವನ್ನು ಕಡಿಮೆ ಮಾಡಿ, ಮನುಷ್ಯನನ್ನು ಆಂತರಿಕ ಸಾಧನೆ, ಭಕ್ತಿ ಮತ್ತು ಮಾನಸಿಕ ಶಾಂತಿಯ ಕಡೆಗೆ ಕೊಂಡೊಯ್ಯುವುದಾಗಿದೆ. ಹೀಗಾಗಿ ಈ ನಾಲ್ಕು ತಿಂಗಳನ್ನು ಚಾತುರ್ಮಾಸ ಎಂದು ಕರೆಯುತ್ತಾರೆ.
ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ಹಲವು ವಿಶಿಷ್ಟ ಆಚರಣೆಗಳು ನಡೆಯುತ್ತವೆ. ಪರವ ಜನಾಂಗದವರು ಕಳೆಂಜನ ವೇಷ ಧರಿಸಿ ತಮಟೆ ಬಾರಿಸುತ್ತಾ ಮನೆಮನೆಗೆ ಹೋಗಿ ಶುಭ ಸಂದೇಶ ನೀಡುವ "ಆಟಿ ಕಳೆಂಜ" ಒಂದು ಪ್ರಮುಖ ಆಚರಣೆಯಾಗಿದೆ. ಅವರು ತೆಂಗಿನ ಸೋಗೆಯ ಎಲೆ ಮತ್ತು ಹೂವುಗಳಿಂದ ಅಲಂಕರಿಸಿಕೊಳ್ಳುತ್ತಾರೆ.
ಇದಲ್ಲದೆ, "ತಡ್ಯಗ್ ಪಾಡುನು" ಎಂಬ ಆಚರಣೆಯಲ್ಲಿ ನಮ್ಮನ್ನು ಅಗಲಿದ ಹಿರಿಯರನ್ನು ಸ್ಮರಿಸಲಾಗುತ್ತದೆ. ಅಡುಗೆ ಮಾಡುವ ಮೊದಲು ಸ್ನಾನ ಮಾಡಿ, ಹಿರಿಯರಿಗಾಗಿ ಎಲೆಯಲ್ಲಿ ಊಟ ಮತ್ತು ತೀರ್ಥವನ್ನು ಇಡುವ ಪದ್ಧತಿ ಇದೆ. "ಆಟಿ ಕುಲ್ಲುನು" ಸಂಪ್ರದಾಯದ ಪ್ರಕಾರ, ಹೊಸದಾಗಿ ಮದುವೆಯಾದ ಹೆಣ್ಣು ತನ್ನ ತವರು ಮನೆಗೆ ಹೋಗಿ ಒಂದು ತಿಂಗಳು ಇರುತ್ತಿದ್ದಳು.
ಆಟಿ ಅಮಾವಾಸ್ಯೆಯಂದು ಕಾಡಿನ ಪಾಲೆ ಮರದ ತೊಗಟೆಯ ಕಷಾಯವನ್ನು ಖಾಲಿ ಹೊಟ್ಟೆಗೆ ಕುಡಿಯುವ ಪದ್ಧತಿಯಿದೆ. ಇದು ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಲಾಗಿದೆ.
ಆಟಿ ತಿಂಗಳಲ್ಲಿ ಆಹಾರದಲ್ಲೂ ವಿಶೇಷತೆ ಇದೆ. ಹಲಸಿನ ಹಪ್ಪಳ, ಗಟ್ಟಿ, ಹಲ್ವ, ದೋಸೆ, ಸಾಂತಾಣಿ, ಹಲಸಿನ ಸೊಂಟೆ, ಮಾವಿನ ಚಟ್ನಿ, ತಿಮರೆ ಚಟ್ನಿ, ನುಗ್ಗೆಸೊಪ್ಪಿನ ಪಲ್ಯ ಮತ್ತು ಕಣಿಲೆ-ಹೆಸರುಕಾಳಿನ ಗಸಿ ಮುಂತಾದವುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ.
ಹೀಗೆ ಆಷಾಢ ಮಾಸವನ್ನು ಅಶುಭ ಎಂದು ಪರಿಗಣಿಸಿದರೂ, ಇದು ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಲು, ಆರೋಗ್ಯ ಕಾಪಾಡಿಕೊಳ್ಳಲು ಮತ್ತು ದೇವರ ಚಿಂತನೆ ಮಾಡಲು ಕಲಿಸುವ ಪವಿತ್ರ ತಿಂಗಳಾಗಿದೆ. ನಮ್ಮ ಹಿರಿಯರು ಕೇವಲ ಸಂಪ್ರದಾಯವನ್ನು ಮಾತ್ರವಲ್ಲ, ಅದರೊಂದಿಗೆ ಜೀವನದ ಅಮೂಲ್ಯ ಜ್ಞಾನವನ್ನೂ ನಮಗೆ ನೀಡಿದ್ದಾರೆ.
-ಶಿವಾನಿ ಕೊಡಂಗಾಯಿ
ದ್ವಿತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


