ತುಳುನಾಡಿನಲ್ಲಿ ಆಟಿ ತಿಂಗಳು (ಆಷಾಢ ಮಾಸ) ಎಂದೇ ಅತ್ಯಂತ ಜನಪ್ರಿಯವಾಗಿದು. ಈ ತಿಂಗಳಲ್ಲಿ ಮಳೆಗಾಲವು ತನ್ನ ಉತ್ತುಂಗದಲ್ಲಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸಂಪ್ರದಾಯವಿದೆ. ಆದ್ದರಿಂದ ಔಷಧೀಯ ಗುಣಗಳಿರುವ ಆಹಾರಗಳನ್ನು ಸೇವಿಸುವುದು, ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ಹಿರಿಯರ ಸಂಪ್ರದಾಯಗಳನ್ನು ಪಾಲಿಸುವುದು ತುಳುನಾಡಿನ ಜನರ ಜೀವನದ ಭಾಗವಾಗಿದೆ. ಇದು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಸಂಪ್ರದಾಯವೆಂದು ಹೇಳಿದರು ತಪ್ಪಾಗದು.
ಆಟಿ ತಿಂಗಳಲ್ಲಿ ತಯಾರಿಸುವ ಆಹಾರಗಳು ರುಚಿಯ ಜೊತೆ ಜೊತೆಗೆ ಆರೋಗ್ಯಕ್ಕೂ ಮಹತ್ವಪೂರ್ಣವಾಗಿದೆ. ಆಟಿ ಅಮಾವಾಸ್ಯೆಯಂದು ಆಟಿ ಮರದ ತೊಗಟೆಯ ರಸವನ್ನು ಸೇವಿಸುವ ಸಂಪ್ರದಾಯ ಇಂದಿಗೂ ಹಲವೆಡೆ ಜೀವಂತವಾಗಿದ್ದು ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ಇದೇ ವೇಳೆ ಆಟಿ ಕಷಾಯವನ್ನು ಕೂಡ ಔಷಧೀಯ ಸಸ್ಯಗಳಿಂದ ತಯಾರಿಸಿ ಸೇವಿಸಲಾಗುತ್ತದೆ.
ಈ ತಿಂಗಳಲ್ಲಿ ಪತ್ರೊಡೆ (ಪತ್ರಡೆ), ಹಲಸಿನ ಬಂಜದ ಪಲ್ಯ, ಕಣಿಲೆ (ಬಿದಿರಿನ ಮೊಳೆ) ಪದಾರ್ಥ, ವಿವಿಧ ಸೊಪ್ಪಿನ ಪದಾರ್ಥಗಳು, ಅಕ್ಕಿಯಿಂದ ತಯಾರಿಸುವ ಸಾಂಪ್ರದಾಯಿಕ ತಿನಿಸುಗಳು ಹಾಗೂ ಆಟಿ ಪಾಯಸಗಳನ್ನು ಮನೆಮನೆಗಳಲ್ಲಿ ಮಾಡಲಾಗುತ್ತದೆ. ಇವು ಮಳೆಗಾಲದಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರವಾಗಿದೆ ಎಂದು ಹೇಳಿದರು ತಪ್ಪಾಗದು.
ಆಟಿ ತಿಂಗಳ ಆಹಾರ ಪದ್ಧತಿ ಕೇವಲ ಹೊಟ್ಟೆ ತುಂಬಿಸುವುದಕ್ಕಲ್ಲ; ಅದು ಪ್ರಕೃತಿಯೊಡನೆ ಹೊಂದಿಕೊಂಡ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಹಿರಿಯರಿಂದ ಕಿರಿಯರಿಗೆ ಈ ಸಂಪ್ರದಾಯಗಳು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿವೆ. ಇಂದಿನ ಆಧುನಿಕ ಜೀವನದಲ್ಲಿಯೂ ಈ ಆಹಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ತುಳುನಾಡಿನ ಆಟಿ ತಿಂಗಳು ಕೇವಲ ಒಂದು ಮಾಸವಲ್ಲ. ಅದು ಪ್ರಕೃತಿಯೊಂದಿಗೆ ಮಾನವನ ಬಾಂಧವ್ಯ, ಆರೋಗ್ಯಕರ ಜೀವನಶೈಲಿ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಈ ಸಂಪ್ರದಾಯಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ..
- ಕೌಶಲ್ಯ ಅಂಬೇಕಲ್ಲು
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


