ನಮ್ಮ
ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಹಿರಿಯ ಮಗನನ್ನು ತಂದೆ ಸಮಾನ ಮತ್ತು
ಅತ್ತಿಗೆ ತಾಯಿ ಎಂಬಂತೆ ಭಾವಿಸುತ್ತಾರೆ.
ತಂದೆ ತಾಯಿಯ ನಂತರದ ಸ್ಥಾನವನ್ನು ಪಡೆದ ಹಿರಿಯ ಮಕ್ಕಳು
ಕೌಟುಂಬಿಕ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಗುತ್ತದೆ. ಮತ್ತೆ ಎಷ್ಟೋ ಬಾರಿ ಹಿರಿಯ ಮಕ್ಕಳು
ತಮ್ಮ ತಂದೆಯ ಮರಣ ನಂತರ ಕುಟುಂಬದ
ಪರಿಪಾಲನೆಗೆ ತಮ್ಮ ವೈಯುಕ್ತಿಕ ಸುಖ
ಭೋಗಗಳನ್ನು ಮರೆತು ಕರ್ತವ್ಯ ಬದ್ಧರಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡುತ್ತಾರೆ ಕೂಡ.
ಪಾಲಕರಿಗೆ
ತಮ್ಮ ಕಿರಿಯ ಮಕ್ಕಳ ಮೇಲೆ ಸಹಜವಾಗಿಯೇ ತುಸು
ಕಾಳಜಿ ಹೆಚ್ಚು ಮತ್ತು ತಮ್ಮ ಹಿರಿಯ ಮಕ್ಕಳನ್ನು
ತಮ್ಮ ಮುಂದಿನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ
ನಿಟ್ಟಿನಲ್ಲಿ ಬೆಳೆಸುತ್ತಾರೆ. ಹೀಗಾಗಿ ಸಹಜವಾಗಿಯೇ ಹಿರಿಯ ಮಕ್ಕಳು ತುಸು ಸೂಕ್ಷ್ಮಪ್ರಜ್ಞೆಯವರಾಗಿರುತ್ತಾರೆ.
ಆದರೆ
ಕಾಲಘಟ್ಟ ಯಾವುದೇ ಇರಲಿ ಹಿಂದಿನ ಒಡಹುಟ್ಟಿದವರಾಗಲೀ ಇಂದಿನ ಪೀಳಿಗೆಯೇ ಇರಲಿ ಸಾಮಾನ್ಯವಾಗಿ ನಾವು ನೋಡುವ ಕೆಲ
ವಿಪರ್ಯಾಸಗಳು ಹೀಗಿರುತ್ತವೆ. ತಮ್ಮ ಮಕ್ಕಳನ್ನು ಬೇರೆಯವರಿಗೆ
ಪರಿಚಯಿಸುವ ಪಾಲಕರು ತಮ್ಮ ದೊಡ್ಡ ಮಗುವನ್ನು
ನಿಧಾನ ಎಂದು ಚಿಕ್ಕ ಮಗುವನ್ನು
ದೊಡ್ಡವರಿಗೆ ಹೋಲಿಸಿ ತುಂಬಾ ಜಾಣ ಎಲ್ಲವನ್ನು ಬೇಗನೆ
ತಿಳಿದುಕೊಳ್ಳುತ್ತಾನೆ ದೊಡ್ಡವನಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಮತ್ತು ಎಲ್ಲದರಲ್ಲೂ ಮುಂದೆ ಇದ್ದಾನೆ ಎಂದು ಹೊಗಳುತ್ತಾರೆ.
ಇದಕ್ಕೆ
ಕಾರಣ ಹತ್ತು ಹಲವು.... ಎರಡನೇ ಮಗು ಹೊಟ್ಟೆಯಲ್ಲಿರುವಾಗಲೇ ದೊಡ್ಡ ಮಗುವಿಗೆ
ತಮ್ಮ ಇಲ್ಲವೇ ತಂಗಿ ತಾಯಿಯ ಹೊಟ್ಟೆಯಲ್ಲಿದ್ದು
ಇನ್ನೂ ಕೆಲವೇ ದಿನಗಳಲ್ಲಿ ಅದು ತನ್ನೊಂದಿಗೆ ಆಟವಾಡಲು
ದೊರೆಯುತ್ತದೆ ಮತ್ತು ಅದರೊಂದಿಗೆ ತಾನು ಅತ್ಯಂತ ಪ್ರೀತಿಪೂರ್ವಕವಾಗಿ
ನಡೆದುಕೊಳ್ಳಬೇಕು ಎಂದು ಕಲಿಸಲಾಗುತ್ತದೆ. ಸಮಾಧಾನ
ತಾಳ್ಮೆಯಿಂದ ವರ್ತಿಸಬೇಕು ಎಂದು ಪದೇಪದೇ ಹೇಳಿಕೊಡಲಾಗುತ್ತದೆ.
ಖಂಡಿತವಾಗಿಯೂ
ಇದು ತಪ್ಪಲ್ಲ. ಆದರೆ ಹಾಗೆ ಹೇಳುವ
ಭರದಲ್ಲಿ, ಮಗು ಹುಟ್ಟಿದ ನಂತರ
ಎಲ್ಲಾ ವಿಷಯಗಳಲ್ಲಿಯೂ ದೊಡ್ಡ ಮಗುವೆ ಸಮಾಧಾನದಿಂದ ಇರಲು ಸೂಚಿಸಲಾಗುತ್ತದೆ. ಸಹಜವಾಗಿಯೇ
ಪಾಲಕರ ಮಾತನ್ನು ಒಪ್ಪಿಕೊಳ್ಳುವ ಮಗು ತನಗಿಂತ ಕಿರಿಯ
ಮಗುವಿನ ಕಾಳಜಿ ವಹಿಸುತ್ತಾ ತಾನು ಹಿಂದೆ ಉಳಿಯುತ್ತದೆ.
ಚಿಕ್ಕವರಿದ್ದಾಗ ತನಗಿಂತ ಚಿಕ್ಕವರಾದ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ಇರುವ ಮಗು ಮುಂದೆ
ಪಾಲಕರ ಹೋಲಿಕೆಯಿಂದ ನಿರಾಶನಾಗಿ ಬೇಸರಗೊಳ್ಳಬಹುದು, ಮಾನಸಿಕವಾಗಿ ಮುದುಡಬಹುದು, ಸಿಡಿದೇಳಬಹುದು. ಓದಿನಲ್ಲಿ ಹಿಂದೆ ಬೀಳಬಹುದು, ಆಸಕ್ತಿ ಕಡಿಮೆಯಾಗಬಹುದು.
ಇದುವರೆಗೂ
ಮನೆಯವರೆಲ್ಲರ ಅಚ್ಚುಮೆಚ್ಚಿದ ಮಗು ಒಮ್ಮಿಂದೊಮ್ಮೆಲೆ ತನ್ನ
ಮೇಲಿದ್ದ ಗಮನಿಸುವಿಕೆಯ ಸ್ಪಾಟ್ ಲೈಟ್ ತನ್ನ ಸಹೋದರ
ಅಥವಾ ಸಹೋದರಿಯ ಮೇಲೆ ಬಿದ್ದಾಗ ಪುಟ್ಟ
ಮಗುವಿನ ಮನದಲ್ಲಿ ಆತಂಕದ ಸುಳಿಗಳು ಎದ್ದು ಮಗು ಆ ಸುಳಿಯಲ್ಲಿ
ಸಿಲುಕುತ್ತದೆ.
ಇಂತಹ
ಸಮಯದಲ್ಲಿ ದೊಡ್ಡ ಮಗುವಿನಿಂದ ಪುಟ್ಟ ಮಗುವಿಗೆ ದೈಹಿಕವಾಗಿ ಏನಾದರೂ ಹಾನಿಯಾಗಬಹುದು ಎಂಬ ಕಾರಣದಿಂದ ಪಾಲಕರು
ತಮಗರಿವಿಲ್ಲದೆ ಪುಟ್ಟ ಮಗುವನ್ನು ಮುಚ್ಚಟೆಯಿಂದ ಸಾಕಿ ಬೆಳೆಸಿ ದೊಡ್ಡ
ಮಗುವಿನೊಂದಿಗೆ ತುಸು ಅಂತರವನ್ನು ಕಾಯುತ್ತಾರೆ.
ಇದು
ಅಗೋಚರವಾಗಿ ಅವರಿಬ್ಬರ ನಡುವೆ ಒಂದು ಪುಟ್ಟ ಕಂದರವನ್ನು
ಸೃಷ್ಟಿಮಾಡುತ್ತದೆ ಮತ್ತು ಬೆಳೆಯುತ್ತಾ ಹೋದಂತೆ ಈ ಕಂದರ ಹೆಚ್ಚು
ಅಗಲವಾಗುತ್ತಾ ಹೋಗುತ್ತದೆ. ಆದ್ದರಿಂದ ಎರಡನೆಯ ಮಗುವನ್ನು ಹೊಂದಿರುವ ಪಾಲಕರು ತಮ್ಮ ಎರಡು ಮಕ್ಕಳ
ನಡುವೆ ಜೈವಿಕ ಸಂಬಂಧಕ್ಕೆ ಮಿಗಿಲಾದ ಆತ್ಮೀಯತೆ ಪ್ರೀತಿ ವಿಶ್ವಾಸ ಮತ್ತು ಸ್ನೇಹ ಭಾವಗಳನ್ನು ತುಂಬಲು ಈ ರೀತಿ ಪ್ರಯತ್ನಿಸಬಹುದು.
ನಿಮ್ಮ
ಮಕ್ಕಳು ನಿಮಗೆ ಎರಡು ಕಣ್ಣುಗಳಿದ್ದಂತೆ. ಒಂದು
ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ನಿಮ್ಮ ಮಾತನ್ನು ಕೇಳುವ ಮಗುವನ್ನು ಪ್ರೀತಿಸುವ ಮತ್ತು ಕೇಳದೆ ಹೋಗುವ ಮಗುವಿನ ಮೇಲೆ ತುಸು ಸಿಟ್ಟು
ಸಹಜವಾಗಿ ನಿಮಗೆ ಬರಬಹುದು. ಆದರೆ ಮಗು ನಿಮ್ಮ
ಮಾತನ್ನು ಏಕೆ ಕೇಳುತ್ತಿಲ್ಲ ಎಂಬುದರ
ಹಿಂದಿನ ಮರ್ಮವನ್ನು ಮಗುವನ್ನು ಅನುನಯಿಸಿ ಒಲಿಸಿಕೊಳ್ಳುವ ಮೂಲಕ ಆ ಮಗುವಿನ
ಮನಸ್ಸಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ ಮಗುವನ್ನು ತಿದ್ದಬಹುದೇ
ಹೊರತು ವಿನಾಕಾರಣ ಮಗುವನ್ನು ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಬಿರುಸು ಮಾತುಗಳಿಂದ ದಂಡಿಸಿ ಅಲ್ಲ.
ಮಕ್ಕಳು
ಪರಸ್ಪರ ಎದುರಾಳಿಗಳಲ್ಲ ಒಬ್ಬರ ಮೇಲೆ ಮತ್ತೊಬ್ಬರ ಕುರಿತು
ದೂರು ಹೇಳುವ, ಹಂಗಿಸುವ ರೀತಿಯಲ್ಲಿ ಪಾಲಕರು ಮಕ್ಕಳನ್ನು ಕುರಿತು ಎಂದೂ ಮಾತನಾಡಬಾರದು. ಮಕ್ಕಳ
ನಡುವಿನ ಜಗಳಗಳಲ್ಲಿ ಯಾರು ಸರಿ ಮತ್ತು
ಯಾರೂ ತಪ್ಪು ಎಂಬುದನ್ನು ಎಣಿಸದೆ, ಎಲ್ಲಿ ಮತ್ತು ಏಕೆ ತಪ್ಪಾಗಿದೆ ಮತ್ತು
ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು
ಸೂಕ್ಷ್ಮವಾಗಿ ಮಕ್ಕಳಿಗೆ ಮನದಟ್ಟು ಮಾಡಿಸಬೇಕು.
ಒಂದು
ಮಗುವಿನ ಕುರಿತು ಮತ್ತೊಂದು ಮಗುವಿನ ಮುಂದೆ ಅಥವಾ ಹಿಂದೆ ಅವಹೇಳನಕಾರಿಯಾಗಿ
ಮಾತನಾಡಬಾರದು.ಇದು ಮಕ್ಕಳಲ್ಲಿ ಮಾನಸಿಕ
ಅಭದ್ರತೆ ಮತ್ತು ನೋವಿಗೆ ಕಾರಣವಾಗುತ್ತದೆ. ಪಾಲಕರು ತಮ್ಮ ಒಂದು ಮಗುವನ್ನು
ಚಿನ್ನ ರನ್ನ ಎಂದು ಮತ್ತೊಂದು
ಮಗುವನ್ನು ಹರಕೆಯ ಕುರಿ ಎಂಬಂತೆ ಭಾವಿಸಬಾರದು.
ಸಹೋದರರು
ದಾಯಾದಿಗಳಾಗಿ ಬದಲಾಗುವುದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಅರಿತೋ ಅರಿಯದೆಯೋ ಪಾಲಕರು ಮಾತನಾಡುವ ಪ್ರತಿಯೊಂದು ಮಾತು ಕ್ರಿಯೆಗಳು ಮಕ್ಕಳ
ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ..
ಒಡಹುಟ್ಟಿದವರಲ್ಲಿ ಉಂಟಾಗುವ ಗೊಂದಲ ಆತಂಕ, ಅಸಹನೆ ಮತ್ತು ಅಶಂಕೆಗಳಿಗೆ ಮೂಲ ಬೇರು ಪಾಲಕರೇ
ಆಗಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರ ಮತ್ತು ಕುಟುಂಬದ ಇತರ ಸದಸ್ಯರ ವರ್ತನೆ,
ಮನೆಯಲ್ಲಿನ ವಾತಾವರಣ ಮಕ್ಕಳಲ್ಲಿ ಈ ಭಾವನೆಗಳು ಬೇರೂರಲು
ಕಾರಣವಾಗಿರುತ್ತವೆ.
ಸೂಕ್ಷ್ಮ
ಮನಸ್ಥಿತಿಯ ಮಕ್ಕಳು ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸಿದರೆ ಕೆಲ ಗಟ್ಟಿ ವ್ಯಕ್ತಿತ್ವದ
ಮಕ್ಕಳು ಇಲ್ಲದ ಅಹಂಭಾವವನ್ನು ತೋರುತ್ತ ಎದೆ ಸೆಟೆಸಿ ತಾವು
ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ.
ಒಡಹುಟ್ಟಿದವರಲ್ಲಿ ಇದು ಸಾಮಾನ್ಯ ಎಂದು
ತೋರಿದರೂ ವಿಪರೀತಕ್ಕೆ ಇಟ್ಟುಕೊಳ್ಳದಂತೆ ಇದನ್ನು ನಿರ್ವಹಿಸುವ ಜವಾಬ್ದಾರಿ ಖಂಡಿತವಾಗಿಯೂ ಪಾಲಕರದ್ದು.
ಮತ್ತೆ
ಕೆಲವರು ವಾಸ್ತವ ಪರಿಸ್ಥಿತಿಯನ್ನು ಕುರಿತು ಪ್ರಬುದ್ಧವಾಗಿ ಯೋಚಿಸಿ ತಾವು ಅನುಭವಿಸಿದ ತೊಂದರೆಗಳು
ತಮ್ಮ ಮಕ್ಕಳ ಬಾಳಿನಲ್ಲಿ ಬರದೇ ಇರಲಿ ಎಂದು
ಆಶಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ
ಕ್ರಮಗಳನ್ನು ಯೋಚಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ನಡೆದು ಬಂದ ಕೆಲ ತಪ್ಪು
ತಿಳುವಳಿಕೆಗಳ ಸರಪಳಿಯನ್ನು ತುಂಡರಿಸಿ ಹೊಸ ಬೆಸುಗೆಯನ್ನು ಹಾಕುತ್ತಾರೆ.
ತಮ್ಮದೇ ಮಕ್ಕಳಲ್ಲಿ ಅತ್ಯುತ್ತಮ ಸ್ನೇಹ,, ಬಾಂಧವ್ಯ ಪ್ರೀತಿ ವಿಶ್ವಾಸಗಳ ಅನುಬಂಧವನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಪಾಲಿನ ಎಲ್ಲ
ಪ್ರಯತ್ನಗಳನ್ನು ಮಾಡುತ್ತಾರೆ.
ಎಲ್ಲ
ಮಕ್ಕಳನ್ನು ಸಮಾನಸ್ಥಾಯಿ ಭಾವದಲ್ಲಿ ನೋಡುವ, ಸುರಕ್ಷತಾ ಭಾವವನ್ನು ಕೊಡುವ ಮತ್ತು ಯಾವುದೇ ರೀತಿಯ ಶರತ್ತು ಬದ್ಧತೆಗಳನ್ನು ಹೊಂದಿರದ ಏಕರೂಪದ ಪ್ರೀತಿಯನ್ನು ಕೊಡ ಮಾಡುತ್ತಾರೆ. ಅದುವೇ
ಪಾಲಕತ್ವದ ನಿಜವಾದ ಗುರಿ.
ವೀಣಾ ಹೇಮಂತ್ ಗೌಡ ಪಾಟೀಲ್
ಮಂದರಗಿ ಗದಗ್


