114 ವರ್ಷಗಳ ಸೇವೆಯ ಸಂಭ್ರಮದಲ್ಲಿ ದೇರಳಕಟ್ಟೆಯಲ್ಲಿ MCC ಬ್ಯಾಂಕ್‌ನ 22ನೇ ಶಾಖೆ ಉದ್ಘಾಟನೆ

Upayuktha
0

ಮಂಗಳೂರು: 1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 22ನೇ ಶಾಖೆ ಹಾಗೂ ನೂತನ ಎಟಿಎಂ ಅನ್ನು ಭಾನುವಾರ, ಜೂನ್ 28ರಂದು ದೇರಳಕಟ್ಟೆಯ ಫಾ. ಮುಲ್ಲರ್ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ಉದ್ಘಾಟಿಸಿತು.


ನೂತನ ಶಾಖೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ. ಫಾ. ನಿಲೇಶ್ ಕ್ರಾಸ್ತಾ ಅವರು ಎಟಿಎಂ ಅನ್ನು ಉದ್ಘಾಟಿಸಿ ಚಾಲನೆ ನೀಡಿದರು. ಉರ್ಸುಲಿನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್‌ನ ಸುಪೀರಿಯರ್ ಜನರಲ್ ವಂ. ಸಿ. ಮಿಲ್ಲಿ ಫೆರ್ನಾಂಡಿಸ್ ಅವರು ಸೇಫ್ ರೂಂ ಅನ್ನು ಉದ್ಘಾಟಿಸಿದರೆ, ಫಾ. ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗದ (FMHPD) ಆಡಳಿತಾಧಿಕಾರಿ ವಂ. ಫಾ. ನೆಲ್ಸನ್ ದೀರಜ್ ಪಾಯ್ಸ್ ಅವರು ಬ್ಯಾಂಕಿನ ಇ-ಸ್ಟಾಂಪ್ ಸೇವೆಗೆ ಚಾಲನೆ ನೀಡಿದರು. ಪಾಣೀರ್‌ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನ ಧರ್ಮಗುರು ವಂ. ಫಾ. ವಿಕ್ಟರ್ ಡಿ'ಮೆಲ್ಲೊ ಅವರು ನೂತನ ಶಾಖೆಗೆ ಆಶೀರ್ವಚನ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅನಿಲ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಂ. ಸಿ. ಮಿಲ್ಲಿ ಫೆರ್ನಾಂಡಿಸ್ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ರೆವ. ಫಾ. ನಿಲೇಶ್ ಕ್ರಾಸ್ತಾ ಹಾಗೂ ಕೋಟೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ'ಸಿಲ್ವಾ ಹಾಗೂ ಮಹಾಪ್ರಬಂಧಕ ಸುನಿಲ್ ಮೆನೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಅನಿಲ್ ಲೋಬೊ ಅವರು ಸಹಕಾರ ಬ್ಯಾಂಕಿಂಗ್ ಮತ್ತು ಗ್ರಾಹಕ ಸೇವೆಯತ್ತ ಎಂಸಿಸಿ ಬ್ಯಾಂಕ್‌ನ ಬದ್ಧತೆಯನ್ನು ಪುನರುಚ್ಚರಿಸಿದರು. ದೇರಳಕಟ್ಟೆ ಜನತೆ ನೀಡಿದ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಜನರ ವಿಶ್ವಾಸ ಮತ್ತು ಸಹಕಾರದಿಂದ ಈ ಶಾಖೆ ಯಶಸ್ಸು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಪ್ರಸ್ತುತ ಆಡಳಿತದ ಅವಧಿಯಲ್ಲಿ ಐದು ಹೊಸ ಶಾಖೆಗಳನ್ನು ಆರಂಭಿಸಲಾಗಿದ್ದು, ಪ್ರತಿಯೊಂದು ಶಾಖೆಯೂ ಮೊದಲ ವರ್ಷದಲ್ಲೇ ₹10 ಕೋಟಿ ವ್ಯವಹಾರ ಸಾಧಿಸಿರುವುದು ಸಿಬ್ಬಂದಿಯ ಪರಿಶ್ರಮ ಮತ್ತು ಗ್ರಾಹಕರ ವಿಶ್ವಾಸದ ಫಲ ಎಂದು ಹೇಳಿದರು.


ವಂ. ಫಾ. ವಿಕ್ಟರ್ ಡಿ'ಮೆಲ್ಲೊ ಮಾತನಾಡಿ, ಭಾನುವಾರದಂದು ನಡೆದ ಈ ಉದ್ಘಾಟನೆ ಕ್ರೈಸ್ತ ಸಮುದಾಯಕ್ಕೆ ಶುಭಕರ ದಿನವಾಗಿದ್ದು, ಬ್ಯಾಂಕ್ ಇನ್ನಷ್ಟು ಬೆಳೆಯಲಿ ಎಂದು ಆಶಿಸಿದರು. ಬ್ಯಾಂಕಿನ ಯಶಸ್ಸು ಸಾರ್ವಜನಿಕರ ವಿಶ್ವಾಸದ ಫಲವಾಗಿದೆ ಎಂದು ಹೇಳಿದ ಅವರು, ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಅವರ ಉಡುಪು ಅಥವಾ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ನಿರ್ಣಯಿಸದೆ, ಪ್ರತಿಯೊಬ್ಬರನ್ನೂ ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.


ಮುಖ್ಯ ಅತಿಥಿ ವಂ. ಸಿ. ಮಿಲ್ಲಿ ಫೆರ್ನಾಂಡಿಸ್ ಮಾತನಾಡಿ, ದೇರಳಕಟ್ಟೆ ಶಾಖೆಯ ಉದ್ಘಾಟನೆ ಬ್ಯಾಂಕ್‌ನ ಬೆಳವಣಿಗೆಯ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ ಎಂದರು. ಠೇವಣಿಗಳನ್ನು ಸಂಗ್ರಹಿಸಿ, ಅಗತ್ಯವಿರುವವರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಎಂಸಿಸಿ ಬ್ಯಾಂಕ್ ಜನರ ವಿಶ್ವಾಸ ಗಳಿಸಿದ್ದು, ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ಉಳಿತಾಯ ಯೋಜನೆಗಳ ಮೂಲಕ ಕುಟುಂಬಗಳ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತಿರುವ ಬ್ಯಾಂಕ್ ದೇರಳಕಟ್ಟೆ ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.


ರೆವ. ಫಾ. ನಿಲೇಶ್ ಕ್ರಾಸ್ತಾ ಅವರು ಎಂಸಿಸಿ ಬ್ಯಾಂಕ್‌ಗೆ ಅಭಿನಂದನೆ ಸಲ್ಲಿಸಿ, 146 ವರ್ಷಗಳ ಇತಿಹಾಸ ಹೊಂದಿರುವ ಫಾ. ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು ಹಾಗೂ 114 ವರ್ಷಗಳ ಪರಂಪರೆ ಹೊಂದಿರುವ ಎಂಸಿಸಿ ಬ್ಯಾಂಕ್ ಎರಡೂ ಸೇವೆ, ವಿಶ್ವಾಸ ಮತ್ತು ಮಾನವೀಯತೆಯ ಮೌಲ್ಯಗಳ ಮೇಲೆ ಸ್ಥಾಪಿತವಾಗಿವೆ ಎಂದು ಹೇಳಿದರು. ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯೇ ಸಮಗ್ರ ಅಭಿವೃದ್ಧಿ ಎಂದು ಅವರು ತಿಳಿಸಿದರು. ಬ್ಯಾಂಕಿಂಗ್ ವ್ಯಕ್ತಿ ಹಾಗೂ ಸಮಾಜದ ಆರ್ಥಿಕ ಪ್ರಗತಿಗೆ ಅತ್ಯಗತ್ಯವಾಗಿದ್ದು, ದೇರಳಕಟ್ಟೆಯ ಜನರ ಆರ್ಥಿಕ ಅಭಿವೃದ್ಧಿಗೆ ಎಂಸಿಸಿ ಬ್ಯಾಂಕ್ ಪ್ರಮುಖ ಪಾತ್ರ ವಹಿಸಲಿ ಎಂದು ಆಶಿಸಿದರು.


ಕೋಟೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಅವರು ನೂತನ ಶಾಖೆಯ ಉದ್ಘಾಟನೆಗೆ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸುವ ಮೂಲಕ ಬ್ಯಾಂಕ್ ಬೆಳೆಯಲಿ ಎಂದು ಹಾರೈಸಿದ ಅವರು, ಸ್ಥಳೀಯರು ಬ್ಯಾಂಕ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಬ್ಯಾಂಕ್‌ನ ಕಾರ್ಯವನ್ನು ಶ್ಲಾಘಿಸಿದರು.


ಸಮುದಾಯ ಸೇವೆಯ ಅಂಗವಾಗಿ ಎಂಸಿಸಿ ಬ್ಯಾಂಕ್ ದೇರಳಕಟ್ಟೆ ಭಾಗದ ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಾದ ಫ್ರ್ಯಾಂಕಿ ಫ್ರಾನ್ಸಿಸ್ ಕುಟಿನ್ಹಾ, ಅಲ್ವಿನ್ ಜೆರೋಮ್ ಡಿ'ಸೋಜಾ, ಫಯಾಝ್ ಮಡೂರು, ಸಿಎ ಮ್ಯಾಕ್ಸಿಮ್ ಫೆರ್ನಾಂಡಿಸ್, ಉಗ್ಗಪ್ಪ ಪೂಜಾರಿ ಹಾಗೂ ಶಫಿ ಬಬ್ಬುಕಟ್ಟೆ ಅವರನ್ನು ಸನ್ಮಾನಿಸಿತು. ಬ್ಯಾಂಕ್ ವತಿಯಿಂದ ಉರ್ಸುಲಿನ್ ಸಿಸ್ಟರ್ಸ್ ವಿಶೇಷ ಚೇತನ ಮಕ್ಕಳ ಶಾಲೆಗೆ ₹1,00,000, ಪ್ರಿನ್ಸಿತಾ ಡಿ'ಸೋಜಾ ಅವರ ವಿದ್ಯಾಭ್ಯಾಸಕ್ಕೆ ₹25,000, ಮರ್ಸಿ ಕೇರ್ ಚಾರಿಟೇಬಲ್ ಟ್ರಸ್ಟ್‌ಗೆ ₹50,000 ಹಾಗೂ ಓಲವಿನಹಳ್ಳಿ ಆಶ್ರಮಕ್ಕೆ ₹1,00,000 ಧನಸಹಾಯ ವಿತರಿಸಲಾಯಿತು.


ನೂತನ ಶಾಖೆಯ ಒಳಾಂಗಣ ಕಾಮಗಾರಿಗೆ ಕೊಡುಗೆ ನೀಡಿದ ಎಂಜಿನಿಯರ್ ಕಾರ್ತಿಕ್ ಕಿರಣ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ಗೌರವ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ'ಸಿಲ್ವಾ, ನಿರ್ದೇಶಕರಾದ ಆಂಡ್ರ್ಯೂ ಡಿ'ಸೋಜಾ, ಡೇವಿಡ್ ಡಿ'ಸೋಜಾ, ಮೆಲ್ವಿನ್ ವಾಸ್, ಜೆ.ಪಿ. ರೋಡ್ರಿಗಸ್, ಅನಿಲ್ ಪತ್ರಾವೊ, ಎಲ್ರಾಯ್ ಕಿರಣ್ ಕ್ರಾಸ್ತಾ, ಐರಿನ್ ರೆಬೆಲ್ಲೋ, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ. ಮೊಂತೇರೊ ಹಾಗೂ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.


ನಿರ್ದೇಶಕ ರೋಶನ್ ಡಿ'ಸೋಜಾ ಸ್ವಾಗತಿಸಿ, ಶೈನಿ ವೀಭಾ ಡಿ'ಸೋಜಾ ನಿರೂಪಿಸಿ, ದೇರಳಕಟ್ಟೆ ಶಾಖೆಯ ವ್ಯವಸ್ಥಾಪಕಿ ಜೂಲಿಯೆಟ್ ಡಿ'ಸೋಜಾ ವಂದಿಸಿದರು. ಬ್ಯಾಂಕ್ ಸಿಬ್ಬಂದಿಯಿಂದ ಬ್ಯಾಂಕ್ ಗೀತೆ ಹಾಗೂ ಪ್ರಾರ್ಥನಾ ಗೀತೆ ಹಾಡಲಾಯಿತು. ಬಳಿಕ ಎಂಸಿಸಿ ಬ್ಯಾಂಕ್‌ನ ಇತಿಹಾಸ ಮತ್ತು ಸಾಧನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top